ಮೂತನೂರು ಡೇರಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ 3 ಅಭ್ಯರ್ಥಿಗಳು ಅವಿರೋಧ ಆಯ್ಕೆ, 9 ಅಭ್ಯರ್ಥಿಗಳು ಚುನಾವಣೆಯ ಮೂಲಕ ಆಯ್ಕೆ
(KOLARA): ಹಾಲು ಉತ್ಪಾದಕರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಮೂವರು ಅವಿರೋಧ ಆಯ್ಕೆಯಾದರೆ, 9 ಅಭ್ಯರ್ಥಿಗಳು ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಶ್ರೀನಿವಾಸ್ ಘೋಷಿಸಿದ್ದಾರೆ.
ಬಂಗಾರಪೇಟೆ ತಾಲೂಕಿನ ಮೂತನೂರು ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ ನಡೆಯಿತು.
ಮೂತನೂರು ಹಿಂದುಳಿದ ವರ್ಗಗಳ ಎ ಕ್ಷೇತ್ರದಿಂದ ಏಡಿಯಮ್ಮ, ಹಿಂದುಳಿದ ವರ್ಗಗಳ ಬಿ ಕ್ಷೇತ್ರದಿಂದ ಎಂ.ಸಿ.ನಾರಾಯಣ, ಪ.ಜಾ ಕ್ಷೇತ್ರದಿಂದ ಪದ್ಮಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 9 ಸಾಮಾನ್ಯ ಸ್ಥಾನಗಳಿಗೆ ಚುನಾವಣೆ ನಡೆಸಲಾಗಿ 13 ಜನ ನಾಮಪತ್ರ ಸಲ್ಲಿಸಿದ್ದರು. ಮಹಿಳಾ ಸಾಮಾನ್ಯ ಕ್ಷೇತ್ರದ 2 ಸ್ಥಾನಗಳಿಗೆ ಚಿನ್ನಮ್ಮ, ಉಷಾ, ವೆಂಕಟಲಕ್ಷ್ಮಮ್ಮ ಮತ್ತು ಯಶೋಧಮ್ಮ ನಾಮಪತ್ರ ಸಲ್ಲಿಸಿದ್ದು, ನಾಲ್ಕು ಜನರ ಪೈಕಿ ಚಿನ್ನಮ್ಮ ಮತ್ತು ವೆಂಕಟಲಕ್ಷ್ಮಮ್ಮ ಗೆಲುವು ಸಾಧಿಸಿದರು.
ಸಾಮಾನ್ಯ ಕ್ಷೇತ್ರದ ಡಿ.ಮಂಜುನಾಥ್, ಸಿ.ಪೊನ್ನಸ್ವಾಮಿ, ಪಾಟಪ್ಪ, ಸುಬ್ಬಣ್ಣ, ಮತ್ತು ವಿ.ನಾಗರಾಜ್ ಗೆಲವು ಸಾಧಿಸಿದ್ದರು. ಹೊಸರಾಯಪ್ಪ, ಸಂತೋಷ್ ಮತ್ತು ವಿ.ಸೀತಪ್ಪ ತಲಾ 12 ಮತಗಳನ್ನು ಪಡೆದ ಕಾರಣ ಚುನಾವಣಾಧಿಕಾರಿ ಲಾಟರಿಯ ಮೂಲಕ ಇಬ್ಬರನ್ನು ಆಯ್ಕೆ ಮಾಡಲು ನಿರ್ಧರಿಸಿದಾಗ ಸಂತೋಷ್ ಮತ್ತು ಹೊಸರಾಯಪ್ಪಗೆ ಲಾಟರಿಯ ಮೂಲಕ ಗೆಲುವು ಸಾಧಿಸಿದ್ದಾರೆ.
ವರದಿ: ವಿಷ್ಣು ಕೋಲಾರ