NewsNews & Updatesಶಿವಮೊಗ್ಗ

ಮಕ್ಕಳ ಪ್ರತಿಭೆ ಗುರುತಿಸುವ ಕೆಲಸ ಆಗಲಿ. ಗ್ರಾ.ಪಂ.ಮಂಜುನಾಥ ಶೆಟ್ಟಿ

ಮಕ್ಕಳ ಪ್ರತಿಭೆ ಗುರುತಿಸುವ ಕೆಲಸ ಆಗಲಿ. ಗ್ರಾ.ಪಂ.ಮಂಜುನಾಥ ಶೆಟ್ಟಿ

( ಸಾಗರ : ಸೆ. ೦7 ) ಮಕ್ಕಳೊಳಗೆ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕಾಗಿದೆ ಎಂದು ಭೀಮನಕೋಣೆ ಗ್ರಾ.ಪಂ.ಅಧ್ಯಕ್ಷ ಮಂಜುನಾಥ ಶೆಟ್ಟಿ ಹೇಳಿದರು.
ಅವರು ಇಲ್ಲಿಗೆ ಸಮೀಪದ ವಿ.ಸಂ.ಪ್ರೌಢಶಾಲೆ ಸಭಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ವಿದ್ಯಾಭಿವೃದ್ಧಿ ಸಂಘ ರಿ,ಕೇಡಲಸರ ವಿ.ಸಂ.ಪ್ರೌಢಶಾಲೆ ಕೇಡಲಸರ ಇವರು ಆಯೋಜಿಸಿದ್ದ ಕಸಬ-2ರ ಪ್ರೌಢಶಾಲೆಗಳ ಪ್ರತಿಭಾಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಪ್ರತಿಯೊಬ್ಬ ಮಗುವಿನಲ್ಲಿ ತನ್ನದೇ ಆದ ಪ್ರತಿಭೆ ಇರುತ್ತದೆ. ಅವುಗಳನ್ನು ಗುರುತಿಸುವ ಕೆಲಸ ಆಗಬೇಕಾಗಿದೆ. ಮಕ್ಕಳನ್ನು ಪಠ್ಯಕ್ಕೆ ಮಾತ್ರ ಸೀಮಿತವಾಗಿರಿಸದೇ ಪಠ್ಯೇತರ ಚಟುವಟಿಕೆಗಳನ್ನು ಬೆಳೆಸುವಂತಹ ಕೆಲಸ ಆಗಬೇಕಾಗಿದೆ.

ನಿರಂತರ ಪರಿಶ್ರಮದಿಂದ ಗುರಿಮುಟ್ಟಲು ಸಾಧ್ಯ. ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಹೆಚ್ಚು ಮಾರ್ಗದರ್ಶನದ ಅಗತ್ಯವಿದೆ ಎಂದರಲ್ಲದೇ ಇಂದು ವಿ.ಸಂ.ಪ್ರೌಢಶಾಲೆ ಪ್ರತಿಭಾಕಾರಂಜಿಯನ್ನು ಆಯೋಜಿಸುವ ಮೂಲಕ ಒಂದು ಮಾದರಿಯಾದ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದಿದೆ ಎಂದು ಹೇಳಿದರು.


ಹೆಗ್ಗೋಡು ಗ್ರಾ.ಪಂ. ಅಧ್ಯಕ್ಷ ರಾಜೇಶ ಎಂ.ಎಲ್. ಮಾತನಾಡಿ ಮಕ್ಕಳು ನಿರಂತರ ಅಧ್ಯಯನಶೀಲರಾಗಬೇಕು ಗುರಿಮುಟ್ಟುವ ತವಕ ತಮ್ಮಲ್ಲಿದ್ದರೆ ಏನನ್ನಾದರೂ ಸಾಧಿಸಲು ಸಾಧ್ಯವಾಗುತ್ತದೆ. ಪ್ರತಿಭೆ ಇದ್ದರೆ ಸಾಲದು ಅದಕ್ಕೆ ಸೂಕ್ತವಾದ ವೇದಿಕೆ ಅಗತ್ಯವಾಗಿದೆ. ಅಂತಹ ವೇದಿಕೆಯನ್ನು ಪ್ರತಿಭಾಕಾರಂಜಿ ಮೂಲಕ ಮಕ್ಕಳ ಪ್ರತಿಭೆಗಳನ್ನು ಅನಾವರಣ ಮಾಡುತ್ತಿರುವುದು ಶ್ಲಾಘನೀಯವಾಗಿದೆ, ಮಕ್ಕಳ ಆಶೋತ್ತರಗಳಿಗೆ ಸ್ಪಂದಿಸುವ ಕಾರ್ಯ ನಿರಂತರವಾಗಿ ನಡೆಯಬೇಕಾಗಿದೆ ಎಂದು ಹೇಳಿದರು.


ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷರಾದ ಕೇಶವ ಸಂಪೇಕೈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಭೀಮನಕೋಣೆ ಗ್ರಾ.ಪಂ. ಸದಸ್ಯೆ ವೈಶಾಲಿ, ವಿದ್ಯಾಭಿವೃದ್ಧಿ ಸಂಘದ ಉಪಾಧ್ಯಕ್ಷರಾದ ನಾಗರಾಜ ಸಭಾಹಿತ್, ಕಾರ್ಯದರ್ಶಿ ಎಂ.ಎಸ್. ನಾಗರಾಜ್, ಶಿಕ್ಷಣ ಸಂಯೋಜಕ ವಿ.ಟಿ.ಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು. ವಿ.ಸಂ.ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎನ್.ಎಸ್.ಗುಮ್ಮಾನಿ ಪ್ರಸ್ತಾವಿಕವಾಗಿ ಮಾತನಾಡಿದರು. ಆರಂಭದಲ್ಲಿ ರಕ್ಷಿತಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ವಸಂತಮೂರ್ತಿ ಕೆ.ಎಸ್. ಸ್ವಾಗತಿಸಿ, ರಾಘವೇಂದ್ರ ಬಿ. ವಂದಿಸಿ, ಶುಭಾ ಎನ್. ಎಂ. ಕಾರ್ಯಕ್ರಮ ನಿರೂಪಿಸಿದರು.

 

Leave a Reply

Your email address will not be published. Required fields are marked *

Scan the code