ಶಿಗ್ಗ ಗ್ರಾಮದಲ್ಲಿ 6ನೇ ಶತಮಾನದ ಕದಂಬರ ಶಾಸನ ಪತ್ತೆ
(SHIVAMOGGA): ತಾಲ್ಲೂಕಿನ ಶಿಗ್ಗ ಗ್ರಾಮದ ಶ್ರೀ ಕಲ್ಲೇಶ್ವರ ದೇವಾಲಯದ ಬಳಿ ಆದಿ ಕದಂಬರ ಅವಧಿಯ ಶಾಸನ ಪತ್ತೆಯಾಗಿದೆ. ಕೆಲವು ವರುಷಗಳ ಹಿಂದೆ ಈ ದೇವಾಲಯದ ಮರು ನಿರ್ಮಾಣ ಕಾರ್ಯಕೈಗೊಂಡಾಗ ಶಾಸನದ ಜೊತೆ ಹಲವಾರು ವೀರಗಲ್ಲುಗಳೂ ದೊರಕ್ಕಿದ್ದವು. ಸ್ಥಳೀಯರು ಅವುಗಳನ್ನು ಸಂರಕ್ಷಿಸಿದ್ದರು. ಈಚೆಗೆ ಇತಿಹಾಸ ಸಂಶೋಧಕರಾದ ರಮೇಶ ಬಿ ಹಿರೇಜಂಬೂರು ಮತ್ತು ಮಂಜಪ್ಪ ಚುರ್ಚಿ ಗುಂಡಿ ಕ್ಷೇತ್ರ ಕಾರ್ಯಕ್ಕೆ ಹೋದಾಗ ಈ ಶಾಸನವನ್ನು 6 ನೇ ಶತಮಾನದ ಕದಂಬರ ಅವಧಿಯ ಶಾಸನವೆಂದು ಗುರುತಿಸಿದ್ದಾರೆ.
ದೇವಾಲಯ ನಿರ್ಮಾಣಕ್ಕೆ ಬಳಸಲಾದ ಚೌಕಾಕಾರದ ಕಂಬದ ಒಂದು ಮುಖದ ಮೇಲೆ 20 ಸಾಲುಗಳನ್ನು ಹೊಂದಿದ್ದು ಪ್ರತಿ ಸಾಲಿನ ಎಡ ಮತ್ತು ಬಲಬದಿಯ ಹಲವು ಅಕ್ಷರಗಳು ದೊರಕುವುದಿಲ್ಲ. ಮೊದಲಿಗೆ ಹೆಚ್ಚು. ಅಗಲವಿದ್ದ ಈ ಕಂಬದ ಮೇಲೆ ಶಾಸನ ಬರೆದಿರಬೇಕು. ನಂತರ ಈ ಕಂಬದ ಎರಡೂ ಪಾರ್ಶ್ವಗಳನ್ನು ಕೆತ್ತಿ ದೇವಾಲಯದ ಮರುನಿರ್ಮಾಣಕ್ಕೆ ಚಿಕ್ಕದಾಗಿ ಮಾಡಿರಬಹುದಾಗಿದೆ. ಹಾಗಾಗಿ ಪೂರ್ಣ ಸಾಲಿನ ಅಕ್ಷರಗಳು ಕಂಡುಬರುವುದಿಲ್ಲ. ಶಾಸನದ ಅಕ್ಷರಗಳು 6ನೇ ಶತಮಾನದ ಕನ್ನಡ ಲಿಪಿಯನ್ನು ಹೋಲುತ್ತವೆ. ಶಾಸನದ ಮೇಲಿನ ಸಾಲುಗಳಲ್ಲಿ ಕದಂಬ ವಂಶದ ಕುರಿತಾದ ಪ್ರಶಸ್ತಿ ಇದೆ. ಮಾತೃಗಣ, ಮಾನವಸ್ಯ ಗೋತ್ರ- ಚರ್ಚಾ ಪಾರಂಗತರು ಮುಂತಾದ ವರ್ಣನೆಗಳು ಕಂಡುಬರುತ್ತದೆ.
ಈ ಶಾಸನ ಕುರಿತ ಹೆಚ್ಚಿನ ಅಧ್ಯಯನ ನಡೆಯುತ್ತಿದೆ. ಶಿಗ್ಗಾದಲ್ಲಿ ದೊರೆತಿರುವ ಶಾಸನದ ಸನಿಹದಲ್ಲಿ ಕದಂಬರ ಅವಧಿಯ ಮದನ ಶಿಲ್ಪ ದೊರೆತಿದ್ದು ಇದರ ಉದರದ ಕೆಳಭಾಗ ಒಡೆದು ಹೋಗಿದೆ. ಇಲ್ಲೂ ಸಹ ಮದನೋತ್ಸವಗಳು ನಡೆಯುತ್ತಿತ್ತೆ ಶೋಧಿಸಬೇಕಿದೆ.
ಸ್ಥಳ ಪರಿಶೀಲನೆಯಲ್ಲಿ ಕದಂಬರ ಅವಧಿಯ ಜಂಬಿಟ್ಟಿಗೆ ಕಲ್ಲುಗಳು ಮತ್ತು ಅದೇ ಅವಧಿಯ ಹಂಚುಗಳು ಕಂಡುಬಂದಿವೆ. ಇದರಿಂದ ಶಿಗ್ಗಾ ಗ್ರಾಮದ ಶ್ರೀ ಕಲ್ಲೇಶ್ವರ ದೇವಾಲಯವು ಕದಂಬರ ಅವಧಿಯ ಶಿವ ದೇವಾಲಯವಾಗಿದ್ದು ಆ ನಂತರ ವಿವಿಧ ಹಂತಗಳಲ್ಲಿ ಜೀರ್ಣೋದ್ಧಾರಕ್ಕೆ ಒಳಗಾಗಿದೆ. ಶಿಗ್ಗಾ ಗ್ರಾಮವು ಪ್ರಾಚೀನತೆಯಲ್ಲಿ ಕದಂಬರ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಸಾಧ್ಯತೆ ಇದೆ.
ಇದೇ ಸ್ಥಳದಲ್ಲಿ 12-13ನೇ ಶತಮಾನದ ಐದು ವೀರಗಲ್ಲುಗಳು ದೊರಕಿದ್ದು ಕಲ್ಯಾಣಿ ಚಾಲುಕ್ಯ ಹಾಗೂ ಸೇವುಣರ ಅವಧಿಗೆ ಸೇರಿವೆ. ಅವುಗಳಲ್ಲಿ ಎರಡು ಉದ್ದರೆಯ ಎಕ್ಕಲರಸನ ಉಲ್ಲೇಖ ಹೊಂದಿದ್ದು ತುರುಗೋಳ್ ವೀರಗಲ್ಲುಗಳಾಗಿವೆ. ರಾಷ್ಟ್ರಕೂಟರ ಅವಧಿಯ ಮೂರು ಗೋಸಾಸ ಕಲ್ಲುಗಳು ಹಾಗೂ ನಂತರ ಅವಧಿಯ ಹಲವಾರು ಮಹಾಸತಿ ಕಲ್ಲುಗಳು ಸಹ ಗ್ರಾಮದಲ್ಲಿ ಕಂಡುಬರುತ್ತವೆ.
ವಿಶೇಷ ಆತ್ಮಬಲಿ ಶಿಲ್ಪ:
ಶಿಗ್ಗ ಗ್ರಾಮದ ಹಳೆಯ ಹೊಂಡದ ಬಳಿ ನಾಲ್ಕು ಅಡಿ ಎತ್ತರದ ಸ್ಮಾರಕ ಶಿಲ್ಪವಿದ್ದು ಸಿಗ್ಗದ ಬಾವ ಗಾವುಂಡನು ಸೂರ್ಯಗ್ರಹಣದ ದಿನ ಅಗ್ನಿಗೆ ಆಹುತಿಯಾಗಿ ಆತ್ಮ ಬಲಿದಾನ ಹೊಂದಿದ್ದಾನೆ. ಊರಿನ ಒಳಿತಿಗೋ ಅಥವಾ ಇನ್ನಾರದೋ ಒಳಿತನ್ನ ಬಯಸಿ ಈ ರೀತಿಯ ಆತ್ಮ ಬಲಿಗಳು ಇತಿಹಾಸದಲ್ಲಿ ವಿಶೇಷವಾಗಿ ಅಲ್ಲಲ್ಲಿ ಕಂಡುಬರುತ್ತದೆ. ಶಿಲ್ಪದಲ್ಲಿ ಸೂರ್ಯನನ್ನು ಒಂದು ಸರ್ಪವು ನುಂಗಲು ಸಾಗುತ್ತಿರುವ ಚಿತ್ರಣ ಸೂರ್ಯಗ್ರಹಣದ ಸಂಕೇತವಾಗಿದೆ.
ಈ ಶೋಧನೆಗೆ ಶಿಗ್ಗ ಗ್ರಾಮದ ಗ್ರಾಮ ಸಮಿತಿಯ ಅಧ್ಯಕ್ಷರಾದ ಬಸವರಾಜಪ್ಪರವರು, ಲೋಕೇಶ ಬಂಗಾರಿ, ಮಲೆನಾಡು ಪ್ರೌಢ ಶಾಲೆ ಹಿರೇಜಂಬೂರಿನ ಮುಖ್ಯ ಶಿಕ್ಷಕರಾದ ತೇಜಪ್ಪನವರು, ಮತ್ತು ಬಿ.ಕೆ.ಶಿವಕುಮಾರ್ ರವರು ಸಹಕಾರ ನೀಡಿರುತ್ತಾರೆ. ಅಧ್ಯಯನಕ್ಕೆ ಡಾ.ಶ್ರೀನಿವಾಸ್ ಪಾಡಿಗಾರ್,ಡಾ. ಜಗದೀಶ್ ಅಗಸಿಬಾಗಿಲು, ಡಾ ಶೇಜೇಶ್ವರ ನಾಯಕ್ ಮತ್ತು ಶ್ರೀಪಾದ್ ಬಿಚ್ಚುಗತ್ತಿಯವರು ಮಾರ್ಗದರ್ಶನ ನೀಡಿರುತ್ತಾರೆ.
ಈಚೆಗೆ ಸೊರಬ ಭಾಗದಲ್ಲಿ ಅನೇಕ ಐತಿಹಾಸಿಕ ಆಕರ, ಕುರುಹುಗಳು ಬೆಳಕಿಗೆ ಬರುತ್ತಿದ್ದು, ಸಿಗ್ಗಾ ಶಾಸನ ಅಪೂರ್ವವಾದುದು. ತಾಲ್ಲೂಕಿನಲ್ಲಿ ಕದಂಬ ಅವಧಿಯ ಮೂರ್ತಿಶಿಲ್ಪ, ದೇಗುಲಗಳು ಇದ್ದರೂ ಜೀರ್ಣವಾಗಿವೆ. ಚಂದ್ರಗುತ್ತಿ ತೆಲಗುಂದದಲ್ಲಿ ಕದಂಬ ಶಾಸನವೊಂದನ್ನು ಈ ಹಿಂದೆ ಧಾರವಾಡ ಕೆಐಆರ್ ಪ್ರೊ.ದಿ.ರಘುನಾಥ ಭಟ್ಟರು ಗುರುತಿಸಿದ್ದರು. ನಂತರ ಸಿಗ್ಗಾ ಸಮೀಪ ಕವಡಿಯಲ್ಲಿ ಕೂಡ ಕದಂಬ ಶಾಸನ ದೊರೆತಿದೆ. ಪ್ರಾಚ್ಯ ಇಲಾಖೆ ಅಧಿಕಾರಿ ಡಾ.ಶೇಜೇಶ್ವರ ಕೂಡ ಕದಂಬ ಕಾಲದ ಹಲವು ಕುರುಹುಗಳನ್ನು ಪತ್ತೆ ಹಚ್ಚಿದ್ದಾರೆ. ಈ ಸಾಲಿಗೆ ಸಿಗ್ಗಾ ಶಾಸನ ಸೇರ್ಪಡೆಯಾಗಿದ್ದು ರಮೇಶ್, ಮಂಜಪ್ಪ ಶೋಧನಾ ಸಂಗತಿ ಗಮನಾರ್ಹ.
ಶ್ರೀಪಾದ ಬಿಚ್ಚುಗತ್ತಿ, ಇತಿಹಾಸ ಸಂಶೋಧಕ
ವರದಿ: ಮಧು ರಾಮ್ ಸೊರಬ