ಬೈಕಿನಲ್ಲಿ 750 ಗ್ರಾಂ ಗಾಂಜಾ ಸಾಗಿಸುತ್ತಿದ್ದ: ಇಬ್ಬರ ಬಂಧನ
ಕೊಪ್ಪ: ಬೇರುಕೊಡಿಗೆ ದೇವಸ್ಥಾನದ ಬಳಿ ಬೈಕಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಕೊಪ್ಪ ಪೊಲೀಸರು ಮಾಲು ಸಹಿತ ಶುಕ್ರವಾರ ಬಂಧಿಸಿದ್ದಾರೆ. ಬಾಳೆಹೊನ್ನೂರು ಮಸೀದಿ ಕೆರೆ ಸಮೀಪದ ವಿಜಯ, ಕೊಪ್ಪ ರಾಘವೇಂದ್ರ ನಗರದ ನಿತಿನ್ ಅಲಿಯಾಸ್ ಬುಲ್ಲಿ ಬಂಧಿತ ಆರೋಪಿಗಳು. ಅಪಾಚಿ ಬೈಕಿನಲ್ಲಿ ಶುಕ್ರವಾರ 750 ಗ್ರಾಂ ಗಾಂಜಾವನ್ನು ಸಾಗಿಸುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕೊಪ್ಪ ಪಿಎಸ್ಐ ಕೌಶಿಕ್ರವರ ನೇತೃತ್ವದಲ್ಲಿ ಸಿಬ್ಬಂದಿ ಅಮಿತ್ ಪ್ರಸನ್ನ, ಪ್ರಶಾಂತ, ನವೀನ ಅವರ ತಂಡ ದಾಳಿ ನಡೆಸಿ ಆರೋಪಿಗಳೊಂದಿಗೆ ಗಾಂಜಾ, ಅಪಾಚಿ ಬೈಕನ್ನು ವಶಪಡಿಸಿಕೊಂಡಿದ್ದಾರೆ. ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ವಿಜಯ ವಿರುದ್ದ ಈ ಹಿಂದೆಯೇ ಮಂಗಳೂರು ಸಿಸಿಬಿ, ಉಡುಪಿ ಸಿಸಿಬಿ ಹಾಗೂ ಬಾಳೆಹೊನ್ನೂರು ಠಾಣೆಗಳಲ್ಲಿ ಕೆಲವು ಪ್ರಕರಣಗಳು ದಾಖಲಾಗಿರುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.