ಸೀರೆ ಜೋಕಾಲಿ ಕುತ್ತಿಗೆಗೆ ಬಿಗಿದು ಬಾಲಕ ಸಾವು
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಬಾಳೆಹೊನ್ನೂರು ಆಟವಾಡುತ್ತಿದ್ದಾಗ ಸೀರೆ ಜೋಕಾಲಿ ಕುತ್ತಿಗೆಗೆ ಬಿಗಿದು ಬಾಲಕನೊಬ್ಬ ಸಾವನ್ನಪ್ಪಿದ ಘಟನೆ ಮೇಲ್ಪಾಲ್ ಸಮೀಪದ ಕರ್ಕೇಶ್ವರ ಕೈಮರದಲ್ಲಿ ಮಂಗಳವಾರ ನಡೆದಿದೆ.
ಕರ್ಕೇಶ್ವರ ಕೈಮರದ ಸನ್ಮಯ್ (12) ಮೃತಪಟ್ಟ ಬಾಲಕ. ಈತ ಮಂಗಳವಾರ ಸಂಜೆ ವೇಳೆಗೆ ತನ್ನ ಮನೆಯಲ್ಲಿ ಸಹೋದರನೊಂದಿಗೆ ಮರಕ್ಕೆ ಸೀರೆಯಲ್ಲಿ ಜೋಕಾಲಿ ಮಾಡಿ ಕಟ್ಟಿಕೊಂಡು ಆಟವಾಡುತ್ತಿದ್ದು, ಈ ವೇಳೆ ಆಕಸ್ಮಿಕವಾಗಿ ಜೋಕಾಲಿ ಬಾಲಕನ ಕುತ್ತಿಗೆಗೆ ಬಿಗಿದು ಸಾವನ್ನಪ್ಪಿದ್ದಾನೆ. ಮಕ್ಕಳು ಆಟವಾಡುತ್ತಿದ್ದ ವೇಳೆ ಪೋಷಕರು ಕೂಲಿ ಕೆಲಸಕ್ಕೆ ತೆರಳಿದ್ದ ಹಿನ್ನೆಲೆಯಲ್ಲಿ ಅವಘಡವಾಗಿದೆ. ಘಟನೆ ಕುರಿತು ಬಾಲಕನ ತಂದೆ ಮಂಜುನಾಥ್ ಬಾಳೆಹೊನ್ನೂರು ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪಿಎಸ್ಐ ರವೀಶ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.