ಕೋಲಾರನ್ಯೂಸ್

ಮೊಬೈಲ್ ನಿಂದ ಕೆಟ್ಟ ದಾರಿಗೆ ಹೋಗುತ್ತಿರುವ ಮಕ್ಕಳು ಸರಿದಾರಿಗೆ ತರಲು ನಾಟಕ ಪ್ರಯೋಗ.

ಮೊಬೈಲ್ ನಿಂದ ಕೆಟ್ಟ ದಾರಿಗೆ ಹೋಗುತ್ತಿರುವ ಮಕ್ಕಳು ಸರಿದಾರಿಗೆ ತರಲು ನಾಟಕ ಪ್ರಯೋಗ.

(KOLARA): ಬಂಗಾರಪೇಟೆ:ಮೊಬೈಲ್ ಬಳಕೆಯಿಂದ ಕೆಟ್ಟ ಹಾದಿಗೆ ಹೋಗುತ್ತಿರುವ ಮಕ್ಕಳನ್ನು ಸರಿದಾರಿಗೆ ತರಲು ನಾಟಕ ಒಂದು ಅತ್ಯುತ್ತಮ ವೇದಿಕೆಯಾಗಿದೆ ಎಂದು ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್‌.ಬಿ.ಗೋಪಾಲಗೌಡ  ಅಭಿಪ್ರಾಯಪಟ್ಟರು.    

ಅವರು ಪಟ್ಟಣದ ಸಂತೋಷ್ ವಿದ್ಯಾಸಂಸ್ಥೆಯ ಆವರಣದಲ್ಲಿ ಸಮುದಾಯ ಬೆಮೆಲ್ ನಗರ ಕೆ.ಜಿ.ಎಫ್ ಇವರ ವತಿಯಿಂದ ಬಂಗಾರಪೇಟೆಯಲ್ಲಿ ನಡೆದ ಮಕ್ಕಳ ರಂಗ ಶಿಬಿರ-2024ರ ಸಮಾರೋಪ ಸಮಾರಂಭ ಮತ್ತು ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.         ಮೊಬೈಲ್ ಬಳಕೆಯಿಂದ ಬಹುತೇಕ ಮಕ್ಕಳು ಕೆಟ್ಟದಾರಿಗೆ ಹೋಗುತ್ತಿರುವುದನ್ನ ಸಮಾಜ ನೋಡುತ್ತಿದೆ. ಕೊರೋನಾ ನಂತರದ ದಿನಗಳಲ್ಲಿ ಇನ್ನೂ ಹೆಚ್ಚಿನ ಮಕ್ಕಳು ಮೊಬೈಲನ್ನು ಬಳಕೆ ಮಾಡುತ್ತಿದ್ದು ಕೆಟ್ಟ ಹಾದಿಗೆ ಹೋಗುತ್ತಿರುವ  ಮಕ್ಕಳ ಸಂಖ್ಯೆ ಹೆಚ್ಚುತ್ತಿರುವುದನ್ನು ನಾವು ನೋಡುತ್ತಿದ್ದೇವೆ.

8ನೇ ತರಗತಿ, 9ನೇ ತರಗತಿ ಓದುತ್ತಿರುವ ಅನೇಕ ಮಕ್ಕಳು ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಂ ಬಳಕೆ ಮಾಡುತ್ತಿದ್ದು ಈ ಬಗ್ಗೆ ಪೋಷಕರು ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.                          

ಮೊಬೈಲ್ ಬಳಸುತ್ತಿರುವ ಮಕ್ಕಳನ್ನು ಪೋಷಕರು ಜಾಗರೂಕತೆಯಿಂದ ಗಮನಿಸಬೇಕಿದೆ. ಮೊಬೈಲ್ ಅನ್ನು ಕೆಟ್ಟದಾಗಿ ಬಳಸುತ್ತಿರುವ ಮಕ್ಕಳ ಬಳಿಯಿಂದ ಮೊಬೈಲ್ ಕಿತ್ತುಕೊಂಡು ಅವರಿಗೆ ಸಣ್ಣ ಸಣ್ಣ ಪುಸ್ತಕಗಳನ್ನು ಕೊಟ್ಟು ಓದುವ ಅಭಿರುಚಿಯನ್ನ ಅವರಲ್ಲಿ ಬೆಳೆಸಬೇಕಿದೆ ಎಂದರು.                                        

ನಮ್ಮ ಜೀವನ ಹೇಗಿರಬೇಕು, ನಮ್ಮ ಬೆಳವಣಿಗೆ ಹೇಗಿರಬೇಕು ಎಂಬುದನ್ನ ಒಂದು ನಾಟಕ ಕಲಿಸುತ್ತದೆ. ಅತ್ಯಂತ ಕಡಿಮೆ ಸಮಯದಲ್ಲಿ ಬಹುದೊಡ್ಡ ಪುಸ್ತಕದಲ್ಲಿರಬಹುದಾದ  ಅಂಶಗಳನ್ನ ಜನರಿಗೆ ಅವರದೇ  ಭಾಷೆಯಲ್ಲಿ ತಿಳಿಸುವ ಪ್ರಯತ್ನವನ್ನು ನಾಟಕ ಮಾಡುತ್ತದೆ. ಅಂತಹ ನಾಟಕಗಳನ್ನು ನೋಡುವ ಅಭಿರುಚಿಯನ್ನ ಮಕ್ಕಳಲ್ಲಿ ಬೆಳೆಸಬೇಕಿದೆ ಎಂದು ಹೇಳಿದರು.                             

ಮಕ್ಕಳಿಗೆ ನಾಟಕ ಕಲಿಸಿ ಅದನ್ನು ಪ್ರದರ್ಶನ ಮಾಡುವ ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿರುವ ಬೆಮೆಲ್ ನಗರದ ಸಮುದಾಯ ಸಂಘಟನೆಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದವರು. ಮಕ್ಕಳ ಬೇಸಿಗೆ ಶಿಬಿರಕ್ಕೆ ಪ್ರೋತ್ಸಾಹ ನೀಡಿರುವ ಸಂತೋಷ್ ವಿದ್ಯಾ ಸಂಸ್ಥೆಗೆ ಮತ್ತು ಮಕ್ಕಳಿಗೆ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ನಾಟಕವನ್ನು ಬರೆದಿರುವ ಕಾ.ಹು. ಚಾನ್ ಪಾಷಾ ಮತ್ತು ನಿರ್ದೇಶನ ಮಾಡಿದ  ಎಸ್.ಓ.ಜಗದೀಶ್ ನಾಯಕ್  ರವರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಅವರು ತಿಳಿಸಿದರು.                                       

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಂತೋಷ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಆದಿಲ್ ಪಾಷಾ ಮಾತನಾಡಿ ಮಕ್ಕಳಿಗೆ  ಬೇಸಿಗೆ ಸಂದರ್ಭಗಳಲ್ಲಿ ಒಳ್ಳೆಯ ಚಟುವಟಿಕೆಗಳನ್ನ ಕಲಿಸುತ್ತಾ ಬರುತ್ತಿರುವ  ಸಮುದಾಯ ಸಂಘಟನೆಯ  ಕಾರ್ಯ ಮೆಚ್ಚುವಂಥದ್ದು,  ಪೋಷಕರು ಈ ರೀತಿಯ ಶಿಬಿರಗಳಿಗೆ ಮಕ್ಕಳನ್ನ ಹೆಚ್ಚು ಹೆಚ್ಚು ಸೇರಿಸುವಂತಾಗಬೇಕು. ಸಾಮಾಜಿಕ ಜಾಲತಾಣದಲ್ಲಿನ ಕೆಟ್ಟ ಅಂಶಗಳ ಕಡೆ ಮಕ್ಕಳು ಹೋಗದಂತೆ ಪೋಷಕರು ಎಚ್ಚರ ವಹಿಸಬೇಕು.                      

ಪೋಷಕರು ಮಕ್ಕಳ ಜೊತೆ ಪ್ರತಿದಿನ ಒಂದು ಗಂಟೆ ಸಮಯ ಕಾಲ ಕಳೆಯುವುದರಿಂದ ಮಕ್ಕಳ ಬೆಳವಣಿಗೆ ಪೋಷಕರಿಗೆ ಅರ್ಥವಾಗುತ್ತದೆ ಎಂದು ಅಭಿಪ್ರಾಯಪಟ್ಟರು.                       ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮುದಾಯ ಸಂಘಟನೆಯ ರಾಜ್ಯ ಜಂಟಿ  ಕಾರ್ಯದರ್ಶಿಗಳಾದ ಜನಾರ್ದನ ಮಾತನಾಡಿ ಸಮುದಾಯ ಸಂಘಟನೆಯು ಮಕ್ಕಳ ಮನೋವಿಕಾಸಕ್ಕಾಗಿ ಶಾಲಾ ಪಠ್ಯದ ಹೊರತಾಗಿ ರಂಗಪಠ್ಯವನ್ನು ಕಲಿಸುತ್ತಾ ಬಂದಿದೆ. ಮಕ್ಕಳಲ್ಲಿ ಪ್ರಾಣಿ ಪಕ್ಷಿಗಳ ಬಗ್ಗೆ ತಿಳುವಳಿಕೆ ಮೂಡಿಸುತ್ತಾ ಬಹುತ್ವವನ್ನು ಕಲಿಸುತ್ತಾ ಬರುತ್ತಿದೆ.

ಸಮುದಾಯ ಸಂಘಟನೆಯು ಕಳೆದ ನಾಲ್ಕು ದಶಕಗಳಿಂದ ರಾಜ್ಯದಾದ್ಯಂತ ಕಲಾಜಾತಗಳು ಶಿಬಿರಗಳು, ರಂಗೋಲಿ ಸ್ಪರ್ಧೆ ಚಿತ್ರಕಲಾ ಸ್ಪರ್ಧೆ ಹೀಗೆ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಮಾಡುತ್ತಾ ಜನರಿಗೆ ತಿಳುವಳಿಕೆಯನ್ನು ಮೂಡಿಸುತ್ತಾ ಬರುತ್ತಿದೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅನಿಕೇತನ ಬಳಗದ ಅಧ್ಯಕ್ಷರಾದ ಎಂ.ಎಸ್.ರಾಮಪ್ರಸಾದ್, ಪುರಸಭೆ ಸದಸ್ಯರಾದ ರಾಕೇಶ್ ಗೌಡ ಮೊದಲದವರು ಮಾತನಾಡಿದರು. ಇದೇ ವೇಳೆ ಶಿಭಿರಾರ್ಥಿಗಳು ‘ನಾಗಶಿರೋಮಣಿ’ ನಾಟಕ ಪ್ರದರ್ಶನ ಮಾಡಿದರು.               

ಈ ವೇಳೆ ನಾಟಕ ರಚನೆಕಾರ ಕಾ.ಹು.ಚಾನ್ ಪಾಷಾ, ನಿರ್ಧೇಶಕ ಎಸ್.ಓ.ಜಗದೀಶ್ ನಾಯಕ್, ಕೆ.ರಾಮಮೂರ್ತಿ, ಅಲಿಕ್ ಆರ್.ಡಿ, ಸುಮ, ರವೀಂದ್ರ, ಧರಣೀಕಾಂತ್ ಮಾರುತಿ ಪ್ರಸಾದ್, ವೆಂಕೋಬರಾವ್ ಪಡತಾರೆ, ಅನಿತಾ, ಮೈ.ಸತೀಶ್ ಕುಮಾರ್, ಶ್ರೀನಿವಾಸ್, ಚಂದ್ರಪ್ಪ ಮೊದಲಾದವರಿದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code