ಟ್ರಾನ್ಸ್ಪಾರ್ಮರ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಲೈನ್ಮ್ಯಾನ್ ಸಾವು
(KOLARA)ಬಂಗಾರಪೇಟೆ : ವಿದ್ಯುತ್ ಟ್ರಾನ್ಸ್ಪಾರ್ಮರ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಇದ್ದಕ್ಕಿದ್ದ ಹಾಗೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಬಂಗಾರಪೇಟೆಯ ಮಾಗೇರಿಯಲ್ಲಿ ಜರುಗಿದೆ.
ತಾಲ್ಲೂಕಿನ ಮಾಗೇರಿ-ಹಂಚಾಳ ಮಾರ್ಗಮದ್ಯೆದ ಶ್ರೀ ವೆಂಕಟರಮಣ ಸ್ವಾಮಿ ದೇವಾಲಯದ ಸಮೀಪವಿರುವ ಟ್ರಾನ್ಸ್ಪಾರ್ಮರ್ನಲ್ಲಿ ಅಡಚಣೆ ಉಂಟಾಗಿದ್ದು ಮೇಲಾಧಿಕಾರಿಗಳ ಆದೇಶದ ಮೇರೆಗೆ ತಾಲ್ಲೂಕಿನ ಮರವಹಳ್ಳಿ ಗ್ರಾಮದ ಮಂಜುನಾಥ್(50) ಹಾಗೂ ಲೈನ್ಮ್ಯಾನ್ ಬಸವರಾಜು ಎಂಬುವರು ಸ್ಥಳಕ್ಕೆ ದಾವಿಸಿ ಪರಿಶೀಲಿಸಿದರು. ನಂತರ ವಿದ್ಯುತ್ ನಿಲುಗಡೆ ಮಾಡಿ ಮರವಹಳ್ಳಿ ಮಂಜುನಾಥ್ ಎಂಬುವರು ಟ್ರಾನ್ಸ್ಪಾರ್ಮರ್ ಮೇಲೆ ಹತ್ತಿ ಕಾರ್ಯನಿರ್ವಹಿಸುತ್ತಿದ್ದಾಗ ಇದ್ದಕ್ಕಿದ್ದ ಹಾಗೆ ಮತ್ತೊಂದು ಲೈನ್ನಲ್ಲಿ ವಿದ್ಯುತ್ ಪ್ರವಹಿಸಿದ ಪರಿಣಾಮ ಸ್ಥಳದಲ್ಲೇ ಅಸುನೀಗಿದರು. ಜೊತೆಯಲ್ಲಿದ್ದ ಬಸವರಾಜು ಭಯಭೀತರಾಗಿ ಓಡಿಹೋಗಿದ್ದು ಮೇಲಾಧಿಕಾರಿಗಳ ಗಮನಕ್ಕೆ ತಿಳಿಸಿದ್ದಾರೆ.
ಮೃತ ಮರವಹಳ್ಳಿ ಮಂಜುನಾಥ್ ಸುಮಾರು 20 ವರ್ಷಗಳಿಂದ ಪಟ್ಟಣದ ಬೆಸ್ಕಾಂ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವರದಿ: ವಿಷ್ಣು ಕೋಲಾರ