‘10 ವರ್ಷದ ಮೊದಲು ಮತ್ತು ನಂತರ ಹೇಗಿದ್ದೇವೆ ಎನ್ನಲು ಒಂದು ಫೋಟೋ’
(ARTICAL): ‘ನೆನಪು’ ಅನ್ನುವುದೊಂದು ಗೊತ್ತಿಲ್ಲದ ಹಾಗೇ ತುಟಿಯಂಚಲ್ಲಿ ಒಂದು ನಗೆಯನ್ನು ತರುತ್ತದೆ. ಕೆಲವೊಮ್ಮೆ ಕಣ್ಣು ಸಹ ಸಣ್ಣದಾಗಿ ನೀರಾಗುತ್ತದೆ. ಆ ಸುಮಧುರ ಸಮಯವನ್ನು ಮತ್ತೊಮ್ಮೆ ಮರುಕಳಿಸುವಂತೆ ಮಾಡಿ, ಅಂದಿಗೂ ಇಂದಿಗೂ ಆಗಿರುವ ಬದಲಾವಣೆ, ಎಲ್ಲವನ್ನೂ ಒಮ್ಮೆ ಹಿಂದಿರುಗಿ ನೋಡಿದಾಗ ‘ಎಷ್ಟು ಬೇಗ ಸಮಯ ಕಳೆದುಹೋಗಿದೆಯಲ್ಲ’ ಎಂದೆನಿಸುತ್ತದೆ. ಅದನ್ನು ನೆನಪಿಸಿಕೊಳ್ಳಲು ಇದೊಂದು ಪುಟ್ಟ ಪ್ರಯತ್ನ.
ಪ್ರೌಢಶಾಲೆಯಾಗಿದ್ದ ನಮ್ಮ ಶಾಲೆಯಲ್ಲಿ 10 ವರ್ಷಗಳ ಹಿಂದೆ ಪ್ರಾಥಮಿಕ ಶಾಲೆಯ ಆರಂಭವಾಗುವ ಸಮಯ. ಯಾವಾಗಲೂ ಪ್ರೌಢಶಾಲೆಯ ಮಕ್ಕಳೊಂದಿಗಿದ್ದ ನಮಗೆ ಪ್ರಾಥಮಿಕ ಶಾಲೆ ಆರಂಭವಾದರೆ ಹೇಗಿರಬಹುದು? ಎಷ್ಟು ಮಕ್ಕಳು ಸೇರಬಹುದು? ಅವರೊಂದಿಗೆ ಬೆರೆಯಲು ಆಗುತ್ತದೋ ಇಲ್ಲವೋ? ಹೀಗೆ ಹಲವು ಪ್ರಶ್ನೆಗಳು ಮೂಡಿದ್ದವು. ಅದು ಮೊದಲಬಾರಿಗೆ ಪುಟ್ಟಪುಟ್ಟ ಮಕ್ಕಳು ಬಣ್ಣಬಣ್ಣದ ವಸ್ತ್ರಗಳಲ್ಲಿ ಬಂದಾಗ ಮನೆಯ ಮಕ್ಕಳೇ ಬಂದ ಹಾಗೆ ಅನಿಸುತ್ತಿತ್ತು. ಅವರಿಗಾಗಿ ಮೊದಲ ಮಹಡಿಯ ಮೊದಲ ಕೊಠಡಿ ಅವರಿಗಾಗಿ ಮೀಸಲಾಗಿತ್ತು. ಅವರಿಗಾಗಿ ಹೊಸಹೊಸ ಪುಟ್ಟಪುಟ್ಟ ಬೆಂಚ್ ಗಳು ಬಂದಿದ್ದವು. ಆ ಕೊಠಡಿಯನ್ನು ಬಣ್ಣಬಣ್ಣದಿಂದ ಸಿಂಗರಿಸಲಾಗಿತ್ತು. ಕೊಠಡಿಗೆ ಮಕ್ಕಳ ಮೊದಲ ಪ್ರವೇಶಕ್ಕಾಗಿ ಕಾದಿದ್ದೆವು. ಹನುಮಾನ್ ಸರ್ ಆ ಕೊಠಡಿಗೆ ಅಂಟಿಸಿದ್ದ ಟೇಪ್ ಅನ್ನು ಮಕ್ಕಳೊಂದಿಗೆ ಸೇರಿಸಿ ಕಟ್ ಮಾಡಿ ಪ್ರವೇಶ ಮಾಡಿದರು. ಅದು ಮಕ್ಕಳ ಶಾಲಾ ಆರಂಭದ ಮೊದಲ ಹೆಜ್ಜೆ.
ಅಂದಿನಿಂದ ಒಂದಿಲ್ಲೊಂದು ಚಟುವಟಿಕೆಗಳು ಆ ಮಕ್ಕಳಿಗೆ ಜರುಗುತ್ತಿದ್ದವು. ಕೆಲವೊಮ್ಮೆ ಕುತೂಹಲದಿಂದ ಹೋಗುತ್ತಿದ್ದೆವು. ಕೆಲವೊಮ್ಮೆ ಆ ಮಕ್ಕಳನ್ನು ಒಮ್ಮೆ ಮಾತನಾಡಿಸಿಕೊಂಡು ಬನ್ನಿ ಎನ್ನುತ್ತಿದ್ದರು. ಹಾಗಾಗಿ ಆ ಮಕ್ಕಳೊಂದಿಗೆ ಒಂದು ರೀತಿಯ ಭಾಂದವ್ಯ ಮೂಡಿತ್ತು. ಬಿಡುವಿದ್ದಾಗಲೆಲ್ಲ 1ನೇ ತರಗತಿಯ ಮಕ್ಕಳೊಂದಿಗೆ ಬೆರೆಯಲು ಹೋಗುತ್ತಿದ್ದೆ. ಮಕ್ಕಳಿಗೆ ಪಾಠದ ಹೊರತು ಇತರ ಯಾವುದಾದರೂ ಚಟುವಟಿಕೆಗಳು ನಡೆಯುತ್ತಿದ್ದರೆ ಮಕ್ಕಳೊಂದಿಗೆ ಕುಳಿತು ಅದನ್ನು ಮಾಡಿಸುವ ಪ್ರಯತ್ನಕ್ಕೆ ಆ ತರಗತಿಯ ಶಿಕ್ಷಕಿಯರಾಗಿದ್ದ ಜಯಶೀಲಮೇಡಂ ಮತ್ತು ಸುಜಾತಮೇಡಂ ಅವಕಾಶ ನೀಡುತ್ತಿದ್ದರು. ಸ್ಕೌಟ್ ಭವನ್ ಲಿ ಆಗಾಗ ಶಿಬಿರಗಳು ನಡೆಯುವಾಗ ಮಕ್ಕಳಿಗೆ ‘ಅಭಿನಯಗೀತೆ’ಗಳನ್ನು ಹೇಳಿಕೊಡುತ್ತಿದ್ದುದರಿಂದ ಈ ಮಕ್ಕಳ ಜೊತೆಗೆ ಬೆರೆತು ಅಭಿನಯಗೀತೆಗಳನ್ನು ಹೇಳಿಕೊಡುತ್ತಿದ್ದೆ. ಅದರಿಂದಾಗಿ ಆ ಮಕ್ಕಳ ನನ್ನ ಮುಖ ಪರಿಚಯ ಸಾಕಷ್ಟು ಬೆಳೆದಿತ್ತು. ಆ ಮಕ್ಕಳಿಗೆ ಶಾಲಾ ಮೈದಾನದಲ್ಲಿ ಆಟ ಆಡಿಸುವಾಗ ನಮ್ಮ ದೈಹಿಕಶಿಕ್ಷಕರಾದ ಬಸವರಾಜ್ ಸರ್ ಒಂದಿಷ್ಟು ಮಜವಾದ ಆಟಗಳನ್ನು ಆಡಿಸುವುದಕ್ಕೆ ತಯಾರು ಮಾಡಿರುತ್ತಿದ್ದರು. ಆ ಸಮಯಕ್ಕೆ ನಾನು ಆ ಮಕ್ಕಳೊಂದಿಗೆ ಹಾಜರ್ ಇರುತ್ತಿದ್ದೆ. ಒಮ್ಮೆ ಕಣ್ಣಿಗೆ ಬಟ್ಟೆ ಕಟ್ಟಿ ಡಬ್ಬಕ್ಕೆ ಕೋಲಲ್ಲಿ ಹೊಡೆಯುವ ಆಟ ಆಡಿಸುವಾಗ ಮಕ್ಕಳು ಕೋಲನ್ನು ಹಿಡಿದು ಎಲ್ಲೆಲ್ಲೋ ಹೋಗುತ್ತಿದ್ದದ್ದು, ಸಿಕ್ಕಸಿಕ್ಕ ಕಡೆಯಲ್ಲ ನೆಲಕ್ಕೆ ಬಡಿಯುತ್ತಿದ್ದನ್ನು ಕಂಡು ಅದೆಷ್ಟು ನಕ್ಕಿದ್ದೇವೆ ಎಂದರೆ ಹೇಳತೀರದು.
ಈ ಮಕ್ಕಳಿಗೆ ‘ಕ್ಲೇ’ ಬಳಸಿ ವಿವಿಧ ಮಾದರಿಗಳನ್ನು ತಯಾರಿಸುವ ಸ್ಪರ್ಧೆನಡೆದಾಗ ಅದಕ್ಕೆ ತೀರ್ಪುಗಾರನಾಗಿ ನಾನು ಮತ್ತು ಮಂಜುಳಾ ಮೇಡಂ ಹೋಗಿದ್ದೆವು. ಯಾವುದೋ ಪ್ರಾಣಿ, ಪಕ್ಷಿ, ವಾಹನ, ವಸ್ತುಗಳನ್ನು ಮಾಡಿದ್ದರು ಎಂದು ನಾವೇ ಊಹೆ ಮಾಡಿಕೊಂಡು ಚೆನ್ನಾಗಿದ್ದ ಮಾದರಿಗೆ ಬಹುಮಾನ ಘೋಷಿಸಿ ಅದನ್ನು ಶಾಲಾ ವಾರ್ಷಿಕೋತ್ಸವದ ಸಮಯದಲ್ಲಿ ನೀಡಲಾಗುವುದು ಎಂಬುದನ್ನು ಎಲ್ಲರಿಗೂ ತಿಳಿಸಿದೆವು. ಕೆಲವು ಮಕ್ಕಳು ‘ಸರ್ ನಾನು ಗೊಂಬೆ ಮಾಡಿದ್ದೆ. ಹೇಗಿತ್ತು?’ ಎಂದು, ‘ನಾನು ಸೈಕಲ್ ಮಾಡಿದ್ದೆ ಗೊತ್ತಾಯಿತಾ?’ ಎಂದಾಗ ನಮಗೆ ಯಾವ ಸೈಕಲ್ ಕೂಡ ಸಿಗಲಿಲ್ಲವಲ್ಲ ಎನಿಸಿತು. ಹೀಗೆ ಮಕ್ಕಳು ಹೇಳಿದ್ದವು ಕಾಣಲಿಲ್ಲವಲ್ಲ ಎನ್ನುವಾಗ ತಿಳಿದದ್ದು, ಮಕ್ಕಳು ತಮ್ಮ ತಿಳುವಳಿಕೆಗೆ ತಕ್ಕಂತೆ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ ಹೊರತು ನಮ್ಮ ತಿಳುವಳಿಕೆಯ ಮಟ್ಟಿಗೆ ಅಲ್ಲ ಎಂದು ತಿಳಿಯಿತು. ಆದರೂ ಅದೊಂತರ ಚೆಂದದ ಸಮಯವಾಗಿತ್ತು.
ಶಿಕ್ಷಕರ ದಿನಾಚರಣೆಯ ಸಮಯ ಈಗಲೂ ನೆನಪಿನಲ್ಲಿರುವುದು ಕಾರಣ ಆ ಮಕ್ಕಳಿಂದ ಪುಟ್ಟಪುಟ್ಟ ಶುಭಾಶಯ ಪತ್ರವನ್ನು ತಯಾರಿಸಿ ಮಕ್ಕಳಿಂದಲೇ ನಮಗೆ ಕೊಡಿಸಿದ್ದರು. ಜೊತೆಗೆ ಪ್ರೌಢಶಾಲೆಯ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆ ಆಚರಿಸಿದ್ದಾಗ ಶಿಕ್ಷಕರುಗಳಿಗೆ ಒಂದಿಷ್ಟು ಸ್ಪರ್ಧೆಗಳನ್ನು ಏರ್ಪಡಿಸಿದ್ದರು. ಅದರಲ್ಲಿ ಗೆದ್ದ ಶಿಕ್ಷಕರಿಗೆ ಒಂದು ಪುಟ್ಟ ಉಡುಗೊರೆಗಳು ಇದ್ದವು. ಅವುಗಳನ್ನು ಈ ಪುಟ್ಟ ಮಕ್ಕಳ ಕಡೆಯಿಂದ ಕೊಡಿಸಲು ಮುಂದಾದರು ಒಬ್ಬೊಬ್ಬರು ಒಂದೊಂದು ಶಿಕ್ಷಕರಿಗೂ ನೀಡುವಾಗ ಅವರಿಂದ ಪಡೆದುಕೊಳ್ಳಲು ಏನೋ ಒಂತರಾ ಖುಷಿ. ಹಿತ ಮೊದಲಬಾರಿಗೆ ನನಗೆ ಒಂದು ಪುಟ್ಟ ಉಡುಗೊರೆ ಎಲ್ಲರ ಪರವಾಗಿ ನೀಡಿದ್ದಳು. ಕೆಲವು ಮಕ್ಕಳು ಶಿಕ್ಷಕರಿಗೆ ನೀಡುವಾಗ ಯಾರುಯಾರು ಎಂದು ತಿಳಿಯದೇ ಇನ್ನಾರಿಗೋ ನೀಡಿದಾಗ ನಕ್ಕಿದ್ದಾರೆ, ಇವರಿಗಲ್ಲ ಅವರಿಗೆ ಎಂದು ಹೇಳಿ, ಅವರಿಗೆ ಕೊಡಬೇಕು ಎಂದು ಕರೆದುಕೊಂಡು ಹೋಗಿ ಕೊಡಿಸಿದ್ದಾರೆ. ಎಲ್ಲವೂ ಆ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು.
ಭಾರತೀಯ ಸೇನೆಯಲ್ಲಿ ಪರಾವೀರಚಕ್ರ ಪ್ರಶಸ್ತಿ ಪಡೆದಿದ್ದ ಯೋಗೇಂದ್ರಸಿಂಗ್ ಯಾದವ್ ಅವರು ಬಂದಾಗ ಪ್ರತೀ ತರಗತಿಯ ಮಕ್ಕಳೊಂದಿಗೆ ಗ್ರೂಪ್ ಫೋಟೋ ತೆಗೆಸುವ ಸಂದರ್ಭದಲ್ಲಿ ಆಗ ನಾನು ೮ನೇ ತರಗತಿ ‘ಬಿ’ ವಿಭಾಗದ ತರಗತಿ ಶಿಕ್ಷಕನಾಗಿದ್ದರಿಂದ ಆ ಮಕ್ಕಳ ಜೊತೆಗೆ ಗ್ರೂಪ್ ಫೋಟೋ ತೆಗೆಸಿಕೊಂಡೆವು. ಎಲ್ಲರೂ ಮುಗಿದ ಮೇಲೆ 1ನೇ ತರಗತಿ ಮಕ್ಕಳು ಎಂದಾಗ ಅವರನ್ನು ಸರಿಯಾಗಿ ನಿಲ್ಲಿಸಲು ತರಗತಿಯ ಶಿಕ್ಷಕಿಯರೊಂದಿಗೆ ಸಹಕರಿಸಿದೆ. ಆಗ ಮುಖ್ಯೋಪಾಧ್ಯಾಯರೇ, ‘ನೀವು ಈ ಮಕ್ಕಳ ಜೊತೆಗೆ ಗ್ರೂಪ್ ಫೋಟೋಗೆ ಬನ್ನಿ’ ಎಂದರು. ಅಧಿಕೃತವಾಗಿ ಅಲ್ಲದಿದ್ದರೂ ಈ ತರಗತಿಯೂ ನನ್ನದೇ ಆದಂತಿದ್ದ ಕಾರಣ. ನಾನೂ ಇವರ ಜೊತೆಗೆ ನಿಂತೆ. ಈಗಲೂ ಅದನ್ನು ನೆನಪಿಸಿಕೊಂಡು, ‘ನಮ್ಮ ಗ್ರೂಪ್ ಫೋಟೋದಲ್ಲಿ ನೀವೂ ಇದೀರ ಗೊತ್ತಾ?’ ಎಂದು ಜ್ಯೋತಿಕ ಹೇಳುತ್ತಿರುತ್ತಾಳೆ.
ಆಗಸ್ಟ್-15ರಂದು ಪ್ರೀತಮ್ ಗೆ ಗಾಂಧೀಜಿಯ ವೇಷ ಹಾಕಿಸಿದ್ದರು. ಉಳಿದ ಮಕ್ಕಳಿಗೆ ರಾಷ್ಟ್ರೀಯ ಲಾಂಛನಗಳ ಚಿತ್ರವನ್ನು ನೀಡಿ ಅದರ ಬಗ್ಗೆ ಎರಡು ಸಾಲು ಮಾಹಿತಿಯನ್ನು ಹೇಳುವಂತೆ ತಯಾರು ಮಾಡಿದ್ದರು. ಸಾಲಾಗಿ ನಿಲ್ಲಿಸಿದ್ದ ಆ ಮಕ್ಕಳು ಒಬ್ಬೊಬ್ಬರಾಗಿ ಬಂದು ತಮ್ಮ ಹೆಸರನ್ನು ಹೇಳಿಕೊಂಡು, ತಮಗೆ ನೀಡಿದ್ದ ಮಾಹಿತಿಯನ್ನು ತಿಳಿಸುವಾಗ ಎಲ್ಲರೂ ಎಷ್ಟು ‘ಕ್ಯೂಟ್’ ಆಗಿ ಹೇಳ್ತಾ ಇದಾವೆ ಈ ಪುಟ್ಟ ಮಕ್ಕಳು ಎಂದು ದೃಷ್ಟಿ ತೆಗೆಸುವಂತೆ ನೋಡಿದ್ದಂತೂ ನಿಜ. ತರಗತಿಯಲ್ಲಿಯೇ ಮಕ್ಕಳಿಗೆ ಚಿತ್ರವನ್ನು ಬರೆಯಿಸಿ ಅದಕ್ಕೆ ಬಣ್ಣ ಹಚ್ಚಲು ಹೇಳಿದಾಗ ಖುಷಿಯಿಂದ ಆ ತರಗತಿಯನ್ನು ಕಳೆದದ್ದು, ಯಾವುದೋ ಬಣ್ಣಗಳನ್ನು ಹಚ್ಚಿದ್ದು, ಇತರ ‘ಫನ್ ಗೇಮ್’ ಗಳನ್ನು ಈ ಮಕ್ಕಳು ಹಾಡುವಾಗ ಅದನ್ನು ಎಲ್ಲರೂ ಕುಳಿತು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದು, ನಕ್ಕಿದ್ದು ಮಕ್ಕಳ ಮುಗ್ದತೆಯನ್ನು ತೋರುತ್ತಿತ್ತು.
ಪ್ರೌಢಶಾಲಾ ಮಕ್ಕಳಿಗೆ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯನ್ನು ಏರ್ಪಡಿಸಿದಾಗ ಈ ಮಕ್ಕಳಿಗೂ ಆ ರೀತಿಯಲ್ಲಿ ಏನಾದರೊಂದು ಚಟುವಟಿಕೆ ಮಾಡಿಸಬೇಕು ಎಂದುಕೊಂಡು ಸುಲಭವಾಗಿ ಏನಾದರೂ ಮಾಡಿಸಲು ಪ್ರಯತ್ನಿಸಿದಾಗ ಪ್ರತೀ ಮಕ್ಕಳಿಗೂ ಪ್ರತ್ಯೇಕ ಬೆಂಚ್ ಗಳಲ್ಲಿ ಕೂರಿಸಿ ತಮ್ಮ ಮಾದರಿಗಳನ್ನು ಪ್ರದರ್ಶಿಸಲು ಅವಕಾಶ ನೀಡಿದಾಗ, ಗಗನ್ ‘ಲಾವಾರಾಸ’ ಹೇಗೆ ಮೂಡಿಬರುತ್ತದೆ ಎಂಬ ಮಾದರಿಯ ಬಗ್ಗೆ ವಿವರಿಸುತ್ತಿದ್ದನು. ಬಂದವರೆಲ್ಲ ಆತ ಮಾಡಿದ್ದ ಮಾಡಲ್ ಗೆ ಸ್ವಲ್ಪ ನೀರು ಹಾಕಿ ಲಾವಾ ಬರುವುದನ್ನು ಪ್ರಯೋಗ ಮಾಡುತ್ತಿದ್ದರು. ಹಿತ ಎರಡು ಪೇಪರ್ ಲೋಟಗಳಿಗೆ ದಾರಕಟ್ಟಿ ಒಂದು ಕಡೆ ಮಾತನಾಡಿದರೆ ಮತ್ತೊಂದು ಕಡೆ ಕೇಳಿಸಿಕೊಳ್ಳುವ ಮಾದರಿಯ ಮೂಲಕ ನಮ್ಮ ಬಾಲ್ಯದ ದಿನಗಳನ್ನು ನೆನಪಿಸಿದಳು. ಪ್ರೀತಮ್ ಬಾಲ್ ಗಳಿಗೆ ಬಣ್ಣಬಣ್ಣದ ಪೇಪರ್ ಗಳನ್ನು ಹಚ್ಚಿ ಸೌರಮಂಡಲದ ಬಗ್ಗೆ ವಿವರಿಸಿದ. ಸಾಕ್ಷಿಶೆಟ್ಟಿ ಪೇಪರ್ ರೋಲ್ ಗಳ ಮೇಲೆ ಪುಸ್ತಕ ಇರಿಸಿ ಭಾರವನ್ನು ನಿಭಾಯಿಸುವ ಬಗ್ಗೆ, ಸಾನ್ವಿಶೆಟ್ಟಿ ಆಲೂಗಡ್ಡೆಗಳಿಗೆ ಏನೇನೋ ವಯರ್ ಗಳನ್ನು ಚುಚ್ಚಿ ವಿದ್ಯುತ್ ಪ್ರವಹಿಸುವ ಮಾದರಿಯ ಬಗ್ಗೆ, ಯಶಸ್ ಉಡುಪ ಮತ್ತು ತನ್ಮಯ್ ಹಳ್ಳಿ ಮತ್ತು ನಗರ ವ್ಯವಸ್ಥೆ ಬಗ್ಗೆ, ಶರಣ್ಯ ಜಲಚರ ಜೀವಿಗಳ ಬಗ್ಗೆ, ಸಮುದ್ರದ ಅಲೆಗಳ ಶಬ್ದದ ಬಗ್ಗೆ, ಭುವನ್ ಏರ್ ಕೂಲರ್ ಕಾರ್ಯ ನಿರ್ವಹಿಸುವ ಬಗ್ಗೆ, ಮಧುಮಿತ ಗಿಡಗಳಿಗೂ ಜೀವವಿದೆ ಎನ್ನುವುದರ ಬಗ್ಗೆ, ಪ್ರಾರ್ಥನ ನೀರಿನಲ್ಲಿ ಭಾರವಾದ ವಸ್ತುಗಳು ಮುಳುಗುವ ಮತ್ತು ಹಗುರವಾದ ವಸ್ತುಗಳು ತೇಲುವ ಬಗ್ಗೆ ಇದರ ಜೊತೆಗೆ ಇನ್ನೂ ಹಲವು ಮಕ್ಕಳು ತಮ್ಮ ಹಿಡಿತಕ್ಕೆ ದಕ್ಕಿದಷ್ಟನ್ನು ,ಅನೇಕ ಮಾದರಿಗಳನ್ನು ಶಿಕ್ಷಕರು ಮತ್ತು ಪೋಷಕರ ಸಹಾಯದಿಂದ ಮಾಡಿದ್ದರು. ಇವರ ಕೊಠಡಿಗೆ ವಿಶೇಷವಾಗಿ ಸಿಂಗರಿಸಿ ಇಲಾಖೆಯ ವತಿಯಿಂದ ಬಂದಿದ್ದ ಅಧಿಕಾರಿಗಳು ಈ ಮಕ್ಕಳೊಂದಿಗೆ ಬೆರೆತು, ಪ್ರಶ್ನೆಗಳನ್ನು ಕೇಳಿ ಮಕ್ಕಳ ಮುದ್ದು ಮುದ್ದಾದ ಉತ್ತರಗಳಿಗೆ ‘ಭೇಷ್’ ಎಂದು ಹೇಳಿದ ಸಮಯ, ಈ ಮಕ್ಕಳು ಹೇಗೆ ಮಾಡಿರಬಹುದು ಎಂಬ ಕುತೂಹಲದಿಂದ ಪ್ರೌಢಶಾಲೆಯ ಮಕ್ಕಳು ಬಂದು ಬೆರಗಿನಿಂದ ನೋಡುತ್ತ, ಈ ಮಕ್ಕಳು ತಮ್ಮ ಮಾದರಿಗಳ ಬಗ್ಗೆ ವಿವರವಾಗಿ ಹೇಳುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಈಗಲೂ ನೆನಪಿದೆ.
ಒಮ್ಮೆ ಶಾರದಾದೇವಿ ಅಂಧರ ವಸತಿ ಶಾಲೆಗೆ ಭೇಟಿ ನೀಡಿದಾಗ ಆ ಮಕ್ಕಳೊಂದಿಗೆ ಬೆರೆತು, ಪದ್ಯಗಳು, ಹಾಡನ್ನು ಹಾಡಿ, ಆ ಮಕ್ಕಳೊಂದಿಗೆ ಕಳೆದ ಕ್ಷಣಗಳು ಕೂಡ ಸುಮಧುರವಾಗಿತ್ತು. ಇನ್ನೂ ಶಾಲಾ ವಾರ್ಷಿಕೋತ್ಸವ ಎನ್ನುವಾಗ ಈ ಮಕ್ಕಳಿಗೆಂದು ‘ವಂದೇಮಾತರಂ’, ‘ಬಿದಿರಮ್ಮ ತಾಯಿ’ ಮತ್ತೊಂದು ‘ಪಿಕಾಕ್ ಡ್ಯಾನ್ಸ್’ ಗೆ ನೃತ್ಯ ಅಭ್ಯಾಸ ಮಾಡಿಸುತ್ತಿದ್ದ ಪರಿ ಹೇಳತೀರದು, ಎಲ್ಲರೂ ಕೂಡ ಈ ಮಕ್ಕಳ ನೃತ್ಯಕ್ಕಾಗಿ ಕಾತರದಿಂದ ಕಾಯುತ್ತಿದ್ದದ್ದು ನಿಜ. ಈ ಪುಟ್ಟ ಮಕ್ಕಳು ವೇದಿಕೆಗೆ ಬಹುಮಾನ ತೆಗೆದುಕೊಳ್ಳಲು ಬಂದಾಗ ಜೋರಾಗಿ ಚಪ್ಪಾಳೆ ಹೊಡೆದು ಸಂಭ್ರಮಿಸಿದ್ದಾರೆ. ಮೊದಲ ಬಾರಿಗೆ ಈ ದೊಡ್ಡ ವೇದಿಕೆಯಲ್ಲಿ ಅದು ಹೇಗೆ ಕುಣಿಯಬಹುದು ಇವರು ಎಂದು ಎಲ್ಲರೂ ಕಾದು ನೋಡುವಾಗ ಕೆಲವರು ಹೆಜ್ಜೆ ಮರೆತು ಸುತ್ತ ನೋಡಿದಾಗ ಅವರನ್ನು ನೋಡುವ ಸಂಭ್ರಮವೇ ಬೇರೆಯಾಗಿತ್ತು. ಬಿದಿರಮ್ಮ ಹಾಡಿಗೆ ನಮ್ಮ ಬೊಂಬೆಯಾಟದ ವಿದ್ಯಾರ್ಥಿಗಳು ಪರಿಕರಗಳನ್ನು ಕೊಡಲು, ತೆಗೆದುಕೊಂಡು ಹೋಗಲು ಸಹಾಯವನ್ನು ಮಾಡಿದ್ದರು. ಆ ಎಲ್ಲಾ ನೃತ್ಯಗಳು ಎಲ್ಲರನ್ನೂ ಆಕರ್ಷಿಸಿದ್ದವು.
ವರ್ಷದಿಂದ ವರ್ಷಕ್ಕೆ ಬದಲಾಗುತ್ತಿದ್ದರು ಈ ಮಕ್ಕಳೊಂದಿಗೆ ಒಡನಾಟ ಹಾಗೆಯೇ ಇತ್ತು. ಇದರ ಮಧ್ಯೆ 4 ವಿದ್ಯಾರ್ಥಿಗಳು ಬೇರೆ ಶಾಲೆಗೆ ಹೋದರೆ ಉಳಿದೆಲ್ಲಾ ಮಕ್ಕಳು ಇದೇ ಶಾಲೆಯಲ್ಲಿಯೇ ಅಭ್ಯಾಸ ಮಾಡುತ್ತಿದ್ದಾರೆ. ಅಂದು 1ನೇ ತರಗತಿಗೆ ಬಂದ ಮಕ್ಕಳು ಇಂದು 10ನೇ ತರಗತಿಯಾಗಿದ್ದಾರೆ. ಬಿಡುವಿನ ವೇಳೆಯಲ್ಲಿ ಮುಂಚೆ ಇದ್ದ ರೀತಿಯ ಬಗ್ಗೆ ಮಾತನಾಡುತ್ತಿರುತ್ತಾರೆ. ಹಳೆಯ ನೆನಪುಗಳು ಮೆಲುಕು ಹಾಕುವುದರ ಜೊತೆಗೆ ಅದೇ ಬಾಲ್ಯದ ಮುಗ್ದತೆ ಇನ್ನೂ ಕೆಲವು ಮಕ್ಕಳಲ್ಲಿ ಹಾಗೆ ಇದೆ ಎಂಬುದೇ ಸಂತೋಷದ ಸಂಗತಿ. ಒಂದೆರಡು ವಿದ್ಯಾರ್ಥಿಗಳು ಆಗ ಇದ್ದ ವರ್ತನೆಗೂ ಈಗಿರುವುದಕ್ಕೆ ಒಂದಿಷ್ಟು ಬದಲಾಗಿದ್ದಾರೆ. ಕಾಲವೆಂದರೆ ಹಾಗೇ ಪರಿವರ್ತನೆಗೆ ಸದಾ ಕರೆದುಕೊಂಡು ಹೋಗುತ್ತಿರುತ್ತದೆ. ಹಿತ ‘ಶಿಕ್ಷಕರ ದಿನಾಚರಣೆ ಸಮಯದಲ್ಲಿ ನಿಮ್ಮ ಜೊತೆಗೆ ನನ್ನ ಬಾಲ್ಯದ ಪೋಟೋ ಇದೆ ಗೊತ್ತಾ!?’ ಎಂದಾಗ ‘ಹ ಗೊತ್ತಿದೆ ಅದು 10ವರ್ಷದ ಹಿಂದಿನದು’ ಎಂದಾಗ ‘ಹೌದು ಹೌದು ಈ ಬಾರಿಯ ಶಿಕ್ಷಕರ ದಿನಾಚರಣೆಗೆ ಒಂದು ಫೋಟೋ ತೆಗೆದುಕೊಳ್ಳೋಣವೇ?. 10ವರ್ಷದ ಮೊದಲು ಮತ್ತು ನಂತರ ಇಬ್ಬರು ಹೇಗಿದ್ದೇವೆ ಎಂದು ನೋಡಲು’ ಎಂದಳು ಸರಿ ಆಗಲಿ ಎಂದೆ.
ಈಗಲೂ ಅನಿಸುತ್ತದೆ. ಎಷ್ಟು ಬೇಗ ಸಮಯ ಸರಿದಿದೆಯೆಂದು. ಕಾಲವೇ ಹಾಗೇ ಚಲಿಸುವುದು ತಿಳಿಯುವುದಿಲ್ಲ. ಆದರೆ ಅದರೊಂದಿಗೆ ಇರುವ ನೆನಪುಗಳನ್ನು ಮರುಕಳಿಸುವ ಫೋಟೋಗಳನ್ನು ನೋಡಿದಾಗ ಮತ್ತದೇ ಕಿರುನಗು ಮೂಡುವುದು. ಎಲ್ಲವೂ ಒಮ್ಮೆ ಕಣ್ಣಮುಂದೆ ಹಾದುಹೋಗುವುದು. ಕಣ್ಣಮುಂದೆ ಬೆಳೆಯುತ್ತಿದ್ದ ಮಕ್ಕಳು ಎಷ್ಟು ಬೇಗ ಬೆಳೆದಿದ್ದಾರೆ ಎಂದಾಗ, ಜೀವನದಲ್ಲಿ ಬಹಳ ಎತ್ತರಕ್ಕೆ ಬೆಳೆಯುವಂತಾಗಲಿ ಎಂದು ಆಶಿಸುವುದೇ ನಮ್ಮ ಕರ್ತವ್ಯ. ಮಕ್ಕಳೊಂದಿಗಿದ್ದು ಮಕ್ಕಳಾಗಿದ್ದ ಸಮಯ ಅದು ಸದಾ ಮಧುರ ನೆನಪೇ…