ಗ್ರಾ.ಪಂ ನೌಕರರ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನಾ ಧರಣಿ.
(KOLARA): ಬಂಗಾರಪೇಟೆ: ಗ್ರಾಮ ಪಂಚಾಯಿತಿ ನೌಕರರ ಹಲವು ವರ್ಷಗಳ ಸತತ ಹೋರಾಟದ ಪರಿಶ್ರಮದಿಂದ ನಾವು ಅಲ್ಪ ಪ್ರಮಾಣದ ಬೇಡಿಕೆಗಳನ್ನು ಈಡೇರಿಸಿಕೊಂಡು ಸರ್ಕಾರ ಆದೇಶ ಮಾಡಿದ್ದರೂ, ಕೆಲವು ಬೇಡಿಕೆಗಳನ್ನು ಜಾರಿ ಮಾಡಲು ಅಧಿಕಾರಿಗಳು ಮುಂದಾಗುತ್ತಿಲ್ಲ. ಜೊತೆಗೆ ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ದುಡಿದ ಗ್ರಾಮ ಪಂಚಾಯಿತಿ ನೌಕರರ ಅನುಮೋದನೆ ಬಾಕಿ ಇದೆ. ಈ ಬಗ್ಗೆ ಹತ್ತಾರು ಬಾರಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಪಿ.ಶ್ರೀನಿವಾಸ್ ಆಗ್ರಹಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಕಛೇರಿ ಮುಂಭಾಗ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿ, ಗ್ರಾಮ ಪಂಚಾಯಿತಿ ನೌಕರರ ಅನುಮೋದನೆ ಹೆಸರಲ್ಲಿ ನಡೆಯುತ್ತಿರುವ “ಪೈಲ್ಗಾಗಿ ಪೈಸಾ ವಸೂಲ್ ದಂಧೆ” ನಿಲ್ಲಿಸಿ, ಕೂಡಲೇ ಅನುಮೋದನೆಗೆ ಕಾರ್ಯ ಯೋಜನೆ ರೂಪಿಸಬೇಕು, ಮರಣ ಹೊಂದಿದ ಗ್ರಾಮ ಪಂಚಾಯಿತಿ ನೌಕರರ ಕುಟುಂಬದವರಿಗೆ ಅನುಕಂಪದ ಕೆಲಸದೊಂದಿಗೆ ಗ್ರಾಡ್ಯೂಟಿ, ಬಾಕಿ ವೇತನವನ್ನು ನೀಡಬೇಕು. ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛತಾಗಾರರನ್ನು ನೇಮಿಸಬೇಕು. ಸ್ವಚ್ಛ ಭಾರತ ನೆಪದಲ್ಲಿ ಗ್ರಾಮ ಪಂಚಾಯಿತಿ ನೌಕರರಿಗೆ ಮಲದ ಕಾಲುವೆ ಚರಂಡಿಗಳನ್ನು ಸ್ವಚ್ಛಗೊಳಿಸಲು ಆದೇಶಿಸುವ ಅಧಿಕಾರಿಗಳ ವಿರುದ್ಧ ಕಾನೂನು ರೀತ್ಯಾ ” ಮ್ಯಾನುವಲ್ ಸ್ಕ್ಯಾವೆಂಜರ್ “ಕಾಯ್ದೆಯಡಿ ಕ್ರಮ ಜರುಗಿಸಬೇಕು ಎಂದರು.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಬಿ.ಎಲ್.ಕೇಶವರಾವ್ ಮಾತನಾಡಿ, ಗ್ರಾಮ ಪಂಚಾಯಿತಿ ನೌಕರರಿಗೆ ಬಾಕಿ ಇರುವ ವೇತನವನ್ನು ಬಡ್ಡಿ ಸಮೇತ ಪಾವತಿಸಬೇಕು. ಇಲ್ಲವೇ ಕಾರ್ಮಿಕ ಅಧಿಕಾರಿಗಳಿಗೆ ತನಿಖೆಗಾಗಿ ಶಿಫಾರಸ್ಸು ಮಾಡಬೇಕು, ಗ್ರಾಮ ಪಂಚಾಯಿತಿ ನೌಕರರ ಅನುಮೋದನೆಗಾಗಿ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳಲ್ಲಿ ಇರುವ ಕಡತಗಳನ್ನು ಕೂಡಲೇ ಜಿಲ್ಲಾ ಪಂಚಾಯತ್ಗೆ ಕಳುಹಿಸಿ ಅನುಮೋದನೆ ಮಾಡಿಸಬೇಕು.
31-10-2017ಕ್ಕೆ ನೇಮಕಗೊಂಡು ಜಿಲ್ಲಾ ಪಂಚಾಯತ್ ಅನುಮೋದನೆ ಇಲ್ಲದೇ ಮರಣ ಹೊಂದಿದ ಕುಟುಂಬಕ್ಕೆ ಅನುಕಂಪದ ನೌಕರಿ ನೀಡಬೇಕು, 31-102017ಕ್ಕೆ ನೇಮಕಗೊಂಡ ನೌಕರಂಗೆ ಜಿಲ್ಲಾ ಪಂಚಾಯತ್ ನಿಂದ ಏಕಕಾಲಕ್ಕೆ ಅನುಮೋದನೆ ನೀಡಬೇಕು. ಅದರಲ್ಲಿ ಜವಾನ, ಸ್ವಚ್ಛತಾಗಾರರು, ನೀರು ಗಂಟೆಗಳಿಗೆ ವಿದ್ಯಾರ್ಹತೆ ಕೈಬಿಟ್ಟು, ವೇತನ, ಹಾಜರಾತಿ ಆಧಾರದಲ್ಲಿ ಅನುಮೋದನೆ ನೀಡಬೇಕು, ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ವರ್ಗಾವಣೆಗೆ ಅವಕಾಶ ನೀಡಬೇಕು. ಹಾಗೂ ಇನ್ನು ನೌಕರರ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.
ನೌಕರರ ಬೇಡಿಕೆಗಳನ್ನು ಈಡೇರಿಸದಿದ್ದರೆ ಗ್ರಾಮ ಪಂಚಾಯಿತಿ ಕೆಲಸಗಳನ್ನು ಬಂದ್ ಮಾಡಿ ತೀವ್ರ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಪ್ರತಿಭಟನೆಯಲ್ಲಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಮೋಹನ್, ತಾಲ್ಲೂಕು ಕಾರ್ಯದರ್ಶಿ ತ್ಯಾಗರಾಜ್, ತಾಲ್ಲೂಕು ಖಜಾಂಚಿ ರಾಣಿ, ತಾಲ್ಲೂಕು ಮುಖಂಡರಾದ ವೆಂಕಟೇಶ್, ಪದ್ಮನಾಭಯ್ಯ, ಚಂದ್ರಪ್ಪ, ಗುರಪ್ಪ, ಮುರುಗೇಶ್, ವೆಂಕಟೇಶ್, ಹನುಮಂತರಾಯ ಹಾಗೂ ಮುಂತಾದವರು ಹಾಜರಿದ್ದರು.
ವರದಿ: ವಿಷ್ಣು ಕೋಲಾರ