ಕೆಸರುಗದ್ದೆಯಾಗಿರುವ ರಸ್ತೆ ದುರಸ್ತಿಗೊಳಿಸಲು ಸಾರ್ವಜನಿಕರಿಂದ ಮನವಿ
(KOLARA): ಬಂಗಾರಪೇಟೆ :ಪಟ್ಟಣದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಶಾಂತಿನಗರದ ಶಂಕರ ಮಠದ ಹಿಂಭಾಗದ ರಸ್ತೆ ಕೆಸರುಗದ್ದೆಯಾಗಿದೆ. ನೂತನವಾಗಿ ಕಟ್ಟಡ ಕಾಮಗಾರಿ ಪ್ರಾರಂಭ ಮಾಡಿರುವ ಮಾಲೀಕರು ಕಟ್ಟಡಕ್ಕೆ ತಂದಿದ್ದ ಮಣ್ಣನ್ನು ರಸ್ತೆಯಲ್ಲಿ ಸುರಿದ ಕಾರಣ ಮಳೆ ಬಂದು ಕೆಸರು ಗದ್ದೆಯಂತೆ ಆಗಿದೆ. ಇದರಿಂದ ರಸ್ತೆಯಲ್ಲಿ ಪಾದಾಚಾರಿಗಳು, ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದು,ಸುಗಮ ಸಂಚಾರಕ್ಕೆ ಅಡಚಣೆಯುಂಟಾಗಿದೆ.ಪುರಸಭೆ ಅಧಿಕಾರಿಗಳು ಕಟ್ಟಡದ ಮಾಲೀಕರ ಮೇಲೆ ಕಾನೂನು ರೀತಿ ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ದಾರಿ ಮಾಡಿಕೊಡಬೇಕೆಂದು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ವೇಳೆ ಡ್ಯಾನ್ಸ್ ಸೀನ ರವರು ಮಾತನಾಡಿ,ದಿನನಿತ್ಯ ಸುತ್ತಮುತ್ತಲಿನ ಮನೆಯವರು ವಾಹನಗಳು ಸಂಚರಿಸುವ ರಸ್ತೆ ಮಳೆಯಿಂದ ಕೆಸರು ಗದ್ದೆಯಾಗಿದೆ , ಇಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿರುವ ಮಾಲೀಕ ಅವರ ಕಟ್ಟಡಕ್ಕೆ ಮಣ್ಣು ಹೊಡಿಸುವ ಸಂದರ್ಭದಲ್ಲಿ ಮಣ್ಣನ್ನು ರಸ್ತೆಗೆ ಹಾಕಿದ್ದಾರೆ. ಸುರಿಯುತ್ತಿರುವ ಮಳೆಗೆ ಸಂಪೂರ್ಣವಾಗಿ ರಸ್ತೆ ಹಾಳಾಗಿದೆ. ಮಕ್ಕಳು ರಸ್ತೆಯಲ್ಲಿ ಹೋಗುವಾಗ ಬರುವಾಗ ಕೆಳಗೆ ಬಿದ್ದು ಗಾಯಗಳು ಸಹ ಆಗಿದೆ ಹಾಗೂ ಆ ಕಟ್ಟಡ ಮಾಲೀಕ ಪುರಸಭೆಯ ಚರಂಡಿಯನ್ನು ಸಹ ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ರಸ್ತೆ ಸಂಪೂರ್ಣವಾಗಿ ಹಾಳಾಗಿರುವುದರಿಂದ ಸಾರ್ವಜನಿರಕು ಜೀವ ಕೈಯಲ್ಲಿ ಹಿಡಿದು ಎರಡು ದಿನಗಳಿಂದ ಸಂಚರಿಸುವಂತಾಗಿದೆ. ಕೂಡಲೆ ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿ ರಸ್ತೆಯನ್ನು ಸರಿಪಡಿಸಬೇಕೆಂದು ಮನವಿ ಮಾಡಿದರು.
ವರದಿ: ವಿಷ್ಣು ಕೋಲಾರ