ನಿಸ್ವಾರ್ಥ ಸೇವಾ ಮನೋಭಾವದಿಂಧ ಸಹಾಯ ಮಾಡಿದಾಗ ಸೇವೆಯ ಸಂತೃಪ್ತಿ ಹೊಂದಲು ಸಾಧ್ಯ – ಕೆ.ಶಿವಾನಂದ
(SHIVAMOGA): ಶಿರಾಳಕೊಪ್ಪ: ಸಮಾಜದಲ್ಲಿ ನಾವು ಇನ್ನೊಬ್ಬರಿಗೆ, ದುರ್ಬಲರಿಗೆ ನಿಸ್ವಾರ್ಥ ಸೇವಾ ಮನೋಭಾವದಿಂದ ಸಹಾಯ ಮಾಡಿದಾಗ ಸೇವೆಯ ಸಂತೃಪ್ತಿ ಹೊಂದಲು ಸಾಧ್ಯ ಎಂದು ಲಯನ್ಸ್ ಜಿಲ್ಲಾ 317ಸಿ ವಲಯಾಧ್ಯಕ್ಷ ಕೆ.ಶಿವಾನಂದ ಅಭಿಪ್ರಾಯಪಟ್ಟರು.
ಶಿರಾಳಕೊಪ್ಪದ ವಾಸವಿ ಸಮುದಾಯ ಭವನದಲ್ಲಿ ಶಿರಾಳಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಮೂರನೇ ವಲಯ ಸಭೆ, ಸಂಸ್ಥಾಪಕರ ದಿನಾಚರಣೆ ಮತ್ತು ಪ್ರಾಂತೀಯ ಅಧ್ಯಕ್ಷರ ಭೇಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಾವುದೇ ಜಾತಿ, ವರ್ಣ, ಮತ, ಧರ್ಮದ ತಾರತಮ್ಯವಿಲ್ಲದೇ ನಿಸ್ವಾರ್ಥವಾಗಿ ಸೇವೆ ಸಲ್ಲಿಸುವುದು ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆ ಗುರಿಯಾಗಿದೆ. ಸಮಾಜದಲ್ಲಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಸೃಜನಶೀಲ, ಕ್ರಿಯಾಶೀಲ, ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಜಗತ್ತಿನಾದ್ಯಂತ ಸೇವಾ ಕಾರ್ಯಗಳನ್ನು ಮಾಡುತ್ತಿರುವುದು ಸಂಸ್ಥೆಯ ಆದರ್ಶ ಪ್ರಾಯವಾಗಿದೆ.
ಸೇವೆಯೇ ಧ್ಯೇಯ ಎಂಬ ಗುರಿ ಹೊಂದಿ ಜನರನ್ನು ಆಕರ್ಷಿಸುವ ಸಂಸ್ಥೆಯಾಗಿದ್ದು, ಪ್ರಪಂಚದ 210 ರಾಷ್ಟ್ರಗಳಲ್ಲಿ 50 ಸಾವಿರಕ್ಕೂ ಹೆಚ್ಚು ಸಂಸ್ಥೆಗಳನ್ನು ಹೊಂದಿದ್ದು, 14 ಲಕ್ಷಕ್ಕಿಂತಲೂ ಅಧಿಕ ಸದಸ್ಯರನ್ನು ಹೊಂದಿರುವ ಬೃಹತ್ ಸೇವಾ ಸಂಸ್ಥೆಯಾಗಿದೆ ಎಂದ ಅವರು ಎಲ್ಲರೂ ಸೇವೆಗಾಗಿ ಬೆಳೆಯೋಣ, ಒಂದಾಗಿ ಸೇವೆ ಮಾಡೋಣ ಎಂದು ಕರೆ ನೀಡಿದರು.
ಶಿರಾಳಕೊಪ್ಪ ಕ್ಲಬ್ ಅಧ್ಯಕ್ಷ ಶಿವಯೋಗಿ ಎಂ ಅಧ್ಯಕ್ಷತೆ ವಹಿಸಿದ್ದರು. ಪ್ರಾಂತೀಯ ಅಧ್ಯಕ್ಷ ಕೆ.ಎಸ್ ವೇದಮೂರ್ತಿ, ಚೀಫ್ ಕೋ ಆರ್ಡಿನೇಟರ್ ಟಿ.ಆರ್ ಸುರೇಶ್, ಸೊರಬ ಕ್ಲಬ್ ಅಧ್ಯಕ್ಷ ಡಿ.ಹೆಚ್ ಕುಮಾರಸ್ವಾಮಿ, ಪ್ರಮುಖರಾದ ಕೃಷ್ಣಾನಂದ ಎಸ್, ಸಿದ್ದೇಶ, ಅರುಣ, ಹೆಚ್.ಎಂ ಪ್ರತಿಮಾ, ಎಂ.ಎಸ್ ಅಮೃತರಾಜ್, ಶಿವಾನಂದ ಬಿಳಗಿ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ 10 ಹೊಲಿಗೆ ಯಂತ್ರ, 100 ಉಲನ್ ರಗ್, 5 ಡಸ್ಟ್ಬಿನ್ಗಳನ್ನು ಕೊಡುಗೆಯಾಗಿ ನೀಡಲಾಯಿತು.
ವರದಿ: ಸಂದೀಪ ಯು.ಎಲ್ ಸೊರಬ