ಕಣ್ಣಮುಂದೆ ಆಡಿಕೊಂಡು ಬೆಳೆದ ವಿದ್ಯಾರ್ಥಿನಿಯೊಬ್ಬಳು ಈಗ ಸನ್ಮಾನಕ್ಕೆ ಭಾಜನಳಾಗುತ್ತಿದ್ದಾಳೆ.
ಶಾಲೆಗೆ ಮೊದಲ ಬಾರಿಗೆ ಮಕ್ಕಳು ಬಂದಾಗ ಎಲ್ಲರೂ ಒಂದೇ ತರದಲ್ಲಿ ಎಂಬುದು ಎಲ್ಲಾ ಶಿಕ್ಷಕರ ಅಭಿಪ್ರಾಯ. ಮೊದಲ ದಿನ ಬಣ್ಣಬಣ್ಣದ ಬಟ್ಟೆಯಲ್ಲಿ ಬರುವ ಎಲ್ಲಾ ಮಕ್ಕಳು ಭಿನ್ನವಾಗಿಯೇ ಕಾಣುತ್ತಾರೆ. ಕೆಲವೊಮ್ಮೆ ಕೆಲವು ಮಕ್ಕಳು ಶಿಕ್ಷಕರ ರೀತಿಯಲ್ಲೂ ಕಂಡದ್ದೂ ಇದೆ. ಅಂತಿಮವಾಗಿ ಎಲ್ಲರಿಗೂ ‘ಶಾಲಾ ಸಮವಸ್ತç’ ಬಂದಾಗ ನಮ್ಮ ಶಾಲೆಯ ಮಕ್ಕಳು ಎಂದೆನಿಸುತ್ತದೆ.
ಅದೆಷ್ಟೋ ಮಕ್ಕಳು ಆರಂಭದಲ್ಲಿ ಶಾಲೆಗೆ ಹೊಂದಿಕೊಳ್ಳುವುದರಲ್ಲಿಯೇ ಸಮಯ ಕಳೆಯುತ್ತಾರೆ. ಒಂದೇ ಶಾಲೆಯಿಂದ ಬಂದ ಮಕ್ಕಳು ಅಲ್ಲಿಂದಲೇ ಬಂದ ಮಕ್ಕಳೊಂದಿಗೆ ಹೆಚ್ಚು ಬೆರೆತಿರುತ್ತಾರೆ. ಕೆಲವರು ಅಪರಿಚಿತರನ್ನು ಪರಿಚಯ ಮಾಡಿಕೊಂಡು ನಿಧಾನವಾಗಿ ಸ್ನೇಹ ಸಂಪಾದಿಸುತ್ತಾರೆ. ನಂತರದ ದಿನಗಳಲ್ಲಿ ಮೊದಲ ಪರೀಕ್ಷೆಯ ನಂತರದಲ್ಲಿ ಅಂಕಗಳ ಮೂಲಕ ಕೆಲವು ಮಕ್ಕಳ ಸಾಮರ್ಥ್ಯವನ್ನು ತಿಳಿಯಬಹುದು. ಕೆಲವು ಮಕ್ಕಳು ಮೊದಲ ಪರೀಕ್ಷೆಯಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸದಿದ್ದರೂ ಮುಂದಿನ ಪರೀಕ್ಷೆಯಲ್ಲಿ ತಮ್ಮನ್ನು ತಾವು ನಿರೂಪಿಸಿಕೊಂಡಿದ್ದಾರೆ. ಏಳು-ಬೀಳುಗಳನ್ನು ಹಲವು ವಿದ್ಯಾರ್ಥಿಗಳು ಕಂಡಿದ್ದಾರೆ.
ಕೆಲವೇ ದಿನಗಳಲ್ಲಿ ಮಕ್ಕಳು ಶಿಕ್ಷಕರೊಂದಿಗೆ ,ಇತರ ಗೆಳೆಯರ ಬಳಗದಲ್ಲಿ ಇರುವ ರೀತಿ, ಆಟೋಟಗಳು, ಇತರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವ ರೀತಿಯ ಮೂಲಕ ಆ ಮಕ್ಕಳ ವರ್ತನೆ ತಿಳಿಯಬಹುದಾಗಿದೆ. ತರಗತಿಯಲ್ಲಿ ಮಕ್ಕಳ ವರ್ತನೆಯನ್ನು ಕಂಡು ಶಿಕ್ಷಕರೇ ಒಂದು ರೀತಿಯಲ್ಲಿ ಗುಂಪಾಗಿಸಿರುತ್ತಾರೆ. ಮಾತನಾಡಿಸಿದರೆ ಮಾತ್ರ ಮಾತಾಡುವ ಮಕ್ಕಳು, ಮಾತಾಡಿಸಿದರೂ ಮಾತಾಡದ ಮಕ್ಕಳು, ಸುಮ್ಮನಿರು ಎಂದರೂ ಮಾತಾಡುವ ಮಕ್ಕಳು, ಎಷ್ಟುಬೇಕೋ ಅಷ್ಟು ಮಾತಾಡುವ ಮಕ್ಕಳು… ಹೀಗೇ ವಿಭಾಗಿಸಿದ್ದ ಆ ಮಕ್ಕಳ ಜೊತೆಗೆ ಶಿಕ್ಷಕರು ಬೆರೆತು ತಿದ್ದಿ-ತೀಡುತ್ತ ಒಳ್ಳೆಯ ಪ್ರಜೆಯನ್ನಾಗಿ ರೂಪಿಸಲು ಆರಂಭದಿoದಲೇ ಶ್ರಮಪಡುವುದು ಇದ್ದೇ ಇರುತ್ತಿತ್ತು. ಅರ್ಥ ಮಾಡಿಕೊಂಡ ಮಕ್ಕಳು ಅವರ ಜೊತೆಗೆ ಬೆರೆತು ಅವರ ಮಾತುಗಳನ್ನು ಕೇಳುತ್ತಾ, ಅನುಸರಿಸುತ್ತಾ ಸಾಗುತ್ತಿದ್ದರೆ, ‘ಇವರ ಮಾತು ನಾವು ಯಾಕೆ ಕೇಳಬೇಕು?’ ಎಂದು ತಾತ್ಸಾರ ಮಾಡುವ ಮಕ್ಕಳೂ ಇದ್ದಾರೆ. ಇದರ ನಡುವೆ ತಪ್ಪನ್ನು ತಿದ್ದುವಾಗ ‘ಬರೀ ನನಗೇ ಬೈಯುತ್ತಾರೆ, ನನ್ನ ಕಂಡರೆ ಇವರಿಗೆ ಆಗುವುದಿಲ್ಲವೇನೋ?’ ಎನ್ನುವಂತೆ ಅವರವರ ಭಾವಕ್ಕೆ ತಕ್ಕಂತೆ ಅಂದುಕೊoಡವರೂ ಇದ್ದಾರೆ.
ಇದರ ನಡುವೆ ಅಪರೂಪಕ್ಕೆ ಕೆಲವೊಂದು ಮಕ್ಕಳು ‘ತಮ್ಮ ಪಾಡಿಗೆ ತಾವಿರುತ್ತಾರೆ’ ಎನಿಸುವಂತ ವರ್ತನೆಯನ್ನು ಕಂಡಿದ್ದೇವೆ. ಇವುಗಳ ನಡುವೆ ಈ ರೀತಿಯಲ್ಲಿದ್ದ ಅಪರೂಪದ ವಿದ್ಯಾರ್ಥಿನಿ ಕೀರ್ತಿ.ಎಂ.ಎಲ್ ತನ್ನ ಪಾಡಿಗೆ ತಾನಿದ್ದು, ಪಾಠಗಳಲ್ಲಿ ಏನಾದರೂ ಅರ್ಥ ಆಗದೇ ಇದ್ದ ವಿಚಾರಗಳನ್ನು ಸಂಬoಧಿಸಿದ ಶಿಕ್ಷಕರೊಂದಿಗೆ ಕೇಳಿ ಅನುಮಾನಗಳನ್ನು ಬಗೆ ಹರಿಸಿಕೊಳ್ಳುವಲ್ಲಿ ಪ್ರಯತ್ನವನ್ನು ಮಾಡಿದ್ದಾಳೆ. ಅದರಲ್ಲಿ ಯಶಸ್ವಿಯೂ ಆಗಿದ್ದಾಳೆ. ಸಹಜ ಸಂಕೋಚ ಸ್ವಭಾವದವಳಾಗಿದ್ದು ಶಾಲೆಯಲ್ಲಿ ಅದೆಷ್ಟೋ ಸಹಪಾಠಿಗಳಿದ್ದರೂ ಪ್ರಜ್ಞಾಳ ಜೊತೆಗೆ ಮಾತ್ರ ಬೆರೆತದ್ದು. ಆಕೆಯ ಜೊತೆಗೂ ಓದು-ಬರಹದ ಬಗ್ಗೆಯೇ ಚರ್ಚೆ ನಡೆಯುತ್ತಿತ್ತು. ಯಾವುದಾದರೂ ಕಾರ್ಯಕ್ರಮಕ್ಕಾಗಿ ಮೈಕ್ ಮುಂದೆ ಬಾ ಎಂದರೆ ಹೆದರಿಕೆಯಿಂದ ಇದ್ದ ವಿದ್ಯಾರ್ಥಿನಿಯ ಈ ಎಲ್ಲಾ ಗುಣಗಳನ್ನು ಗಮನಿಸಿದ ವಿಜ್ಞಾನ ಶಿಕ್ಷಕ ರವೀಂದ್ರ ಸರ್ ಒಮ್ಮೆ ಈಕೆಯ ಜೊತೆಗೆ ಒಂದು ರೀತಿಯಲ್ಲಿ ಆಪ್ತಸಮಾಲೋಚಕರಾಗಿ ಮಾತನಾಡಿ ಆಕೆಯಲ್ಲಿ ಭರವಸೆಯನ್ನು ಮೂಡಿಸಿದರು.
ಅವರ ಮಾತುಗಳು ಬಹಳ ದೊಡ್ಡ ಪರಿವರ್ತನೆಗೆ ಕಾರಣವಾಯಿತು. ಆಗಾಗ ಅವರೊಂದಿಗೆ ಮಾತನಾಡುತ್ತಿದ್ದುದರಿಂದ ಒಂದಿಷ್ಟು ಹುರುಪು-ಉತ್ಸಾಹ ಮೂಡುತ್ತಿತ್ತು. ಅವರು ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ನಿರ್ಧರಿಸಿದ್ದಾಯಿತು. ಗಣಿತ ಶಿಕ್ಷಕರಾದ ಲೋಕೇಶ್ ಸರ್ ಮತ್ತು ಸುಧೀಂದ್ರ ಸರ್ ಪಾಠ ಮಾಡುತ್ತಿದ್ದ ರೀತಿಯಿಂದಾಗಿ ‘ಗಣಿತ’ ಆಸಕ್ತಿಯ ವಿಷಯವಾಯಿತು. ನಂತರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 608/625 ಅಂಕಗಳನ್ನು ಪಡೆದು ಓದಿನಲ್ಲಿರುವ ತನ್ನ ಆಸಕ್ತಿಯನ್ನು ಅಂಕಗಳಲ್ಲಿ ನಿರೂಪಿಸಿದ್ದಳು. ಮುಂದಿನ ಹಂತದಲ್ಲಿ ಶಿವಮೊಗ್ಗದ ‘ಪೇಸ್ ಕಾಲೇಜ್’ನಲ್ಲಿ ತನ್ನ ಆತ್ಮೀಯ ಗೆಳತಿ ಪ್ರಜ್ಞಾಳ ಜೊತೆಗೆ ಸಾಗಿತು ಅಲ್ಲೂ ಉತ್ತಮ ಅಂಕಗಳನ್ನು ಗಳಿಸಿ ಮುಂದಿನ ಪದವಿ ಶಿಕ್ಷಣಕ್ಕಾಗಿ ಮಂಗಳೂರು ವಿಶ್ವವಿದ್ಯಾಲಯದ ಮಹಿಳಾ ಕಾಲೇಜ್ನಲ್ಲಿ ಓದುವಾಗ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆದದ್ದು ರಸಪ್ರಶ್ನೆಯಲ್ಲಿ ಮೊದಲ ಬಾರಿಗೆ ಬಹುಮಾನ ಪಡೆದದ್ದು, ಕಿರುಪ್ರಹಸನದಲ್ಲಿ ಅಭಿನಯಿಸಿ ಅದಕ್ಕೆ ಬಹುಮಾನ ಬಂದಾಗ ‘ನನ್ನಲ್ಲೂ ಈ ರೀತಿಯ ಪ್ರತಿಭೆ ಇದೆ ಎಂಬುದು ಈಗ ತಿಳಿಯಿತು’ ಎಂದುಕೊoಡು ಅಂದಿನಿoದ ಪಠ್ಯೇತರ ಚಟುವಟಿಕೆಗಳಲ್ಲೂ ಕ್ರಿಯಾಶೀಲವಾಗಿ ಭಾಗವಹಿಸುತ್ತಾ, ಅಲ್ಲಿಗೆ ಬರುವ ಸಹಪಾಠಿಗಳಿಗೆ ತಾನೇ ಧೈರ್ಯ ತುಂಬುತ್ತ, ಕಾರ್ಯಕ್ರಮಕ್ಕೆ ಹೇಗೆ? ಏನೆಲ್ಲಾ ಸಿದ್ಧತೆ ಮಾಡಿಕೊಳ್ಳಬಹುದು ಎಂಬುದನ್ನು ತಿಳಿಸುತ್ತ ‘ನಾಯಕತ್ವ’ದ ಜವಾಬ್ದಾರಿಯನ್ನು ಹೊತ್ತುಕೊಂಡು ಸಾಗಿದ ರೀತಿ ಮರೆಯಲಾರದ್ದು.
ಶಾಲೆಯ ಶಿಕ್ಷಕರು ತೆಗೆದುಕೊಳ್ಳುವ ಕಾಳಜಿ, ಶಿಕ್ಷಕರು ಕಲಿಸುವ ರೀತಿಯಿಂದಾಗಿ ಒಂದಿಷ್ಟು ಸೋಮಾರಿತನವನ್ನು ಹೊಂದಿದ್ದ ತನ್ನ ತಂಗಿಗೆ ಇಲ್ಲಿ ಒಂದಿಷ್ಟು ಹೆಚ್ಚಿಗೆ ಓದು, ಬರವಣಿಗೆ ಇತರ ಪಠ್ಯೇತರ ಚಟುವಟಿಕೆ, ಕ್ರೀಡಾ ಚಟುವಟಿಕೆಗಳಲ್ಲು ಅವಕಾಶ ಸಿಗವುದರಿಂದ ತನ್ನ ತಂಗಿಗೆ ಇದೇ ಶಾಲೆ ಸರಿ ಎಂದು ನಮ್ಮ ಶಾಲೆಗೆ ಸೇರಿಸುವಲ್ಲಿ ಈಕೆಯೇ ಪ್ರಮುಖ ಪಾತ್ರವಹಿಸಿದ್ದಳು. ಒಂದಿಷ್ಟು ವರ್ಷಗಳ ನಂತರ ಶಿವಮೊಗ್ಗದ ‘ಮಾಲ್’ನಲ್ಲಿ ಒಮ್ಮೆ ಕಂಡು ಆಕೆಯೇ ಮಾತನಾಡಿಸಿದಳು, ತನ್ನ ತಂಗಿಯ ವಿದ್ಯಾಭ್ಯಾಸದ ಬಗ್ಗೆಯೂ ವಿಚಾರಿಸಿದಳು. ಈಗ ಏನು ಮಾಡುತ್ತಿರುವುದು? ಎಂದಾಗ ‘ಶಾಲೆಯಲ್ಲಿ ಗಣಿತ ಶಿಕ್ಷಕರು ಬೀರಿದ್ದ ಪ್ರಭಾವದಿಂದ ‘ಮೈಸೂರು ವಿಶ್ವವಿದ್ಯಾಲಯ’ದಲ್ಲಿ ಗಣಿತ ವಿಭಾಗದಲ್ಲಿ ಸ್ನಾತಕೋತ್ತರ ಪದವಿಗೆ ಸೇರಿದ್ದೇನೆ’ ಎಂದಳು ಪಠ್ಯದ ಜೊತೆಜೊತೆಗೆ ರಸಪ್ರಶ್ನೆ, ಪ್ರಬಂಧ ಹೀಗೆ ಒಂದಿಷ್ಟು ಇತರ ಚಟುವಟಿಕೆಯ ತೊಡಗಿಸಿಕೊಂಡ ಬಗ್ಗೆ ತಿಳಿಸಿದಳು.
ಗಣಿತ ವಿಭಾಗದಲ್ಲಿ ಉತ್ತಮ ಅಂಕಗಳೊoದಿಗೆ ಸ್ನಾತಕೋತ್ತರ ಪದವಿಯನ್ನು ಪೂರೈಸಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಡಾ.ವಿ.ಜೆ.ಗಿರೀಶ್ ಅವರ ಮಾರ್ಗದರ್ಶನದಲ್ಲಿ ಗಣಿತ ವಿಭಾಗದಲ್ಲಿ ‘ಪಿ.ಹೆಚ್.ಡಿ’ ಗಾಗಿ ಸಂಶೋಧನಾ ವಿದ್ಯಾರ್ಥಿಯಾಗಿ ಸೇರಿ, ಯಶಸ್ವಿಯಾಗಿ ಪೂರೈಸಿ ಎಲ್ಲಾ ಶಿಕ್ಷಕರಿಗೆ ಬರೀ ಕೀರ್ತಿ.ಎಂ.ಎಲ್ ಆಗಿದ್ದ ವಿದ್ಯಾರ್ಥಿನಿ ಈಗ ಡಾಕ್ಟರ್ಕೀರ್ತಿ.ಎಂ.ಎಲ್ ಎನ್ನುವಾಗ ಏನೋ ಹೆಮ್ಮೆಯ ಭಾವ.
ಇತ್ತೀಚೆಗೆ ಶಾಲಾ ವಾರ್ಷಿಕೋತ್ಸವದ ಬಗ್ಗೆ ಮಾತನಾಡುತ್ತಿದ್ದಾಗ ಮುಖೋಪಾಧ್ಯಾಯರು, ‘ಪಿ.ಹೆಚ್.ಡಿ, ರಿಸರ್ಚ್ ಹೀಗೆ ಯಾರಾದರೂ ನಮ್ಮ ಶಾಲೆಯ ಹಿರಿಯ ವಿದ್ಯಾರ್ಥಿಗಳಿದ್ದರೆ ಒಮ್ಮೆ ಹುಡುಕಿ ನೋಡಿ, ಆ ರೀತಿಯಲ್ಲಿ ಇದ್ದರೆ ಅವರ ಮಾತುಗಳು ಮಕ್ಕಳಿಗೆ ಒಂದಿಷ್ಟು ಸ್ಪೂರ್ತಿಯಾಗಬಹುದು’. ಎಂದು ತಿಳಿಸಿದಾಗ ಕೀರ್ತಿಯ ಬಗ್ಗೆ ತಿಳಿಸಿದೆ. ಶಾಲಾ ವಾರ್ಷಿಕೋತ್ಸವದ ಸಮಯದಲ್ಲಿ ಬಿಡುವು ಇದ್ದಾರೋ ಇಲ್ಲವೋ ಎಂಬುದನ್ನು ತಿಳಿಯಲು ಸೂಚಿಸಿದರು.
ತಾನು ಶಿವಮೊಗ್ಗದಲ್ಲಿಯೇ ಇದ್ದು ಆ ಸಮಯದಲ್ಲಿ ಬಿಡುವು ಇರುವುದಾಗಿ ತಿಳಿಸಿದಳು. ನಂತರ ಮಂಜುಳಾ ಮೇಡಂ ಆಕೆಯೊಂದಿಗೆ ಸಂಪರ್ಕದಲ್ಲಿದ್ದರು. ಪ್ರಸ್ತುತ ಶಿವಮೊಗ್ಗದ ಜೆ.ಎನ್.ಎನ್.ಸಿ ಯಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ವಿಷಯ ತಿಳಿಯಿತು. ಅವರ ತಾಯಿ ಶಾಲೆಗೆ ಕೀರ್ತಿಯ ಮದುವೆಗೆ ಆಮಂತ್ರಿಸಲು ಬಂದಾಗ, ‘ಇದೇ ಶಾಲೆಯಲ್ಲಿ ಓದಿದ್ದ ಮಗಳು ಈಗ ಇದೇ ಶಾಲೆಯ ವಾರ್ಷಿಕೋತ್ಸವಕ್ಕೆ ಅತಿಥಿಯಾಗಿ ಬರೋದು ನನಗಂತೂ ಖುಷಿ’ ಎಂದರು.
ಮದುವೆಯಾಗಿ ಒಂದು ವಾರದ ನಂತರದ ಶಾಲಾ ವಾರ್ಷಿಕೋತ್ಸವಕ್ಕೆ ಬರುತ್ತಾಳೋ ಇಲ್ಲವೋ ಎನ್ನುವ ಸಣ್ಣ ಅನುಮಾನವಿತ್ತು. ಅದೆಲ್ಲವನ್ನೂ ದೂರ ಮಾಡಿ ವಾರ್ಷಿಕೋತ್ಸವಕ್ಕೆ ಬಂದಳು. ಪಾಠಕಲಿಸಿದ ಗುರುಗಳ ಜೊತೆಗೆ ವೇದಿಕೆ ಹಂಚಿಕೊoಡದ್ದು, ಒಂದು ಕಾಲದಲ್ಲಿ ಬಹುಮಾನ ಪಡೆದುಕೊಳ್ಳುತ್ತಿದ್ದ ಸಮಯ, ಈಗ ತಾನೇ ಬಹುಮಾನ ನೀಡುತ್ತಿರುವಾಗ ಹೇಗೆ ಅನ್ನಿಸಿರಬೇಡ? ಎಲ್ಲಾ ಶಿಕ್ಷಕರು ಡಾಕ್ಟರ್ಕೀರ್ತಿ.ಎಂ.ಎಲ್ ಗೆ ಸನ್ಮಾನ ಮಾಡಲು ವೇದಿಕೆಗೆ ಬರಲು ತಿಳಿಸಿದರು. ತಮ್ಮ ಕಣ್ಣಮುಂದೆ ಆಡಿಕೊಂಡು ಬೆಳೆದ ವಿದ್ಯಾರ್ಥಿನಿಯೊಬ್ಬಳು ಈಗ ಸನ್ಮಾನಕ್ಕೆ ಭಾಜನಳಾಗುತ್ತಿದ್ದಾಳೆ ಎಂಬುದು ಸಂತೋಷದ ಸಂಗತಿಯಾಗಿತ್ತು. ಸನ್ಮಾನ ಪತ್ರವನ್ನು ಓದುವ ಅವಕಾಶ ನನ್ನದಾಗಿತ್ತು. ಸನ್ಮಾನದ ನಂತರ ಮಾತನಾಡುತ್ತ ತನ್ನ ತಂದೆ-ತಾಯಿ ಈ ಶಾಲೆಗೆ ಸೇರಿಸಿದ್ದಕ್ಕೆ, ಇಲ್ಲಿ ಪ್ರತೀ ಹಂತದಲ್ಲೂ ಮಾರ್ಗದರ್ಶನ ನೀಡಿದ ಎಲ್ಲಾ ಗುರುಗಳಿಗೂ, ವಿಶೇಷವಾಗಿ ತನಗೆ ಧೈರ್ಯ ತುಂಬಿದ ರವೀಂದ್ರ ಸರ್ ಎಲ್ಲರನ್ನೂ ನೆನಪಿಸಿಕೊಂಡಳು. ತನಗೆ ಧೈರ್ಯ ನೀಡಿದ ರೀತಿ, ಪಾಠ-ಪದ್ಯಗಳ ಬಗ್ಗೆ ಇದ್ದ ಅನುಮಾನಗಳನ್ನು ಬಗೆಹರಿಸಿದ ಶಿಕ್ಷಕರ ತಾಳ್ಮೆ, ಎಲ್ಲವನ್ನೂ ನೆನಪುಮಾಡಿಕೊಂಡಳು. ಅದರ ಮೂಲಕ ಮತ್ತೊಮ್ಮೆ ಶಾಲಾ ಜೀವನ ಕಣ್ಣಮುಂದೆ ಹಾದುಹೋದಂತೆ ಆಯಿತು. ಜೊತೆಗೆ ಈಗಿನ ಪೋಷಕರು ಮಕ್ಕಳನ್ನು ವಿಶ್ವಾಶಕ್ಕೆ ತೆಗೆದುಕೊಳ್ಳುವುದರ ಬಗ್ಗೆ ತಿಳಿಸಿದಳು. ಹಾಗೆಯೇ ಮಕ್ಕಳು ತಮ್ಮ ಮೇಲೆ ಪೋಷಕರು, ಶಿಕ್ಷಕರು, ಹಿರಿಯರು, ಗೆಳೆಯರ ಬಳಗ, ಕುಟುಂಬದ ಎಲ್ಲಾ ಸದಸ್ಯರ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಪ್ರಯತ್ನ ಮಾಡಿದರೆ ಖಂಡಿತವಾಗಿ ಸಾಧಿಸಬಹುದು ಎಂದು ತಿಳಿಸಿದಳು.
ತನ್ನ ವಿದ್ಯಾರ್ಥಿ ತನಗಿಂತ ಹೆಚ್ಚಿನ ಸಾಧನೆ ಮಾಡಿದರೆ ಅದನ್ನು ಹೆಮ್ಮೆಯಿಂದ ‘ನನ್ನ ವಿದ್ಯಾರ್ಥಿ’ ಎಂದು ಹೇಳಿಕೊಳ್ಳುವ ಶಿಕ್ಷಕರಿಗೆ ಇದಕ್ಕಿಂತ ಇನ್ನೇನು ಬೇಕಿದೆ? ಅದೊಂದು ಅವ್ಯಕ್ತ ಆನಂದ. ಡಾ.ಕೀರ್ತಿ ಎಲ್ಲರಿಗೂ ಮಾದರಿಯಾಗಿದ್ದಾಳೆ. ಇದೇ ರೀತಿಯಲ್ಲಿ ಎಲ್ಲಾ ಮಕ್ಕಳು ಸಾಧನೆ ಮಾಡಲಿ, ಈ ರೀತಿಯಲ್ಲಿ ಮಕ್ಕಳ ಬೆಳವಣಿಗೆಯಾದರೆ ಅದನ್ನು ಸ್ವಾರ್ಥವಿಲ್ಲದೆ ಸದಾ ಸಂಭ್ರಮಿಸುವವರು ಅವರ “ಶಿಕ್ಷಕರು”.
ಶಾಲಾ ವಾರ್ಷಿಕೋತ್ಸವ ಮುಗಿದಾಗ ಇಬ್ಬರು ವಿದ್ಯಾರ್ಥಿಗಳು ಹೀಗೆ ಮಾತನಾಡುವಾಗ ‘ಸರ್ ಶಾಲಾ ಜೀವನ ಮುಗಿದಾಗ ಮತ್ತೊಮ್ಮೆ ಶಾಲೆಗೆ ಬರಬೇಕು ಅನ್ಸತ್ತೆ, ಬಂದರೆ ಡಾಕ್ಟರ್ಕೀರ್ತಿ ಅವರ ರೀತಿ ಓದಿದ ಶಾಲೆಗೆ ಅತಿಥಿಯಾಗಿ ಬರಬೇಕು ಅನ್ಸತ್ತೆ’ ಎಂದಾಗ ಈ ವಿದ್ಯಾರ್ಥಿಗಳು ಹಾಗೆಯೇ ಆಗಲಿ ಎನಿಸಿತು. ಕಾರ್ಯಕ್ರಮ ಮಾಡಿದ್ದಕ್ಕೂ ಸಾರ್ಥಕ ಎನಿಸಿದ್ದಂತೂ ಸುಳ್ಳಲ್ಲ…