ರಸ್ತೆ ದಾಟುತ್ತಿದ್ದಾಗ ಲಾರಿಗೆ ಸಿಲುಕಿ ಶಿಕ್ಷಕಿ ಸಾವು
(SHIVAMOGA): ಸಾಗರ ತಾಲೂಕಿನ ಸಿರಿವಂತೆಯ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶಕುಂತಲಾ(29) ತಮ್ಮ ಸ್ವಗ್ರಾಮ ಚನ್ನಗಿರಿ ತಾಲೂಕಿನ ಮಾವಿನಕಟ್ಟೆ ಸಮೀಪ ಶುಕ್ರವಾರ ಬೆಳಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಶಿವಮೊಗ್ಗದಲ್ಲಿ ಇಲಾಖೆಯ ತರಬೇತಿಗೆ ಹೊರಟಿದ್ದ ಅವರು, ಚನ್ನಗಿರಿಯ ಅಗದಹಳ್ಳಿ ಬಳಿ ಬಸ್ ಹತ್ತಲು ರಸ್ತೆ ದಾಟುತ್ತಿದ್ದಾಗ ಲಾರಿಯೊಂದು ಶಕುಂತಲಾ ಅವರಿಗೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು ಆದರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ವರ್ಷವಷ್ಟೆ ಶಿಕ್ಷಣ ಇಲಾಖೆಗೆ ನೇಮಕಗೊಂಡಿದ್ದ ಶಕುಂತಲಾ ಅವರು ಸಿರಿವಂತೆ ಶಾಲೆಯಲ್ಲಿ ಇಂಗ್ಲಿಷ್ ತರಗತಿ ಶಿಕ್ಷಕರಾಗಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ