ಮಕ್ಕಳಿಂದ ಏಸುವಿನ ಪ್ರಾರ್ಥನಾ ಗೀತೆ ಹಾಡಿಸಿ, ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಶಿಕ್ಷಕ
(SHIVAMOGA): ಸಾಗರ ಮಾಸೂರು ಸರಕಾರಿ ಪ್ರೌಢಶಾಲೆ ವಿಜ್ಞಾನ ಶಿಕ್ಷಕ ಫ್ರಾಂಕಿ ಫ್ರಾನ್ಸಿಸ್ ಪ್ರತಿಭಾ ಕಾರಂಜಿಯಲ್ಲಿ ಮಕ್ಕಳಿಂದ ಏಸುವಿನ ಪ್ರಾರ್ಥನಾ ಗೀತೆ ಹಾಡಿಸಿ, ಅದೊಂದನ್ನು ಮಾತ್ರ ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಮೂಲಕ ಸರಕಾರಿ ಶಾಲಾ ಮಕ್ಕಳನ್ನು ಮಾನಸಿಕವಾಗಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಬುಧವಾರ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗ ದಳದಿಂದ ಉಪವಿಭಾಗಾಧಿಕಾರಿಗಳ ಮೂಲಕ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ತಾಲೂಕಿನ ಮಾಸೂರು ಸರಕಾರಿ ಪ್ರೌಢಶಾಲೆಯಲ್ಲಿ ಸೆ. 13ರಂದು ನಡೆದಿದ್ದ ಪ್ರತಿಭಾ ಕಾರಂಜಿಯಲ್ಲಿ ಏಸುವಿನ ಭಾವಚಿತ್ರ ಇರುವ ಪ್ರಾರ್ಥನಾ ಗೀತೆಯನ್ನು ಮಕ್ಕಳಿಂದ ಹಾಡಿಸಿ, ಸಾಮಾಜಿಕ ಜಾಲತಾಣದಲ್ಲಿ ಲೈವ್ ಬಿಡಲಾಗಿದೆ. ವಿಶೇಷ ಎಂದರೆ ಪ್ರತಿಭಾ ಕಾರಂಜಿಯ ಯಾವುದೇ ಹಾಡು, ನೃತ್ಯದ ತುಣುಕುಗಳು ಅಲ್ಲಿಲ್ಲ. ಇದು ಅನೇಕ ಅನುಮಾನಕ್ಕೆ ಕಾರಣವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಶಾಲೆಯಲ್ಲಿ ಕ್ರಿಶ್ಚಿಯನ್ ಸಮುದಾಯದ ವಿದ್ಯಾರ್ಥಿಗಳಿಲ್ಲದಿದ್ದರೂ ವಿಜ್ಞಾನ ಶಿಕ್ಷಕ ಫ್ರಾಂಕಿ ಫ್ರಾನ್ಸಿಸ್ ಇಂತಹ ಕೆಲಸ ಮಾಡಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ.
ಶಿಕ್ಷಕ ಫ್ರಾನ್ಸಿಸ್ ಕಳೆದ 18 ವರ್ಷದಿಂದ ಇದೇ ಶಾಲೆಯಲ್ಲಿ ಕರ್ತವ್ಯದಲ್ಲಿದ್ದು, ಮಕ್ಕಳಿಗೆ ಹೊಡೆಯುವುದು, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದಾಗಿ ಹಲವು ಪೋಷಕರು ದೂರುತ್ತಿದ್ದಾರೆ. ಮುಖ್ಯ ಶಿಕ್ಷಕರು ಸೇರಿದಂತೆ ಒಂದಷ್ಟು ಜನರ ಬೆಂಬಲವಿದೆ ಎನ್ನಲಾಗಿದೆ. ಕೂಡಲೆ ಈ ಶಿಕ್ಷಕನನ್ನು ಅಮಾನತ್ತುಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷೆ ಪ್ರತಿಮಾ ಜೋಗಿ, ನಿವೃತ್ತ ಮುಖ್ಯ ಶಿಕ್ಷಕ ನಾರಾಯಣಮೂರ್ತಿ ಕಾನುಗೋಡು ಮಾತನಾಡಿದರು. ಕೆ.ವಿ.ಪ್ರವೀಣ್, ನವೀನ್ ಯಳವರಸಿ, ಸುನೀಲ್ ರುದ್ರಪ್ಪ, ರಾಜೇಂದ್ರ ಪೈ ಇನ್ನಿತರರು ಹಾಜರಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ