‘ಶಿಕ್ಷಕರ’ ಕೆಲಸ ಸುಲಭವಾದ ಕೆಲಸ ಅಲ್ಲವೇ ಅಲ್ಲ…
(ARTICLE): ಬಹಳಷ್ಟು ಜನ ಹೇಳುತ್ತಾರೆ. ‘ನಿಮ್ಮ ಕೆಲಸ ಸುಲಭ ಬಿಡಿ. ಪುಸ್ತಕದಲ್ಲಿ ಇರೋದನ್ನ ಮಕ್ಕಳಿಗೆ ಹೇಳಿ, ಜೋರು ಮಾಡಿದರೆ ಎರಡು ಪೆಟ್ಟು ಕೊಟ್ಟು, ಇದನ್ನು ಬರೀ ಅಂತ ಹೇಳಿದರೆ ಮುಗೀತು.’ ಎಂದು ಕೇಳುವಾಗ ಯಾವುದೇ ಒಂದು ಹುದ್ದೆಯ ಬಗ್ಗೆ ಹೊರಗೆ ನಿಂತು ಮಾತನಾಡುವುದು ಸುಲಭ. ಆದರೆ ಸ್ವತಃ ಅದನ್ನು ಅನುಭವಿಸಿದವರಿಗೆ ಮಾತ್ರ ಅದರ ಆಳ-ಅಗಲ ತಿಳಿಯುತ್ತದೆ.
ಮೊದಲ ಬಾರಿಗೆ ಶಿಕ್ಷಕನಾದ ಸಮಯದಲ್ಲಿ ಎದುರಿನಲ್ಲಿರುವ ಅಷ್ಟು ವಿದ್ಯಾರ್ಥಿಗಳನ್ನು ಕುರಿತು ಪಾಠವನ್ನು ಮಾಡಬೇಕು ಎಂದರೆ ಸುಲಭದ ಮಾತಲ್ಲ. ಎಲ್ಲಾ ಕಣ್ಣುಗಳು ನಮ್ಮ ಮೇಲೆಯೇ ಇರುತ್ತದೆ. ಏನಾದರೂ ತಪ್ಪು ಹೇಳಿದರೆ ಮಕ್ಕಳ ಮುಂದೆ ಮರ್ಯಾದೆ ಏನಾಗಬಾರದು? ಎಂಬ ಸಣ್ಣ ಅಂಜಿಕೆಯಿಂದ ಒಂದು ತರಗತಿಗೆ ಸರಿಸುಮಾರು ಮೂರು ಗಂಟೆಗಳ ಕಾಲ ಕೂತು ಓದಿ, ಆ ಪಾಠಗಳಿಗೆ ಸಂಬಂಧಿಸಿದ ಒಂದಿಷ್ಟು ಪ್ರಶ್ನೆಗಳನ್ನು ನಮಗೆ ನಾವೇ ಕೇಳಿಕೊಂಡು ಅದಕ್ಕೆ ಸಮಂಜಸ ಉತ್ತರವನ್ನು ಕಂಡುಕೊಳ್ಳಬೇಕು. ಇದು ಯಾಕೆ ಹೀಗೆ? ಹೀಗೆ ಯಾಕೆ ಇರಬಾರದು? ಎಂದುಕೊಂಡು ಅದಕ್ಕೂ ಪರಿಹಾರವನ್ನು ಕಂಡುಕೊಳ್ಳಬೇಕು. ಕೆಲವೊಮ್ಮೆ ಎಷ್ಟೇ ತಯಾರಿ ಇದ್ದಾಗಲೂ ಕೆಲವೊಮ್ಮೆ ಮಕ್ಕಳ ಪ್ರಶ್ನೆಗೆ ಉತ್ತರ ಗೊತ್ತಿಲ್ಲದಿದ್ದಾಗ ಮಕ್ಕಳನ್ನೇ ದೂಷಿಸುವ ಬದಲು, ಮಕ್ಕಳಿಗೆ ಸುಳ್ಳನ್ನೇ ಸತ್ಯವೆಂದು ವಾದಿಸುವ ಬದಲು ‘ನನಗೆ ಈ ಉತ್ತರ ಗೊತ್ತಿಲ್ಲ. ನಾಳೆ ತಿಳಿದುಕೊಂಡು ಬರುತ್ತೇನೆ’ ಎಂದು ಪ್ರಾಮಾಣಿಕತೆಯಿಂದ ಹೇಳಿ ಅಂದು ಗೊತ್ತಿರುವ ವಿಷಯ ತಜ್ಞರಿಗೆಲ್ಲ ವಿಚಾರಿಸಿ ಸರಿಯಾದ ಉತ್ತರ ಕೊಟ್ಟಾಗ ಅದೇನೋ ಸಮಾಧಾನ. ಕೆಲವೊಮ್ಮೆ ‘ನೋಡು ಟೀಚರ್ ಗೆ ಗೊತ್ತಿಲ್ಲ. ನಾವು ಗೊತ್ತು ಮಾಡಿಕೊಳ್ಳುವ ಹಾಗೇ ಮಾಡಿದಿವಿ’ ಎಂದು ತರಲೆ ವಿದ್ಯಾರ್ಥಿಗಳು ಹೇಳಿಕೊಳ್ಳುವಾಗ ಸಣ್ಣ ನಗೆ ನಕ್ಕಿದ್ದೇವೆ. ಹಾಗೇ ನೋಡಿದರೆ ‘ಶಿಕ್ಷಕರು’ ಎಂದು ಕರೆಸಿಕೊಳ್ಳಲು ಮಕ್ಕಳೇ ಕಾರಣ ಆಗಿರುವಾಗ ಯಾವುದೇ ಶಿಕ್ಷಕರು ಮಕ್ಕಳನ್ಜು ‘ಟಾರ್ಗೆಟ್’ ಮಾಡಿ ವಿಚಾರಿಸಿಕೊಳ್ಳುತ್ತೇನೆ ಎನ್ನುವುದಿಲ್ಲ. ತಪ್ಪು ಮಾತ್ರ ಹೇಳಿಕೊಡಬಾರದು ಎಂದುಕೊಂಡು ಶಿಕ್ಷಕರು ವಿದ್ಯಾರ್ಥಿಗಳಾಗಿ ಓದಿ, ತಿಳಿದುಕೊಂಡು, ಅರ್ಥೈಸುವುದೇ ಸವಾಲು. ಕೆಲವೊಮ್ಮೆ ಎಷ್ಟು ಬಾರಿ ಹೇಳಿದರೂ, ‘ನನಗೆ ಇದು ಅರ್ಥವಾಗುತ್ತಿಲ್ಲ. ಮತ್ತೊಮ್ಮೆ ಹೇಳಿಕೊಡಿ’ ಎಂದಾಗ ಬೇಸರಿಸಿಕೊಳ್ಳದೇ ಹೇಳಿಕೊಡುವ ತಾಳ್ಮೆಯೂ ಬೇಕು. ತಪ್ಪು ಮಾಡುತ್ತಿದ್ದಾರೆ ಎನ್ನುವಾಗ ಅದನ್ನು ಸರಿಪಡಿಸಲು ಸಣ್ಣ ದಂಡನೆಯನ್ನೂ ನೀಡಬೇಕು.
ಮಕ್ಕಳಿಗೆ ಶಿಸ್ತನ್ನು ಕಲಿಸುವ ಮುನ್ನ ನಾವು ಶಿಸ್ತನ್ನು ಹೊಂದಿರಬೇಕು. ನಾವೇ ಸರಿ ಇಲ್ಲದೇ ಮಕ್ಕಳನ್ನು ದೂಷಿಸುವಂತಿಲ್ಲ. ಬೆಳಗ್ಗೆ ಶಾಲೆಗೆ ಬಂದಾಗ ಸುಮ್ಮನೇ ರೂಂಗಳನ್ನು ಸುತ್ತುವ ಮಕ್ಕಳನ್ನು ಹಿಡಿದು ಕೂರಿಸುವುದರಿಂದ ಆರಂಭವಾಗಿ ಪ್ರಾರ್ಥನೆಯ ಸಮಯದಲ್ಲಿ ಸಮವಸ್ತ್ರ ಸರಿಯಾಗಿದೆಯಾ? ಶೂ ಪಾಲೀಶ್ ಆಗಿದೆಯಾ? ಉಗುರುಗಳನ್ನು ಸರಿಯಾಗಿ ಕತ್ತರಿಸಿದ್ದಾರಾ? ತಲೆಯಲ್ಲಿ ಸಿನಿಮಾ ನೋಡಿ ಮಾಡಿಸಿಕೊಂಡ ಕಟಿಂಗ್, ಲೈನ್ ಬಿಡಿಸಿಕೊಂಡಿರುವುದು, ತಲೆಗೆ ಎಣ್ಣೆ ಹಚ್ಚದೇ ಇರುವುದನ್ನು ಗಮನಿಸಿ ಅದನ್ನು ಸರಿಪಡಿಸುವುದರಿಂದ ಆರಂಭವಾಗುವುದು. ಈ ಸಮಯದಲ್ಲಿ ಅದೆಷ್ಟು ಸುಳ್ಳುಗಳು ಸತ್ಯಗಳು ಸೇರಿರುತ್ತವೆ ಎಂದರೆ ಹೇಳತೀರದು. ಇದಕ್ಕೂ ಮೀರಿ ತಪ್ಪಿಸಿಕೊಂಡ ವಿದ್ಯಾರ್ಥಿಗಳನ್ನು ಅವರ ಸಹಪಾಠಿಗಳೇ ಗುರುತಿಸಿ, ‘ಸರ್ ಅವನು ಕಟಿಂಗ್ ಮಾಡಿಸಿಲ್ಲ, ಇವನು ಎಣ್ಣೆ ಹಚ್ಚಿಲ್ಲ’ ಎಂದು ಪತ್ತೇದಾರಿಗಳ ಪಾತ್ರವನ್ನು ವಿದ್ಯಾರ್ಥಿಗಳು ಮಾಡುತ್ತಿರುತ್ತಾರೆ. ಇವರಿಗೊಂದಿಷ್ಟು ಮಾತುಗಳನ್ನು ಹೇಳಿ ಸರಿ ದಾರಿಗೆ ತರುವುದು ಅಷ್ಟು ಸುಲಭವಲ್ಲ.
ಒಮ್ಮೆ ಶಿಕ್ಷಕರಾದರೆಂದರೆ ಅದು ಮಕ್ಕಳ ಸರ್ವಾಂಗೀಣ ಪ್ರಗತಿಗೆ ಕಾರಣರಾಗಲು ಸಿಕ್ಕ ಅವಕಾಶವಾಗಿರುತ್ತದೆ. ಅನೇಕ ಮಕ್ಕಳ ತಪ್ಪುಗಳನ್ನು ತಿದ್ದುವಾಗ ಪದೇಪದೇ ‘ಈ ಮೇಷ್ಟ್ರು ನನ್ನೇ ಟಾರ್ಗೆಟ್ ಮಾಡ್ತಾ ಇದ್ದಾರೆ, ವಿಲನ್ ಆಡಿದ ಹಾಗೇ ಆಡ್ತಾರೆ’ ಎಂದುಕೊಂಡವರು ಇದ್ದಾರೆ. ಅದರ ಬಗ್ಗೆ ಯೋಚಿಸಿದೆ ಮತ್ತೆಮತ್ತೆ ಅವರ ತಪ್ಪನ್ನು ತಿದ್ದುತ್ತಲೇ ಇರುತ್ತೇವೆ. ಮಕ್ಕಳು ಶಾಲೆಯಲ್ಲಿಯೇ ಹೆಚ್ಚು ಸಮಯ ಕಳೆಯುವುದರಿಂದ ಅವರ ಮಾತು, ನಡೆ-ನುಡಿಗಳನ್ನು ಹೆಚ್ಚು ಗಮನಿಸಿರುವುದರಿಂದ ತಿದ್ದಿಕೊಳ್ಳಲು ಹೇಳುತ್ತಲೇ ಇರುತ್ತೇವೆ. ಆದರೆ ಅದನ್ನೇ ಅಪಾರ್ಥ ಮಾಡಿಕೊಂಡು ಬೈದುಕೊಂಡು ಓಡಾಡುವ ಮಕ್ಕಳನ್ನು ‘ಪಾಪ ಮಗು, ಹೋಗಲಿಬಿಡಿ’ ಎಂದು ನಮಗೆ ನಾವೇ ಸಮಾಧಾನ ಮಾಡಿಕೊಂಡಿದ್ದೇವೆ. ಒಮ್ಮೊಮ್ಮೆ ಸರಿಯಾಗಿ ಮನೆಯಲ್ಲಿ ಬರೆದುಕೊಂಡು ಬನ್ನಿ ಎಂದದ್ದನ್ನು ಬರೆಯದೇ ಬಂದಾಗ, ನೋಟ್ಸ್ ಸಂಪೂರ್ಣ ಬರೆದುಕೊಳ್ಳದೇ ಇದ್ದಾಗ ಒಬ್ಬೊಬ್ಬರನ್ನೇ ಪತ್ತೇ ಹಚ್ಚುವಾಗ ಸಾಕುಸಾಕು ಎನಿಸುವಷ್ಟು ಕಾಡಿಸಿದವರು ಇದ್ದಾರೆ. ನಮ್ಮ ಸಹಾಯಕ್ಕೆ ನಿಂತ ಕೆಲವು ವಿದ್ಯಾರ್ಥಿಗಳು, ‘ಇಂತಹವರು ಸರಿಯಾಗಿ ಬರೆದಿಲ್ಲ ಒಮ್ಮೆ ನೋಡಿ’ ಎಂದು ಗುಪ್ತಚಾರರ ಕೆಲಸವನ್ನು ಮಾಡಿದ್ದಾರೆ.
ಕಳೆದು ಹೋದ ಪೆನ್ಸಿಲ್, ಪೆನ್, ರಬ್ಬರ್ ಇಂದ ಹಿಡಿದು, ನೋಟ್ಸ್ ಬಿಸಾಕಿದ್ದಾನೆ, ಹಾಳೆ ಹರಿದಿದ್ದಾನೆ, ಇವರಿಬ್ಬರು ಹೊಡೆದಾಡಿಕೊಂಡಿದ್ದಾರೆ ಕೊಂಡಿದ್ದಾರೆ, ನನ್ನ ಊಟದ ಡಬ್ಬಿಯನ್ನು ಕದ್ದು ತಿಂದಿದ್ದಾರೆ ಎನ್ನುವ ತನಕವೂ ಒಂದಲ್ಲ ಒಂದು ಆರೋಪ-ಪ್ರತ್ಯಾರೋಪಗಳು ಬರುತ್ತಲೇ ಇರುತ್ತವೆ. ನಾವು ಇರುವ ಕೆಲಸ ಬಿಟ್ಟು ಈ ಪಂಚಾಯಿತಿಯನ್ನು ಬಗೆಹರಿಸಲು ಮುಂದಾದಾಗ ಸಿಕ್ಕಿಹಾಕಿಕೊಂಡವರು ಮುಗ್ದರಂತೆ ಅಭಿನಯಿಸುವುದನ್ನು ಕಂಡಾಗ ‘ನಟಭಯಂಕರರು’ ಎನಿಸಿದ್ದಿದೆ. ಶಿಕ್ಷಕರು ತರಗತಿಯಿಂದ ಹೊರಬಂದಾಗ ಹೋ… ಎಂದು ಕೂಗುವಾಗ ‘ತರಗತಿಯ ಲೀಡರ್ ಆಗಿ ಏನು ಮಾಡ್ತಾ ಇದೀಯಾ? ಮಾತನಾಡಿದವರ ಹೆಸರು ಬರೆ ಆಮೇಲೆ ಇದೆ ಹಬ್ಬ’ ಎಂದಾಗ ವಾತಾವರಣ ನೀರವ ಮೌನದಂತೆ ಕಂಡಿದೆ. ಬೋರ್ಡ್ ಮೇಲಿದ್ದ ಹೆಸರಿನ ಮಕ್ಕಳಿಗೆ ಒಂದೆರಡು ಗುರುತರವಾದ ಸಿಹಿಯಾದ ಶಿಕ್ಷೆ ಸಿಕ್ಕಾಗ ಅದರಿಂದಲೇ ಉಳಿದವರು ಪಾಠ ಕಲಿತಿದ್ದಾರೆ. ಕೆಲವರಂತೂ ಬೋರ್ಡ್ ನಲ್ಲಿ ತಮ್ಮ ಹೆಸರು ಇಲ್ಲದಿದ್ದರೆ ಸಮಾಧಾನವೇ ಇಲ್ಲವೆಂಬಂತೆ ಮಾತನಾಡಿ, ಬೈಸಿಕೊಂಡು, ಪೆಟ್ಟುತಿಂದರೂ ಬದಲಾಗಿಲ್ಲ. ಆದರೂ ಇಂತ ಮಕ್ಕಳನ್ನು ಕಂಡು ಮುಂದೆ ಹೆಂಗೋ ಏನೋ ಇವು? ಎಂಬ ಕಾಳಜಿಯೂ ಇದ್ದೇ ಇದೆ.
ಪಾಠ ಮಾಡುವಾಗ ಕಿರಿಕಿರಿ ಮಾಡುವ ಮಕ್ಕಳನ್ನು ತರಗತಿ ಮುಗಿಯುವವರೆಗೂ ನಿಲ್ಲಿಸಿದ್ದೇವೆ, ಕೆಲವೊಮ್ಮೆ ಅತಿಯಾದಾಗ ತರಗತಿಯಿಂದ ಆಚೆ ಹಾಕಿದ್ದೇವೆ. ಮಗು ಪಾಠವನ್ನು ತಪ್ಪಿಸಿಕೊಳ್ಳುತ್ತದೆ ಎಂದೆನಿಸಿ ತರಗತಿಯ ಒಳಗೆ ಕರೆದು ನಿಂತೇ ಪಾಠ ಕೇಳು ಎಂದಿದ್ದೇವೆ. ಇಂತಹ ಸಮಯದಲ್ಲಿ ಹಲವು ಮಕ್ಕಳು ಮೇಷ್ಟ್ರು ಮೇಲೆ ಕೋಪ ಮಾಡಿಕೊಂಡಿರಬಹುದು, ದೂಷಿಸಿರಬಹುದು, ಇತರ ವಿದ್ಯಾರ್ಥಿಗಳೊಂದಿಗೆ, ‘ಆ ಮೇಷ್ಟ್ರು ಸರಿ ಇಲ್ಲ’ ಎಂದಾಗಲೂ ಯಾವುದನ್ನು ತೆಗೆದುಕೊಳ್ಳಬೇಕೋ ಅಷ್ಟನ್ನು ಮಾತ್ರ ಕಿವಿಗೆ ಹಾಕಿಕೊಂಡಿದ್ದೇವೆ. ಒಮ್ಮೊಮ್ಮೆ ಇಂತ ಮಕ್ಕಳನ್ನು ಸರಿ ದಾರಿಗೆ ತರಲು ಹೋಗಿ ನಾವೇ ಕೆಟ್ಟವರಾಗುತ್ತಿದ್ದೇವೆ. ಏನಾದರೂ ಮಾಡಿಕೊಳ್ಳಲಿ ನಮಗೇನು ಎಂದು ಯೋಚಿಸದೇ ‘ಶಿಕ್ಷಕರಾಗಿರುವುದೇ ಮಕ್ಕಳನ್ನು ತಿದ್ದಲು’ ಎಂದು ಅರ್ಥೈಸಿಕೊಂಡು ಮನೆ ಮಕ್ಕಳಿಗಿಂತ ಹೆಚ್ಚು ಕಾಳಜಿವಹಿಸಿ ಮತ್ತೆಮತ್ತೆ ತಿದ್ದಿದ್ದೇವೆ. ಈ ನಿಟ್ಟಿನಲ್ಲಿ ಮಕ್ಕಳು ಒಂದಿಷ್ಟಾದರೂ ಬದಲಾಗಿ ಸರಿಯಾದ ದಾರಿಯಲ್ಲಿ ಸಾಗುತ್ತಿದ್ದರೆ ಅದೇ ಸಂತೋಷ.
ಒಂದಿಷ್ಟು ದಿನಗಳ ಹಿಂದೆ ಒಬ್ಬ ಪೋಷಕರು ತಮ್ಮ ಮಗುವಿನ ಬಗ್ಗೆ ರಾಶಿ ಕಂಪ್ಲೇಂಟ್ ಗಳನ್ನು ಹೇಳಿ, ‘ನೀವು ಚೆನ್ನಾಗಿ ಹೊಡಿರಿ ನಾವು ಅದನ್ನು ಕೇಳಲ್ಲ’ ಎಂದಾಗ ಆ ಮಗುವಿಗೆ ಹೊಡೆಯದೇ ಪ್ರೀತಿಯಿಂದ ಮಾತನಾಡಿ, ಕಾಳಜಿಯ ಮಾತುಗಳನ್ನು ಆಡಿ ಮಗುವನ್ನು ಒಳ್ಳೆಯ ರೀತಿಯಲ್ಲಿ ಬದಲಾಯಿಸಿದಾಗ ಸಣ್ಣ ಸಮಾಧಾನ. ಈ ರೀತಿ ಬದಲಾದ ವಿದ್ಯಾರ್ಥಿ, ‘ಸರ್ ನಮ್ಮ ಪೋಷಕರು ನಿಮ್ಮಗಳನ್ನ ಬೈಕೋತಾ ಇರ್ತಾರೆ, ನಮ್ಮನ್ನು ಬದಲಾಯಿಸಿದ್ದು ನೀವು. ಆದರೂ ಹೀಗೆ ಹೇಳ್ತಾರೆ’ ಎಂದು ಮಕ್ಕಳು ಪ್ರಾಮಾಣಿಕರಾಗಿದ್ದಾರೆ. ‘ನೀವು ಏನು ಅಂತ ನಮಗೆ ಗೊತ್ತಿದೆ. ಆದರೂ ನಿಮ್ಮಗಳ ಬಗ್ಗೆ ಹೀಗೆ ಅಂದಾಗ ನನಗೆ ಸಹಿಸಿಕೊಳ್ಳಲು ಆಗದೇ ನಾನು ಪೋಷಕರ ಜೊತೆಗೆ ಜಗಳ ಆಡಿದಿನಿ’ ಎಂದಾಗಲೂ ‘ಪೋಷಕರ ಬಗ್ಗೆ ಹಾಗೇ ಹೇಳುವುದು ತಪ್ಪು’ ಎಂದಿದ್ದೇವೆ. ಕೆಲವು ಪೋಷಕರು, ‘ನಿಮ್ಮ ಬಗ್ಗೆ ನಮಗೆ ನಂಬಿಕೆ ಇದೆ. ನೀವು ನಮ್ಮ ಮನೆಯ ಸದಸ್ಯರಂತೆ, ನಮ್ಮ ಮಗುವನ್ನು ಸರಿಯಾದ ದಾರಿಯಲ್ಲಿ ಕರೆದುಕೊಂಡು ಹೋಗ್ತಾ ಇದೀರ. ಇದಕ್ಕೆ ನಾವು ಎಷ್ಟು ಕೃತಜ್ಞತೆ ತಿಳಿಸಬೇಕೋ ಗೊತ್ತಾಗ್ತಾ ಇಲ್ಲ, ನಿಮ್ಮ ಜೊತೆಗೆ ಇಟ್ಕೊಳಿ, ಒಂದಿಷ್ಟಾದರೂ ಒಳ್ಳೆಯದನ್ನು ಕಲೀಲಿ’ ಎಂದಾಗ ಕೆಲವು ಪೋಷಕರಾದರೂ ನಮ್ಮ ಬಗ್ಗೆ ಗೌರವ ಇಟ್ಕೊಂಡಿದ್ದಾರಲ್ಲ ಅದೇ ಸಮಾಧಾನದ ಸಂಗತಿ ಎನಿಸುತ್ತದೆ.
ಕಲಿಸುವ ಜೊತೆಜೊತೆಗೆ ನಾವು ಕೂಡ ಕಲಿಯುತ್ತಿದ್ದೇವೆ. ಅದೆಷ್ಟೋ ಮಕ್ಕಳು ಪ್ರೀತಿಯ ಅಣ್ಣ ಎಂದಿದ್ದಾರೆ, ಕೆಲವರು ಅಪ್ಪ ಎಂದಿದ್ದಾರೆ, ಇನ್ನೂ ಕೆಲವರು ಫ್ರೆಂಡ್ ಎಂದೂ ಕರೆದಿದ್ದಾರೆ. ಮಕ್ಕಳ ಜೊತೆಗೆ ಮಕ್ಕಳಾಗಿ ಹಾಡಿದ್ದು, ಕುಣಿದದ್ದು, ಆಟವಾಡಿದ್ದು, ನಗಿಸಿದ್ದು-ಅಳಿಸಿದ್ದು, ಜೊತೆಗಿದ್ದು ಪ್ರೋತ್ಸಾಹಿಸಿದ್ದನ್ನು ಹಲವು ಮಕ್ಕಳು ಮರೆತಿಲ್ಲ, ಮಕ್ಕಳ ಜೊತೆಗೆ ಟೀಚರ್ ಇಷ್ಟು ಫ್ರೀ ಆಗಿ ಇರ್ತಾರೆ ಅಂತ ಅನ್ಕೊಂಡೇ ಇರಲಿಲ್ಲಎಂದಿದ್ದಾರೆ. ಎಷ್ಟೋ ವರ್ಷಗಳಾದರೂ ಈಗಲೂ ಅದೇ ಪ್ರೀತಿಯಿಂದ ಮಾತನಾಡುತ್ತಾರೆ, ಇತರ ಶಿಕ್ಷಕರ ಬಗ್ಗೆ, ಶಾಲೆಯ ವಿಚಾರಿಸುತ್ತಾರೆ, ‘ಅವತ್ತು ಎಲ್ಲಾ ಶಿಕ್ಷಕರು ಕಲಿಸಿದ ಒಳ್ಳೆಯ ಪಾಠಗಳು, ಮೌಲ್ಯಗಳು ಇವತ್ತು ಒಂದೊಳ್ಳೆಯ ಕೆಲಸವನ್ನು ನೀಡಿದೆ. ಇಲ್ಲಿ ನನ್ನ ಶಿಸ್ತಿನ ಬಗ್ಗೆ ಎಲ್ಲರೂ ಒಳ್ಳೆಯ ಅಭಿಪ್ರಾಯ ಹೇಳಿದಾಗ ‘ನನ್ನ ಶಾಲೆಯಲ್ಲಿ ಕಲಿತದ್ದು’ ಎಂದು ಹೇಳಿದ ಹೆಮ್ಮೆ ನನ್ನದು ಎಂದ ವಿದ್ಯಾರ್ಥಿಯ ಮಾತನ್ನು ಕೇಳಿದಾಗ ಆಗುವ ಖುಷಿಯೇ ಬೇರೆ. ಎಷ್ಟೋ ವರ್ಷಗಳ ನಂತರ ಹೇಳಿಕೊಟ್ಟದ ಪಾಠದ ಸಾಲುಗಳನ್ನು ಮರೆತಿಲ್ಲ, ಈ ಪಾಠ-ಪದ್ಯ ನೆನಪಿದೆ, ತರಗತಿಯ ಕೀಟಲೆಗಳು, ನೀಡಿದ ಕಾರ್ಯಕ್ರಮ, ಆಟೋಟ, ವಾರ್ಷಿಕೋತ್ಸವ, ಟೂರ್ ಎಲ್ಲವನ್ನು ನೆನಪುಮಾಡಿಕೊಂಡು ಹೇಳುವಾಗ ಕೇಳುವುದೇ ಆನಂದ.
ಮಗುವಿನ ಬಗೆಗಿನ ಕಾಳಜಿಯನ್ನು ಗಮನಿಸದೇ, ಕೆಲವೊಮ್ಮೆ ಅದೇನೋ ಮನಸ್ಥಿತಿಯಿಂದ ಶಿಕ್ಷಕರ ತಪ್ಪು ಎಂದು ಮಕ್ಕಳು ಪೋಷಕರಿಗೆ ದೂರಿದಾಗ ತಪ್ಪಿಲ್ಲದಿದ್ದರೂ ‘ಕ್ಷಮೆ’ ಕೇಳಿದ್ದೂ ಇದೆ. ‘ಮೇಷ್ಟ್ರನ್ನು ಸೋಲಿಸಿದೆ’ ಎಂದು ಬೀಗುವ ಮಕ್ಕಳು ‘ಇವು ಇನ್ನೂ ಬದಲಾಗಿಲ್ಲವಲ್ಲ, ಭಗವಂತ ಅವರಿಗೆ ಒಳ್ಳೆಯ ಬುದ್ಧಿಕೊಡು’ ಎಂದು ಕೇಳಿದ್ದೇವೆ ಹೊರತು ಶಾಪವನ್ನು ಹಾಕಿಲ್ಲ. ಮಕ್ಕಳು ಸಾಧನೆ ಮಾಡಿದಾಗ ‘ನನ್ನ ವಿದ್ಯಾರ್ಥಿ’ ಎಂದುಕೊಳ್ಳುವ ಶಿಕ್ಷಕರು ತಪ್ಪು ಮಾಡಿದ ವಿದ್ಯಾರ್ಥಿಯನ್ನೂ ಸಹ ‘ನನ್ನ ವಿದ್ಯಾರ್ಥಿ’ ಎಂದು ಒಪ್ಪಿಕೊಂಡಿದ್ದೇವೆ. ಒಂದೇ ತರಗತಿಯಲ್ಲಿ ಬೆಳದರೂ ಎಲ್ಲರಿಗೂ ಎಲ್ಲಾ ಶಿಕ್ಷಕರು ಒಂದೇ ರೀತಿಯಾಗಿ ಕಾಣುವುದಿಲ್ಲ. ತನಗಿಂತ ಮಿಗಿಲಾಗಿ ಸಾಧಿಸಿದವರನ್ನು ಹೇಗೆ ತುಳಿಯುವುದು ಎಂದು ಕಾಡುವ ಜಗದಲ್ಲಿ ‘ನನ್ನ ವಿದ್ಯಾರ್ಥಿ ನನ್ನ ಮೀರಿದ ಸಾಧನೆ ಮಾಡಿದ್ದಾರೆ’ ಎಂದು ಕೊಂಡಾಡುವವರು ಶಿಕ್ಷಕರೇ ಆಗಿರುತ್ತಾರೆ. ಎಲ್ಲಾ ವಿದ್ಯಾರ್ಥಿಗಳಲ್ಲೂ ಇದೇ ಸಾಧನೆಯ ಮನೋಭಾವ ಇದ್ದರೆ ಎಷ್ಟು ಚೆಂದ ಅನಿಸುತ್ತದೆ.
ಪ್ರತಿದಿನವೂ ಹೊಸಹೊಸ ತಪ್ಪುಗಳನ್ನು ತಿದ್ದುತ್ತಾ, ಪ್ರೋತ್ಸಾಹಿಸುತ್ತ, ಪೋಷಕರು, ಮಕ್ಕಳಿಂದ ಒಳಿತಿನ ಅಭಿಪ್ರಾಯವೋ, ನಕಾರಾತ್ಮಕ ಅಭಿಪ್ರಾಯವೋ ಬಂದರೂ ಸಮಚಿತ್ತದಿಂದ ಸ್ವೀಕರಿಸಿ. ‘ಏನಾದರೂ ಆಗಲಿ ಮಗುವಿಗೆ ಒಳ್ಳೆಯದಾಗಲಿ, ಅಷ್ಟೇ ಸಾಕು’ ಎಂದು ಮಕ್ಕಳನ್ನು ತಿದ್ದಿ-ತೀಡಿ ಸರಿ ದಾರಿಗೆ ತರುವ ಪೋಷಕರು ನಾವಲ್ಲವೆ? ತಪ್ಪೇ ಮಾಡದವರು ಯಾರಿದ್ದಾರೆ? ಎಲ್ಲವನ್ನು ಸಹಿಸಿಕೊಂಡು, ಸಮಾಧಾನ ಮಾಡಿಕೊಂಡು ಮಕ್ಕಳನ್ನು ಸರಿದಾರಿಗೆ ತರುವ ಗುರುತರ ಜವಾಬ್ದಾರಿ ಹೊತ್ತಿರುವ ‘ಶಿಕ್ಷಕರ’ ಕೆಲಸ ಸುಲಭವಾದ ಕೆಲಸ ಅಲ್ಲವೇ ಅಲ್ಲ… ಈ ಶಿಕ್ಷಕರನ್ನು ಹುಟ್ಟು ಹಾಕಿದ ಮಕ್ಕಳನ್ನು ಮರೆಯಲು ಸಾಧ್ಯವೇ ಇಲ್ಲ… ಇನ್ನೂ ತುಂಬಾ ಹೇಳುವುದು ಇದೆ. ಆದರೆ ‘ಬೆಲ್’ ಆದ ನಂತರ ಪಾಠ ಮಾಡುವುದು ಅಷ್ಟೊಂದು ಸರಿ ಅಲ್ಲ, ಮತ್ತೊಬ್ಬ ಶಿಕ್ಷಕರು ಪಾಠ ಹೇಳಲು ಬರುವಾಗ ಅವರಿಗೆ ಜಾಗ ಬಿಟ್ಟುಕೊಡಬೇಕಲ್ಲವೇ? ಹಾಗಾಗಿ ಇಲ್ಲಿಗೆ ಮುಗಿಸುವ… ಸದಾ ಕಲಿಯುತ್ತ-ಕಲಿಸುತ್ತ, ಮಕ್ಕಳಲ್ಲಿ ಒಳಿತಿನ ದಾರಿಗೆ ಕರೆದೊಯ್ಯುತ್ತಿರುವ, ಜವಾಬ್ದಾರಿಯ ಪೀಳಿಗೆಯನ್ನು ಹುಟ್ಟುಹಾಕುತ್ತಿರುವ ಎಲ್ಲಾ ಶಿಕ್ಷಕರ ಬಳಗ್ಗೆ ಶಿಕ್ಷಕರ ದಿನಾಚರಣೆಯನ್ನು ಕೋರುತ್ತ ಈ ಬರಹ…