ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಸಾವು
(KOLARA): ಬಂಗಾರಪೇಟೆ: ಭಾನುವಾರ ರಾತ್ರಿ ತಾಲೂಕಿನ ಕುಪ್ಪನಹಳ್ಳಿ ಬಳಿ ಬೆಂಗಳೂರು-ಚೆನೈ ಎಕ್ ಪ್ರೆಸ್ ಹೈವೇ ರಸ್ತೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಸುಶ್ಮಿತಾ (32) ಚಿಕಿತ್ಸೆ ಫಲಕಾರಿಯಾಗದೇ, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು,ಈ ಅಪಘಾತದಲ್ಲಿ ಒಟ್ಟು 6 ಜನ ಸಾವನ್ನಪ್ಪಿದ್ದಾರೆ.
ಭಾನುವಾರ ನಡೆದ ಭೀಕರ ಅಪ ಘಾತದಲ್ಲಿ 8 ತಿಂಗಳ ತುಂಬು ಗರ್ಭಿಣಿ ಯಾಗಿದ್ದ ಕೆಜಿಎಫ್ ತಾಲೂಕಿನ ಕಮ್ಮಸಂದ್ರದ ಸುಶ್ಮಿತಾ ಕೋಂ ಸಂತೋಷ್ ಗಂಭೀರವಾಗಿ ಗಾಯಗೊಂಡಿದ್ದರು.ನಂತರ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು, ನಂತರ ಶಸ್ತ್ರಚಿಕಿತ್ಸೆ ಮೂಲಕ ಹೊಟ್ಟೆ ಯಲ್ಲಿಯೇ ಭ್ರೂಣ ಸಾವನ್ನಪ್ಪಿದ್ದರಿಂದ ಹೊರ ತೆಗೆಯಲಾಗಿದೆ. ಈಕೆ ಕಾಲು, ಕೈಗಳು ಮುರಿದಿದ್ದು ಹಾಗೂ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಚಿಕಿತ್ಸೆ ಫಲಕಾರಿ ಯಾಗದೇ ರಾತ್ರಿ ಸಾವನ್ನಪ್ಪಿದ್ದಾರೆಂದು ವೈದ್ಯರು ದೃಢಪಡಿಸಿದ್ದಾರೆ.
ರಸ್ತೆಯಲ್ಲಿ ಸಂಚಾರ ಸ್ಥಗಿತ ಗೊಳಿಸಿ:
ಬೆಂಗಳೂರು-ಚೆನೈ ಎಕ್ಸ್ಪ್ರೆಸ್ ಕಾರಿಡಾರ್ ಹೈವೇ ರಸ್ತೆಯು ಹೊಸಕೋಟೆಯಿಂದ ಕೆಜಿಎಫ್ ತಾಲೂಕಿನ ಎನ್.ಜಿ. ಹುಲ್ಲೂರು ವರೆಗೂ ಈಗಾಗಲೇ ಅಭಿವೃದ್ಧಿಯಾಗಿದ್ದು, ರಸ್ತೆ ಉದ್ಘಾಟನೆಗೂ ಮುಂಚೆಯೇ ಎನ್. ಜಿ.ಹುಲ್ಲೂರು ಹಾಗೂ ಮೇಲ್ ಕೃಷ್ಣಾವರಂ ಬಳಿ ತಾತ್ಕಾಲಿಕವಾಗಿ ಸಾರ್ವಜನಿಕರು ಓಡಾಟಕ್ಕೆ ಬಿಟ್ಟಿರುವುದರಿಂದ ವಾಹನಗಳ ಸಂಖ್ಯೆ ಕಡಿಮೆ ಇರುವುದರಿಂದ ವಾಹನ ಸವಾರರು ಅಡ್ಡಾದಿಡ್ಡಿಯಾಗಿ ಹಾಗೂ ಅತಿವೇಗದಿಂದ ಸಂಚಾರ ಮಾಡುತ್ತಿರುವುದೇ ಅಪಘಾತಕ್ಕೆ ಕಾರಣವಾಗುತ್ತಿದೆ ಎನ್ನಲಾಗಿದ್ದು, ರಾಷ್ಟ್ರೀಯ ಹೆದ್ದಾರಿಯವರು ಚೆನ್ನೈ ವರೆಗೂ ರಸ್ತೆ ಸಂಪೂರ್ಣವಾಗಿ ನಿರ್ಮಾಣ ಮಾಡಿ ಸಾರ್ವಜನಿಕರ ಉಪಯೋಗಕ್ಕೆ ಲೋಕಾರ್ಪಣೆ ಮಾಡುವವರೆಗೂ ಈ ರಸ್ತೆಯಲ್ಲಿ ಸಂಚಾರವನ್ನು ಸ್ಥಗಿತಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ವರದಿ: ವಿಷ್ಣು ಕೋಲಾರ