ಚಿಕ್ಕಮಗಳೂರು

ಶ್ರದ್ಧೆ, ಆಸಕ್ತಿಯಿಂದ ಜೀವನದಲ್ಲಿ ಸಾಧನೆ ಸಾಧ್ಯ

ಶ್ರದ್ಧೆ, ಆಸಕ್ತಿಯಿಂದ ಜೀವನದಲ್ಲಿ ಸಾಧನೆ ಸಾಧ್ಯ


(CHIKKAMAGALURU): ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದ ಸಂದರ್ಭದಲ್ಲಿ ಶ್ರದ್ಧೆ, ಆಸಕ್ತಿಯನ್ನು ಹೊಂದಿದರೆ ಭವಿಷ್ಯದ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಿದೆ ಎಂದು ಜೇಸಿಐ ಪೂರ್ವಾಧ್ಯಕ್ಷ ಸೈಯ್ಯದ್ ಫಾಜಿಲ್ ಹುಸೇನ್ ಹೇಳಿದರು.
ಚಿಕ್ಕಮಗಳೂರು ಜಿಲ್ಲೆಯ ಸಂಗಮೇಶ್ವರಪೇಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆ ಶನಿವಾರ ಆಯೋಜಿಸಿದ್ದ ಸಾಧನೆಗೆ ಸನ್ಮಾನ-ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಕುವೆಂಪು ವಿವಿಯ ಎಂಎ ಸ್ನಾತಕೋತ್ತರ ಪದವಿಯಲ್ಲಿ ಹತ್ತು ಚಿನದ ಪದಕ ಪಡೆದ ವಸಂತಕುಮಾರ್ ಅವರನ್ನು ಸನ್ಮಾನಿಸಿ ಮಾತನಾಡಿದರು.
ಪ್ರಪಂಚದಲ್ಲಿ ಮನುಷ್ಯ ಅತೀ ವಿಶೇಷ ವ್ಯಕ್ತಿಯಾಗಿದ್ದು, ಜ್ಞಾನಕ್ಕಿಂತ ಮಿಗಿಲಾದ ವಸ್ತು ಬೇರೊಂದಿಲ್ಲ. ವಿದ್ಯೆ ಜೀವನದಲ್ಲಿ ಅತೀ ಪವಿತ್ರವಾದದ್ದು. ಜಾನದಿಂದಲೇ ಇಹ, ಪರವೂ ಇದ್ದು, ಜ್ಞಾನವಿಲ್ಲದಿದ್ದರೆ ಎಲ್ಲವೂ ವ್ಯರ್ಥವಾಗಲಿದೆ. ಮನುಷ್ಯನ ಜೀವನದಲ್ಲಿ ಜ್ಞಾನ ಬಹಳ ಅತೀ ಮುಖ್ಯವಾದದ್ದು.
ಜ್ಞಾನ, ಶ್ರದ್ಧೆ, ಆಸಕ್ತಿ ಇದ್ದರೆ ಜೀವನದಲ್ಲಿ ಯಾವುದೇ ಸಾಧನೆ ಮಾಡಲು, ಯಶಸ್ಸು ಕಾಣಲು ಸಾಧ್ಯವಾಗಲಿದೆ. ಜೀವನದಲ್ಲಿ ಯಶಸ್ಸು ಕಾಣಲು ಆತ್ಮವಿಶ್ವಾಸ, ಶಿಸ್ತುಬದ್ಧ, ಸೃಜನಶೀಲತೆ, ಸಮಯಪ್ರಜ್ಞೆ ಇರಬೇಕು. ಈ ನಿಟ್ಟಿನಲ್ಲಿ ವಸಂತಕುಮಾರ್ ಅವರು ಅಧ್ಯಯನಶೀಲರಾಗಿ ಉತ್ತಮ ಸಾಧನೆ ಮಾಡಿದ್ದಾರೆ ಎಂದರು.

ಮುಖ್ಯಶಿಕ್ಷಕ ಅಂಜನಪ್ಪ ಮಾತನಾಡಿ, ಸರ್ಕಾರಿ ಶಾಲೆಗೆ ಬರುವ ಹೆಚ್ಚಿನ ಮಕ್ಕಳು ಕೂಲಿ ಕಾರ್ಮಿಕರು, ಮದ್ಯಮ ವರ್ಗದಿಂದ ಬಂದಿದ್ದು, ಹಲವು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ ಶಿಕ್ಷಣ ಎಂಬುದು ಎಲ್ಲ ಅಂಧಃಕಾರವನ್ನು ದೂರ ಮಾಡಲಿದ್ದು, ಪ್ರಪಂಚದಲ್ಲಿ ಎಲ್ಲಕ್ಕಿಂತ ಶ್ರೇಷ್ಠ ಆಯುಧ ಶಿಕ್ಷಣವಾಗಿದೆ.
ವಿದ್ಯಾರ್ಥಿಗಳು ಉತ್ತಮ, ಗುಣಮಟ್ಟದ ಶಿಕ್ಷಣ ಪಡೆದರೆ ಜಗತ್ತಿನಲ್ಲಿ ಏನನ್ನೂ ಬೇಕಾದರೂ ಕೂಡ ಸಾಧನೆ ಮಾಡಲು ಸಾಧ್ಯವಿದೆ. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಿದರೆ ಎಲ್ಲರೂ ವಿದ್ಯಾರ್ಥಿಗಳನ್ನು ಹುಡುಕಿಕೊಂಡು ಬಂದು ಅಭಿನಂದಿಸಲಿದ್ದಾರೆ ಎಂದರು.

ಉದ್ಯಮಿ ಕಾಫಿ ಗಿರೀಶ್ ಮಾತನಾಡಿ, ಹತ್ತು ಚಿನ್ನದ ಪದಕ ಪಡೆದ ವಸಂತ್ ಅವರ ಸಾಧನೆ ಚಿಕ್ಕಮಗಳೂರು ಜಿಲ್ಲೆಗೆ ಮಾದರಿಯಾಗಿದೆ. ಸಾಧನೆ ಮಾಡಲು ವಸಂತ್ ಅವರಲ್ಲಿ ಗುರಿ ಹಾಗೂ ಸ್ಪಷ್ಟತೆಯಿದ್ದು, ಅದು ಇಂದಿನ ವಿದ್ಯಾರ್ಥಿಗಳಿಗೆ ಆದರ್ಶಪ್ರಾಯವಾಗಿದೆ.
ಇಂದಿನ ಹಲವರು ಸಾಧನೆ ಮಾಡಿದ ಬಳಿಕ ವಾಸ್ತವಿಕತೆಯನ್ನು ಮರೆಯುತ್ತಾರೆ. ಆದರೆ ವಸಂತ್ ಅವರು ಆ ಸಾಲಿನಲ್ಲಿ ನಿಲ್ಲದೇ ಘಟಿಕೋತ್ಸವದಲ್ಲಿ ಪದಕ ಪಡೆದ ಬಳಿಕ ತಮ್ಮ ಸ್ವಗ್ರಾಮ, ತಂದೆ, ತಾಯಿಯರನ್ನು ಮೊದಲು ನೆನೆದುಕೊಂಡಿದ್ದಾರೆ. ಇದು ಅವರ ಉತ್ತಮವಾದ ನಡವಳಿಕೆಗೆ ಸಾಕ್ಷಿಯಾಗಿದೆ ಎಂದರು.
ಸನ್ಮಾನ ಸ್ವೀಕರಿಸಿದ ವಸಂತಕುಮಾರ್ ಮಾತನಾಡಿ, ಜೇಸಿಐ ಸಂಸ್ಥೆಯು ಕುವೆಂಪುರವರ ಆಶಯದಂತೆ ಮನುಜ ಮತ, ವಿಶ್ವ ಪಥಕ್ಕೆ ಸರಿ ಸಮನಾದ ಸಂಸ್ಥೆಯಾಗಿದ್ದು, ಎಲ್ಲ ಜಾತಿ, ಮತ, ಪಂಥದ ಜನರು ಒಗ್ಗೂಡಿ ಸಂಸ್ಥೆಯನ್ನು ಮುನ್ನಡೆಸುತ್ತಿರುವುದು ಶ್ಲಾಘನೀಯವಾಗಿದೆ.

ದೇಶವನ್ನು ಕಟ್ಟಲು ಯುವಜನರ ಪಾತ್ರ ಮಹತ್ವದ್ದಾಗಿದ್ದು, ಉತ್ತಮ ಯುವಜನರನ್ನು ಜೇಸಿ ಸಂಸ್ಥೆಯು ಸೃಷ್ಠಿ ಮಾಡುತ್ತಿದೆ. ವಿದ್ಯಾರ್ಥಿಗಳು ಜೀವನದಲ್ಲಿ ಕಷ್ಟ, ಇಷ್ಟಪಟ್ಟು ಓದಿದರೆ ಎಲ್ಲವನ್ನೂ ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ. ನಾನು ಸಹ ಪ್ರಾಥಮಿಕ ಶಿಕ್ಷಣದಿಂದ ಎಂಎ ಶಿಕ್ಷಣದವರೆಗೆ ಸರ್ಕಾರಿ ಶಾಲಾ, ಕಾಲೇಜುಗಳಲ್ಲಿಯೇ ಶಿಕ್ಷಣ ಪಡೆದಿದ್ದು ಶಿಕ್ಷಕರ, ಪೋಷಕರ ಸಹಕಾರದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.
ಜೇಸಿಐ ಅಧ್ಯಕ್ಷ ಇಬ್ರಾಹಿಂ ಶಾಫಿ, ಎಸ್‌ಡಿಎಂಸಿ ಅಧ್ಯಕ್ಷ ಎಸ್.ಜೆ.ಜಯಶೀಲ್, ಜೇಸಿ ನಿಕಟಪೂರ್ವ ಅಧ್ಯಕ್ಷ ಎನ್.ಶಶಿಧರ್, ಪೂರ್ವಾಧ್ಯಕ್ಷ ಸುಧಾಕರ್, ಮನುಕುಮಾರ್, ಪ್ರಮುಖರಾದ ಯತೇ ಶ್ಯಾಮ್, ವಿ.ಅಶೋಕ, ಕೆ.ಆರ್.ತಿಲಕ್, ವಿನಯ್ ಉಜ್ಜಿನಿ, ರಂಜಿತ್, ಎಚ್.ಪಿ.ಕಾರ್ತಿಕ್ ಹೊಸಮನೆ, ಓ.ಡಿ.ಸ್ಟೀಫನ್, ಬಿ.ಎಸ್.ನಾಗರಾಜಭಟ್ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *

Scan the code