ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಲು ಸಲಹೆ.
(CHIKKAMAGALURU): ಬಾಳೆಹೊನ್ನೂರು : ವಿದ್ಯಾರ್ಥಿಗಳು ಯಾವುದೇ ಭಯ, ಭೀತಿ ಇಲ್ಲದೆ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಬೇಕು ಎಂದು ಜೇಸಿಐ ರಾಷ್ಟ್ರೀಯ ತರಬೇತುದಾರ ಡಾ.ನವೀನ್ ಲಾಯ್ಡ್ ಮಿಸ್ಕಿತ್ ಹೇಳಿದರು.
ಪಟ್ಟಣದ ಬಿಇಎಸ್ ಕಾಲೇಜಿನ ಸಭಾಂಗಣದಲ್ಲಿ ಎಸ್ಜೆಆರ್ ಪ್ರೌಢಶಾಲೆ ಹಾಗೂ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಜೇಸಿಐ ಸಂಸ್ಥೆಯ ವತಿಯಿಂದ ಶನಿವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತಾ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.
ಪರೀಕ್ಷೆಗಳನ್ನು ಎದುರಿಸುವಾಗ ವಿದ್ಯಾರ್ಥಿಗಳ ಮನಃಸ್ಥಿತಿ ಋಣಾತ್ಮಕವಾಗಿದ್ದು, ಮಾನಸಿಕ, ದೈಹಿಕವಾಗಿಯೂ ಸದೃಢವಾಗಿರಬೇಕು. ಪರೀಕ್ಷೆ ಎಂದರೆ ಕೇವಲ ಅಂಕ ಗಳಿಕೆಯಷ್ಟೆ ಅಲ್ಲ. ಅದು ವಿದ್ಯಾರ್ಥಿಗಳ ಜ್ಞಾನ ವೃದ್ಧಿಗಾಗಿ ನಡೆಯುವ ಒಂದು ಪ್ರಕ್ರಿಯೆ.
ಪರೀಕ್ಷೆಗಳನ್ನು ಸ್ನೇಹಮಯವಾಗಿ ಸ್ವೀಕರಿಸಿ ಬರೆಯಬೇಕಿದೆ. ವಿದ್ಯಾರ್ಥಿಗಳು ಯಾವುದೇ ಗೊಂದಲದ ಮನಃಸ್ಥಿತಿಯನ್ನು ಹೊಂದದೆ ಶಿಕ್ಷಕರಿಂದ ಎಲ್ಲಾ ಸಲಹೆಗಳನ್ನು ಸ್ವೀಕರಿಸಿ ಹಬ್ಬದಂತೆ ಸಂಭ್ರಮಿಸಿ ಪರೀಕ್ಷೆಯನ್ನು ಬರೆಯಬೇಕು ಎಂದರು.
ಎಸ್ಜೆಆರ್ ಕಾಲೇಜು ಪ್ರಾಚಾರ್ಯ ಕೆ.ಆರ್.ಬೂದೇಶ್ ಮಾತನಾಡಿ, ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳ ಜೀವನದ ಪ್ರಮುಖವಾದ ಘಟ್ಟವಾಗಿದ್ದು, ಇದರಲ್ಲಿ ದೊರೆಯುವ ಅವಕಾಶಗಳನ್ನು ಕಳೆದುಕೊಳ್ಳಬಾರದು. ಪರೀಕ್ಷೆ ಕುರಿತು ಯಾವುದೇ ಹಗುರ ಮನೋಭಾವನೆ ಹೊಂದಿರುವುದು ಬೇಡ.
ಪರೀಕ್ಷೆ ಬಗ್ಗೆ ಯಾವುದೇ ಭಯ ಹೊಂದದೆ ಚೈತನ್ಯ ಮನೋಭಾವ ಹೊಂದಿರಬೇಕು. ಮನಸ್ಸಿಗೆ ಒತ್ತಡ ಹಾಕಿಕೊಂಡರೆ ಆರೋಗ್ಯವು ಹದಗೆಡಲಿದೆ. ಇದು ಬಹಳ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದರು.
ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಕೊಟ್ರೇಶಪ್ಪ ಮಾತನಾಡಿ, ವಿದ್ಯಾರ್ಥಿಗಳು ಪ್ರತೀ ಹಂತದಲ್ಲಿ ಸಾಕಷ್ಟು ಕಲಿಯುವುದು ಇದೆ. ಎಸ್ಸೆಸ್ಸೆಲ್ಸಿ ಅನುತ್ತೀರ್ಣಗೊಂಡಲ್ಲಿ ಶೈಕ್ಷಣಿಕ ಜೀವನವೇ ಕುಂಠಿತಗೊಳ್ಳಲಿದೆ. ಆದ್ದರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಬೇಡ.
ಪಿಯುಸಿ ಬಳಿಕ ವಿದ್ಯಾರ್ಥಿಗಳಿಗೆ ಹಲವು ದಾರಿಗಳಿವೆ. ಅಂದಿನ ಪಾಠವನ್ನು ಅಂದೇ ಕಲಿತರೆ ವಿದ್ಯಾರ್ಥಿಗಳಿಗೆ ಕಠಿಣತೆ ಕಡಿಮೆ ಆಗಲಿದೆ. ಶಿಕ್ಷಣ ಇಲಾಖೆ ಇತ್ತೀಚಿನ ದಿನಗಳಲ್ಲಿ ಪರೀಕ್ಷೆಯನ್ನು ಸರಳೀಕರಣಗೊಳಿಸಿದ್ದು, ಪೂರಕ ಪರೀಕ್ಷೆಗಳನ್ನು ಸ್ಥಗಿತಗೊಳಿಸಲಾಗಿದೆ. ಇಲಾಖೆ ಹಲವು ಸುಧಾರಣೆಗಳನ್ನು ಕೈಗೊಂಡಿದೆ ಎಂದರು. ಜೇಸಿಐ ಅಧ್ಯಕ್ಷ ಎನ್.ಶಶಿಧರ್, ಕಾರ್ಯದರ್ಶಿ ಶೃಜಿತ್ ಹುಯಿಗೆರೆ, ಶಿಕ್ಷಕರಾದ ಬಿ.ಎಸ್.ಕುಮಾರಚಂದ್ರ ನಾಯಕ್, ಪ್ರಶಾಂತ್, ತಮನ್ನಾ ಮುನಾವರ್, ಅಸ್ಪಾ ಅಕ್ತರ್, ಜೇಸಿ ಪೂರ್ವಾಧ್ಯಕ್ಷ ಸತೀಶ್ ಅರಳೀಕೊಪ್ಪ, ಸದಸ್ಯರಾದ ವಿ.ಅಶೋಕ್, ರಂಜಿತ್ ಮತ್ತಿತರರು ಹಾಜರಿದ್ದರು.