ಕೋಲಾರ

ಮಕ್ಕಳ ಉತ್ತಮ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವಂತೆ ಶಿಕ್ಷಕರಿಗೆ ಸಲಹೆ

ಮಕ್ಕಳ ಉತ್ತಮ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವಂತೆ ಶಿಕ್ಷಕರಿಗೆ ಸಲಹೆ

(KOLARA): ಬಂಗಾರಪೇಟೆ: ಮಕ್ಕಳು ಪಠ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಸರ್ವಾಂಗೀಣ ಅಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿದರು. ಪಟ್ಟಣದ ಕೆಜಿಎಫ್ ಮುಖ್ಯರಸ್ತೆಯ ಸಂಗಮ ಕಲ್ಯಾಣ ಮಂಟಪದಲ್ಲಿ ಎಸ್‌ವಿಆರ್ ಗ್ಲೋಬಲ್ ಸ್ಟಾಂಡರ್ಡ್ ಶಾಲೆಯ 2024-25ನೇ ಸಾಲಿನ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಆರೋಗ್ಯಕರ ಮನಸ್ಸಿದ್ದಲ್ಲಿ ಆರೋಗ್ಯಕರ ಜೀವನ ರೂಪಿಸಿಕೊಳ್ಳಲು ಸಾಧ್ಯವಾಗಿರುವುದರಿಂದ ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಲ್ಲಿ ಅವರಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದರು.


ಮಕ್ಕಳು ಮನೆಗಿಂತಲೂ ಹೆಚ್ಚಿನ ಸಮಯವನ್ನು ಶಾಲೆಯಲ್ಲಿಯೇ ಕಳೆಯುವುದರಿಂದ ಪೋಷಕರಿಗೆ ಇದ್ದಷ್ಟೇ ಕಾಳಜಿ ಶಾಲೆಯಲ್ಲಿನ ಶಿಕ್ಷಕರಿಗೂ ಇರುತ್ತದೆ ಎಂದರು. ಮಕ್ಕಳ ಮೇಲೆ ಶಿಕ್ಷಕರು ಹೆಚ್ಚಿನ ಪ್ರಭಾವ ಬೀರುವುದರಿಂದ ಮಕ್ಕಳ ಉತ್ತಮ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವಂತೆ ಶಿಕ್ಷಕರಿಗೆ ಸಲಹೆ ನೀಡಿದರು.
ಪ್ರತಿ ಮಗುವೂ ಒಂದಲ್ಲ ಒಂದು ಪ್ರತಿಭೆಗಳನ್ನು ಪಡೆದುಕೊಂಡು ಈ ಜಗತ್ತಿಗೆ ಬಂದಿರುತ್ತದೆ. ಕೆಲವು ಮಕ್ಕಳಂತೂ ಹಲವು ಪ್ರತಿಭೆಗಳ ಎರಕವೇ ಆಗಿರುತ್ತಾರೆ. ಅಂತಹ ಮಕ್ಕಳ ಪ್ರತಿಭೆಗಳನ್ನು ಶಿಕ್ಷಕರು ಗುರುತಿಸಿ ಅವುಗಳನ್ನು ಸಾರ್ವಜನಿಕ ವೇದಿಕೆಯಲ್ಲಿ ಪ್ರದರ್ಶಿಸುವ ಕೆಲಸವನ್ನು ವಾರ್ಷಿಕೋತ್ಸವದಂತಹ ಕಾರ್ಯಕ್ರಮಗಳ ಮೂಲಕ ಮಾಡಬೇಕೆಂದರು.


ಮಾತೃ ದೇವೋಭವ, ಪಿತೃ ದೇವೋಭವ, ಆಚಾರ್ಯ ದೇವೋಭವ ಎಂಬಂತೆ ಪ್ರತಿಯೊಬ್ಬ ವಿದ್ಯಾರ್ಥಿ ಮೊದಲು ತಂದೆ, ತಾಯಿ, ಶಿಕ್ಷಕರನ್ನು ಗೌರವಿಸುವುದನ್ನು ಕಲಿಯಿರಿ. ನಿಮಗೆ ಪಾಠ ಪ್ರವಚನವನ್ನು ಕಲಿಸಿದ ಕಾಲೇಜಿಗೆ ಉತ್ತಮ ಹೆಸರನ್ನು ತರಬೇಕಾದರೆ ಪರೀಕ್ಷೆಗಳಲ್ಲಿ ಉತ್ತಮ ಅಂಕವನ್ನು ಪಡೆಯುವ ಮೂಲಕ ಕಾಲೇಜಿಗೂ, ಪೋಷಕರಿಗೂ ಕೀರ್ತಿಯನ್ನು ತರಬಹುದಾಗಿದೆ ಎಂದರು.
ಹಿಂದಿನ ವರ್ಷಗಳ ಪ್ರಶ್ನೆ ಪ್ರತಿಕೆಗಳನ್ನು ಅಭ್ಯಾಸ ಮಾಡಬೇಕೆಂದರು. ಮೊದಲಿಗೆ ನಿಮಗೆ ಕಷ್ಟವಾಗುವ ವಿಷಯಗಳ ಮೇಲೆ ಆದ್ಯತೆ ನೀಡಿ ಅವುಗಳನ್ನು ಹೆಚ್ಚು ಓದಿಕೊಳ್ಳಿ. ನಂತರ ಇತರೆ ಸರಳ ವಿಷಯಗಳ ಮೇಲೆ ಕಣ್ಣಾಡಿಸಿಕೊಳ್ಳಿ ಅಲ್ಲದೇ ಹೆಚ್ಚು ಪ್ರಶ್ನೆಗಳನ್ನು ಕೇಳುವ ವಿಷಯಗಳ ಟಾಪಿಕ್‌ಗಳಿಗೆ ಹೆಚ್ಚು ಅಂಕಗಳಿಗೆ ಕೇಳು ಸಂಭಾವ್ಯವಿರುವುದರಿಂದ ಅಂತಹವುಗಳ ಕಡೆಗೆ ಆದ್ಯತೆ ನೀಡಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕರ‍್ಯಕ್ರಮಗಳನ್ನು ನಡೆಸಿಕೊಟ್ಟರು, ಸಭೆಗೆ ಆಗಮಿಸಿದ್ದ ಪೋಷಕರು ತಮ್ಮ ಮಕ್ಕಳ ಪ್ರತಿಭೆಯನ್ನು ಕಣ್ತುಂಬಿಕೊಂಡುರು. ಉತ್ತಮವಾಗಿ ನೃತ್ಯ ಪ್ರದರ್ಶನ ನೀಡಿದ ಮಕ್ಕಳಿಗೆ ಶಾಲೆಯ ಮುಖ್ಯಸ್ಥರು ಬಹುಮಾನ ವಿತರಿಸಿ ಪ್ರಮಾಣ ಪತ್ರಗಳನ್ನು ನೀಡಿ ಪ್ರೋತ್ಸಾಹಿದರು.


ಎಸ್‌ವಿಆರ್ ರೂರಲ್ ಡೆವೆಲಪ್‌ಮೆಂಟ್ ಎಜುಕೇಷನ್, ಹೆಲ್ತ್ ಅಂಡ್ ಕಲ್ಚರಲ್ ಟ್ರಸ್ಟ್ ವತಿಯಿಂದ ನಡೆಸಲಾಗುತ್ತಿರುವ ಎಸ್‌ವಿಆರ್ ಗ್ಲೋಬಲ್ ಸ್ಟಾಂಡರ್ಡ ಇಂಗ್ಲೀಷ್ ಮೀಡಿಯಂ ಶಾಲೆಯ ಸಂಸ್ಥಾಪಕ ದಿ. ಎಸ್.ವೆಂಕಟರವಣರವರು ಬಡ ಮಕ್ಕಳಿಗಾಗಿ ತಮ್ಮ ಸಂಸ್ಥೆ ವತಿಯಿಂದ ಉಚಿತವಾಗಿ ಶಿಕ್ಷಣವನ್ನು ನೀಡುವಂತಹ ಕೆಲಸವನ್ನು ಮಾಡುತ್ತಿದ್ದು, ಅವರಿಗೆ ತಮ್ಮ ವತಿಯಿಂದ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.
ವಾರ್ಷಿಕೋತ್ಸವದಲ್ಲಿ ಇಂಡಿಯಾ ಡಿಸೈನ್ ಕಂಪನಿಯ ಉಪಾಧ್ಯಕ್ಷ ಲೆವಿ ಜಾಯ್, ದಿ.ವೆಂಕಟರವಣ ಪತ್ನಿ ರತ್ನಮ್ಮ, ಪಿಎಸ್‌ಐ ರಾಜಣ್ಣ, ಪುರಸಭಾ ಮಾಜಿ ಸದಸ್ಯ ವೈ.ವಿ.ರಮೇಶ್, ಚಂದು, ನಾಗೇಶ್‌ಗೌಡ, ಹೆಚ್.ವಿ.ನಾರಾಯಣಸ್ವಾಮಿ, ಶಾಲೆಯ ಪ್ರಾಂಶುಪಾಲೆ ಎಸ್.ವಿ.ಭಾರತಿ, ಎಸ್.ವಿ.ಕವಿತ, ಎಸ್.ವಿ.ಆರತಿ, ಕಿಶೋರ್ ಕರಣ್, ಶ್ರೀನಿಧಿ, ವಿದ್ಯಾಶ್ರೀ ಮೊದಲಾದವರು ಇದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code