ಬುದ್ದಿಮಾಂದ್ಯ ಮಕ್ಕಳನ್ನು ಸಲಹುವುದು ಒಂದು ಪುಣ್ಯದ ಕಾರ್ಯ: ನ್ಯಾಯವಾದಿ ಸೈಯದ್ ಅಹ್ಮದ್ ಕೆ.ಎ
(SHIVAMOGA): ಸೊರಬ – ಬುದ್ದಿಮಾಂದ್ಯ ಮಕ್ಕಳನ್ನು ಸಂರಕ್ಷಿಸುವ ಕಾರ್ಯ ಸಮಾಜ ಮತ್ತು ಪೋಷಕರ ಮೇಲಿದ್ದು ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ನ್ಯಾಯವಾದಿ ಸೈಯದ್ ಅಹ್ಮದ್ ಕೆ.ಎ ಹೇಳಿದರು.
ಪಟ್ಟಣದ ಹೊಸಪೇಟೆ ಬಡಾವಣೆಯ ನವಚೇತನ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಸೊರಬ ವಕೀಲ ಮಿತ್ರರ ವತಿಯಿಂದ ಕೇಕ್ ಕತ್ತರಿಸುವ ಮೂಲಕ ಹೊಸ ವರ್ಷಾಚರಣೆ ಹಾಗೂ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತರೆ ಕಾಯಿಲೆಗಳಂತೆ ಬುದ್ದಿಮಾಂದ್ಯತೆ ನಿವಾರಣೆಗೆ ಇನ್ನೂ ಹೆಚ್ಚಿನ ಚಿಕಿತ್ಸಾ ವಿಧಾನಗಳು ನಮ್ಮಲ್ಲಿ ಲಭ್ಯವಿಲ್ಲ. ಬುದ್ದಿಮಾಂಧ್ಯರನ್ನು ಹಾಗೆಯೇ ಬಿಟ್ಟರೆ ಅವರು ನಿಸ್ಕ್ರಿಯರಾಗುತ್ತಾರೆ. ಅವರ ಪಂಚೇoದ್ರಿಯಗಳನ್ನು ಚಲನಾಶೀಲತೆಯಲ್ಲಿ ಇಡುವ ಮೂಲಕ ಅವರನ್ನು ಸಹ ಉತ್ತಮರಂತೆ ಕಾಣಬಹುದು. ಬುದ್ದಿಮಾಂದ್ಯ ಮಕ್ಕಳನ್ನು ಸಲಹುವುದು ಒಂದು ಪುಣ್ಯದ ಕಾರ್ಯವೆಂದು ಭಾವಿಸಬೇಕು. ಇಂತಹ ಮಕ್ಕಳನ್ನು ತಿದ್ದಿ ತೀಡಿ ಅವರನ್ನು ತಮ್ಮ ಮಕ್ಕಳಂತೆ ಸಲಹುತ್ತಿರುವ ನವಚೇತನ ಸಂಸ್ಥೆಯ ಕಾರ್ಯ ಶ್ಲಾಘನೀಯ. ಆಕಸ್ಮಿಕವಾಗಿ ಈ ಶಾಲೆಗೆ ಭೇಟಿ ನೀಡಿದಾಗ ಇಲ್ಲಿರುವ ಸಮಸ್ಯೆಯನ್ನು ಅರಿತು ತಮ್ಮ ವಕೀಲ ಮಿತ್ರರೊಂದಿಗೆ ಚರ್ಚಿಸಿದಾಗ ತಮ್ಮ ಕೈಲಾದಷ್ಟು ಸಹಾಯ ಮಾಡುವ ಇಂಗಿತ ವ್ಯಕ್ತಪಡಿಸಿದ್ದು, ಆ ನಿಟ್ಟಿನಲ್ಲಿ ಇಂದು ಈ ಮಕ್ಕಳೊಂದಿಗೆ ಹೊಸ ವರ್ಷಾಚರಣೆ ಆಚರಿಸಿ ಅವರಿಗೆ ಸಮವಸ್ತ್ರ ವಿತರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಶಾಲೆಗೆ ಅತೀ ಅವಶ್ಯವಿರುವ ಕೊಡುಗೆ ನೀಡುವುದಾಗಿ ತಿಳಿಸಿದರು.
ಹಿರಿಯ ವಕೀಲ ವೈ.ಜಿ. ಪುಟ್ಟಸ್ವಾಮಿ ಮಾತನಾಡಿ ವರ್ಷಗಳು ಉರುಳುತ್ತವೆ ಆದರೆ ನಾವು ಆ ಕಾಲ ಘಟ್ಟದಲ್ಲಿ ಸಮಾಜಕ್ಕೆ ಎಷ್ಟು ಸತ್ಕಾರ್ಯ ಮಾಡಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಬುದ್ಧಿಮಾಂದ್ಯ ಮಕ್ಕಳನ್ನು ಕತ್ತಲೆ ಬದುಕಿನಿಂದ ಬೆಳಕಿನ ಕಡೆ ತರುವಲ್ಲಿ ಶಿಕ್ಷಕರು ಪಡುವ ಶ್ರಮಕ್ಕೆ ಬೆಲೆ ಕಟ್ಟಲು ಸಾದ್ಯವಿಲ್ಲ. ಸಮಾಜದಲ್ಲಿ ಜೀವಿಸುವ ನಾವು ಇಂತಹ ಮಕ್ಕಳ ಸೇವೆಗೆ ನಮ್ಮ ದುಡಿಮೆಯ ಅಲ್ಪ ಆದಾಯವನ್ನು ನೀಡುವ ಮೂಲಕ ಇತರ ಮಕ್ಕಳಂತೆ ಜೀವಿಸಲು ನೆರವು ನೀಡಿದಂತಾಗುತ್ತದೆ. ಅದನ್ನು ಮನಗಂಡ ವಕೀಲ ಮಿತ್ರರು ಒಟ್ಟಾಗಿ ಸೇರಿ ಮಕ್ಕಳಿಗೆ ಸಮವಸ್ತ್ರ ನೀಡುವ ತಿರ್ಮಾನ ತಗೆದುಕೊಂಡಿದ್ದೇವೆ. ಮುಂದಿನ ದಿನದಲ್ಲಿ ಮತ್ತಷ್ಟು ಸಹಾಯ ಮಾಡಲಿದ್ದೇವೆ.
ನವಚೇತನ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯ ಕಾರ್ಯದರ್ಶಿ ರಾಮಪ್ಪ ಚೌಡಿಕೊಪ್ಪ, ವೇಣುಗೋಪಾಲ್, ವಕೀಲರಾದ ದಿನಕರಭಟ್ ಬಾವೆ, ಸುರೇಶ್ ಕಲ್ಲಂಬಿ, ಗುರುಸ್ವಾಮಿ, ಮುಖ್ಯಶಿಕ್ಷಕ ರವಿಂದ್ರ, ರಾಜ್ಯ ಪ್ರಶಸ್ತಿ ಶಿಕ್ಷಕ ಕೆ.ಬಿ ಪುಟ್ಟರಾಜ್, ಅಜೀಜ್ ಸಾಬ್, ರಾಮಪ್ಪ, ಪವಿತ್ರ ಮತ್ತಿತರರು ಇದ್ದರು
ವರದಿ: ಸಂದೀಪ ಯು.ಎಲ್. ವೆಸ್ಟರ್ನ್ ಘಾಟ್ ನ್ಯೂಸ್, ಸೊರಬ