Entertainmentಮನರಂಜನೆ

‘ಏನ್ರಮ್ಮಾ ಪರೀಕ್ಷೆ ಮುಗಿಸಿ ಇನ್ನೂ ದೇವರೇ ಕಾಪಾಡಬೇಕು ಅಂತ ದೇವಸ್ಥಾನಕ್ಕೆ ಬಂದ್ರಾ!?’

‘ಏನ್ರಮ್ಮಾ ಪರೀಕ್ಷೆ ಮುಗಿಸಿ ಇನ್ನೂ ದೇವರೇ ಕಾಪಾಡಬೇಕು ಅಂತ ದೇವಸ್ಥಾನಕ್ಕೆ ಬಂದ್ರಾ!?’

(ARTICAL): ಶಾಲಾ ವಿದ್ಯಾರ್ಥಿಗಳಿಗೆ ತಮ್ಮ ಸಮವಸ್ತ್ರದಲ್ಲಿ ಕಡೆಯದಿನ ಎಂದರೆ ಅದು ಎಸ್.ಎಸ್.ಎಲ್.ಸಿ ಪರೀಕ್ಷೆಯ ಕಡೆಯ ದಿನವೇ ಆಗಿರುತ್ತದೆ. ಪ್ರತೀಬಾರಿಯೂ ವಿದ್ಯಾರ್ಥಿಗಳು ಕಡೆಯ ಪರೀಕ್ಷೆಗಿಂತ, ಪರೀಕ್ಷೆಯ ನಂತರ ಪಾರ್ಟಿ ಎಲ್ಲಿ ಮಾಡಬಹುದು ಎಂಬುದರ ಬಗ್ಗೆಯೇ ಹೆಚ್ಚು ಯೋಚಿಸುತ್ತಾರೆ. ಆ ಸಮಯದಲ್ಲೊಂದು ಫೋಟೋ, ಪರೀಕ್ಷೆ ಮುಗಿಸಿದ ಸಂಭ್ರಮ. ಹಾಗಾಗಿ ಪೋಷಕರು ಕೂಡ ‘ಇಷ್ಟು ದಿನ ಬರೀ ಓದು ಅಂತ ಹೇಳ್ತಾ ಇದ್ವಿ, ಈಗ ಖುಷಿಯಾಗಿ ಇರಲಿ ಬಿಡಿ’ ಎಂದು ಹೇಳಿದ್ದಾರೆ.

ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಒಟ್ಟು ೬ ಕೇಂದ್ರಗಳಲ್ಲಿ ನಮ್ಮ ವಿದ್ಯಾರ್ಥಿಗಳಿದ್ದರು. ಪರೀಕ್ಷೆ ಇರುವ ಸಮಯದಲ್ಲಿ ಎಲ್ಲಾ ಕೇಂದ್ರಗಳಿಗೂ ಹೋಗಿ ಮಕ್ಕಳನ್ನು ಮಾತನಾಡಿಸಿಕೊಂಡು ಕಡೆಯದಾಗಿ ನನಗೆ ಜವಾಬ್ದಾರಿ ನೀಡಿದ್ದ ಶಾಲೆಗೆ ಬಂದು ಮಕ್ಕಳನ್ನು ಮಾತನಾಡಿಸಿ ಎಲ್ಲರೂ ಪರೀಕ್ಷಾಕೇಂದ್ರದೊಳಗೆ ಹೋದಾಗ ಅಲ್ಲಿಂದ ಹೊರಡುತ್ತಿದ್ದೆ. ಅದು ಕಡೆಯ ಪರೀಕ್ಷೆ ಆಗಿದ್ದರಿಂದ ಪ್ರತೀ ಕೇಂದ್ರಗಳಿಗೂ ಹೋಗಿ ಬರುತ್ತಿದ್ದೆ. ಸರ್ವೋದಯ ಶಾಲೆಗೆ ಹೋದಾಗ ಅಲ್ಲಿ ಸಿಕ್ಕ ಒಂದಿಷ್ಟು ಮಕ್ಕಳನ್ನು ಮಾತನಾಡಿಸುತ್ತಿದ್ದೆ. ಎಲ್ಲಾ ಮಕ್ಕಳು ಪರೀಕ್ಷೆಯನ್ನು ಬೇಗ ಬರೆದು ಮುಗಿಸಿ ಸಂಭ್ರಮಿಸುವುದರಲ್ಲಿದ್ದರು. ಅಷ್ಟರಲ್ಲಿ ರಜತ್ ವರ್ಮನ ಪೋಷಕರು, ಆತ್ಮೀಯರು ಆಗಿದ್ದ ಬಿಂದುಮಾಧವ ಅವರು ಮಗನನ್ನು ಕರೆದುಕೊಂಡು ಬಂದರು. ‘ಅಂತೂಇಂತೂ ಕಡೆಯ ಪರೀಕ್ಷೆಗೆ ಬಂದಿದ್ದಾರೆ. ಸರಾ, ಮಕ್ಕಳ ಜೊತೆಗೆ ಹಾಗೇ ನಿಂತುಕೊಳ್ಳಿ ಬನ್ನಿ ಒಂದು ಫೋಟೋ ತಕ್ಕೊಳುವ, ಶಾಲಾ ಜೀವನದ ಕಡೆಯದಿನ ಅಲ್ವೇ!?’ ಎಂದರು. ಆಗಲಿ ನೀವು ಬನ್ನಿ ನಿಂತುಕೊಳ್ಳಿ ಅಂದೆ. ಅಲ್ಲಿಯೇ ಇದ್ದ ಬೇರೆ ಶಾಲೆಯ ಮಕ್ಕಳಿಗೆ ಓಂದು ಫೋಟೋ ತೆಗೀತೀರಾ? ಎಂದು ಕೇಳಿ ಮೊಬೈಲ್ ಕೊಟ್ಟು ನಿಂತೆವು. ಕೆಲವು ಮಕ್ಕಳು ಬೇಕುಬೇಕೆಂದೇ ಅಡ್ಡವಾಗಿ ಓಡಾಡುತ್ತಿದ್ದರು. ಅವರನ್ನು ಕಂಡು ನಕ್ಕೆವು. ಅಂತೂ ನಮ್ಮ ಎಸ್.ಎಸ್.ಎಲ್.ಸಿ ಮಕ್ಕಳು ತಮ್ಮ ಶಾಲಾ ಸಮವಸ್ತ್ರದಲ್ಲಿ ಕಡೆಯದಿನವೆಂದು ಫೋಟೋ ತೆಗೆಸಿಕೊಂಡು ಮತ್ತೆ ಓದಲು ಶುರು ಮಾಡಿದರು. ಸಿಕ್ಕ ಪೋಷಕರ ಜೊತೆಗೆ ಮಾತನಾಡುತ್ತಿದ್ದಾಗ. ಇಷ್ಟು ದಿನದ ಓದು ಒಂದು ಕಡೆಯಾದರೆ ಮುಂದಿನದು ಏನು? ಅನ್ನುವ ಯೋಚನೆ. ಎಂದು ಹೇಳ ತೊಡಗಿದರು. ಕೆಲವರು ಆಗಲೇ ಕಾಲೇಜ್ ಗೆ ಸೇರಿಸಿದ್ದರು. ಅಲ್ಲಿದ್ದ ಮಕ್ಕಳಿಗೆ ಮತ್ತೊಮ್ಮೆ ಪರೀಕ್ಷೆಗೆ ಶುಭಾಶಯಗಳನ್ನು ತಿಳಿಸಿ. ಮಹಾವೀರ ಶಾಲೆಯ ಕಡೆಗೆ ಹೊರಟೆ.


ಈ ಕೇಂದ್ರದಲ್ಲಿದ್ದ ಎಲ್ಲಾ ಮಕ್ಕಳನ್ನು ಮಾತನಾಡಿಸಿ, ಎಲ್ಲರಿಗೂ ಶುಭಕೋರಿದೆ. ಎಲ್ಲಾ ಮಕ್ಕಳು ಮೊದಲಿದ್ದ ತರದಲ್ಲಿ ಪರೀಕ್ಷೆಯ ಭಯವಿಲ್ಲದೆ ಇದ್ದರು. ‘ಇಂಗ್ಲೀಷ್’ ಆರಾಮಾಗಿ ಬರೀತೀವಿ ಬಿಡಿ ಸರ್. ಎಂದು ಹೇಳುತ್ತಿದ್ದರು. ಆದರೂ ಜೋಪಾನ ಏಕೆಂದರೆ ಕೆಲವೊಮ್ಮೆ ವ್ಯಾಕರಣದಲ್ಲಿ ಸಣ್ಣಪುಟ್ಟ ತಪ್ಪುಗಳಿಂದ ಅಂಕಗಳನ್ನು ಕಳೆದುಕೊಳ್ಳಬಹುದು ಹಾಗಾಗಿ ಎಚ್ಚರಿಕೆಯಿಂದ ಬರೆಯಿರಿ ಎಂದೆ. ಸರಿ ಎಂದರು. ಎಲ್ಲರನ್ನೂ ಗಮನಿಸಿ, ‘ನೀವು ಕೂಡ ಪರೀಕ್ಷೆ ಮುಗಿಸಿ ಪಾರ್ಟಿ ಮಾಡುವವರಾ?’ ಎಂದು ಮಕ್ಕಳಿಗೆ ಕೇಳಿದ್ದಕ್ಕೆ ಕೆಲವರು ‘ಹೌದು’ ಎಂದು ಎಂದರು. ಕೆಲವರು ಊರಿಗೆ ಹೋಗಬೇಕಿದೆ, ಅದು ಇದು ಎಂದರು. ಎಲ್ಲರೂ ಪರೀಕ್ಷಾಕೇಂದ್ರದೊಳಗೆ ಹೋದರು. ಹೊರಗೆ ಸಿಕ್ಕ ಕೆಲವು ಪೋಷಕರನ್ನು ಮಾತನಾಡಿಸಿ ಸಮೀಪದಲ್ಲಿದ್ದ ದೇವಸ್ಥಾನಕ್ಕೆ ಹೊರಟೆ. ಇನ್ನೂ ಪೂಜೆ ಮುಕ್ತಾಯವಾಗಿರಲಿಲ್ಲ. ಶಾಲೆಗೆ ಹೋಗಬೇಕಿದ್ದರಿಂದ ಶಾಲೆ ಮುಗಿಸಿಕೊಂಡು ಮಧ್ಯಾಹ್ನ ಬರೋಣ ಎಂದುಕೊಂಡು ಶಾಲೆಗೆ ಹೊರಟೆ. ಶಾಲೆಯಲ್ಲಿ ಅದಾಗಲೇ ೮, ೯ನೇ ತರಗತಿಯ ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಸಿದ್ಧಪಡಿಸಬೇಕಿತ್ತು. ಅದರ ಸಿದ್ಧತೆಯಲ್ಲಿ ಎಲ್ಲಾ ಶಿಕ್ಷಕರೂ ಇದ್ದರು. ತಮ್ಮತಮ್ಮ ವಿಷಯದ ಅಂಕಗಳನ್ನು ನಮೂದಿಸಿದ ನಂತರ ತರಗತಿ ಶಿಕ್ಷಕರು ಸಂಪೂರ್ಣ ಅಂಕಗಳನ್ನು ಅಂಕಪಟ್ಟಿಯಲ್ಲಿ ಬರೆದು ಸಿದ್ಧಗೊಳಿಸಿದರು. ಶನಿವಾರ ಅರ್ಧದಿನವಾದ್ದರಿಂದ ಅಷ್ಟರ ಒಳಗಾಗಿ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಿದ್ದರು.

ಈ ಸಮಯಕ್ಕೆ ಬಹುತೇಕ ಪರೀಕ್ಷೆಯು ಮುಗಿದಿರುತ್ತದೆ. ಯಾರಾದರೂ ಮಕ್ಕಳು ಪರೀಕ್ಷೆಯ ಬಗ್ಗೆ ತಿಳಿಸಬಹುದು ಎಂದು ಕಾಯುತ್ತಿದ್ದೆವು. ಆದರೆ ಯಾರೂ, ಏನನ್ನೂ ತಿಳಿಸಲಿಲ್ಲ. ದೇವಸ್ಥಾನಕ್ಕೆ ಹೊರಟಿದ್ದೆ. ಮಾರ್ಗ ಮಧ್ಯೆ ಹಲವು ಪರೀಕ್ಷಾ ಕೇಂದ್ರಗಳಿದ್ದು ಅಲ್ಲಿದ್ದ ಮಕ್ಕಳು ಅದಾಗಲೇ ಪರೀಕ್ಷೆ ಮುಗಿಸಿ ಹೊರಟಾಗಿತ್ತು. ಕೆಲವು ಪೋಷಕರು ಮಕ್ಕಳನ್ನು ತಮ್ಮ ಗಾಡಿಯಲ್ಲಿ ಕರೆದುಕೊಂಡು ಹೋಗುತ್ತಿರುವುದನ್ನು ನೋಡಿದ್ದಾಯಿತು. ಇನ್ನೂ ಕೆಲವರು ಅದಾಗಲೇ ಐಸ್ ಕ್ರೀಮ್ ಪಾರ್ಲರ್ ಒಳಗೆ ಸೇರಿದ್ದರು. ಅದೆಲ್ಲವನ್ನು ಹಾಗೇ ನೋಡಿಕೊಂಡು ಕೋಟೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಬಂದೆ. ಅಲ್ಲಿ ನಮ್ಮ ಶಾಲೆಯ ಐಶ್ವರ್ಯಶೇಟ್, ಶೃತಿಪ್ರಭು ಮತ್ತು ಪ್ರಜ್ಞಾಓಲಿ ಇದ್ದರು. ‘ಏನ್ರಮ್ಮಾ ಪರೀಕ್ಷೆ ಮುಗಿಸಿದ್ದಾಯಿತು. ಇನ್ನೂ ದೇವರೇ ಕಾಪಾಡಬೇಕು ಅಂತ ದೇವಸ್ಥಾನಕ್ಕೆ ಬಂದ್ರಾ!?’ ಎಂದೆ ಪರೀಕ್ಷೆ ಚೆನಾಗಿಬರೆದಿದ್ದೀವಿ. ಹೇಗಿದ್ದರೂ ಶನಿವಾರ ಅಲ್ಲವಾ ಅದಕ್ಕೆ ಪರೀಕ್ಷೆ ಮುಗಿಸಿ ದೇವಸ್ಥಾನಕ್ಕೆ ಹೋಗಿ ಬರೋಣ ಅಂತ ಮೊದಲೇ ಮಾತಾಡಿಕೊಂಡಿದ್ವಿ ಹಾಗಾಗಿ ಬಂದಿದ್ದು’ ಎಂದಳು ಶೃತಿಪ್ರಭು. ‘ನೀವು ಈಗ ದೇವಸ್ಥಾನಕ್ಕೆ ಬಂದಿದೀರಾ?’ ಎಂದಳು ಐಶ್ವರ್ಯ. ನಾನು ಪ್ರತೀ ಶನಿವಾರ ದೇವಸ್ಥಾನಕ್ಕೆ ಬರುತ್ತೇನೆ. ಮಧ್ಯಾಹ್ನ ಪ್ರಸಾದ ಕೂಡ ಸಿಗತ್ತೆ ಹಾಗಾಗಿ ಈಗ ಬಂದಿದೀನಿ ಅಂದೆ. ನಕ್ಕು ದೇವರ ದರ್ಶನ ಮಾಡಿ ಪ್ರಸಾದ ತೆಗೆದುಕೊಂಡು ಅಲ್ಲಿಯೇ ನಿಂತು ಪ್ರಸಾದವನ್ನು ತಿಂದು ಮುಗಿಸುವ ಸಮಯಕ್ಕೆ ಪ್ರಜ್ಞಾ ಅವರ ತಂದೆ ಬಂದರು. ಅವರು ಸಹ ‘ಕಾಲೇಜ್ ಬಗ್ಗೆ ಯೋಚನೆ ಮಾಡಿಲ್ಲ. ಮೊದಲು ಫಲಿತಾಂಶ ಬರಲಿ ಆಮೇಲೆ ನೋಡೋಣ ಅಂತ ಇದ್ದೀನಿ’ ಎಂದು ದೇವರ ದರ್ಶನಕ್ಕೆ ತೆರಳಿದರು. ಅವರ ಜೊತೆಗೆ ಮಗಳು ಹೋದಳು. ದೇವಸ್ಥಾನದಿಂದ ಹೊರಗೆ ಬಂದಾಗ ಶೃತಿಪ್ರಭುವಿನ ಪರಿಚಯದವರ ಅಂಗಡಿ ಎದುರಿತ್ತು. ‘ನಿಪ್ಪಟ್ ಮಸಾಲ ತಿನ್ನೋಣವೇ?’ ಎಂದಳು ‘ನೀವು ತಿನ್ನಿರಿ’ ಎಂದೆ. ‘ನೀವು ಬನ್ನಿ’ ಎಂದಳು ಅಷ್ಟರಲ್ಲಿ ಅವಳ ತಂದೆಯೂ ಬಂದರು. ಚಿರಪರಿಚಿತರಾಗಿದ್ದ ಅವರೊಂದಿಗೆ ಮಾತನಾಡುತ್ತ ನಿಂತಾಗ ಅಷ್ಟರಲ್ಲಿ ನಿಪ್ಪಟ್ಟು ತೆಗೆದುಕೊಂಡು ಬಂದಳು. ಒಂದಿಷ್ಟು ತೆಗೆದುಕೊಂಡು ತಿಂದದ್ದಾಯಿತು. ಅವರ ಜೊತೆಗೆ ಅದುಇದು ಎಂದು ಮಾತನಾಡುತ್ತ ನಿಂತೆ. ಅಷ್ಟರಲ್ಲಿ ಐಶ್ವರ್ಯಳ ಅಕ್ಕನೂ ಅಲ್ಲಿಗೇ ಬಂದರು. ಅವಳೂ ಹೊರಟಳು. ಎಲ್ಲರೂ ಹೋದ ಮೇಲೆ ಪಕ್ಕದಲ್ಲಿದ್ದ ಶನೇಶ್ಚರ ದೇವಸ್ಥಾನಕ್ಕೂ ಹೋಗಿ ಮನೆಗೆ ಬಂದೆ. ಅಷ್ಟರಲ್ಲಿ ರಜತ್ ಕೃಷ್ಣ ಒಂದಿಷ್ಟು ಗೆಳೆಯರು ಪರೀಕ್ಷೆ ಮುಗಿಸಿ ಸ್ಟೇಡಿಯಂ ಪಕ್ಕದಲ್ಲಿದ್ದ ಜ್ಯೂಸ್ ಸೆಂಟರ್ ನಲ್ಲಿದ್ದ ಫೋಟೋ ಕಳಿಸಿದ. ‘ಕರೆದಿದ್ದರೆ ನಾವು ಬರ್ತಾ ಇದ್ವಿ’ ಎಂದೆ. ‘ಅದು ಅಕ್ಕ ಬಂದಿದ್ದಳು ಅವಳ ಜೊತೆಗೆ… ಮತ್ತೊಮ್ಮೆ ನಿಮ್ಮ ಜೊತೆಗೂ ಹೋಗೋಣ ಸರ್’ ಎಂದನು. ‘ಸುಮ್ಮನೆ ತಮಾಷೆಗೆ ಹೇಳಿದ್ದು, ಸರಿ ಎಂಜಾಯ್ ಮಾಡಿ’ ಎಂದು ಮೆಸೆಜ್ ಹಾಕಿದೆ. ಪರೀಕ್ಷಾ ಕೇಂದ್ರಗಳ ಬಳಿಯಿದ್ದ ಎಲ್ಲಾ ಐಸ್ ಕ್ರೀಮ್, ಜ್ಯೂಸ್ ಅಂಗಡಿಗಳು ಪರೀಕ್ಷೆ ಬರೆದಿದ್ದ ಮಕ್ಕಳಿಂದಲೇ ತುಂಬಿ ಹೋಗಿದ್ದವು.


ಪಾವ್ನಿ, ಅಪೂರ್ವ, ನಕ್ಷ ಮತ್ತು ಹರ್ಷಿತ ಐಸ್ ಕ್ರೀಮ್ ಪಾರ್ಟಿ ಮುಗಿಸಿದೆವು ಎಂದು ಐಸ್ ಕ್ರೀಮ್ ಗಳ ಫೋಟೋ ಹಾಕಿದರು. ಅದರಲ್ಲಿ ಅವರಾರೂ ಕಾಣುತ್ತಲೇ ಇರಲಿಲ್ಲ. ಬರೀ ಐಸ್ ಕ್ರೀಮ್ ನ ಫೋಟೋಗಳು ಮಾತ್ರ ಇದ್ದವು. ಒಟ್ಟಾರೆಯಾಗಿ ಹಲವರು ಪರೀಕ್ಷೆ ಬರೆದು ಮುಗಿಸಿದ ಸಂಭ್ರಮದಲ್ಲಿ ಪಾರ್ಟಿಯಲ್ಲಿದ್ದರು. ಕೆಲವರು ಫೋಟೋ ಕಳಿಸಿದ್ದರು ದಾಖಲೆಗಾಗಿ. ಇನ್ನೂ ಹಲವರು ಇದೇ ರೀತಿಯಲ್ಲಿ ಚಾಟ್ಸ್ ಗಳನ್ನು ತಿನ್ನುವ ,ಜ್ಯೂಸ್ ಕುಡಿಯುವ, ಐಸ್ ಕ್ರೀಮ್ ತಿನ್ನುವ ಕೆಲಸದಲ್ಲಿದ್ದರು. ಕೆಲವು ಪೋಷಕರು ಮಾತ್ರ, ‘ನಮ್ಮ ಮಗು ಯಾರೊಂದಿಗೂ ಮಾತನಾಡಬಾರದು’ ಎಂದು ಮನೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ನಂತರದಲ್ಲಿ ತಿಳಿಯಿತು. ಇಷ್ಟು ದಿನವೂ ಮಕ್ಕಳಿಗೆ ಓದು, ಪರೀಕ್ಷೆ ಎಂದು ಹೇಳುತ್ತಿದ್ದ ಪೋಷಕರು ಈಗಲಾದರೂ ಒಂದಿಷ್ಟು ಆರಾಮಾಗಿ, ಖುಷಿಯಾಗಿ ಇರಲಿ ಎಂದು ಮಕ್ಕಳಿಗೆ ಬೇಕಾದ್ದನ್ನು ಕೊಡಿಸಿ, ಪೋಷಕರುಗಳು ಹೊರಗೆ ನಿಂತು, ಮುಂದೆ ಮಕ್ಕಳ ವಿದ್ಯಾಭ್ಯಾಸ ಹೇಗೆ? ಏನು? ಎಂದು ಮಾತನಾಡಿಕೊಳ್ಳುತ್ತಿದ್ದರು. ಇನ್ನೂ ಕೆಲವರು ಪರೀಕ್ಷೆ ಹೇಗೆ ಮಾಡಿದ್ದಾರೋ? ಏನೋ? ಫಲಿತಾಂಶ ಬರುವವರೆಗೆ ಸುಮ್ಮನೆ ಕಾಯುತ್ತಲೇ ಇರಬೇಕೆಂದುಕೊಂಡು ಸುಮ್ಮನಾಗಿದ್ದಾರೆ. ‘ನಮ್ಮ ಮಕ್ಕಳ ಹಣೆಬರಹ ನಮಗೆ ಗೊತ್ತಿಲ್ಲವೇ? ಅದೇ ಫಲಿತಾಂಶ ಬರೋದು ಬಿಡಿ’ ಎಂದವರೂ ಇದ್ದಾರೆ. ಇದೆಲ್ಲದರ ನಡುವೆ ಮಕ್ಕಳ ಜೊತೆಗೆ ಪೋಷಕರು ಮಕ್ಕಳಾಗಿದ್ದಾರೆ. ಎಲ್ಲವನ್ನೂ ಮುಗಿಸಿ ಎಲ್ಲರೂ ಖುಷಿಯೊಂದಿಗೆ ತೆರಳಿದ್ದಾರೆ.

‘ಪರೀಕ್ಷೆ ಎಂಬುದು ಯುದ್ಧವಲ್ಲ ಅದೊಂದು ಹಬ್ಬ ಸಂಭ್ರಮಿಸಿ’ ಎಂಬ ಸಾಲುಗಳನ್ನು ಕೇಳಿದ್ದೆವು. ಮಕ್ಕಳು ಕೂಡ ಮೊದಮೊದಲು ಹೆದರಿದಂತೆ ಕಂಡರೂ ನಂತರದಲ್ಲಿ ಆರಾಮಾಗಿ ಪರೀಕ್ಷೆ ಬರೆದಿದ್ದಾರೆ. ೧೦ನೇ ತರಗತಿಗೆ ಬಂದಾಗಿನಿಂದಲೂ ಓದು-ಬರವಣಿಗೆ ಎಂದೇ ತೊಡಗಿಸಿಕೊಂಡಿದ್ದ ಮಕ್ಕಳು ಪರೀಕ್ಷೆ ಮುಗಿಸಿ ಎಲ್ಲಾ ಗೆಳೆಯರ ಬಳಗದೊಂದಿಗೆ ಒಂದಿಷ್ಟು ತಿಂದುಂಡು ಸಂಭ್ರಮಿಸಿದ ಪರಿ, ಅದನ್ನು ಪೋಷಕರೂ ಬೇಡವೆನ್ನದೇ ಖುಷಿಯಾಗಿರಲಿ ಎಂದು ಬಿಟ್ಟಿದ್ದಾರೆ. ಫಲಿತಾಂಶದ  ಬಗ್ಗೆ ಯೋಚನೆ ಇನ್ನೂ ಇಲ್ಲವೆಂಬಂತೆ ಇದ್ದಾರೆ. ಫಲಿತಾಂಶ ಬಂದ ನಂತರ ಏನು ಸೌಲಭ್ಯಗಳು ಸಿಗುತ್ತವೋ, ಇಲ್ಲವೋ ಗೊತ್ತಿಲ್ಲ ಅಲ್ಲಿಯವರೆಗೂ ಮಕ್ಕಳು ಹೀಗೆ ಖುಷಿಖುಷಿಯಾಗಿರಲಿ ಎನ್ನುವುದೊಂದೇ ಆಸೆ.


ಪರೀಕ್ಷೆಯ ಕಡೆಯ ದಿನವೆಂಬುದು ಅನೇಕರಿಗೆ ನೆನಪಲ್ಲುಳಿಯುವ ಸಂಗತಿ. ವಿದ್ಯಾರ್ಥಿ ಜೀವನದಲ್ಲಿ ಸಮವಸ್ತ್ರಕ್ಕೂ, ಶಾಲಾ ವಿದ್ಯಾರ್ಥಿಯಾಗಿಯೂ ಅದೇ ಕಡೆಯ ದಿನವಾಗಿರುತ್ತದೆ. ಅದನ್ನು ಖುಷಿಯಿಂದ ಸಂಭ್ರಮಿಸುವವರೇ ಬೇರೆ. ಕೆಲವರು ಮುಗಿದರೆ ಸಾಕು ಎನ್ನುವವರಿದ್ದಾರೆ. ಇಲ್ಲಿಗೆ ಶಾಲಾ ಜೀವನವೇ ಮುಗಿಯಿತು. ಇನ್ನು ಮುಂದೆ ಈ ಸಮವಸ್ತ್ರವನ್ನು ಧರಿಸಲು ಸಾಧ್ಯವಿಲ್ಲವೆಂದು ನೊಂದುಕೊಂಡವರಿದ್ದಾರೆ, ಪರಿವರ್ತನೆ ಜಗದ ನಿಯಮವೆಂದು ಅದಕ್ಕೆ ಹೊಂದಿಕೊಳ್ಳಬೇಕು. ಒಂದರ ಅಂತ್ಯ ಮತ್ತೊಂದರ ಆರಂಭವೆಂದು ಅದಕ್ಕೆ ಸಿದ್ಧರಾಗಿ ಮುನ್ನಡೆಯುವವರೂ ಇದ್ದಾರೆ. ಶಾಲಾ  ಜೀವನದ ಕಡೆಯ ದಿನವನ್ನು ನೆನಪಾಗಿಟ್ಟುಕೊಳ್ಳಲು ತೆಗೆದುಕೊಂಡ ಚಿತ್ರಗಳು ಪ್ರತಿಯೊಂದನ್ನು ಸ್ಮರಣೀಯವಾಗಿಸುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Leave a Reply

Your email address will not be published. Required fields are marked *

Scan the code