ಜಿಲ್ಲೆನ್ಯೂಸ್

ಸಮಾಜದ ನೈಜತೆಯನ್ನು ಸಾರಿದ ಶ್ರೇಷ್ಠ ವಚನಕಾರರು ಎಂದರೆ ಅಂಬಿಗರ ಚೌಡಯ್ಯ: ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ್

ಸಮಾಜದ ನೈಜತೆಯನ್ನು ಸಾರಿದ ಶ್ರೇಷ್ಠ ವಚನಕಾರರು ಎಂದರೆ ಅಂಬಿಗರ ಚೌಡಯ್ಯ: ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ್


(SHIVAMOGA): ತಾಲೂಕು ಆಡಳಿತದಿಂದ ನಿಜಗುಣ ಅಂಬಿಗರ ಚೌಡಯ್ಯ ಜಯಂತಿ
*******
ನೇರ ನಿಷ್ಠುರ ವ್ಯಕ್ತಿತ್ವದ ಅಪರೂಪದ ದಾರ್ಶನಿಕರು ಅಂಬಿಗರ ಚೌಡಯ್ಯ: ಪತ್ರಕರ್ತ ಬಿ.ಡಿ.ರವಿಕುಮಾರ್
**********
ಸಾಗರ : ವಚನಗಳ ಮೂಲಕ ಸಮಾಜವನ್ನು ಸರಿದಾರಿಗೆ ತರುವ ಮೂಲಕ ದಾರ್ಶನಿಕ ಸಮಾಜ ನಿರ್ಮಾಣ ಮಾಡುವಲ್ಲಿ ಅಂಬಿಗರ ಚೌಡಯ್ಯ ಪ್ರಮುಖರಾಗಿದ್ದಾರೆ ಎಂದು ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ್ ಹೇಳಿದರು
ಅವರು ಇಲ್ಲಿನ ತಾಲ್ಲೂಕು ಕಛೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ ನಿಜಗುಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ 12ನೇ ಶತಮಾನದಲ್ಲಿ ವಚನಕಾರರಲ್ಲಿ ಇವರು ಮುಖ್ಯವಾಗಿ ಗುರುತಿಸಿ ಕೊಂಡವರು. ಇವರು ನೇರ ನಿಷ್ಠುರ ವ್ಯಕ್ತಿತ್ವವನ್ನು ಹೊಂದಿರುವ ಇರುವ ವಿಷಯಗಳನ್ನು ನೇರವಾಗಿ ತಿಳಿಸುವ ಮೂಲಕ ಸಮಾಜವನ್ನು ಸುಧಾರಿಸುವ ಕೆಲಸವನ್ನು ಮಾಡಿದವರು, ಶರಣ ಪರಂಪರೆಯಲ್ಲಿ ಮುಖ್ಯವಾಗಿ ಗುರುತಿಸಿಕೊಂಡಿದ್ದು ಜನಸಮುದಾಯಗಳ ನಡುವೆ ಸಮನ್ವಯವನ್ನು ಸಾಧಿಸಿದವರಾಗಿದ್ದರು, ಸತ್ಯದ ಪ್ರವರ್ತಕ ಎಂದರೆ ಅದು ಅಂಬಿಗರ ಚೌಡಯ್ಯ ಎಂದರೆ ತಪ್ಪಿಲ್ಲ ಇಂತಹ ದಾರ್ಶನಿಕರ ಸಂದೇಶಗಳನ್ನು ಪಾಲಿಸುವ ಮೂಲಕ ಜೀವನ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳುವ ಕೆಲಸ ಆಗಬೇಕಾಗಿದೆ ಎಂದರು.
ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಬಿ.ಡಿ.ರವಿಕುಮಾರ್ ಮಾತನಾಡಿ ಅತ್ಯಂತ ಕೆಳ ಹಂತದಿಂದ ಬೆಳೆದು ಬಂದ ಅಂಬಿಗರ ಚೌಡಯ್ಯಹನ್ನೆರಡನೇ ಶತಮಾನ ಎನ್ನುವುದು ಈಗಲೂ ನಮ್ಮನ್ನು ಭಾವನಾತ್ಮಕವಾಗಿಯೇ ಆಳುತ್ತಿದೆ. ಆಚರಣೆಗಳ ಭಾರಕ್ಕೆ ಬಗ್ಗಿ ಹೋಗಿದ್ದ ಸನಾತನ ಸಂಸ್ಕೃತಿಯಲ್ಲಿ ಬೆಳೆದಿದ್ದ ವರ್ಣಕಳೆಯನ್ನು ಅಂದು ವಚನ ಸಂಸ್ಕೃತಿಯೆಂಬ ಧಾರ್ಮಿಕ ಕ್ರಾಂತಿಯು ಆವರಿಸಿಕೊಂಡಿತ್ತು. ತನ್ನ ಸರಳವಾದ ಭಾಷೆಯ ಮೂಲಕ ಜನರ ನಾಡಿ ಮಿಡಿತದೊಳಗೆ ಮಿಳಿತವಾಗಿ ಎಲ್ಲ ವರ್ಗಗಳ ವಿವೇಕ ಜಾಗೃತಿಯ ಕೆಲಸವನ್ನು ಅದು ಪರಿಣಾಮಕಾರಿಯಾಗಿ ಮಾಡಿತ್ತು. ಆ ಧಾರ್ಮಿಕ ಕ್ರಾಂತಿಗೆ ಶೋಷಿತ ವರ್ಗಕ್ಕೆ ಬೆನ್ನೆಲುಬಾಗುವ ಆಶಯವಷ್ಟೇ ಇರಲಿಲ್ಲ. ಎಲ್ಲೆಡೆಯೂ ಸಮಾನತೆಯ ತತ್ವವನ್ನು, ಜಾತಿ ರಹಿತ ವ್ಯವಸ್ಥೆಯನ್ನು ನಿರ್ಮಾಣ ಮಾಡುವ ನಿಷ್ಕಳಂಕ ಕಾಳಜಿಯೂ ಅದಕ್ಕಿತ್ತು.



ಬಸವಣ್ಣ, ಅಲ್ಲಮ ಪ್ರಭು, ಅಕ್ಕಮಹಾದೇವಿ, ಮಾದಾರ ಚೆನ್ನಯ್ಯ, ಹಡಪದ ಅಪ್ಪಣ್ಣ, ಒಬ್ಬರೇ ಇಬ್ಬರೇ! ಹತ್ತಾರು ಶಿವಶರಣರು ವರ್ಣತಂತುಗಳನ್ನು ಕಿತ್ತೊಗೆಯಲು ಪಣತೊಟ್ಟು ಸಮಾಜದ ಅಂತ:ಸತ್ವವನ್ನು ಬಡಿದೆಬ್ಬಿಸಿದ್ದರು. ವಚನ ಸಂಸ್ಕೃತಿಯು ಸಮಾಜಕ್ಕೆ ನೀಡಿದ ಕ್ರಿಯಾತ್ಮಕ ಬೆರಗು, ಒದಗಿಸಿದ ಆರೋಗ್ಯಕರ ಸಂದೇಹ ಮತ್ತು ಹರವಿಟ್ಟ ಅವಿಚ್ಛಿನ್ನ ದೃಢತೆಯ ಅಭಿವ್ಯಕ್ತಿ ಇಂದಿಗೂ ಆದರ್ಶಯುತವೇ ಆಗಿ ಉಳಿದಿದೆಯೆಂದರೆ ಅದು ನಮ್ಮ ಭಾಷೆಯ, ಸಂಸ್ಕೃತಿಯ ಉತ್ಕೃಷ್ಟತೆಯನ್ನು ಆ ದಿನಗಳಲ್ಲಿಯೇ ಸ್ಪರ್ಶಿಸಿದ್ದಲ್ಲಿ ಯಾವುದೇ ಸಂದೇಹ ಇಲ್ಲ.ಶರಣ ಸಂಸ್ಕೃತಿಯಲ್ಲಿ ಸಾಗಿಹೋದ ಮಹಾಚೇತನಗಳ ಕುರಿತು ಸ್ವಲ್ಪ ಸಂಯಮದೊಂದಿಗೆ ಅವಲೋಕಿಸಿದಾಗ ಒಬ್ಬ ವ್ಯಕ್ತಿ ನಮ್ಮನ್ನು ಬಿಟ್ಟೂಬಿಡದ ರೀತಿಯಲ್ಲಿ ಆವರಿಸಿಕೊಂಡು ಅಂತರಂಗವನ್ನು ತಟ್ಟುತ್ತಾನೆ. ರಭಸ ನೀರಿನ ವಿರುದ್ಧ ಈಜುವ ಹಾಯಿದೋಣಿ, ತೆಪ್ಪದಲ್ಲಿ ಕುಳಿತ ಅಮಾಯಕ ಜನ, ಧೀರನಂತೆ ನಿಂತ ಹರಿಗೋಲು ಕೈಯಲ್ಲಿ ಹಿಡಿದ ಆ ಅಂಬಿಗ- ಹೀಗೆಯೇ ಆತನನ್ನು ನಾವು ಕಲ್ಪಿಸಿಕೊಳ್ಳಬೇಕು. ಆ ಅಂಬಿಗನ ಕೈಯಲ್ಲಿದ್ದದ್ದು ಅಂತಿಂತಹ ಹರಿಗೋಲಲ್ಲ. ಅದು ತನ್ನ ಜೊತೆಗಿದ್ದವರನ್ನು ಮನೋಸ್ವಾತಂತ್ರ್ಯದ ನೆಲೆಗೆ ಕರೆದೊಯ್ಯುವ ಭರವಸೆಯ, ಬಂಡಾಯದ ಹರಿಗೋಲು ಎನ್ನುವುದನ್ನೂ ನಾವು ನೆನಪಿನಲ್ಲಿಟ್ಟುಕೊಳ್ಳಬೇಕು.

ಅಂಬಿಗರ ಚೌಡಯ್ಯ ವಚನಕಾರರರೆಲ್ಲರಲ್ಲಿ ಇದ್ದ ಸುಶಿಕ್ಷವಾದ ಅಭಿವ್ಯಕ್ತಿ ಮಾರ್ಗವನ್ನು ತುಳಿಯಲಿಲ್ಲ. ತನ್ನ ಹತಾಶೆ, ನೋವು, ಬೇಗುದಿ ಎಲ್ಲವನ್ನೂ ಆತ ತನ್ನದೇ ತೀಕ್ಷ್ಣಪದಗಳ ಆಡುನುಡಿಯ ಮೂಲಕ ನಿರ್ಭಿಡೆಯಿಂದ ಬೆತ್ತಲಾಗಿಸುತ್ತಾ ಹೋದ. ಅಲ್ಲದೇ ಎಲ್ಲಾ ವಚನಕಾರರ ಹಾದಿಯಲ್ಲಿ ತಾನು ನಡೆಯದೇ ಇಷ್ಟ ದೈವದ ಬದಲಿಗೆ ತನ್ನದೇ ಹೆಸರನ್ನು ತನ್ನ ವಚನಗಳ ಅಂಕಿತವಾಗಿ ಬಳಸಿಕೊಂಡು ಸಮಾಜದ ಓರೆಕೋರೆಗಳನ್ನು ತಿದ್ದುವ ಯತ್ನ ಮಾಡಿದ. ಅಂಬಿಗರ ಚೌಡಯ್ಯ ನಿಜಾರ್ಥದಲ್ಲಿ ಬಂಡಾಯ ವಚನ ಸಂಸ್ಕೃತಿಯ ಹರಿಕಾರ. ವಚನ ಸಂಸ್ಕೃತಿಯ ಆ ತರ್ಕದ ಲೆಕ್ಕಾಚಾರಗಳಿಂದ ದೂರವುಳಿದು ಗಟ್ಟಿ ಮೌಲ್ಯಗಳ, ನಿರ್ಭಿಡೆಯ ನುಡಿಗಟ್ಟುಗಳ ಮೂಲಕ ಸಮಾಜದ ಓರೆಕೋರೆಗಳನ್ನು ಬೆತ್ತಲೆಯಾಗಿಸಿದ ಚೌಡಯ್ಯನ ಆಕ್ರೋಶದ ಅಭಿವ್ಯಕ್ತಿಯ ಹಾದಿ ಇಂದಿಗೂ ನಮ್ಮನ್ನು ಬೆಚ್ಚಿಸಿ ವಿಸ್ಮಯಗೊಳಿಸುತ್ತದೆ. ಆತ, ಮುನ್ನೂರರ ಆಸುಪಾಸಿನ ಸಂಖ್ಯೆಯ ವಚನಗಳನ್ನು ಬರೆದಿದ್ದಾನೆ. ಒಂದೆರಡನ್ನು ಓದಿಕೊಳ್ಳಿ. ಆತನ ಆಶಯ, ಧಾಟಿ ನಿಮಗೆ ಅರ್ಥವಾದೀತು ಎಂದವರು
ಈ ಸಂದರ್ಭದಲ್ಲಿ ಗಂಗಾಮತ ಸಮಾಜದ ಉಪಾಧ್ಯಕ್ಷ ಧರ್ಮರಾಜ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಸಂತೋಷ ಉಪತಹಸೀಲ್ದಾರ್ ಕಲ್ಲಪ್ಪ ಮೆಣಸಿನಹಾಳ್, ವಿ.ಟಿ.ಸ್ವಾಮಿ, ಬಸವರಾಜ, ಮೋಹನ್ ಉಪಸ್ಥಿತರಿದ್ದರು

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code