ನ್ಯೂಸ್ಶಿವಮೊಗ್ಗ

ಗುಡ್ಡೆಕೊಪ್ಪ ಗ್ರಾಮದ ಬಳಿ ಪ್ರಾಚೀನ ಜನವಸತಿ ಸ್ಥಳ ಬೆಳಕಿಗೆ

ಗುಡ್ಡೆಕೊಪ್ಪ ಗ್ರಾಮದ ಬಳಿ ಪ್ರಾಚೀನ ಜನವಸತಿ ಸ್ಥಳ ಬೆಳಕಿಗೆ

(SHIVAMOGA): ಸೊರಬ ತಾಲ್ಲೂಕು ಗುಡ್ಡೆಕೊಪ್ಪ ಗ್ರಾಮದ  ದೇವರ ಬಾವಿಯ ಬಳಿ ಆದಿ ಕದಂಬರ ಅವಧಿಯ ಅನೇಕ ಪಳೆಯುಳಿಕೆಗಳು ಪತ್ತೆಯಾಗಿದ್ದು ಇತಿಹಾಸ ಸಂಶೋಧಕ ರಮೇಶ ಬಿ. ಹಿರೇಜಂಬೂರು ಪತ್ತೆಮಾಡಿದ್ದಾರೆ.

ಬೃಹತ್ ದೇವರ ಬಾವಿಯ ಬಳಿ ಶಿವ ದೇವಾಲಯದ ಅವಶೇಷಗಳು, ಅಲ್ಲೇ ದ್ವಿಬಾಹು ಚಿಂತಾಮಣಿ ನರಸಿಂಹ ಶಿಲ್ಪ, ಮಹಿಷಮರ್ಧಿನಿ ಶಿಲ್ಪ, ಹಾರೀತಿ ಶಿಲ್ಪ, ಸಿಂಹಮುಖವಿರುವ ಕಟಾಂಜನ, ಕದಂಬ ಅವಧಿಯದ್ದೆನ್ನಬಹುದಾದ ಅನೇಕ ಇಟ್ಟಿಗೆ ತುಂಡುಗಳು ಗೋಚರಿಸಿವೆ.

ಸೊರಬ ಪ್ರಾಚೀನ ನರಸಿಂಹ ಕ್ಷೇತ್ರವಾಗಿದ್ದು ಕುಬಟೂರು, ಕುದರೆಗಣಿ, ಬಾಸೂರು, ಯಲಸಿ, ಕುಪ್ಪಗಡ್ಡೆ ಗ್ರಾಮಗಳಲ್ಲಿ ಇಂತಹ ಶಿಲ್ಪ ಕಂಡುಬಂದಿದ್ದು ೪ ನೇ ಶತಮಾನದಿಂದ ೬ ನೇ ಶತಮಾನದ ಶಿಲ್ಪಗಳಾಗಿವೆ. ತೆವರತೆಪ್ಪದಲ್ಲಿ ಈಚೆಗೆ ಇಂತಹುದೆ ನರಸಿಂಹ ಶಿಲ್ಪವನ್ನು ಪುರಾತತ್ವ ಇಲಾಖೆ ತಜ್ಞ ಶೇಜೇಶ್ವರ ನಾಯಕ್ ಶೋಧಿಸಿದ್ದಾರೆ. ಗುಡ್ಡೆಕೊಪ್ಪ ಗ್ರಾಮದಲ್ಲಿ ದೊರೆತಿರುವ ದ್ವಿಬಾಹು ನರಸಿಂಹ ಶಿಲ್ಪ ಸುಮಾರು 103 ಸೆಂಟಿಮೀಟರ್ ಎತ್ತರ 64 ಸೆಂಟಿಮೀಟರ್ ಅಗಲವಿದೆ. ಮುಖದ ಭಾಗ ಹಾಳಾಗಿದ್ದು ಕೊರಳಲ್ಲಿ ಸರಳ ಕಂಠೀಹಾರವಿದೆ.

ಅಲ್ಲೆ ಇರುವ ಇನ್ನೊಂದು ಶಿಲ್ಪವು 20 ಸೆಂಮೀ ಅಗಲ, 34 ಸೆಂಟಿಮೀಟರ್ ಉದ್ದವಿದೆ. ಈ ಶಿಲ್ಪದ ಮುಂಭಾಗವು ಹಾಳಾಗಿದ್ದು ಹಿಂಬದಿಯಲ್ಲಿ ಅಪೂರ್ವ ಚಿತ್ರಣವಿದೆ. ಹಿಟ್ಟುಗಲ್ಲು ಅಥವಾ ಬಳಪದ ಕಲ್ಲಿನ ಈ ಶಿಲ್ಪ ಹಾರತಿ ಶಿಲ್ಪದ ಲಕ್ಷಣವನ್ನು ಹೊಂದಿದೆ.

ಸುಮಾರು ಒಂದುವರೆ ಅಡಿ ಎತ್ತರದ ಮಹಿಷ ಮರ್ಧಿನಿ ಶಿಲ್ಪ ಕೂಡ ಆರನೇ ಶತಮಾನದ ಲಕ್ಷಣವನ್ನು ಸೂಚಿಸುತ್ತಿದ್ದು, ಸೊರಬ ತಾಲ್ಲೂಕಿನ ಜಂಬೆಹಳ್ಳಿಯಲ್ಲಿ ಇದೇ ಅವಧಿಯ ಮರ್ದಿನಿ ಶಿಲ್ಪ ಕಂಡು ಬಂದಿದೆ.

ತಾಳಗುಂದದಲ್ಲಿ ದೊರೆತಿರುವ ಸಿಂಹ ಕಟಾಂಜನವನ್ನು ನೆನಪಿಸುವಂತಹ ಎರಡು ಸಿಂಹ ಕಟಾಂಜನ ಇಲ್ಲೂ ಕಾಣಿಸುತ್ತಿದ್ದು 5-6 ನೇ ಶತಮಾನದ್ದಾಗಿರಬಹುದಾಗಿದೆ.

ಬಹುತೇಕ ಆದಿ ಕದಂಬ ಕಾಲದಿಂದಲೂ ಆರಾಧನೆಗೊಂಡಿರಬಹುದಾದ ಶೈವ, ವೈಷ್ಣವ ಗುಡಿಗಳು ಪಾಳುಗೊಂಡಿದ್ದು ಪ್ರಸ್ತುತ ಸೋಮ ಸೂತ್ರವಿರುವ ರಾಷ್ಟ್ರಕೂಟ ಅವಧಿಯದ್ದೆನ್ನಬಹುದಾದ ಶಿವ ಲಿಂಗವಿದೆ. ಇಂತಹ ಪ್ರಾಚೀನ ಶಿವಲಿಂಗಗಳು ತಾಲ್ಲೂಕಿನ ಓಟೂರು, ಹೆಚ್ಚೆ, ಅಬಸಿ ಗ್ರಾಮಗಳಲ್ಲಿ ಕಂಡು ಬಂದಿದೆ.

ಈ ಪಾಳು ಗುಡಿಯ ಸಮೀಪ ಆದಿಕದಂಬ, ಕದಂಬ ಕಾಲದ ರಾಶಿರಾಶಿ ಮಣ್ಣಿನ ಪಾನಪತ್ರೆಯ ತುಣುಕು, ಮಡಿಕೆಗಳು, ಅಲ್ಲೆ ಹಿರೇಮಾಗಡಿ, ಹಂಚಿ ಗ್ರಾಮಗಳಲ್ಲಿ ಕಾಣಸಿಗುವ ಚಾಲುಕ್ಯ ಆರಂಭಿಕ ಹಂತದೆನ್ನಲಾದ ಸುಟ್ಟ ಇಟ್ಟಿಗೆಗಳು ಸಾಕಷ್ಟು ಪ್ರಮಾಣದಲ್ಲಿ ಕಂಡುಬಂದಿದ್ದು ಅವುಗಳು ಗಾತ್ರದಲ್ಲಿ ಏಳು ಸೆಂ.ಮೀ ದಪ್ಪ 21 ಸೆಂ.ಮೀ ಅಗಲ ಹಾಗೂ 40 ಸೆಂ.ಮೀ ಉದ್ದ ಇವೆ. ಅಲ್ಲೇ ರಾಷ್ಟ್ರಕೂಟ ಅವಧಿಯ ಕೆಲವು ಗೋಸಾಸಗಳೂ ಇವೆ, ಉದ್ಧರೆಯ ಗಂಗರ ಕಾಲದ ನಿಸದಿ ಕಲ್ಲು ಕೂಡ ಕಾಣಿಸಿಕೊಂಡಿದೆ.

ಈ ಎಲ್ಲ ಶಿಲ್ಪಗಳ ಅಧ್ಯಯನಕ್ಕೆ ಡಾ. ಶ್ರೀನಿವಾಸ ಪಾಡಿಗಾರ್, ಡಾ.ಜಗದೀಶ ಅಗಸಿ ಬಾಗಿಲು ಮತ್ತು ಡಾ. ಶೇಜೇಶ್ವರ ನಾಯಕ್ ಸಹಕರಿಸಿದ್ದಾರೆ. ಸ್ಥಳಕ್ಕೆ ಸಂಶೋಧಕ ಶ್ರೀಪಾದ ಬಿಚ್ಚುಗತ್ತಿ ಮತ್ತು ಮಂಜಪ್ಪ ಚುರ್ಚಿ ಗುಂಡಿ ಬೇಟಿ ನೀಡಿ ವೀಕ್ಷಿಸಿದ್ದಾರೆ. ಸ್ಥಳ ಪರಿವೀಕ್ಷಣೆ ವೇಳೆ ಗ್ರಾಮದ ಉಮೇಶ್ ಗೌಡರು, ಶಿವಕುಮಾರ್, ಸತೀಶ್ ಸ್ವಾಮೇರ್, ರಮೇಶ್ ಕಾಟೇರಾ, ಮಂಜುನಾಥ್ ಜೊತೆಗಿದ್ದು ಸಹಕರಿಸಿದ್ದಾರೆ.


ಕದಂಬ ಪೂರ್ವ ಕಾಲದ ಅವಶೇಷಗಳೊಂದಿಗೆ ಹದಿಮೂರನೇ ಶತಮಾನದ ತನಕ ಅಸ್ತಿತ್ವದಲ್ಲಿದ್ದ ಮೂಲ ಗುಡ್ಡೆಕೊಪ್ಪ ಗ್ರಾಮ
ಪ್ರಸ್ತುತ ಅರಣ್ಯ ಪ್ರದೇಶ, ಸಾಗುವಳಿ ಪ್ರದೇಶವಾಗಿರುವ ಇಲ್ಲಿ ಆದಿ ಕದಂಬ, ಕದಂಬ ಕಾಲದ ಪಾನಪಾತ್ರೆಯ ಜೊತೆಗೆ ಯಥೇಚ್ಛ ಮಡಿಕೆ ಚೂರುಗಳು ಲಭಿಸಿವೆ. ಸಮೀಪದ ಬಿದರಗೆರೆ, ತೊಗರ್ಸಿಯಲ್ಲಿ ಕೂಡ ಶಾತವಾಹನ ಅವಧಿಯ ಜೇಡಿ ವಿಗ್ರಹಗಳು ಪತ್ತೆಯಾಗಿದ್ದು ಪೂರ್ವದಲ್ಲಿ ಪೂರ್ಣಪ್ರಮಾಣದ ವಾಸಸ್ಥಾನವಿದ್ದ ಎಲ್ಲ ಲಕ್ಷಣಗಳಿವೆ. ರಾಷ್ಟ್ರಕೂಟ ಕಾಲದ ಅನೇಕ ಗೋಸಾಸಗಳು, ಚಾಲುಕ್ಯ ಆರಂಭ ಕಾಲದ ಸಾಕಷ್ಟು ಇಟ್ಟಿಗೆಗಳು ಲಭಿಸಿದ್ದು ಇಟ್ಟಿಗೆಯ ಗುಡಿಯಿದ್ದ ಲಕ್ಷಣವಿದೆ. ಇದೇ ಸರಹದ್ದಿನಲ್ಲಿ ರಾಷ್ಟ್ರಕೂಟರ ಕಾಲದ್ದೆನ್ನಬಹುದಾದ ಗಜಲಕ್ಷ್ಮೀ ಶಿಲ್ಪವೂ ಇದೆ. ಉತ್ಖನನದ ಅವಶ್ಯಕತೆ ಇರುವ ಈ ಸ್ಥಳದಲ್ಲಿ ಶೋಧ ನಡೆದರು ಇನ್ನಷ್ಟು ಐತಿಹಾಸಿಕ ಮಹತ್ವದ ಸುಳಿವು ಪತ್ತೆಯಾಗಬಹುದು.

– ಶ್ರೀಪಾದ ಬಿಚ್ಚುಗತ್ತಿ, ಇತಿಹಾಸ ಸಂಶೋಧಕ

ವರದಿ: ಮಧು ರಾಮ್ ಸೊರಬ

Leave a Reply

Your email address will not be published. Required fields are marked *

Scan the code