ಪಟ್ಟಣದ ಸಂತೆಗೇಟ್ ಬಳಿ ಬೀಗ ಹಾಕಿದ್ದ ಮನೆಗೆ ಕಳ್ಳತನಕ್ಕೆ ಯತ್ನ
(KOLARA)ಬಂಗಾರಪೇಟೆ: ಪಟ್ಟಣದ ಸಂತೇಗೇಟ್ ಬಳಿ ಹಾಡುಹಗಲೇ ಇಬ್ಬರು ಕಳ್ಳರು ಮನೆ ಬೀಗ ಒಡೆದು ಕಳ್ಳತನಕ್ಕೆ ಯತ್ನಿಸಿದ್ದಾರೆ.
ಸಂತೇಗೇಟ್ ಬಳಿ ಇರುವ ಚಿನ್ನದ ಅಂಗಡಿ ಮಾಲೀಕ ಶ್ರೀಧರ್ ಅವರು ಮನೆಗೆ ಬೀಗ ಹಾಕಿ ಹೊರಗೆ ಹೋಗಿದ್ದರು. ಬುಧವಾರ ಬೆಳಿಗ್ಗೆ 10.45ರ ಸಮಯದಲ್ಲಿ ಕಾಂಪೌಂಡ್ ಹಾರಿ ಬಂದ ಇಬ್ಬರು ಕಳ್ಳರು ತೆವಳಿಕೊಂಡು ಮನೆಯ ಮುಖ್ಯ ಬಾಗಿಲಿನ ಬಳಿ ಹೋಗಿದ್ದಾರೆ. ಕಬ್ಬಿಣದ ಬೀಗ ತೆಗೆಯಲು ಸಾಧ್ಯವಾಗದೆ ಇದ್ದಾಗ, ಹಿಂಭಾಗದ ಗೇಟ್ ಒಡೆದು ಒಳಗೆ ಹೋಗಲು ಪ್ರಯತ್ನಿಸಿದ್ದಾರೆ.
ಇದನ್ನು ಸ್ವಲ್ಪ ದೂರದಲ್ಲಿ ಮನೆ ನಿರ್ಮಾಣದಲ್ಲಿ ತೊಡಗಿದ್ದ ಕಟ್ಟಡ ಕಾರ್ಮಿಕರು ಮೇಲ್ಬಾಗದಿಂದ ನೋಡಿದ್ದು, ಇಬ್ಬರು ಕಳ್ಳರು ಕಾರ್ಯಾಚರಣೆ ನಡೆಸುತ್ತಿರುವುದು ಕಂಡು ಬಂದಿದೆ. ಅವರು ಕೂಗಿಕೊಂಡಾಗ ಇಬ್ಬರೂ ಓಡಿಹೋಗಿದ್ದಾರೆ.
ದುಷ್ಕರ್ಮಿಗಳು ಮುಖಕ್ಕೆ ಬಟ್ಟೆ ಮುಚ್ಚಿಕೊಂಡಿದ್ದು, ಹರಿತವಾದ ಆಯುಧವನ್ನು ಹಿಡಿದುಕೊಂಡಿದ್ದರು. ಕಳ್ಳತನದ ಎಲ್ಲಾ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಕಳೆದ ವಾರ ಪಟ್ಟಣದ ಅಮರಾವತಿ ನಗರದಲ್ಲಿ ಸಹ ಇದೇ ಚಹರೆ ಹೊಂದಿದ ಇಬ್ಬರು ಮನೆ ಬೀಗ ಒಡೆಯಲು ವಿಫಲರಾಗಿದ್ದ ಪ್ರಕರಣ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಪಾಂಡುರಂಗ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವರದಿ: ವಿಷ್ಣು ಕೋಲಾರ