ರಕ್ತಕ್ಕೆ ಮತ್ತೊಂದು ಹೆಸರೇ ‘ಜೀವ’ – ಮೌಲಾನ ರಿಯಾಜ್ ಅಹ್ಮದ್ ಉಮ್ರಿ
(SHIVAMOGA): ಸೊರಬ: ಪಕ್ಷಿಯಂತೆ ಹಾರಬಲ್ಲ, ಮೀನಿನಂತೆ ಈಜಬಲ್ಲ, ಕೃತಕ ಹಾಲು, ಮಳೆ ಸೃಷ್ಠಿಸಬಲ್ಲ ವಿಜ್ಞಾನ-ತಂತ್ರಜ್ಞಾನ ಮುಂದುವರೆದ ಈ ಕಾಲದಲ್ಲೂ ಕೃತಕ ರಕ್ತವನ್ನು ಸೃಷ್ಠಿಸಲು ಸಾಧ್ಯವಾಗುತ್ತಿಲ್ಲ ಎಂದರೆ ರಕ್ತಕ್ಕೆ ಮತ್ತೊಂದು ಹೆಸರೇ ‘ಜೀವ’ ಎಂದು ಅಲ್ಬೀರ್ ಸೇವಾ ಟ್ರಸ್ಟ್ ಅಧ್ಯಕ್ಷ ಮೌಲಾನ ರಿಯಾಜ್ ಅಹ್ಮದ್ ಉಮ್ರಿ ಹೇಳಿದರು.
ಭಾನುವಾರ ಪಟ್ಟಣದ ದಾರುಸ್ ಸಲಾಂ ಶಾದಿಮಹಲ್ನಲ್ಲಿ ಅಲ್ಬೀರ್ ಸೇವಾ ಟ್ರಸ್ಟ್ (ರಿ) ಸೊರಬ, ಮಲ್ನಾಡ್ ಲೈಫ್ಲೈನ್ ಆಸ್ಪತ್ರೆ, ಆಶಾಜ್ಯೋತಿ ಸ್ವಯಂ ಪ್ರೇರಿತ ರಕ್ತ ಕೇಂದ್ರ ಶಿವಮೊಗ್ಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜೀವ ತುಂಬಲು ಮತ್ತೊಂದು ಮಾರ್ಗವೇ ರಕ್ತದಾನ. ಇದು ಅತ್ಯಂತ ಶ್ರೇಷ್ಠ ದಾನವಾಗಿದೆ. ರಕ್ತದ ಅವಶ್ಯಕತೆ ಇರುವವರಿಗೆ ರಕ್ತ ಬೇಕೆಂದು ಬರೆಯುತ್ತಾರೆಯೇ ಹೊರತು ಯಾವುದೇ ಜಾತಿ, ಜನಾಂಗದ ರಕ್ತ ಎಂದು ಬರೆಯುವುದಿಲ್ಲ. ರಕ್ತಕ್ಕೆ ಯಾವುದೇ ಜಾತಿ, ಮತ, ಪಂಥ, ಬೇಧವಿಲ್ಲ. ರಕ್ತ ನೀಡಿ ಮಾತ್ರ ಮನುಷ್ಯನ ಜೀವ ಉಳಿಸಬಹುದಾಗಿದೆ. ಒಬ್ಬ ವ್ಯಕ್ತಿ ಒಬ್ಬ ಮನುಷ್ಯನ ಜೀವವನ್ನು ಅನ್ಯಾಯವಾಗಿ ತೆಗೆದುಕೊಂಡರೆ ಇಡೀ ಮಾನವ ಕುಲದ ಜೀವ ತೆಗೆದಂತೆ ಹಾಗೂ ಒಬ್ಬ ವ್ಯಕ್ತಿ ಮನುಷ್ಯನ ಜೀವ ಉಳಿಸಿದರೆ ಇಡಿ ಮಾನವ ಕುಲದ ಜೀವವನ್ನು ಉಳಿಸಿದಂತೆ ಎಂದು ಧರ್ಮಗ್ರಂಥದಲ್ಲಿ ಹೇಳಿದೆ. ಯಾರೊಬ್ಬರೂ ಸಹ ರಕ್ತವಿಲ್ಲದೇ ಜೀವ ಕಳೆದುಕೊಳ್ಳಬಾರದು. ಸರಿಯಾದ ಸಮಯಕ್ಕೆ ರೋಗಿಗೆ ರಕ್ತ ಸಿಗಬೇಕು. ಯಾವುದೇ ಸಮಯದಲ್ಲೂ ರಕ್ತದ ಅವಶ್ಯಕತೆ ಇದ್ದವರು ಅಲ್ಬೀರ್ ಸೇವಾ ಟ್ರಸ್ಟ್ಗೆ ಸಂಪರ್ಕಿಸಿದರೆ ತಮಗೆ ಸಾಧ್ಯವಾದಷ್ಟು ಪ್ರಯತ್ನ ಪಟ್ಟು ರಕ್ತ ಕೊಡಿಸುವುದಾಗಿ ಹೇಳಿದರು.
ರಾಷ್ಟಪ್ರಶಸ್ತಿ ಪುರಸ್ಕೃತ ಹಿರಿಯ ವೈದ್ಯ ಡಾ|| ಎಂ.ಕೆ ಭಟ್ ಮಾತನಾಡಿ, ರಕ್ತದಾನ ಮಾಡಿದ ತೃಪ್ತಿ ದೇಹದ ಆರೋಗ್ಯ ವೃದ್ಧಿಗೆ ಕಾರಣವಾಗುತ್ತದೆ. ರಕ್ತದಾನಕ್ಕೆ ಯಾವುದೇ ಮಡಿವಂತಿಕೆ ಇಲ್ಲ. ವಿಶ್ವದಲ್ಲಿ ಮಾನವೀಯತೆ ಮೆರೆಸುವಂತದ್ದು ರಕ್ತದಾನ. ದೇಹದಲ್ಲಿ ರಕ್ತ ವೃದ್ಧಿಯಾಗಲು ರಕ್ತದಾನ ಮಾಡಬೇಕು. ಆರೋಗ್ಯ ಶಿಬಿರಗಳ ಬಗ್ಗೆ ಜನತೆ ತಪ್ಪು ಕಲ್ಪನೆಯಿಂದ ಹೊರಬಂದು ಶಿಬಿರದಲ್ಲಿ ಭಾಗವಹಿಸಿ, ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗಬೇಕು.
ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪ್ರಭು ಕೆ. ಸಾಹುಕಾರ್ ಮಾತನಾಡಿ, ಕಳೆದ ೫ ದಶಕಗಳಿಂದ ಸೊರಬದಲ್ಲಿ ಡಾ|| ಎಂ.ಕೆ.ಭಟ್ ಮತ್ತು ಡಾ|| ಸೈಯದ್ ಹಾಷಂ ರವರು ನಿರಂತರವಾಗಿ ವೈದ್ಯಕೀಯ ಸೇವೆಯನ್ನು ನೀಡುತ್ತಿರುವುದು ಅಭಿನಂದನಾರ್ಹ. ಅಲ್ಬೀರ್ ಸೇವಾ ಟ್ರಸ್ಟ್ನ ಕಾರ್ಯ ಶ್ಲಾಘನೀಯ ಎಂದರು.
ಪುರಸಭೆ ಸದಸ್ಯೆ ಸುಲ್ತಾನ ಬೇಗಂ, ಟ್ರಸ್ಟ್ ಉಪಾಧ್ಯಕ್ಷ ಮಹ್ಮದ್ ಸಾಬ್, ಕಾರ್ಯದರ್ಶಿ ಜಹಿರುದ್ದೀನ್, ಲಿಯಾಖತ್ ಉಲ್ಲಾ ಷರೀಪ್, ಮಹ್ಮದ್ ಯಾಸೀನ್, ಡಾ.ಸಮಿಯಾ ಸುಲ್ತಾನ, ಡಾ. ಶೃತಿ, ಡಾ.ಅಜಿತ್ ಕುಮಾರ್, ಡಾ.ಪರ್ವೀನ್ ಫಾತಿಮಾ, ಡಾ.ಶಬ್ರೀನ್ ತಾಜ್ ಮತ್ತಿತರರಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ಪ್ರಭು ಕೆ. ಸಾಹುಕಾರ್, ಡಾ.ಎಂ.ಕೆ.ಭಟ್, ಡಾ.ಸೈಯದ್ ಹಾಷಂ, ಡಾ.ಇರ್ಫಾನ್ ಅಹ್ಮದ್, ಸಬ್ ಇನ್ಸ್ಪೆಕ್ಟರ್ ನಾಗರಾಜ್, ನ್ಯಾಯವಾದಿ ಸೈಯದ್ ಅಬ್ದುಲ್ ರೆಹಮಾನ್, ಎಂ. ಬಷೀರ್ ಅಹ್ಮದ್, ಎಸ್.ಬಿ. ಹಸನ್, ಸುಜಾಯತ್ ಉಲ್ಲಾ, ನೂರ್ ಅಹ್ಮದ್, ಅತಿಕುರ್ ರೆಹಮಾನ್, ವಜೀರ್ ಅಹ್ಮದ್, ಮಹಮ್ಮದ್ ಸಾಜಿದ್ ಅವರನ್ನು ಸನ್ಮಾನಿಸಲಾಯಿತು.
ವರದಿ: ಸಂದೀಪ ಯು.ಎಲ್ ಸೊರಬ