‘ನಮ್ಮ ಪರೀಕ್ಷಾ ಕೊಠಡಿಗೆ ಯಾರು ಬೇಕಾದರೂ ಬರಲಿ ನೀವು ಮಾತ್ರ ಬರಬೇಡಿ ಸರ್…!?’
‘ನಮ್ಮ ಪರೀಕ್ಷಾ ಕೊಠಡಿಗೆ ಯಾರು ಬೇಕಾದರೂ ಬರಲಿ ನೀವು ಮಾತ್ರ ಬರಬೇಡಿ ಸರ್…!?’
‘ಪರೀಕ್ಷೆ’ ಇದನ್ನು ಕಂಡು ಹಿಡಿದವನು ಯಾರು? ಅವನು ಸಿಗಲಿ ಒಂದು ಕೈ ನೋಡ್ಕೊಂಡು ಬಿಡ್ತಿನಿ… ಅಂತ ಎಲ್ಲಾ ವಿದ್ಯಾರ್ಥಿಗಳಿಗೂ ಜೀವನದಲ್ಲಿ ಒಮ್ಮೆಯಾದರೂ ಅನ್ನಿಸಿಯೇ ಇರುತ್ತದೆ. ಆದರೆ, ಅದರ ಬಗ್ಗೆ ಮಾಹಿತಿ ಸಿಗೋದು ಕಡಿಮೆಯೇ… ಒಮ್ಮೊಮ್ಮೆ ಅನಿಸುತ್ತದೆ ‘ನಮ್ಮ ಮೆದುಳು ದಿನದ 24ಗಂಟೆಯೂ ಚಟುವಟಿಕೆಲಿ ಇರತ್ತೆ. ಪರೀಕ್ಷಾ ಕೊಠಡಿಗೆ ಬಂದರೆ ಸಾಕು ಕೈ ಕೊಡುತ್ತೆ’ ಅಂತ ಕೆಲವರಿಗೆ ಈ ರೀತಿಯ ಅನುಭವವೂ ಆಗಿರಬಹುದು.
ಕಿರುಪರೀಕ್ಷೆ ಬಂತು ಅಂದಾಕ್ಷಣ ಅದಕ್ಕೆ ಕಡಿಮೆ ಪಾಠ-ಪದ್ಯಗಳು ಇರೋದರಿಂದ ಕೆಲವರು ಚೆನಾಗಿ ಓದಬಹುದು ಅನ್ನುವ ಯೋಚನೆ. ಕೆಲವರಿಗೆ ಅದನ್ನು ಓದೋದು ಕಷ್ಟ ಅಂತ ‘ಕಾಪಿಚೀಟಿ’ ಬೇರೆ ತಯಾರು ಮಾಡಿಕೊಂಡಿರುತ್ತಾರೆ. ಅಂತವರು ಸಿಕ್ಕಿಹಾಕಿಕೊಂಡಾಗ ‘ಈ ಚೀಟಿ ಬರೆದುಕೊಂಡು ಕೂರುವ ಬದಲು ಅದೇ ಸಮಯವನ್ನು ಸರಿಯಾಗಿ ಗಮನವಿಟ್ಟು ಓದಿ, ಬರೆದು ಕಲಿಯಬಹುದಿತ್ತಲ್ಲ? ಎಂದರೆ ಅದಕ್ಕೆ ಪ್ರತ್ಯುತ್ತರವಿರುವುದಿಲ್ಲ.
ಪರೀಕ್ಷಾ ಕೊಠಡಿಯಲ್ಲಿ ಒಂದು ರೀತಿಯ ನೀರವ ಮೌನ ಆವರಿಸಿರುತ್ತದೆ. ಎಲ್ಲರೂ ಬರೆಯುತ್ತಲೇ ಇರುತ್ತಾರೆ. ಆದರೆ ಆ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವಾಗ ತಿಳಿಯುತ್ತದೆ ಬರೀ ಪ್ರಶ್ನೆಗಳನ್ನೇ ಬರೆದಿದ್ದಾರೆ ಅಂತ. ಇನ್ನೂ ಕೆಲವರು ಪತ್ರಿಕೆ ಕೊಟ್ಟು ಕೆಲವು ಸಮಯದ ನಂತರ ‘ಸರ್ ಶೀಟ್ ಕೊಡಿ’ ಎಂದಾಗ ಆ ಕೊಠಡಿಯಲ್ಲಿದ್ದ ಎಲ್ಲರ ಕಣ್ಣುಗಳು ಆ ವಿದ್ಯಾರ್ಥಿಯತ್ತಲೇ ಇರುತ್ತದೆ. ‘ಇನ್ನೂ ನಮ್ಮದು ಒಂದು ಪುಟ ಕೂಡ ಉತ್ತರ ಬರೆದಿಲ್ಲ, ಇವನು ಆಗಲೇ ಮತ್ತೊಂದು ಶೀಟ್ ಕೇಳ್ತಾ ಇದಾನಲ್ಲ’ ಅಂತ ಅಂದುಕೊಳ್ಳುವರು. ಇವನು ಪರೀಕ್ಷೆ ಬರೀತಾ ಇದಾನೋ ಅಥವಾ ಕಾಪೀಪುಸ್ತಕದ ರೀತಿಯಲ್ಲಿ ಸಾಲುಸಾಲು ಬಿಟ್ಟು ಬರೀತಾ ಇದಾನೋ? ಅಂತ ಇನ್ನೂ ಕೆಲವರು ಅಂದುಕೊಳ್ಳುತ್ತಿದ್ದರು. ಯಾರಾದರೂ ‘ಶೀಟ್ ಬೇಕಿದೆ’ ಎಂದಾಕ್ಷಣ ಎಲ್ಲರ ಕಣ್ಣು ಅವರತ್ತಲೇ ಇರುತ್ತಿದ್ದದ್ದಂತೂ ಸುಳ್ಳಲ್ಲ.
ಪ್ರಶ್ನೆ ಪತ್ರಿಕೆ ಕೊಟ್ಟು ಮಕ್ಕಳಿಗೆ ‘ಪ್ರಶ್ನೆಯ ಸಂಖ್ಯೆಯನ್ನು ಹಾಕಿ ಉತ್ತರ ಮಾತ್ರ ಬರೆಯುತ್ತ ಹೋಗಿ’ ಎಂದಾಗ ಕೆಲವು ಮಕ್ಕಳು ತಮಗೆ ಗೊತ್ತಿರುವ ಉತ್ತರಗಳನ್ನು ಮೊದಲು ಬರೆಯಲು ಮುಂದಾಗುತ್ತಿದ್ದರು. ಇನ್ನೂ ಕೆಲವರು ಉತ್ತರ ಗೊತ್ತಿಲ್ಲದೇ ಇದ್ದಾಗ ಪ್ರತೀ ಪ್ರಶ್ನೆಗಳನ್ನೂ ಬರೆಯುತ್ತಿದ್ದರು. ಇನ್ನೂ ಕೆಲವರು ಏನು ಬರೆಯುವುದೋ ಗೊತ್ತಿಲ್ಲ ಎಂಬಂತೆ ಸುಮ್ಮನೆ ಬರೆಯುವವರ ಹಾಗೇ ನಟಿಸುತ್ತ ಸುತ್ತಲೂ ಅವರುಇವರನ್ನು ನೋಡುತ್ತ ಕುಳಿತಿರುತ್ತಿದ್ದರು. ಆ ತರಗತಿಯಲ್ಲಿದ್ದ ಶಿಕ್ಷಕರು ಓಡಾಡುತ್ತಿದ್ದರೆ, ಎಲ್ಲಿಯಾದರೂ ನನ್ನ ಪಕ್ಕ ಬಂದು ನಿಂತರೆ? ಎಂಬ ಭಯ ಕೆಲವರಿಗೆ.
ಮೊದಲು ಪರೀಕ್ಷಾ ಕೊಠಡಿ ಯಾವುದು? ಎಂದು ಹುಡುಕುವುದು ಆ ಕೊಠಡಿಗೆ ಹೋದಾಗ ಯಾವ ಜಾಗ ಎಂದು ಹುಡುಕುವುದು? ಮೊದಲ ಬೆಂಚ್ನಲ್ಲಿ ಇದ್ದರಂತೂ ಇನ್ನೂ ಹೆದರಿಕೆ. ಕಾರಣ ಶಿಕ್ಷಕರು ಹೆಚ್ಚಾಗಿ ಮೊದಲ ಬೆಂಚ್ ಸಮೀಪದಲ್ಲಿಯೇ ಇರುತ್ತಾರೆ ಹಾಗಾಗಿ ಎಂಬ ಕಾರಣ. ಪರೀಕ್ಷಾ ಕೊಠಡಿಯಲ್ಲಿ ಅಕ್ಕಪಕ್ಕದಲ್ಲಿ ತಮಗೆ ಪರಿಚಿತದ ಹಿರಿಯ-ಕಿರಿಯ ವಿದ್ಯಾರ್ಥಿಗಳಿದ್ದರೆ ಸಣ್ಣಪುಟ್ಟ ಉತ್ತರಗಳನ್ನು ಕೇಳಲು ಅಥವಾ ಹೇಳಿಕೊಡಲು ಅನುಕೂಲವಾಗುತ್ತದೆ ಎಂದುಕೊಳ್ಳುತ್ತಿದ್ದರು. ಯಾರಾದರೂ ಓದುವ ವಿದ್ಯಾರ್ಥಿಗಳು ಪಕ್ಕದಲ್ಲಿ ಬಂದರಂತೂ ಎಲ್ಲಿಲ್ಲದ ಖುಷಿ. ತನಗೆ ಗೊತ್ತಿಲ್ಲದ ಉತ್ತರವನ್ನು ಕೇಳಿಬರೆಯಬಹುದು ಎಂಬ ಆಲೋಚನೆ. ದುರಾದೃಷ್ಟಕ್ಕೆ ಉತ್ತರ ಹೇಳಿಕೊಡುವವರಿಗಿಂತ ಉತ್ತರ ಕೇಳುವವರೇ ಪಕ್ಕದಲ್ಲಿ ಬರುತ್ತಿದ್ದರು.
ಪರೀಕ್ಷಾ ಕೊಠಡಿಗೆ ಹೋಗಿ ಓದುತ್ತಾ ಕುಳಿತಾಗ ‘ಬೆಲ್’ ಶಬ್ಧ ಕೇಳಿದಾಕ್ಷಣ ಪುಸ್ತಕ, ನೋಟ್ಸ್ ಎಲ್ಲವನ್ನೂ ಹೊರಗಿಟ್ಟು ಬಂದು ಬರವಣಿಗೆಯ ಸಾಮಗ್ರಿಗಳನ್ನು ಹಿಡಿದುಕೊಂಡು ತಮ್ಮ ಸ್ಥಳಕ್ಕೆ ಬಂದು ಕುಳಿತಾಗ ಯಾವ ಶಿಕ್ಷಕರು ಬರುತ್ತಾರೋ ಎಂದು ಕಾತುರ. ಅವರ ಪಾಡಿಗೆ ಅವರು ಇರುವ ಶಿಕ್ಷಕರು ಬಂದರೆ ಖುಷಿಯೋ ಖುಷಿ. ಹಿಂದೆಮುಂದೆಯೋ ಅಕ್ಕಪಕ್ಕದಲ್ಲಿ ಇರುವವರೊಂದಿಗೆ ಒಂದೆರಡು ಪ್ರಶ್ನೆಗಳಿಗೆ ಉತ್ತರ ಕೇಳುವುದಕ್ಕೆ ತಯಾರಿ ಸಿದ್ಧತೆಗಳು ಇರುತ್ತವೆ. ಆ ಶಿಕ್ಷಕರ ಬಳಿಗೆ ಇನ್ನಾರಾದರೂ ಶಿಕ್ಷಕರು ಬಂದರೆ, ಆಯಾಆಂಟಿ ಬಂದು ಏನಾದರು ವಿಷಯವನ್ನು ಹೇಳುವುದೋ, ಕೇಳುವುದೋ ಮಾಡುವಾಗ ಸಿಕ್ಕ ಸಣ್ಣ ಸಮಯವನ್ನೇ ಸಂಪತ್ತು ಎಂದು ಭಾವಿಸಿ ಅವರಿವರ ಜೊತೆಗೆ ಒಂದಿಷ್ಟು ಪ್ರಶ್ನೆಗಳಿಗೆ ಉತ್ತರ ಕೇಳಿ ಪಡೆಯುವ ರೀತಿಯಂತೂ ರೋಚಕ. ದೂರದಲ್ಲಿ ಗೆಳೆಯ/ಗೆಳತಿಯರಿದ್ದರೆ ಕೈಸನ್ನೆಯ ಮೂಲಕ ಬಹುಆಯ್ಕೆ ಪ್ರಶ್ನೆಗಳಿಗೆ ಉತ್ತರ ಕೇಳುವುದು. ಅಪ್ಪೀತಪ್ಪೀ ಅದನ್ನು ಶಿಕ್ಷಕರು ನೋಡಿದರೆ ಅದೇ ಕೈಯನ್ನು ಸುಮ್ಮನೆ ಆಡಿಸುತ್ತ ಏನೋ ಉತ್ತರ ಯೋಚನೆ ಮಾಡುವಂತೆ ನಟಿಸುವ ನಟನಟಿಯರಿಗೇನು ಕಮ್ಮಿ ಇಲ್ಲ.
ಅನೇಕ ಬಾರಿ ಕೆಲವು ಮಕ್ಕಳು ಹೇಳಿದ್ದರು, ‘ನಮ್ಮ ಪರೀಕ್ಷಾ ಕೊಠಡಿಗೆ ಯಾರು ಬೇಕಾದರೂ ಬರಲಿ ನೀವು ಮಾತ್ರ ಬರಬೇಡಿ ಸರ್’ ಎಂದಿದ್ದರು. ಯಾವ ಕಾರಣಕ್ಕಾಗಿ ಹೀಗೆ ಎಂದರೆ ‘ಬೇರೆ ಯಾವ ಶಿಕ್ಷಕರು ಬಂದರೆ ಒಂದಾದರೂ ಉತ್ತರ ಯಾರ ಹತ್ರನಾದರೂ ಹೇಳಿಸಿಕೊಂಡು ಬರೆಯೋ ಪ್ರಯತ್ನ ಮಾಡಬಹುದೇನೋ ಆದರೆ, ನೀವು ಬಂದರೆ ತಿರುಗಿದರೂ ಬೈತೀರ ಹಾಗಾಗಿ’ ಎಂದು ಹೇಳಿದ್ದರು. ಇನ್ನೂ ಕೆಲವು ವಿದ್ಯಾರ್ಥಿಗಳು ‘ನೀವು ನಮ್ಮ ಕೊಠಡಿಗೆ ಬಂದರೆ ಖುಷಿಯಾಗುತ್ತದೆ ಕಾರಣ ಆರಾಮಾಗಿ ಪರೀಕ್ಷೆ ಬರೆಯಬಹುದು. ಇಲ್ಲದೇ ಹೋದರೆ ಅವರುಇವರು ಉತ್ತರ ಕೇಳ್ತಾನೇ ಇರ್ತಾರೆ. ನೀವು ಬಂದರೆ ಏನೂ ಕೇಳಲ್ಲ ಅನ್ನೋದೇ ಸಮಾಧಾನ’. ಎನ್ನುವ ಮಾತುಗಳನ್ನು ಕೇಳಿದಾಗ ‘ನನ್ನ ಕಂಡರೆ ಬೈಕೊಳ್ಳುವವರು ಒಂದೆಡೆಯಾದರೆ ನಾನು ಬಂದರೆ ಒಳ್ಳೆಯದು ಅಂದುಕೊಳ್ಳುವ ಮಕ್ಕಳೂ ಇದ್ದಾರೆ ಎನ್ನುವುದೇ ಒಂತರ ಸಮಾಧಾನ’ ಎನಿಸುತ್ತದೆ.
ಇತ್ತೀಚೆಗೆ ಅರ್ಧವಾರ್ಷಿಕ ಪರೀಕ್ಷೆಯ ಸಮಯದಲ್ಲಿ ಒಂದು ಕೊಠಡಿಗೆ ಬೆಲ್ ಆದಾಗ ಹೋದೆ. ಮಕ್ಕಳೆಲ್ಲ ಧ್ಯಾನದಲ್ಲಿದ್ದರು ‘ಗುಣವತಿ’ ಎಂಬ ವಿದ್ಯಾರ್ಥಿನಿ ಮೂರನೇ ಬೆಂಚ್ನಲ್ಲಿದ್ದಳು. ನಾನು ಹೋಗಿ ಮೊದಲ ಬೆಂಚ್ ಸಮೀಪದಲ್ಲಿ ನಿಂತೆ. ಮತ್ತೊಂದು ಬೆಲ್ ಆದಾಗ ಧ್ಯಾನ ಮುಗಿಸಿ ಎದ್ದು ನಿಂತು ಪ್ರಾರ್ಥನೆ ಮಾಡತೊಡಗಿದರು. ಇವಳು ಕಣ್ಣುಬಿಟ್ಟು ನೋಡಿದರೆ ನಾನು ನಿಂತದ್ದನ್ನು ಕಂಡು ಅಳುತ್ತಲೇ ಪ್ರಾರ್ಥನೆ ಮಾಡತೊಡಗಿದಳು. ಪ್ರಾರ್ಥನೆ ನಿಂತಿತ್ತು. ಆದರೆ ಇವಳ ಅಳು ಹಾಗೆಯೇ ಇತ್ತು. ಕಣ್ಣೀರು ಮಾತ್ರ ಬರುತ್ತಲೇ ಇತ್ತು. ಅವಳ ನೋಡಿ ನಕ್ಕಿದ್ದಾಯಿತು. ‘ಸಮಾಧಾನ’ ಎಂದು ಹೇಳಿ ಎಲ್ಲರಿಗೂ ಕುಳಿತುಕೊಳ್ಳಲು ತಿಳಿಸಿದೆ. ಎಲ್ಲರಿಗೂ ಪ್ರಶ್ನೆ ಪತ್ರಿಕೆಯನ್ನು ವಿತರಿಸಿ ಉತ್ತರ ಬರೆಯಲು ತಿಳಿಸಿದೆ. ಇವಳನ್ನು ನೋಡಿದರೆ ‘ಪಾಪ’ ಎನಿಸುತ್ತಿತ್ತು. ಸ್ವಲ್ಪ ಸಮಾಧಾನ ಮಾಡಿ. ಎಷ್ಟು ಗೊತ್ತಿದೆಯೋ ಅಷ್ಟು ಉತ್ತರ ಬರೀ ಅಂದೆ. ನನ್ನ ನೋಡಿ ಅವಳಿಗೆ ಏನು ಹೇಳಬೇಕೋ ಅಂತ ಗೊತ್ತಾಗಲೇ ಇಲ್ಲ. ಆಗ ಬಹುಶಃ ನನ್ನ ನೋಡಿ ಇನ್ನಷ್ಟು ಸಿಟ್ಟಾಗಿದ್ದಳು ಎನಿಸುತ್ತಿತ್ತು. ಇಡೀ ಕೊಠಡಿಯಲ್ಲಿರುವವರಿಗೆ ಇವಳ ಜೊತೆಗೆ ನಾನು ಮಾತನಾಡುವ ರೀತಿ ಎಲ್ಲರಿಗೂ ವಿಶೇಷ ಎನಿಸುತ್ತಿತ್ತು. ಸುಮ್ಮನೆ ಕೇಳಿದೆ, ‘ಎಲ್ಲಾ ಪ್ರಶ್ನೆಗೂ ಉತ್ತರ ಬರೆದ್ಯಾ?’ ಎಂದು. ಅದಕ್ಕೆ ತುಂಬಾ ಖಾಲಿ ಬಿಟ್ಟಿದಿನಿ ಅಂದಳು. ಇಡೀ ತರಗತಿಯಲ್ಲಿದ್ದ ವಿದ್ಯಾರ್ಥಿಗಳಿಗೆ ಇವಳು ಅತ್ತಿದ್ದ ವಿಷಯ ಗೊತ್ತಾಗಿ ಎಲ್ಲರೂ ನಕ್ಕರು.
ಪರೀಕ್ಷೆ ಮುಗಿಸಿದ ನಂತರ ಸಿಕ್ಕಾಗ ಇವಳ ಮತ್ತೊಬ್ಬ ಗೆಳತಿಯ ಬಳಿ ವಿಚಾರಿಸಿದಾಗ ಇವಳು ಇವಳ ಮುಂದಿದ್ದ ಗೆಳತಿ ಇಬ್ಬರೂ ಒಂದಿಷ್ಟು ಪಾಠಗಳನ್ನು ವಿಭಾಗ ಮಾಡಿಕೊಂಡು ಕಲಿತುಕೊಂಡು ಬಂದು ಪರೀಕ್ಷೆಯಲ್ಲಿ ಉತ್ತರ ಹೇಳಿಕೊಡುವ ಸಿದ್ಧತೆ ಮಾಡಿಕೊಂಡಿದ್ದರು. ಪಾಪ ಅವಳ ದುರಾದೃಷ್ಟಕ್ಕೆ ಆ ದಿನ ನಾನು ಆ ತರಗತಿಗೆ ಹೋದಾಗ ಅಂದುಕೊಂಡ ಯೋಜನೆ ಉಲ್ಟಾ ಆಗಿದ್ದಕ್ಕೆ ಬೇಸರದಿಂದ್ದಳು.
ಹಲವು ದಿನಗಳ ನಂತರ ಅವಳು ಸಿಕ್ಕಾಗ ‘ಸರ್ ಪರೀಕ್ಷೆ ಸಮಯದಲ್ಲಿ ಪ್ಲೀಸ್ ನೀವು ಮಾತ್ರ ನಮ್ಮ ರೂಂಗೆ ಬರಬೇಡಿ, ಅವತ್ತು ಪರೀಕ್ಷೆ ಚೆನಾಗಿ ಆಗಲೇ ಇಲ್ಲ’ ಎಂದು ಎಲ್ಲವನ್ನೂ ಹೇಳಿಕೊಂಡಳು. ನಂತರ ನಾನೂ ಹೇಳಿದೆ, ‘ಸರಿ ಅವರು ಇವರು ಉತ್ತರ ಹೇಳಿಕೊಡುತ್ತಾರೆ ಎಂದು ನೀನು ಓದುವುದನ್ನೇ ನಿಲ್ಲಿಸಿದರೆ ಹೇಗೆ?’ ನಾಳೆ ಎಸ್.ಎಸ್.ಎಲ್.ಸಿ ಪರೀಕ್ಷೆ ಸಮಯದಲ್ಲಿ ನಿನ್ನ ಅಕ್ಕಪಕ್ಕದಲ್ಲಿ ಬೇರೆ ಯಾವುದೋ ಶಾಲೆಯ ವಿದ್ಯಾರ್ಥಿಗಳಿರುತ್ತಾರೆ. ಅವರು ಯಾರೂ ನಿನ್ನ ಸಹಾಯಕ್ಕೆ ಬರುವುದಿಲ್ಲ. ನಿನ್ನ ಮೇಲೆ ನಿನಗೆ ನಂಬಿಕೆ ಇರಲಿ. ಇತರರ ಮೇಲೆ ನೀನು ಅವಲಂಬಿತಳಾದರೆ ನಿನ್ನ ಬುದ್ಧಿ ಸಾಮರ್ಥ್ಯದ ಬಗ್ಗೆ ನಿನಗೆ ತಿಳಿಯುವುದಿಲ್ಲ. ನಿನ್ನನ್ನು ನೀನು ಸರಿಯಾಗಿ ಅರ್ಥ ಮಾಡ್ಕೊ. ಇನ್ನು ಮುಂದೆ ಪರೀಕ್ಷೆಲಿ ನೀನೇ ಓದಿಕೊಂಡು ಬಂದು ಬರೀ, ಉತ್ತರ ಗೊತ್ತಿಲ್ಲದೇ ಹೋದರೂ ಹಾಗೇ ಖಾಲಿ ಬಿಡು. ಆದರೆ ಬೇರೆಯವರ ಬಳಿ ಉತ್ತರ ಕೇಳಿ ಬರಿಯೋ ಅಭ್ಯಾಸ ಮಾತ್ರ ಇಟ್ಕೋಬೇಡ’ ಎಂಬ ಒಂದಿಷ್ಟು ಬುದ್ಧಿಮಾತುಗಳನ್ನು ಹೇಳಿ ಕಳಿಸಿದ್ದಾಯಿತು. ವಿದ್ಯಾರ್ಥಿನಿ ಜೀವನದ ಒಂದು ಕ್ಷಣ ಇತರರ ಮೇಲೆ ಅವಲಂಬಿತರಾದರೆ ನಮ್ಮ ಸಾಮರ್ಥ್ಯದ ಅರಿವು ಆಗುವುದೇ ಇಲ್ಲ. ಹಾಗಾಗಿ ವಿದ್ಯಾರ್ಥಿ ಬದುಕಲ್ಲಿ, ಪರೀಕ್ಷೆಯ ಸಮಯದಲ್ಲಿ ನಿಮ್ಮ ಮೇಲೆ ನೀವು ಅವಲಂಬಿತರಾಗಿ. ನಿಮ್ಮ ಸಾಮರ್ಥ್ಯದ ಬಗ್ಗೆ ಅರಿವಿರಲಿ…
ಚಿತ್ರ ರಚನೆ : ಚೈತ್ರ.ಕೆ.ಎಸ್ 9ನೇ ತರಗತಿ, ಸಾಂದೀಪನಿ ಆಂಗ್ಲ ಶಾಲೆ, ಶಿವಮೊಗ್ಗ