ತಾಲ್ಲೂಕಿನಲ್ಲಿ ಬಕ್ರೀದ್ ಹಬ್ಬದ ಸಮಯದಲ್ಲಿ ಗೋಹತ್ಯೆ ನಡೆಯದಂತೆ ತಡೆಯಲು ಮನವಿ.
(SHIVAMOGA): ಸಾಗರ ತಾಲೂಕಿನಲ್ಲಿ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಗೋಹತ್ಯೆ ನಡೆಯದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಜಿಲ್ಲಾದ್ಯಂತ ಪೊಲೀಸ್ ಇಲಾಖೆ ಗೋಹತ್ಯೆ ತಡೆಯಲು ವಿಶೇಷ ಪ್ರಯತ್ನ ನಡೆಸುತ್ತಿರುವುದರಿಂದ ಕೆಲ ಪ್ರದೇಶದಲ್ಲಿ ಗೋಹತ್ಯೆ ನಿಯಂತ್ರಣದಲ್ಲಿದೆ. ಜೂ. 17ರಂದು ಬಕ್ರೀದ್ ಹಬ್ಬವಿದ್ದು, ಕಳೆದ ವರ್ಷ ಇದೇ ವೇಳೆ ಜಿಲ್ಲೆಯಲ್ಲಿ ಅತಿಹೆಚ್ಚು ಗೋಹತ್ಯಾ ಪ್ರಕರಣಗಳು ದಾಖಲಾಗಿದ್ದವು. ಈ ವರ್ಷ ಅಂತಹ ಘಟನೆ ನಡೆಯದಂತೆ ಇಲಾಖೆ ಮುಂಜಾಗೃತಾ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮುಸ್ಲಿಂ ಬಾಹುಳ್ಯ ಇರುವ ತಾಲೂಕಿನ ಹಲವು ಭಾಗಗಳಲ್ಲಿ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ನೂರಾರು ಗೋವುಗಳನ್ನು ಹತ್ಯೆ ಮಾಡಲು ತಂದು ಕಟ್ಟಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಗೋವಿನ ಮಾಲಿಕತ್ವದ ಪರವಾನಗಿಗಳು ಅವರ ಬಳಿ ಇದೆಯೋ, ಇಲ್ಲವೋ ಎಂಬುದನ್ನು ಪರಿಶೀಲಿಸಿ ಇಲಾಖೆ ಗೋವುಗಳ ರಕ್ಷಣೆಗೆ ಮುಂದಾಗಬೇಕು. ಮಾಲಿಕತ್ವ ಪರವಾನಗಿ ಇಲ್ಲದವರ ವಿರುದ್ಧ ಸೂಕ್ತ ಕಾನೂನುಕ್ರಮ ಜರುಗಿಸುವುದು ಮತ್ತು ಗೋವುಗಳ ರಕ್ಷಣೆ ಮಾಡಬೇಕು. ಮುಸ್ಲಿಮರು ಹೆಚ್ಚಿರುವ ಪ್ರದೇಶಗಳಲ್ಲಿ, ಪ್ರಮುಖ ರಸ್ತೆಗಳಲ್ಲಿ ಚೆಕ್ಪೋಸ್ಟ್ ನಿರ್ಮಿಸಿ ಗೋವುಗಳ ಅಕ್ರಮ ಸಾಗಾಣಿಕೆ ನಡೆಯದಂತೆ ತಡೆಯಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ವೇದಿಕೆ ಜಿಲ್ಲಾ ಸಹ ಸಂಚಾಲಕ ಕೆ.ಎಚ್. ಸುಧೀಂದ್ರ, ಪ್ರಮುಖರಾದ ಕೋಮಲ್ ರಾಘವೇಂದ್ರ, ನಂದೀಶ್, ರಾಘವೇಂದ್ರ ಕಾಮತ್, ಗಣೇಶ್ ಮೊದಲಾದವರಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ