ಅಡಕೆ ಮಾನ ತೆಗೆಯುತ್ತಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಾಗರದ ಉಪ ವಿಭಾಗ ಅಧಿಕಾರಿಗಳಿಗೆ ಮನವಿ.
(SHIVAMOGA): ಸಾಗರ ಇತ್ತೀಚೆಗೆ ಮಾರುಕಟ್ಟೆಗೆ ಕಲಬೆರಕೆ ಹಾಗೂ ಕಳಪೆ ಅಡಕೆ ವ್ಯಾಪಕವಾಗಿ ಪ್ರವೇಶ ಮಾಡುತ್ತಿದೆ. ಇದಕ್ಕೆ ಬೆಳೆಗಾರರು ಕಾರಣರಲ್ಲ. ಬದಲಾಗಿ ಕೆಲ ಮಧ್ಯವರ್ತಿಗಳು ಕಲಬೆರಕೆ ಅಡಕೆಯನ್ನು ಮಾಡಿ ಇಡೀ ಬೆಳೆಗಾರ ಸಮುದಾಯಕ್ಕೇ ಅನ್ಯಾಯ ಮಾಡುತ್ತಿದ್ದಾರೆ. ಇದನ್ನು ತಡೆದು, ಅಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ವ.ಶಂ. ರಾಮಚಂದ್ರ ಭಟ್ ಹೇಳಿದರು.
ಮಾರುಕಟ್ಟೆಗೆ ಬರುತ್ತಿರುವ ಕಲಬೆರಕೆ ಅಡಕೆ ಆವಕ ತಡೆಗಟ್ಟುವುದು, ಮಿಶ್ರಣ ಮಾಡಿ ಅಡಕೆ ಗುಣಮಟ್ಟ ಹಾಳುಮಾಡುತ್ತಿರುವವರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ಮಂಗಳವಾರ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ವತಿಯಿಂದ ಇಲ್ಲಿನ ಎಪಿಎಂಸಿ ಕಾರ್ಯದರ್ಶಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಈ ಪ್ರಾಂತ್ಯದಲ್ಲಿ ಸಾಂಪ್ರದಾಯಿಕ ಅಡಕೆ ಬೆಳೆಗಾರರಿದ್ದು, ಗುಣಮಟ್ಟದ ಮಾಲನ್ನು ಮಾರುಕಟ್ಟೆಗೆ ತರುತ್ತಿದ್ದಾರೆ. ಅವರು ಕಳಪೆ ಹಾಗೂ ಕಲಬೆರಕೆ ಅಡಕೆ ಮಾಡುತ್ತಿಲ್ಲ. ಮಧ್ಯವರ್ತಿಗಳು ಕಲಬೆರಕೆ ಮಾಲನ್ನು ತರುವ ಮೂಲಕ ಅಡಕೆಗೆ ಕೆಟ್ಟ ಹೆಸರು ತರುತ್ತಿದ್ದಾರೆ. ಕಳಪೆ ಅಡಕೆಗೆ ಬಣ್ಣ ಹಾಕಿ ಒಳ್ಳೆಯ ಮಾಲಿನೊಂದಿಗೆ ಸೇರಿಸಿ ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಇದನ್ನು ಸೇವಿಸುವವರ ಆರೋಗ್ಯ ಹಾಳಾಗುತ್ತಿದೆ. ಇಂಥ ಕೃತ್ಯ ಮಾಡುತ್ತಿರುವವರನ್ನು ಬಂಧಿಸಿ, 10-15 ದಿನದೊಳಗೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ ಸಂಘವು ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಚೇತನರಾಜ್ ಕಣ್ಣೂರು ಮಾತನಾಡಿ, ಬೆಳೆಗಾರರ ರಕ್ಷಣೆ ಮಾಡುವುದು ಸಂಘದ ಕರ್ತವ್ಯ. ಕಲಬೆರೆಕೆಯಿಂದ ಬೆಳೆಗಾರರೊಂದಿಗೆ ಅಡಕೆ ಗುಣಮಟ್ಟವೂ ಕೆಡುತ್ತಿದೆ. ಕೆಲ ಮಧ್ಯವರ್ತಿಗಳಿಂದ ಇಡೀ ಅಡಿಕೆ ಮಾರುಕಟ್ಟೆ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಅಧಿಕಾರಿಗಳು ಅಡಕೆಗೆ ಬಣ್ಣ ಬೆರೆಸುವವರು, ಕಳಪೆ ಮಾಲು ಮಿಶ್ರಣ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಆರ್.ಎಸ್.ಗಿರಿ, ಹಿರಿಯ ಸಹಕಾರಿ ಯು.ಎಚ್.ರಾಮಪ್ಪ ಮಾತನಾಡಿದರು. ಈ ವೇಳೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಖಂಡಿಕಾ, ಉಪಾಧ್ಯಕ್ಷ ಹೆಚ್.ಎಂ. ರವಿಕುಮಾರ್, ಟಿಎಪಿಸಿಎಂಸ್ ಅಧ್ಯಕ್ಷ ಲೋಕನಾಥ ಬಿಳಿಸಿರಿ, ಕೃಷ್ಣಮೂರ್ತಿ, ಲಕ್ಷ್ಮಿನಾರಾಯಣ, ನಾಗಾನಂದ, ರಾಜಶೇಖರ ಹಂದಿಗೋಡು, ಮುಂತಾದವರು ಇದ್ದರು.
ಮನವಿ ಸ್ವೀಕರಿಸಿ ಮಾತನಾಡಿದ ಎಪಿಎಂಸಿ ಕಾರ್ಯದರ್ಶಿ ನಿಜಲಿಂಗಪ್ಪ ತೋಟದ್, ಅಡಕೆಗೆ ಬಣ್ಣ ಹಾಕುವವರು ಮತ್ತು ಕಳಪೆ ಮಾಲನ್ನು ಮಿಶ್ರಿಣ ಮಾಡುವವರ ಬಗ್ಗೆ ಯಾವುದೇ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಅಂತಹ ಪ್ರಕರಣ ಕಂಡು ಬಂದಲ್ಲಿ ಕಾನೂನಿನ ಪ್ರಕಾರ ಕೈಗೊಳ್ಳಲು ನಮಗೆ ಅವಕಾಶ ಇದೆ. ಕಳಪೆ ಅಡಕೆ ಬಗ್ಗೆ ಮಾಹಿತಿ ಇದ್ದವರು ಕೂಡಲೇ 9008063378ಗೆ ಕರೆ ಮಾಡಿ ಎಂದು ಹೇಳಿದರು.
ವರದಿ: ರಾಘವೇಂದ್ರ ತಾಳಗುಪ್ಪ