ನ್ಯೂಸ್ಶಿವಮೊಗ್ಗ

ತಾಲೂಕಿನಾದ್ಯಂತ ಹೆಚ್ಚುತ್ತಿರುವ ಅಡಿಕೆ ಕಳ್ಳತನ ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಸಕರಿಗೆ ಮನವಿ

ತಾಲೂಕಿನಾದ್ಯಂತ ಹೆಚ್ಚುತ್ತಿರುವ ಅಡಿಕೆ ಕಳ್ಳತನ ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಸಕರಿಗೆ ಮನವಿ

(SHIVAMOGA): ಜಿಲ್ಲೆ ಹಾಗೂ ತಾಲೂಕಿನಲ್ಲಿ ಹೆಚ್ಚುತ್ತಿರುವ ಅಡಕೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವವರನ್ನು ಹಿಡಿದು, ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಶಾಸಕ ಗೋಪಾಲಕೃಷ್ಣ ಬೇಳೂರುರಿಗೆ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ವತಿಯಿಂದ ಶುಕ್ರವಾರ ಗಾಂಧಿನಗರದ ಅವರ ಸ್ವಗೃಹದಲ್ಲಿ ಮನವಿ ಸಲ್ಲಿಸಿದರು.


ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ವ.ಶಂ. ರಾಮಚಂದ್ರ ಭಟ್, ಕಳೆದ ಎರಡು ತಿಂಗಳಿನಿಂದ ಸಾಗರ, ಹೊಸನಗರ, ಸೊರಬ ಭಾಗದಲ್ಲಿ ಅಡಕೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಪ್ರಮುಖವಾಗಿ ಒಂಟಿ ಮನೆಗಳನ್ನು ಕೇಂದ್ರೀಕರಿಸಿ ಕಳ್ಳರು ದಾಳಿ ನಡೆಸುತ್ತಿದ್ದಾರೆ. ಈ ಸಂಬಂಧ ಈಗಾಗಲೆ ಡಿವೈಎಸ್‌ಪಿಯವರಿಗೂ ಮನವಿ ಸಲ್ಲಿಸಿದ್ದೇವೆ. ಶಾಸಕರೂ ಇದರಬಗ್ಗೆ ಹೆಚ್ಚಿನ ಗಮನ ವಹಿಸಿ ತಾಲೂಕಿನ ಆರ್ಥಿಕ ಬೆಳೆಯಾಗಿರುವ ಅಡಕೆಯನ್ನು ಬೆಳೆಗಾರರು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಹಕರಿಸಬೇಕು. ಬೆಳೆಗಾರರಿಗೆ ರಕ್ಷಣೆ ಕೊಡುವುದಲ್ಲದೆ, ಕಳ್ಳರನ್ನು ಹಿಡಿದು ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಿಸಿದ ಇಲಾಖೆಗಳಿಗೆ ಮಾತನಾಡಬೇಕೆಂದು ಒತ್ತಾಯಿಸಲಾಯಿತು.

ಸಂಘದ ಮನವಿಗೆ ಸ್ಪಂದಿಸಿದ ಶಾಸಕ ಗೋಪಾಲಕೃಷ್ಣ ಬೇಳೂರು, ಡಿವೈಎಸ್‌ಪಿ ಗೋಪಾಲಕೃಷ್ಣ ನಾಯಕ್‌ರೊಂದಿಗೆ ಚರ್ಚಿಸಿ, ಪರಿಸ್ಥಿತಿ ಗಂಭೀರವಾಗಿದೆ. ಕಳ್ಳತನ ತಡೆಯಲು ಇಲಾಖೆ ಗ್ರಾಮೀಣ ಭಾಗದಲ್ಲೂ ಪೊಲೀಸ್ ಕಾವಲು ಹಾಕಿ, ಕೂಡಲೇ ಕಳ್ಳರನ್ನು ಹಿಡಿಯುವಂತೆ ಸಲಹೆ ನೀಡಿದರು.
ಸಂಘದ ಕಾರ್ಯದರ್ಶಿ ರಾಜೇಂದ್ರ ಖಂಡಿಕಾ, ನಾಗಾನಂದ, ಯು.ಹೆಚ್. ರಾಮಪ್ಪ, ಈಳಿ ಶ್ರೀಧರ, ನಾರಾಯಣಮೂರ್ತಿ ಕಾನುಗೋಡು, ಎ.ಸಿ. ಮಂಜುನಾಥ, ಕುಗ್ವೆ ವೆಂಕಟಗಿರಿ, ಕೃಷ್ಣಮೂರ್ತಿ ಹಳೆ ಇಕ್ಕೇರಿ, ಅನಿಲ್ ಒಡೆಯರ್, ನಾಗರಾಜ್ ಪಟೇಲ್, ವೆಂಕಟೇಶ ಬೆಳೆಯೂರು, ಮೊದಲಾದ ಪ್ರಮುಖರು ಹಾಜರಿದ್ದರು.

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code