ಮನರಂಜನೆ

ನಾಟಕ ಪ್ರದರ್ಶನದ ಹಣ ದೇವಾಲಯಗಳಿಗೆ ವಿನಿಯೋಗ,
ವಿಘ್ನೇಶ್ವರ ಕಲಾ ಬಳಗದ ನೂತನ ಯೂಟ್ಯೂಬ್ ಚಾನೆಲ್ ಬಿಡುಗಡೆ

ನಾಟಕ ಪ್ರದರ್ಶನದ ಹಣ ದೇವಾಲಯಗಳಿಗೆ ವಿನಿಯೋಗ,ವಿಘ್ನೇಶ್ವರ ಕಲಾ ಬಳಗದ ನೂತನ ಯೂಟ್ಯೂಬ್ ಚಾನೆಲ್ ಬಿಡುಗಡೆ

(CHIKKAMAGALURU): ಬಾಳೆಹೊನ್ನೂರು: ರೇಣುಕನಗರದ ವಿಘ್ನೇಶ್ವರ ಕಲಾ ಬಳಗ ಮುಂದಿನ ದಿನಗಳಲ್ಲಿ ಸಾಮಾಜಿಕ ಕಳಕಳಿಯುಳ್ಳ ನಾಟಕಗಳನ್ನು ಪ್ರದರ್ಶನ ಮಾಡಿ ಅದರಿಂದ ಬಂದ ಹಣವನ್ನು ದೇವಾಲಯಗಳ ಜೀರ್ಣೋದ್ಧಾರ, ಪೂಜಾ ಸಾಮಾಗ್ರಿಗಳನ್ನು ಬಳಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಕಲಾ ಬಳಗದ ನಿರ್ದೇಶಕ ಬಿ.ಜಗದೀಶ್ಚಂದ್ರ ತಿಳಿಸಿದರು.

ರೇಣುಕನಗರದ ವಿಘ್ನೇಶ್ವರ ಕಲಾ ಬಳಗದ ವತಿಯಿಂದ ಆರಂಭಿಸಿರುವ ನೂತನ ಯೂಟ್ಯೂಬ್ ಚಾನೆಲ್ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ರಂಗಭೂಮಿ ಕಲೆಯನ್ನು ಜನರು ತಿರಸ್ಕಾರ ಮಾಡುತ್ತಿರುವ ಈ ದಿನಗಳಲ್ಲಿ ವಿಘ್ನೇಶ್ವರ ಕಲಾ ಬಳಗವು ವಿನೂತನ ಪ್ರಯೋಗಗಳೊಂದಿಗೆ ಸಾಮಾಜಿಕ ಕಳಕಳಿ, ಹಿಂದೂ ಸಮಾಜದ ಜಾಗೃತಿಗಾಗಿ ವಿಶೇಷ ನಾಟಕಗಳನ್ನು ವಿವಿಧೆಡೆ ಪ್ರದರ್ಶನ ಮಾಡಿ ಅದರಿಂದ ಬಂದ ಹಣವನ್ನು ದೇವಾಲಯಗಳಿಗೆ ವಿನಿಯೋಗಿಸಿ ದೇವಾಲಯಗಳ ಅಭಿವೃದ್ಧಿಗೆ ಕೈಜೋಡಿಸಲಾಗುವುದು.

ಈಗಾಗಲೇ ಕಲಾಬಳಗವು ಈ ಬಾರಿ ಜೈ ಶ್ರೀರಾಮ್ ಎಂಬ ನಾಟಕವನ್ನು ಯಶಸ್ವಿಯಾಗಿ ಎರಡು ಪ್ರದರ್ಶನವನ್ನು ಮಾಡಿದ್ದು, ಇದರಿಂದ ಬಂದ ಹಣವನ್ನು ಪ್ರತಿಭಾವಂತ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಹಲವಾರು ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುವುದರೊಂದಿಗೆ ರಂಗಭೂಮಿ ಕಲೆಯನ್ನು ಸಹ ಮುಂದೆ ತರುವ ಪ್ರಯತ್ನ ಮಾಡಲಾಗುವುದು ಎಂದರು.
ಕಲಾಬಳಗದ ಅಧ್ಯಕ್ಷ ಆರ್.ಡಿ.ಮಹೇಂದ್ರ ಮಾತನಾಡಿ, ಮಲೆನಾಡು ಭಾಗದಲ್ಲಿ ಕಳೆದ 3೦ ವರ್ಷಗಳಿಂದ ಹೆಸರು ಮಾಡಿರುವ ತಂಡ ವಿಘ್ನೇಶ್ವರ ಕಲಾ ಬಳಗವಾಗಿದ್ದು, ತಂಡದ ಎಲ್ಲಾ ಕಲಾವಿದರು ಯಾವುದೇ ಬೇಧ ಭಾವವಿಲ್ಲದೆ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಿರುವ ಕಾರಣ ಉತ್ತಮವಾದ ನಾಟಕ ಪ್ರದರ್ಶನವನ್ನು ವೇದಿಕೆಗಳಲ್ಲಿ ನೀಡುತ್ತಿದೆ.
ಕಳೆದ ಕೆಲ ವರ್ಷಗಳಿಂದ ಕೇವಲ ನವರಾತ್ರಿ ಉತ್ಸವಕ್ಕೆ ಸೀಮಿತವಾಗಿದ್ದ ನಾಟಕ ಪ್ರದರ್ಶನವನ್ನು ಈ ಬಾರಿ ಇತರೆ ವೇದಿಕೆಗಳಿಗೂ ವಿಸ್ತರಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರದರ್ಶನಗಳನ್ನು ನೀಡುವುದರೊಂದಿಗೆ ಅಭಿಮಾನಿಗಳಿಗೆ ರಂಗಭೂಮಿಯ ರಸದೌತಣವನ್ನು ನೀಡಲಾಗುವುದು ಎಂದರು.
ಹಿರಿಯ ಕಲಾವಿದ ಸಿ.ಎಸ್.ಮಹೇಶ್ಚಂದ್ರ ಮಾತನಾಡಿ, ಮುಂದುವರೆದ ಸ್ಪರ್ಧಾತ್ಮಕ ಯುಗದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಅತ್ಯವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ವಿಘ್ನೇಶ್ವರ ಕಲಾ ಬಳಗ ಈ ಬಾರಿ ನೂತನ ಯೂಟ್ಯೂಬ್ ಚಾನೆಲ್ ಮೂಲಕ ಸಾರ್ವಜನಿಕರು, ರಂಗಪ್ರೇಮಿಗಳ ಮನಮುಟ್ಟುವ ಪ್ರಯತ್ನ ಮಾಡುತ್ತಿದೆ.

ಕಲಾಬಳಗದಿಂದ ಇಷ್ಟು ವರ್ಷಗಳ ಕಾಲ ಪ್ರದರ್ಶನಗೊಂಡ ನಾಟಕಗಳನ್ನು ಇನ್ನು ಮುಂದೆ ಯೂಟ್ಯೂಬ್ ಚಾನೆಲ್‌ನಲ್ಲಿ ದಾಖಲಿಸಲಿದ್ದು, ಅದು ಶಾಶ್ವತವಾಗಿ ಅಲ್ಲಿ ಉಳಿಕೆಯಾಗಲಿದೆ. ಈ ಮೂಲಕ ರಂಗ ಕಲೆ, ಕಲಾಬಳಗದ ಪ್ರದರ್ಶನವನ್ನು ಪ್ರತಿಯೊಬ್ಬರಿಗೂ ತಲುಪುವಂತೆ ಮಾಡಲಾಗುವುದು ಎಂದರು.
ಹಿರಿಯ ಕಲಾವಿದ ರವೀಂದ್ರಾಚಾರ್ ಮಾತನಾಡಿ, ಈ ಬಾರಿ ನವರಾತ್ರಿ ಉತ್ಸವದ ಮೂಲಕ ಆರಂಭಗೊAಡ ಜೈ ಶ್ರೀರಾಮ್ ನಾಟಕವು ಅತ್ಯಂತ ಯಶಸ್ವಿಯಾಗಿದ್ದು, ಎರಡು ಪ್ರದರ್ಶನಗಳನ್ನು ನೀಡಲಾಗಿದೆ. ಈ ನಾಟಕವನ್ನು ಕನಿಷ್ಟ 15 ಪ್ರದರ್ಶನ ಮಾಡಬೇಕು ಎಂಬ ಉದ್ದೇಶ ಕಲಾ ಬಳಗಕ್ಕೆ ಇದೆ. ಕಲಾವಿದರ ಶ್ರಮದ ಪರಿಣಾಮ ನಾಟಕ ಯಶಸ್ವಿಯಾಗಿದೆ.
ಮುಂದಿನ ದಿನಗಳಲ್ಲಿ ವಿಘ್ನೇಶ್ವರ ಕಲಾ ಬಳಗದಿಂದ ರಂಗಭೂಮಿಗಾಗಿ ಮಹಿಳಾ ತಂಡವನ್ನು ಕಟ್ಟುವ ಉದ್ದೇಶವನ್ನು ಸಹ ಹೊಂದಲಾಗಿದೆ ಎಂದರು.
ಎನ್.ಆರ್.ಪುರ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಸ್.ಸಚಿನ್‌ಕುಮಾರ್ ವಿಘ್ನೇಶ್ವರ ಕಲಾ ಬಳಗದ ನೂತನ ಯೂಟ್ಯೂಬ್ ಚಾನೆಲ್ ಬಿಡುಗಡೆಗೊಳಿಸಿದರು. ಪತ್ರಕರ್ತರ ಸಂಘದ ಕಾರ್ಯದರ್ಶಿ ಬಿ.ಎಸ್.ನಾಗರಾಜಭಟ್, ಕಲಾ ಬಳಗದ ಸದಸ್ಯರಾದ ಕಿರಣ್‌ಕುಮಾರ್, ಅರುಣ್‌ಕುಮಾರ್, ಪ್ರಕಾಶ್ ಬನ್ನೂರು, ಭೂಮಿಕಾ, ಚಂದನಾ, ದೀಕ್ಷಿತಾ, ಸ್ಫೂರ್ತಿ, ಇಂದುಜಾ, ಇಶಾನ್, ಕಾರ್ತಿಕ್, ಪ್ರತೀಕ್ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *

Scan the code