ಕೋಲಾರನ್ಯೂಸ್

ಅರಾಭಿಕೊತ್ತನೂರು ಗ್ರಾಪಂ ಸಾಮಾನ್ಯ ಸಭೆ ಕೋರಂ ಫೈಟ್

ಅರಾಭಿಕೊತ್ತನೂರು ಗ್ರಾಪಂ ಸಾಮಾನ್ಯ ಸಭೆ ಕೋರಂ ಫೈಟ್

(KOLARA): ಕೋಲಾರ : ಅಧ್ಯಕ್ಷ-ಉಪಾಧ್ಯಕ್ಷರು ಹಾಗೂ ಪಿಡಿಒ ತಮಗೆ ಸರಿಯಾದ ರೀತಿಯಲ್ಲಿ ಸ್ಪಂದಿಸದೆ, ಅಗೌರವ ತೋರಿ, ನಿರ್ಲಲಕ್ಷಿಸುತ್ತಿದ್ದಾರೆಂದು ಆರೋಪಿಸಿ ಕೆಲ ಸದಸ್ಯರು ಸಾಮಾನ್ಯ ಸಭೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಅರಾಭಿಕೊತ್ತನೂರು ಗ್ರಾಪಂ ಕಚೇರಿಯಲ್ಲಿ ಬುಧವಾರ ಜರುಗಿತು.

ಸಾಮಾನ್ಯ ಸಭೆ ಬಹಿಷ್ಕರಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅರಾಭಿಕೊತ್ತನೂರು ಗ್ರಾಪಂ ಸದಸ್ಯ ನಂಜುಂಡಗೌಡ, ಕಳೆದ ಸುಮಾರು 5 ತಿಂಗಳ ಬಳಿಕ ಸಭೆ ನಡೆದಿದೆ. ಕಳೆದ 4-5 ಸಭೆಗಳಿಂದಲೂ ನಾವು ನೋಟೀಸ್ ಜತೆಗೆ ಖರ್ಚುವೆಚ್ಚಗಳ ಮಾಹಿತಿ ನೀಡುವಂತೆ ತಿಳಿಸಿದ್ದರೂ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಮೂರೂವರೆ ವರ್ಷಗಳಿಂದ ಉಪ ಸಮಿತಿಗಳನ್ನು ರಚನೆ ಮಾಡಿಲ್ಲ. ಪಿಡಿಒ, ಕಾರ್ಯದರ್ಶಿ, ಕರ ವಸೂಲಿಗಾರ ತಮಗೆ ಇಷ್ಟ ಬಂದಂತೆ ನಡೆದುಕೊಳ್ಳುತ್ತಿದ್ದಾರೆ. ನಾವು 11 ಮಂದಿ ಸದಸ್ಯರಿದ್ದು, ಯಾರಿಗೂ ಅವರು ಗೌರವ ನೀಡುತ್ತಿಲ್ಲ. ಕೋರಂ ಕೊರತೆಯಿದ್ದರೂ ಸಭೆ ನಡೆಸುತ್ತಿದ್ದಾರೆ. ಕೇವಲ 1 ಗಂಟೆಯಲ್ಲೇ ಸಭೆ ಮುಗಿಸಿ ಹೊರಟಿದ್ದಾರೆ. ಅಲ್ಲದೆ ಮಹಿಳಾ ಸದಸ್ಯರಿಗೂ ಗೌರವ ನೀಡದೇ ವರ್ತಿಸುವುದು ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದರು.

ಕೂಡಲೇ ಸಮಿತಿಗಳನ್ನು ರಚನೆ ಮಾಡಬೇಕು. ಖರ್ಚು ವೆಚ್ಚಗಳ ಕುರಿತು ಸಭೆಯ ನೋಟೀಸ್ ಜತೆಗೆ 7 ದಿನಗಳ ಮೊದಲೇ ಮಾಹಿತಿ ನೀಡಬೇಕು. ಎನ್ನುವುದು ಯಾವ ವಿಚಾರಗಳನ್ನು ಪ್ರಶ್ನೆ ಮಾಡಿದರೂ ಉತ್ತರ ನೀಡುತ್ತಿಲ್ಲ. ಹಾಲಿ ಸದಸ್ಯರಿಗಿಂತ ಮಾಜಿ ಸದಸ್ಯರುಗಳಿಗೆ ಇಲ್ಲಿ ಗೌರವ ನೀಡುತ್ತಿದ್ದು, ನಾವು ಲೆಕ್ಕಕ್ಕೆ ಇಲ್ಲವೇ ಎಂದು ಪ್ರಶ್ನಿಸಿ ಈ ವಿಚಾರಗಳಲ್ಲಿಯೂ ನಮಗೆ ನ್ಯಾಯ ಸಿಗಬೇಕೆಂದು ಗ್ರಾಪಂ ಮಾಜಿ ಅಧ್ಯಕ್ಷ ರಾಜಣ್ಣ, ಸದಸ್ಯರಾದ ನಂದೀಶಪ್ಪ, ವೀಣಾ, ಪುಷ್ಪಲತಾ ಸುರೇಶ್, ಲಲಿತಮ್ಮ, ಪವಿತ್ರ, ರತ್ನಮ್ಮ, ಸುಜಾತಮ್ಮ, ಶಾಂತಮ್ಮ ಮುಂತಾದವರು ಆಗ್ರಹಿಸಿದರು.

ಅವಾಚ್ಯ ಶಬ್ದ ಬಳಸಿ ನಿಂದನೆ:

ಇನ್ನು ಈ ಕುರಿತು ಮಾತನಾಡಿದ ಸ್ಥಾಯಿ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ, ಸಾಮಾನ್ಯ ಸಭೆಗೆ ಬಂದ ಹಿರಿಯ ಸದಸ್ಯ ನಂಜುಂಡಗೌಡ ನೋಟೀಸ್ ಜತೆಗೆ ಖರ್ಚುವೆಚ್ಚದ ಮಾಹಿತಿ ನೀಡಬೇಕೆಂದು ಕೇಳಿದರು. ಆ ವೇಳೆ ಸೌಹಾರ್ಧಯುತವಾಗಿ ಮಾತನಾಡಲು ಉಪಾಧ್ಯಕ್ಷರು ಮುಂದಾಗುತ್ತಿದ್ದಂತೆಯೇ ಅವಾಚ್ಯ ಶಬ್ದ ಬಳಕೆ ಮಾಡಿ ಕುಳಿತುಕೋ ಎಂದು ನಿಂದಿಸಿದ್ದಾರೆ. ಇದು ಕೇವಲ ಉಪಾಧ್ಯಕ್ಷರಿಗೆ ಅಲ್ಲ, ಸಭೆಯಲ್ಲಿದ್ದ ಎಲ್ಲ ಸದಸ್ಯರಿಗೂ ಅನ್ವಯವಾಗುತ್ತದೆಯಲ್ಲವೇ ಎಂದು ಪ್ರಶ್ನಿಸಿದರು.

ಅಧ್ಯಕ್ಷರ ದಲಿತರಾಗಿದ್ದಾರೆ. ಆ ಕಾರಣಕ್ಕಾಗಿ ಸಹಿಸದ ಕೆಲ ಸದಸ್ಯರು ವಿನಾಕಾರಣ ಇಲ್ಲಸಲ್ಲದ ಆರೋಪ ಮಾಡಿ ಸಭೆಗಳಲ್ಲಿ ತೊಂದರೆ ಮಾಡುತ್ತಿದ್ದು, ಎಸ್ಸಿ-ಎಸ್ಟಿ ಸೆಲ್‌ಗೆ ಈ ಸಂಬಂಧ ದೂರು ನೀಡಲಾಗುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಪಿಡಿಒ ಶಾಲಿನಿ ಮಾತನಾಡಿ, ನೀತಿ ಸಂಹಿತೆ ಕಾರಣ ಸಭೆಗಳನ್ನು ನಡೆಸಿರಲಿಲ್ಲ. ಇದೀಗ ಅಜೆಂಡಾ ಪ್ರಕಾರವಾಗಿ ಸಭೆ ನಡೆಸಲಾಗಿದೆ. ೭ ದಿನಗಳ ಮುಂಚಿತವಾಗಿ ಎಲ್ಲ ಸದಸ್ಯರಿಗೂ ನೋಟೀಸ್ ನೀಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಪಮನ ಅಧ್ಯಕ್ಷೆ ರೇಣುಕಾಂಭ ಮುನಿರಾಜು, ಉಪಾಧ್ಯಕ್ಷ ನಾಗೇಂದ್ರ ಸೇರಿದಂತೆ ಸದಸ್ಯರು ಇದ್ದರು.

ವರದಿ : ಅಮರೇಶ್ ಕೋಲಾರ

Leave a Reply

Your email address will not be published. Required fields are marked *

Scan the code