ಚಿಕ್ಕಮಗಳೂರುನ್ಯೂಸ್

ಕಲೆ, ಸಂಸ್ಕೃತಿಗೆ ಪ್ರೋತ್ಸಾಹ ಅಗತ್ಯ, ಸಂಗೀತ, ವೇಷಭೂಷಣ ಸ್ಪರ್ಧೆ.

ಕಲೆ, ಸಂಸ್ಕೃತಿಗೆ ಪ್ರೋತ್ಸಾಹ ಅಗತ್ಯ, ಸಂಗೀತ, ವೇಷಭೂಷಣ ಸ್ಪರ್ಧೆ.

(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಬಾಳೆಹೊನ್ನೂರು ಭಾರತದ ನೆಲೆಗಟ್ಟಾದ ಕಲೆ, ಸಂಸ್ಕೃತಿ, ಧಾರ್ಮಿಕತೆಗೆ ಪ್ರತಿಯೊಬ್ಬರು ಪ್ರೋತ್ಸಾಹ ನೀಡಿ ಬೆಳೆಸಬೇಕಿದೆ ಎಂದು ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯ ಕಾರ್ಯಾಧ್ಯಕ್ಷ ಬಿ.ಚನ್ನಕೇಶವ ಬರಗಲ್ ಹೇಳಿದರು.
ಪಟ್ಟಣದ ಮಾರ್ಕಾಂಡೇಶ್ವರ ದೇವಸ್ಥಾನದ ಮೃತ್ಯಂಬಿಕಾ ಅಮ್ಮನವರ ವೇದಿಕೆಯಲ್ಲಿ ಹದಿನೈದನೇ ವರ್ಷದ ದುರ್ಗಾದೇವಿ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಗುರುವಾರ ಆರಂಭಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ  ಚಾಲನೆ ನೀಡಿ ಅವರು ಮಾತನಾಡಿದರು.
ನವರಾತ್ರಿ ಸಂದರ್ಭದಲ್ಲಿ ನಾಡಿನ ಕಲೆ, ಸಂಸ್ಕೃತಿ, ವಿವಿಧ ಗ್ರಾಮೀಣ ಕಲಾ ಪ್ರಕಾರಗಳನ್ನು ನಾಡಿಗೆ ಪರಿಚಯಿಸಿ, ಪ್ರತಿಭೆಗಳಿಗೆ ಉತ್ತಮ ವೇದಿಕೆಯನ್ನು ಒದಗಿಸುವ ಕೆಲಸವನ್ನು ನವರಾತ್ರಿ ಸಮಿತಿ ಮಾಡುತ್ತಿದೆ. ಹತ್ತು ದಿನಗಳ ಪರ್ಯಂತ ಧಮಾವಲಂಬಿತ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ ಎಂದರು.


ಸಮಿತಿಯ ಕೋಶಾಧಿಕಾರಿ ಭಾಸ್ಕರ್ ವೆನಿಲ್ಲಾ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಕಲೆ, ಸಂಸ್ಕೃತಿ ನಶಿಸುತ್ತಿರುವ ದಿನಗಳಲ್ಲಿ ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಿ, ಬೆಳೆಸುವಂತಹ ಕಾರ್ಯಕ್ರಮಗಳನ್ನು ನಡೆಸುವುದು ಧಾರ್ಮಿಕ ಸಂಘ ಸಂಸ್ಥೆಗಳ ಮೇಲಿದ್ದು, ಯುವಜನತೆ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಭಾರತೀಯ ಸನಾತನ ಸಂಸ್ಕೃತಿ, ಸಂಪ್ರದಾಯಗಳನ್ನು ತಿಳಿದುಕೊಳ್ಳಬೇಕಿದೆ ಎಂದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಮಾತನಾಡಿ, ನವರಾತ್ರಿ ಮಹೋತ್ಸವದ ಅಂಗವಾಗಿ ಅ.6ರ ಭಾನುವಾರ ಮೃತಂಬಿಕಾ ಅಮ್ಮನವರ ವೇದಿಕೆಯಲ್ಲಿ ಭಕ್ತಿಗೀತೆ, ಭಾವಗೀತೆ ಹಾಗೂ ದೇಶ ಭಕ್ತಿಗೀತೆಗಳ ಗಾಯನ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಅ.9ರ ಬುಧವಾರ ಹದಿನೈದು ವರ್ಷದ ಒಳಗಿನ ಮಕ್ಕಳಿಗೆ ಹಿಂದೂ ದೇವಾನುದೇವತೆಗಳ ವೇಷಭೂಷಣ ಸ್ಪರ್ಧೆ ಆಯೋಜಿಸಲಾಗಿದೆ. ಕಾರ್ಯಕ್ರಮದ ಮಾಹಿತಿಗಾಗಿ  9449205400 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.


ಜಂಟಿ ಕಾರ್ಯದರ್ಶಿ ಪ್ರಭಾಕರ್ ಪ್ರಣಸ್ವಿ, ಸಹ ಕೋಶಾಧಿಕಾರಿ ಚೈತನ್ಯ ವೆಂಕಿ, ಎ.ಸಿ.ಕೃಷ್ಣಮೂರ್ತಿ, ಕೆ.ಪ್ರಶಾಂತ್‌ಕುಮಾರ್, ಗಿರೀಶ್ ಬಂದಿಯಡ್ಕ, ಈಶ್ವರ್ ಇಟ್ಟಿಗೆ, ನಟರಾಜ್ ಶೆಟ್ಟಿ, ಎಂ.ನಾರಾಯಣ, ಮಂಜು ಹೊಳೆಬಾಗಿಲು, ನಾರಾಯಣಶೆಟ್ಟಿ, ರಾ.ವೆಂಕಟೇಶ್, ಮಂಜುನಾಥ್ ತುಪ್ಪೂರು, ರೆನ್ನಿ ದೇವಯ್ಯ ಮತ್ತಿತರರು ಇದ್ದರು.
ಸಾಂಸ್ಕೃತಿಕ ಕಾರ್ಯಕ್ರಮ ಆರಂಭಕ್ಕೂ ಮುನ್ನ ಸ್ಥಳೀಯ ಗಾಯಕ ಪ್ರಕಾಶ್ ಆಚಾರ್ಯ ಮತ್ತು ಸಂಗಡಿಗರಿಂದ ಭಜನಾ ಕಾರ್ಯಕ್ರಮ ಸೇವೆಗೆ ಚಾಲನೆ ನೀಡಲಾಯಿತು. ನಂತರ ಸ್ಥಳೀಯ ಕಲಾವಿದರು, ವಿದ್ಯಾರ್ಥಿಗಳಿಂದ ನೃತ್ಯ ಸಂಗೀತ ಕಾರ್ಯಕ್ರಮ ನಡೆಯಿತು.


ಇಂದು ಕೌಮಾರೀ ಪೂಜಾ ಪಾರಾಯಣ
ಬಾಳೆಹೊನ್ನೂರು: ಪಟ್ಟಣದ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ಆಯೋಜಿಸಿರುವ ಹದಿನೈದನೇ ವರ್ಷದ ದುರ್ಗಾ ಪೂಜಾ ಮಹೋತ್ಸವದ ಅಂಗವಾಗಿ ಅ.5ರ ಶನಿವಾರ ದೇವಿ ಸನ್ನಿಧಿಯಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಮಯೂರಿವಾಹಿನಿ, ಕೌಮಾರೀ ಪೂಜಾ ಪಾರಾಯಣ ನಡೆಯಲಿದೆ.
ಸಂಜೆ 6ರಿಂದ 7.45ರವರೆಗೆ ಭಕ್ತಾದಿಗಳಿಂದ ವಿವಿಧ ಪೂಜಾ ಸೇವೆ, ಮಹಾಮಂಗಳಾರತಿ ನಡೆಯಲಿದೆ. ರಾತ್ರಿ 8ರಿಂದ ವಿಟ್ಲ ರಾಜ್ ಮೆಲೋಡಿಸ್ ತಂಡದ ಕೇಶವರಾಜ್ ಮತ್ತು ಬಳಗದಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ.

Leave a Reply

Your email address will not be published. Required fields are marked *

Scan the code