ಬದುಕಿಗೆ ಓದು ಎಷ್ಟು ಮುಖ್ಯವೋ ಹಾಗೆಯೇ ದೈಹಿಕವಾಗಿ, ಮಾನಸಿಕವಾಗಿ ಗಟ್ಟಿಗೊಳಿಸುವುದು ಮುಖ್ಯ
(SHIVAMOGA): ಸಾಗರ ಬದುಕಿಗೆ ಓದು ಎಷ್ಟು ಮುಖ್ಯವೋ ಹಾಗೆಯೇ ದೈಹಿಕವಾಗಿ, ಮಾನಸಿಕವಾಗಿ ಗಟ್ಟಿಗೊಳಿಸುವ ಕ್ರೀಡಾ ಚಟುವಟಿಕೆ ಸಹ ಮಕ್ಕಳ ಭವಿಷ್ಯಕ್ಕೆ ಅಗತ್ಯವಾಗಿದೆ. ಎಂದು ಡಿವೈಎಸ್ಪಿ ಗೋಪಾಲಕೃಷ್ಣ ಟಿ. ನಾಯಕ್ ತಿಳಿಸಿದರು.
ಸಾಗರ ಪಟ್ಟಣದ ಚಾಮರಾಜಪೇಟೆಯಲ್ಲಿರುವ ಮಹಿಳಾ ಮಂಡಳಿ ಸಭಾಭವನದಲ್ಲಿ ಭಾನುವಾರ ಸಾಗರ ಕರಾಟೆ ಅಸೋಶಿಯೇಷನ್ ವತಿಯಿಂದ ಶಿವಮೊಗ್ಗದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಥಮಿಕ ಹಂತದಲ್ಲಿಯೆ ಮಕ್ಕಳಿಗೆ ಕ್ರೀಡಾಸಕ್ತಿ ಬೆಳೆಸಿದರೆ ಮಾತ್ರ ಅವರು ಒಲಿಂಪಿಕ್ಸ್ನಂತಹ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಉತ್ತೇಜನ ನೀಡಿದಂತಾಗುತ್ತದೆ. ಕಲಿಯುವ ಆಸಕ್ತಿಯ ಜತೆಯಲ್ಲಿ ಶ್ರದ್ಧೆ ಪ್ರತಿಯೊಬ್ಬ ಕ್ರೀಡಾಪಟುವಿಗೆ ಅಗತ್ಯ. ಮುಖ್ಯವಾಗಿ ಕರಾಟೆ, ಕುಂಗ್ಫೂನಂತಹ ಆತ್ಮರಕ್ಷಣಾ ಕಲೆಯನ್ನು ಕಲಿಯುವುದರಿಂದ ಸ್ವಯಂ ರಕ್ಷಣೆಯನ್ನೂ ಮಾಡಿಕೊಳ್ಳಬಹುದು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಈ. ಪರಶುರಾಮಪ್ಪ ಮಾತನಾಡಿ, ದೈಹಿಕವಾಗಿ ಸದೃಢವಾಗಿರುವ ಮಕ್ಕಳು ಓದಿನಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಇತ್ತೀಚಿನ ವರ್ಷದಲ್ಲಿ ಹೆಣ್ಣುಮಕ್ಕಳು ಸ್ವಯಂ ರಕ್ಷಣೆಯ ಭಾಗವಾಗಿ ಅಗತ್ಯವಾಗಿ ಕರಾಟೆ ಕಲಿಯಲು ಮುಂದಾಗಬೇಕು. ಶಿಯಾನ್ ಪಂಚಪ್ಪ ನೇತೃತ್ವದಲ್ಲಿ ಕರಾಟೆ ಕಲಿಯುವ ಸಂಸ್ಕøತಿ ಬೆಳೆದು ಹೆಮ್ಮರವಾಗುತ್ತಿದೆ. ದೇಶವಿದೇಶದ ಮಕ್ಕಳೊಂದಿಗೆ ಸೆಣೆಸಿ ಐವತ್ತಕ್ಕೂ ಹೆಚ್ಚು ಪದಕ ಗೆದ್ದು ತಾಲೂಕಿಗೆ ಕೀರ್ತಿ ತಂದಿರುವುದು ಅಸಾಧಾರಣ ಸಾಧನೆ ಎಂದರು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ರತ್ನಾಕರ ಹೊನಗೋಡು ಮಾತನಾಡಿ, ಮಕ್ಕಳಿಗೆ ಅಗತ್ಯವಿರುವ ದೈಹಿಕ ಮತ್ತು ಮಾನಸಿಕ ದೃಢತೆಯನ್ನು ಕರಾಟೆ ಕಲಿಸಿಕೊಡುತ್ತದೆ. ರಾಜ್ಯದ ಸರಕಾರಿ ಶಾಲೆಗಳಲ್ಲಿ ಶಿಕ್ಷಕರನ್ನು ನೇಮಿಸಿ ಕರಾಟೆ ಕಲಿಕೆಗೆ ಒತ್ತು ನೀಡಬೇಕು. ಎಂದು ಹೇಳಿದರು.
ವೇದಿಕೆಯಲ್ಲಿ ಮಹಿಳಾ ಸಮಾಜದ ಅಧ್ಯಕ್ಷೆ ನಂದಾ ಗೊಜನೂರು, ಕರಾಟೆ ತರಬೇತುದಾರ ಶಿಯಾನ್ ಪಂಚಪ್ಪ, ಪ್ರಮುಖರಾದ ಜಿ.ನಾಗೇಶ್, ವಿನೋದ್ ಶಿವಮೊಗ್ಗ ಮೊದಲಾದವರಿದ್ದರು. ಸನ್ನಿಧಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಮಣಿಕಂಠ ಸ್ವಾಗತಿಸಿದರು. ಕಿರಣಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ರೇಖಾ ವಂದಿಸಿದರು. ಸುಧಾಕರ ಕುಗ್ವೆ ನಿರೂಪಿಸಿದರು.
ವರದಿ: ರಾಘವೇಂದ್ರ ತಾಳಗುಪ್ಪ