ಜೈವಿಕ ಇಂಧನ ಉತ್ಪಾದನೆ , ಬಳಕೆಯ ಕುರಿತು ಜಾಗೃತಿ ಅಗತ್ಯ: ಡಾ.ಹೊನ್ನಪ್ಪ
(SHIVAMOGA): ಜೈವಿಕ ಇಂಧನ ಎಂಬುದು ಸಸ್ಯ ಮತ್ತು ಪ್ರಾಣಿಗಳಿಂದ ನವೀಕರಿಸಬಹುದಾದ ಶಕ್ತಿ ಮೂಲವಾಗಿದೆ. ಇವುಗಳನ್ನು ಪೆಟ್ರೋಲ್ ಮತ್ತು ಡಿಸೇಲ್ ನಂತೆಯೇ ಸಾಂಪ್ರದಾಯಿಕ ಪಳಿಯುಳಿಕೆ ಇಂಧನವಾಗಿ ವಿನ್ಯಾಸ ಮಾಡಲಾಗಿದೆ ಎಂದು
ಜೈವಿಕ ಇಂಧನ ಉದ್ಯಾನ ಇರುವಕ್ಕಿಯ ಸಂಶೋಧಕ ಡಾ. ಹೊನ್ನಪ್ಪ ಹೇಳಿದರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿಯ ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ ಶಿಕಾರಿಪುರ ಹಳೇಮುಗಳಗೆರೆ ಗ್ರಾಮದಲ್ಲಿ ನಡೆಯುತ್ತಿದ್ದು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಬೆಂಗಳೂರು ಇವರ ಸಹಯೋಗದಡಿ ಹಮ್ಮಿಕೊಂಡ ಜೈವಿಕ ಇಂಧನ ಉತ್ಪಾದನೆ ಮತ್ತು ಬಳಕೆ ಕುರಿತು ವಿಚಾರ ಸಂಕೀರ್ಣದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.
ಎಥೆನಾಲ್, ಬಯೋಡಿಸೇಲ್ ಮತ್ತು ಬಯೋಗ್ಯಾಸ್ನಂತಹ ವಿವಿಧ ಬಗೆಯ ಜೈವಿಕ ಇಂಧನಗಳಿವೆ. ಜೈವಿಕ ಇಂಧನಗಳು ಕಡಿಮೆ ಹಸಿರುಮನೆ ಅನಿಲ ಹೊರಸೂಸುವಿಕೆ, ಅನಿಲ ಆಮದು ಮೇಲಿನ ಅವಲಂಬನೆ ಮತ್ತು ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಉತ್ತೇಜನದಂತಹ ಅನೇಕ ಪ್ರಯೋಜನವನ್ನು ಹೊಂದಿದೆ.
ಜೈವಿಕ ಇಂಧನ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆ ನಡೆಯುತ್ತಿದ್ದು, ಈಗಾಗಲೇ ಹಲವು ಜೈವಿಕ ಇಂಧನ ಬಳಕೆಯಲ್ಲಿದೆ. ಈ ಬಗ್ಗೆ ಸಾರ್ವಜನಿಕರಿಗೆ ವ್ಯಾಪಕ ತಿಳುವಳಿಕೆ ಅಗತ್ಯವಿದೆ ಎಂದ ಅವರು
ಜೈವಿಕ ಇಂಧನ ಸ್ವರೂಪ, ಜೈವಿಕ ಇಂಧನ ಪಡೆಯಬಹುದಾದ ವೃಕ್ಷಗಳು, ಜೈವಿಕ ಇಂಧನ ಉತ್ಪಾದನೆ ಹಂತಗಳ ಬಗ್ಗೆ ವಿವರಿಸಿದರು.
ಜೈವಿಕ ಇಂಧನದ ಉತ್ಪಾದನೆಯಿಂದ ಹಲವರಿಗೆ ಉದ್ಯೋಗಾವಕಾಶಗಳು ಸಿಗಲಿದೆ.ಜೈವಿಕ ಇಂಧನ ಪೆಟ್ರೋಲಿಯಂ ಇಂಧನಕ್ಕಿಂತ ಕಡಿಮೆ ಪ್ರಮಾಣದಲ್ಲಿ ಕಾರ್ಬನ್ ಆಕ್ಸೆಡ್ಗಳನ್ನು ವಾತಾವರಣಕ್ಕೆ ಬಿಡುತ್ತದೆ ಎಂದು ಸಂಶೋಧನೆಗಳು ಹೇಳಿವೆ. ಹಾಗಾಗಿ ಅದು ಪರಿಸರ ಸ್ನೇಹಿ. ನವೀಕರಿಸಬಹುದಾದ ಇಂಧನ. ಜೈವಿಕ ಇಂಧನದಲ್ಲಿ ಗಂಧಕದ ಪ್ರಮಾಣ ಅತ್ಯಂತ ಕಡಿಮೆಯಾಗಿದೆ. ನಿರ್ವಹಣೆ, ಸಂಗ್ರಹಣೆ ಮತ್ತು ಸಾಗಣೆಯು ಸುರಕ್ಷಿತವಾಗಿರುತ್ತದೆ.ಇದರ ಬಳಕೆಯಿಂದ ಇಂಜಿನ್ನ ಕಾರ್ಯಕ್ಷಮತೆ ಹೆಚ್ಚಿಸಿ, ಇಂಜಿನ್ನ ಬಾಳಿಕೆಯನ್ನು ಹೆಚ್ಚಿಸುತ್ತದೆ. ಜೈವಿಕ ಇಂಧನಕ್ಕಾಗಿ ಮರಗಳನ್ನು ಬೆಳೆಯುವುದರಿಂದ ಮಣ್ಣಿನ ಸವಕಳಿಯನ್ನು ತಡೆಯಬಹುದು ಮತ್ತು ಮಣ್ಣಿನ ತೇವಾಂಶ ಕಾಪಾಡುತ್ತದೆ ಎಂದು ಜೈವಿಕ ಇಂಧನದ ಲಾಭ, ಉಪಯೋಗಗಳ ಕುರಿತು ಮಾಹಿತಿ ನೀಡಿದರು.
ಗ್ರಾಮದ ಹಲವು ಕೃಷಿಕರು, ಶಿಬಿರಾರ್ಥಿಗಳು, ವಿವಿಯ ಅಧಿಕಾರಿ, ಸಿಬ್ಬಂದಿ ಪಾಲ್ಗೊಂಡರು.
ವರದಿ: ಮಧು ರಾಮ್ ಸೊರಬ