ಮಾದಕ ವಸ್ತುಗಳ ಹಾಗೂ ಎನ್ ಡಿ ಪಿ ಎಸ್ ಕಾಯ್ದೆಯ ಜಾಗೃತಿ ಅರಿವು ಕಾರ್ಯಕ್ರಮ.
(KOLARA): ಬಂಗಾರಪೇಟೆ: ಮಾದಕ ವಸ್ತುಗಳ ಸೇವನೆಗೊಮ್ಮೆ ಒಳಗಾದರೆ, ಅದರಿಂದ ಹೊರಬರುವುದು ಕಷ್ಟ. ಇದು ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಅಬಕಾರಿ ಇಲಾಖೆಯ ವಿಶ್ವನಾಥ ಬಾಬು ತಿಳಿಸಿದರು.
ತಾಲೂಕಿನ ಕೋರಮಂಡಲ ಸರ್ಕಾರಿ ಪಾಲಿಟೆಕ್ನಿಕ್ ನಲ್ಲಿ ನಾಗೇಶ್ ಅಬಕಾರಿ ಜಂಟಿ ಆಯುಕ್ತರು ಬೆಂಗಳೂರು (ದಕ್ಷಿಣ) ರವರ ಮಾರ್ಗದರ್ಶನದಲ್ಲಿ, ಹೆಚ್.ರಮೇಶ್ ಕುಮಾರ್ ಅಬಕಾರಿ ಉಪ ಆಯುಕ್ತರು ಕೋಲಾರ ಜಿಲ್ಲೆ ಕೋಲಾರ ರವರ ನಿರ್ದೇಶನದ ಮೇರೆಗೆ ವಿಶ್ವನಾಥ್ ಬಾಬು ಎಸ್ ರವರ ನೇತೃತ್ವದಲ್ಲಿ, ಮಾದಕ ವಸ್ತುಗಳ ಹಾಗೂ ಎನ್ ಡಿ ಪಿ ಎಸ್ ಕಾಯ್ದೆಯ ಜಾಗೃತಿ ಅರಿವು ಕಾರ್ಯಕ್ರಮದಲ್ಲಿ ಮಾತನಾಡುತ್ತಾ,ಮದ್ಯಪಾನ, ಧೂಮಪಾನದಂತಹ ದುಶ್ಚ್ಚಟಗಳಿಗೆ ಹದಿಹರೆಯದ ವಯಸ್ಸಿನವರು ಒಳಗಾಗುತ್ತಾರೆ. ಒಮ್ಮೆ ಮಾದಕ ವಸ್ತುಗಳ ಸೇವನೆಗೆ ಒಳಗಾದರೆ ಅದರಿಂದ ಹೊರಬರುವುದು ತುಂಬಾ ಕಷ್ಟ ಎಂಬುದನ್ನು ತಿಳಿಹೇಳಬೇಕಿದೆ ಎಂದರು.
ಮದ್ಯ, ತಂಬಾಕು,ಡ್ರಗ್ಸ್,ಗಾಂಜ,ಅಫೀಮು ಮತ್ತಿತರವು ಮಾದಕ ವಸ್ತುಗಳಾಗಿವೆ. ಇವುಗಳ ಸೇವನೆಯಿಂದ ಮೆದುಳಿನಲ್ಲಿ ಅಸ್ಪಷ್ಟತೆ ಉಂಟಾಗುತ್ತದೆ. ತನ್ನ ಮೇಲೆ ನಿಯಂತ್ರಣ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದರು.
1980ರಲ್ಲಿ 28-30 ವರ್ಷ ವಯೋಮಾನದ ಬಳಿಕ ಮದ್ಯಪಾನ, ಧೂಮಪಾನಕ್ಕೆ ಒಳಗಾಗುತ್ತಿದ್ದರು. ಆದರೆ, ಇತ್ತೀಚೆಗೆ 17-18 ವರ್ಷ ವಯೋಮಾನದವರು ವ್ಯಸನಕ್ಕೆ ತುತ್ತಾಗುತ್ತಿದ್ದಾರೆ. ಇವರು ಸಾಮಾನ್ಯ ವ್ಯಕ್ತಿಗಿಂತ 3 ಪಟ್ಟು ಹೆಚ್ಚು ಕಾಯಿಲೆಗಳಿಗೆ ಒಳಗಾಗುತ್ತಾರೆ. ಸಾವು ಬೇಗ ಸಂಭವಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಬಂಗಾರಪೇಟೆ ವಲಯ ಅಬಕಾರಿ ನಿರೀಕ್ಷಕರಾದ ಅರುಣ್ ಕುಮಾರ್. ವಿ,ಅಬಕಾರಿ ಉಪ ನಿರೀಕ್ಷಕ ರವೀಂದ್ರ.ಆರ್ ,ಪಕೃತಿ ಪಿ ಜೈನ್ ಮತ್ತು ಸಿಬ್ಬಂದಿ ಇದ್ದರು.
ವರದಿ ವಿಷ್ಣು ಕೋಲಾರ