ಬಗರ್ ಹುಕುಂ ರೈತರ ಜೀವನದಲ್ಲಿ ಬೆಳಕು ಬರಲು ಕೆ.ಎಸ್. ಈಶ್ವರಪ್ಪನವರ ನಾಯಕತ್ವದ ಅವಶ್ಯಕತೆ ಇದೆ: ಹೇಮಾ ರವಿ
(SHIVAMOGA): ಸೊರಬ: ಕುಟುಂಬ ರಾಜಕಾರಣದ ವಿರುದ್ಧ ಸಿಡಿದೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ.ಎಸ್ ಈಶ್ವರಪ್ಪನವರ ಪರ ಅತ್ಯಂತ ಯಶಸ್ವಿಯಾಗಿ ಪ್ರಚಾರ ನಡೆದಿದ್ದು, ಎಲ್ಲಾ ಕಾರ್ಯಕರ್ತರ ಶ್ರಮದಿಂದ ಹೆಚ್ಚಿನ ಮತಗಳಿಂದ ಗೆಲ್ಲುವುದು ನಿಶ್ಚಿತ ಎಂದು ರಾಷ್ಟ್ರಭಕ್ತರ ಬಳಗದ ತಾಲೂಕು ಸಂಚಾಲಕ ಕೆ. ಪ್ರಭಾಕರ ರಾಯ್ಕರ್ ಹೇಳಿದರು.
ಭಾನುವಾರ ಪಟ್ಟಣದ ರಾಷ್ಟ್ರಭಕ್ತರ ಬಳಗದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು ತಾಲೂಕಿನಾದ್ಯಂತ ಪ್ರಚಾರ ಭರದಿಂದ ನಡೆಯುತ್ತಿದೆ. ರಾಜ್ಯದ ವಿವಿಧ ಸಮಾಜಗಳ ಮುಖಂಡರು ಕ್ಷೇತ್ರದಲ್ಲಿ ಕೆ.ಎಸ್. ಈಶ್ವರಪ್ಪನವರ ಪರ ಪ್ರಚಾರ ಮಾಡುತ್ತಿರುವುದರಿಂದ ಕಾರ್ಯಕರ್ತರಲ್ಲಿ ಹೆಚ್ಚಿನ ಹುಮ್ಮಸ್ಸು ಬಂದಿದೆ. ಪ್ರಚಾರಕ್ಕೆ ಹೋದಲ್ಲೆಲ್ಲೆಡೆ ಈಶ್ವರಪ್ಪನವರ ಪರ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಜನರು ಇಂತಹ ನಾಯಕರ ಅವಶ್ಯಕತೆ ಇದ್ದು, ಸಂಸದರನ್ನಾಗಿ ಮಾಡಲು ಬಯಸಿದ್ದಾರೆ. ಆದ್ದರಿಂದ ಕೆ.ಎಸ್. ಈಶ್ವರಪ್ಪನವರು ಗೆದ್ದು ಸಂಸದರಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾಆರ್ಯ ಈಡಿಗ ಮಹಿಳಾ ಸಂಘದ ಅಧ್ಯಕ್ಷೆ ಹೇಮಾ ರವಿ ಮಾತನಾಡಿ, ಮಲೆನಾಡಿನಲ್ಲಿ ಜೀವನೋಪಾಯಕ್ಕಾಗಿ ಅರಣ್ಯ ಭೂಮಿ ಸಾಗುವಳಿ ಮಾಡಿಕೊಂಡಿರುವ ಸಣ್ಣಪುಟ್ಟ ರೈತರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಅರಣ್ಯ ಇಲಾಖೆಯಿಂದ ತೆರವುಗೊಳಿಸುವಂತೆ ನೋಟಿಸ್ ನೀಡಲಾಗುತ್ತಿದೆ. 20-30 ವರ್ಷಗಳಿಂದ ಮಕ್ಕಳಂತೆ ತೋಟವನ್ನು ಸಾಕಿದ್ದೇವೆ. ಈಗ ನೋಟಿಸ್ ನೀಡಿದರೆ ತಾವು ತೆರವುಗೊಳಿಸುವುದಾದರೂ ಹೇಗೆ ಎಂದು ರೈತರು ಅಳನ್ನು ತೋಡಿಕೊಂಡು ಕಣ್ಣೀರು ಹಾಕುತ್ತಿದ್ದಾರೆ. ತಮ್ಮ ಬದುಕಿನ ಜೊತೆ ಅರಣ್ಯವನ್ನು ಉಳಿಸಿಕೊಂಡು ಬರುತ್ತಿದ್ದಾರೆ. ಕಳ್ಳರು, ಲೂಟಿಕೋರರು ಅರಣ್ಯವನ್ನು ನಾಶಮಾಡುತ್ತಿದಾರೆಯೇ ವಿನಹ ಅದರಲ್ಲಿಯೇ ಬದುಕು ಕಟ್ಟಿಕೊಂಡವರಲ್ಲ. ಇದರ ಬಗ್ಗೆ ಇಚ್ಚಾಶಕ್ತಿ ತೆಗೆದುಕೊಂಡು ಅವರಿಗೆ ಖಾತೆ ಮಾಡಿಕೊಡಲು ಜನಪ್ರತಿನಿಧಿಗಳಲ್ಲಿ ಇಚ್ಚಾಶಕ್ತಿಯ ಕೊರತೆ ಇರುವುದನ್ನು ನೋಡಿದರೆ ಇದು ಪ್ರಶ್ನೆಯಾಗಿಯೇ ಉಳಿದಿದೆ. ಈ ವಿಷಯದ ಬಗ್ಗೆ ಕೆ.ಎಸ್. ಈಶ್ವರಪ್ಪನವರು ತಾವು ಈ ಹಿಂದೆ ಸಚಿವರಾಗಿದ್ದಾಗ ಧ್ವನಿ ಎತ್ತಿದ್ದು, ತಾವು ಸಂಸದರಾದ ನಂತರ ಇದರ ಬಗ್ಗೆ ಮೊದಲು ಗಮನ ಹರಿಸಿ, ಖಾತೆ ಮಾಡಿಸಿಕೊಡುವುದಾಗಿ ಆಶ್ವಾಸನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ತೀ.ನ ಶ್ರೀನಿವಾಸ ರವರು ಸಹ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ. ಬಗರ್ ಹುಕುಂ ರೈತರ ಜೀವನದಲ್ಲಿ ಬೆಳಕು ಬರಲು ಕೆ.ಎಸ್. ಈಶ್ವರಪ್ಪನವರಂತಹ ನಾಯಕರ ನಾಯಕತ್ವದ ಅವಶ್ಯಕತೆ ಇದ್ದು, ಇದನ್ನು ಜಿಲ್ಲೆಯ ಜನತೆ ಚೆನ್ನಾಗಿ ಅರಿತಿದ್ದಾರೆ. ಆದ್ದರಿಂದ ಅವರನ್ನು ಬಹುಮತಗಳಿಂದ ಆಯ್ಕೆ ಮಾಡುವ ಮೂಲಕ ಸಂಸದರನ್ನಾಗಿ ಮಾಡುವುದು ನಿಶ್ಚಿತ ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಮಾಜಿ ಸದಸ್ಯ ಮಹೇಶ ಗೌಳಿ, ಭಜರಂಗದಳದ ಅಣ್ಣಪ್ಪ, ಗಣಪತಿಗೌಡ ಕಚವಿ, ಗಣಪತಿ ಜಡೆ, ಶ್ರೀನಿವಾಸ ಕುಪ್ಪಗಡ್ಡೆ, ಪ್ರಶಾಂತ್ ಮತ್ತಿತರರಿದ್ದರು.
ವರದಿ: ಸಂದೀಪ ಯು.ಎಲ್ ಸೊರಬ