ಆತ್ಮರಕ್ಷಣಾ ಕಲೆಯನ್ನು ಕಲಿಯುವ ಮೂಲಕ ಸ್ವಯಂರಕ್ಷಣೆಗೆ ಸಜ್ಜಾಗಿರುಬೇಕು.
(SHIVAMOGA): ಸಾಗರ : ಆತ್ಮರಕ್ಷಣಾ ಕಲೆಯನ್ನು ಕಲಿಯುವ ಮೂಲಕ ಸ್ವಯಂರಕ್ಷಣೆಗೆ ಸಜ್ಜಾಗಿರುಬೇಕು. ಕರಾಟೆ, ಕುಂಗ್ಫೂನoತಹ ಕ್ರೀಡೆಗಳನ್ನು ಸ್ವಯಂರಕ್ಷಣೆಗೆ ಅಗತ್ಯವಾಗಿದೆ ಎಂದು ಡಿವೈಎಸ್ಪಿ ಗೋಪಾಲಕೃಷ್ಣ ಟಿ. ನಾಯಕ್ ತಿಳಿಸಿದರು.
ಇಲ್ಲಿನ ಮಹಿಳಾ ಮಂಡಳಿ ಸಭಾಭವನದಲ್ಲಿ ಭಾನುವಾರ ಸಾಗರ ಕರಾಟೆ ಅಸೋಶಿಯೇಷನ್ ವತಿಯಿಂದ ಶಿವಮೊಗ್ಗದಲ್ಲಿ ನಡೆದ ಅಂತರ ರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪೋಷಕರು ಮಕ್ಕಳು ಕೇವಲ ಪಠ್ಯದಲ್ಲಿ ಮಾತ್ರ ತೊಡಗಿಸಿಕೊಳ್ಳಬೇಕು ಎನ್ನುವ ಮನೋಭಾವದಿಂದ ಹೊರಗೆ ಬರಬೇಕು. ಓದು ಎಷ್ಟು ಮುಖ್ಯವೋ ದೈಹಿಕವಾಗಿ, ಮಾನಸಿಕವಾಗಿ ಗಟ್ಟಿಗೊಳಿಸುವ ಕ್ರೀಡಾ ಚಟುವಟಿಕೆ ಸಹ ಮಕ್ಕಳ ಭವಿಷ್ಯಕ್ಕೆ ಅಗತ್ಯವಾಗಿರುತ್ತದೆ. ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೆ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿದರೆ ಭವಿಷ್ಯದಲ್ಲಿ ಅವರು ಒಲಂಪಿಕ್ಸ್ ಅಂತಹ ಕ್ರೀಡೆಯಲ್ಲಿ ಭಾಗವಹಿಸಲು ಉತ್ತೇಜನ ನೀಡಿದಂತೆ ಆಗುತ್ತದೆ. ಕಲಿಯುವ ಆಸಕ್ತಿ ಜೊತೆಗೆ ಶ್ರದ್ಧೆ ಪ್ರತಿಯೊಬ್ಬ ಕ್ರೀಡಾಪಟುವಿಗೆ ಅಗತ್ಯ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ ಇ. ಮಾತನಾಡಿ, ದೈಹಿಕವಾಗಿ ಸದೃಢವಾಗಿದ್ದರೆ ಮಾತ್ರ ಮಕ್ಕಳು ಓದಿನಲ್ಲಿ ಹೆಚ್ಚು ಆಸಕ್ತಿಯಿಂದ ತೊಡಗಿಕೊಳ್ಳುತ್ತಾರೆ. ಬದಲಾದ ದಿನಮಾನಗಳಲ್ಲಿ ಹೆಣ್ಣುಮಕ್ಕಳು ಅಗತ್ಯವಾಗಿ ಕರಾಟೆ ಕಲಿಯುವ ಮೂಲಕ ಸ್ವಯಂ ರಕ್ಷಣೆಗೆ ಮುಂದಾಗಬೇಕು. ಶಿಯಾನ್ ಪಂಚಪ್ಪ ನೇತೃತ್ವದಲ್ಲಿ ಸಾಗರದಲ್ಲಿ ಕರಾಟೆ ಕಲಿಯುವ ಸಂಸ್ಕೃತಿಯೊOದಕ್ಕೆ ಮುನ್ನುಡಿ ಬರೆಯಲಾಗಿದೆ. ದೇಶವಿದೇಶದ ಮಕ್ಕಳ ಜೊತೆ ಸರಿಸಮಾನವಾಗಿ ಸ್ಪರ್ಧಿಸಿ ಐವತ್ತಕ್ಕೂ ಹೆಚ್ಚು ಪದಕ ಗಳಿಸಿ ಸಾಗರಕ್ಕೆ ಕೀರ್ತಿ ತಂದ ಮಕ್ಕಳ ಸಾಧನೆ ಅಮೂಲ್ಯವಾದದ್ದು ಎಂದು ಹೇಳಿದರು.
ಈಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರತ್ನಾಕರ ಹೊನಗೋಡು ಮಾತನಾಡಿ, ದೈಹಿಕ ಮತ್ತು ಮಾನಸಿಕ ದೃಢತೆ ಮಕ್ಕಳಿಗೆ ಅಗತ್ಯ. ಕರಾಟೆ ಕಲಿಕೆ ಮೂಲಕ ಎರಡೂ ರೂಢಿಸಿಕೊಳ್ಳಲು ಸಾಧ್ಯವಿದೆ. ತರಬೇತುದಾರ ಪಂಚಪ್ಪ ಮಕ್ಕಳನ್ನು ಉತ್ತಮ ಕ್ರೀಡಾಪಟುವಾಗಿ ಸಜ್ಜುಗೊಳಿಸುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಕರಾಟೆ ಕಲಿಕೆಗೆ ಒತ್ತು ನೀಡಬೇಕು. ಸರ್ಕಾರ ಕರಾಟೆ ಶಿಕ್ಷಕರನ್ನು ಶಾಲೆಗಳಲ್ಲಿ ನೇಮಿಸುವಂತೆ ಆಗಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಮಹಿಳಾ ಸಮಾಜದ ಅಧ್ಯಕ್ಷೆ ನಂದಾ ಗೊಜನೂರು, ಪತ್ರಕರ್ತ ಜಿ.ನಾಗೇಶ್, ಕರಾಟೆ ತರಬೇತುದಾರ ಶಿಯಾನ್ ಪಂಚಪ್ಪ, ವಿನೋದ್ ಶಿವಮೊಗ್ಗ ಹಾಜರಿದ್ದರು. ಸನ್ನಿಧಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಮಣ ಕಂಠ ಸ್ವಾಗತಿಸಿದರು. ಕಿರಣಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ರೇಖಾ ವಂದಿಸಿದರು. ಸುಧಾಕರ ಕುಗ್ವೆ ನಿರೂಪಿಸಿದರು.
ವರದಿ: ಮಧು ರಾಮ್ ಸೊರಬ