Newsಶಿವಮೊಗ್ಗ

40-50ವರ್ಷದ ಮೊದಲು ಹೆಚ್ಚಿನ ಬ್ರಾಹ್ಮಣರು ವಕೀಲ ವೃತ್ತಿಯನ್ನೇ ನಂಬಿದ್ದರು.

40-50ವರ್ಷದ ಮೊದಲು ಹೆಚ್ಚಿನ ಬ್ರಾಹ್ಮಣರು ವಕೀಲ ವೃತ್ತಿಯನ್ನೇ ನಂಬಿದ್ದರು.

(SHIVAMOGA): ಸಾಗರ ವಿದ್ಯಾಜ್ಞಾನಕ್ಕಿಂತ ವ್ಯವಹಾರ ಜ್ಞಾನವೇ ನಮ್ಮನ್ನು ಈವರೆಗೆ ಬೆಳೆಸಿದ್ದು, ಉದ್ಯಮದಲ್ಲಿ ನಿತ್ಯವೂ ಹೊಸತನ್ನು ಕಲಿಯಲು ಅವಕಾಶವಿರುತ್ತದೆ ಎಂದು ಹಿರಿಯ ಉದ್ಯಮಿ ವಿ.ಎನ್. ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಪಟ್ಟಣದ ಬ್ರಾಸಂ ಸಭಾಂಗಣದಲ್ಲಿ ಅಖಿತ ಹವ್ಯಕ ಮಹಾಸಭಾ ನೇತೃತ್ವದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಸ್ವಯಮ್ ವಾಣಿಜ್ಯೋತ್ಸವ ಸಾಗರ ಪ್ರಾಂತ್ಯ ವ್ಯಾಪ್ತಿಯ ಹವ್ಯಕ ಸ್ವ ಉದ್ಯಮಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.


ಉದ್ಯಮ ಪ್ರಾರಂಭಿಸುವ ಮೊದಲು ಹಲವು ರೀತಿಯಲ್ಲಿ ಅದರ ಒಳಹೊರಗನ್ನು ಅರಿತು, ಹೆಜ್ಜೆ ಇಡಬೇಕು. ಸುಮಾರು 40-50ವರ್ಷದ ಮೊದಲು ಹೆಚ್ಚಿನ ಬ್ರಾಹ್ಮಣರು ವಕೀಲ ವೃತ್ತಿಯನ್ನೇ ನಂಬಿಕೊಂಡಿದ್ದರು. ಅಂಥ ಕಾಲದಲ್ಲಿ ಸಾಗರದಲ್ಲಿ ಹೊಸದಾಗಿ ಸಿಮೆಂಟ್ ಉತ್ಪನ್ನದ ಉದ್ಯಮ ಸ್ಥಾಪಿಸಿದ್ದೇ ದೊಡ್ಡ ಸುದ್ದಿಯಾಗಿತ್ತು. ಆದರೆ ಈಗ ಹವ್ಯಕ ಸಮಾಜದವರು ಹತ್ತಾರು ರೀತಿಯ ಉದ್ದಿಮೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಮಾರುಕಟ್ಟೆಯ ಅಗತ್ಯತೆ ಅರಿತು, ವಿನೂತ ತಂತ್ರಜ್ಞಾನ ಬಳಸಿಕೊಂಡು ಗ್ರಾಹಕರ ಅಗತ್ಯತೆ ಪೂರೈಸುವ ಮಟ್ಟದಲ್ಲಿ ಸಮಾಜದ ಉದ್ದಿಮೆದಾರರು ಬೆಳೆದಿರುವುದು ಖುಷಿಯ ಸಂಗತಿ. ಯುವಕರು ಇಂಥ ಸಮಾವೇಶದಲ್ಲಿ ಪಾಲ್ಗೊಂಡು ಹಿರಿಯ ಮಾರ್ಗದರ್ಶನ ಪಡೆದುಕೊಳ್ಳಬೇಕು ಎಂದರು.
ಹವ್ಯಕ ಮಹಾಸಭೆ ಕಾರ್ಯದರ್ಶಿ ಆದಿತ್ಯ ಹೆಗಡೆ ಕಲಗಾರು ಮಾತನಾಡಿ, ತಾಲೂಕು ಮಟ್ಟದಲ್ಲಿ ಹವ್ಯಕರ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಂಘಟನೆ ಅಗತ್ಯ ಅರಿತು, ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಮಹಾಸಭೆ ವತಿಯಿಂದ ಸಂಘಟನಾತ್ಮಕವಾಗಿ ೨೧ ವಿವಿಧ ವೇದಿಕೆ ಪ್ರಾರಂಭಿಸಲಾಗಿದ್ದು, ಇದರಲ್ಲಿ ಹವ್ಯಕ ಉದ್ದಿಮೆದಾರರ ವೇದಿಕೆಯು ಒಂದು. ಹವ್ಯಕರು ಉದ್ದಿಮೆ ಪ್ರಾರಂಭಿಸಿ, ಇತರರಿಗೆ ಉದ್ಯೋಗದಾತರಾಗಬೇಕು ಎನ್ನುವ ಉದ್ದೇಶ ಹೊಂದಿದೆ. ಹವ್ಯಕ ಬ್ರಾಹ್ಮಣರು ಬೇರೆಯವರ ಕೈ ಕೆಳಗೆ ಕೆಲಸ ಮಾಡುವುದಕ್ಕಿಂತ ಒಂದಷ್ಟು ಜನರಿಗೆ ಕೆಲಸ ಕೊಡುವ ರೀತಿ ಬೆಳೆಯಬೇಕು. ಇದರಿಂದ ಸಮಾಜದಲ್ಲೂ ಸಕಾರಾತ್ಮಕ ಬದಲಾವಣೆ ತರಲು ಸಾಧ್ಯ ಎನ್ನುವುದನ್ನು ತೋರಿಸಿಕೊಡಬೇಕಿದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಅಖಿಲ ಹವ್ಯಕ ಮಹಾಸಭೆ ನಿರ್ದೇಶಕ ಕೆ.ಎನ್. ಶ್ರೀಧರ್, ಶಿವಮೊಗ್ಗ ಹವ್ಯಕ ಸಂಘದ ಅಧ್ಯಕ್ಷ ವಿ.ಪಿ. ಪೂರ್ಣನಂದ ಮಾತನಾಡಿದರು. ಕಾಸಿಯ ಪ್ರಧಾನ ಕಾರ್ಯದರ್ಶಿ ಸುರೇಶ್ ಸಾಗರ, ಮಹಾಸಭೆ ಪ್ರಧಾನ ಕಾರ್ಯದರ್ಶಿ ವೇಣು ವಿಘ್ನೇಶ್ ಸಂಪ, ಸಮಾವೇಶದ ಸಂಚಾಲಕ ಎಚ್. ಎನ್. ಉಮೇಶ್ ದೊಂಬೆ, ಹಿರಿಯ ವಕೀಲ ಶ್ರೀಧರ್, ಗುರುಪಾದ್, ಮೊದಲಾದವರು ವೇದಿಕೆಯಲ್ಲಿದ್ದರು. ಐ.ವಿ.ಹೆಗಡೆ, ಹು.ಬಾ.ಅಶೋಕ್, ಶ್ರೀದನ್, ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು. ಸಮಾವೇಶದಲ್ಲಿ ಸಾಗರ, ಹೊಸನಗರ, ಸೊರಬ ತಾಲೂಕಿನ ನೂರಾರು ವಿವಿಧ ಸ್ವ ಉದ್ಯಮಿಗಳು ಭಾಗವಹಿಸಲಿದ್ದರು. ರಮೇಶ್ ಹಾರೆಗೊಪ್ಪ ನಿರೂಪಿಸಿದರು. ರಾಜೇಶ್ ಮಾವಿನಸರ ಸ್ವಾಗತಿಸಿದರು. ರವಿ ಕೈತೋಟ ವಂದಿಸಿದರು.

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code