ಲೋಡ್ ಶೆಡ್ಡಿಂಗ್ ಹೆಸರಿನಲ್ಲಿ ಗಡಿಭಾಗದ ರೈತರ ಜೀವನದೊಡನೆ ಚೆಲ್ಲಾಟವಾಡುತ್ತಿರುವ ಬೆಸ್ಕಾಂ
(KOLARA): ಕಾಮಸಮುದ್ರ: ಲೋಡ್ ಶೆಡ್ಡಿಂಗ್ ಹೆಸರಿನಲ್ಲಿ ಗಡಿಭಾಗದ ರೈತರ ಜೀವನದೊಡನೆ ಚೆಲ್ಲಾಟವಾಡುತ್ತಿರುವ ಬೆಸ್ಕಾಂ ಇಲಾಖೆಯ ವಿರುದ್ದ ಕ್ರಮಕೈಗೊಂಡು ಗುಣಮಟ್ಟದ 8 ತಾಸು ವಿದ್ಯುತ್ ಪೂರೈಕೆ ಮಾಡಬೇಕೆಂದು ಕದರಿನತ್ತ ಗ್ರಾಮದಲ್ಲಿ ಕರೆದಿದ್ದ ರೈತಸಂಘದ ಸಭೆಯಲ್ಲಿ ದಿ:8 ರ ಬುಧವಾರ ತೊಪ್ಪನಹಳ್ಳಿ ಬೆಸ್ಕಾಂ ಕಚೇರಿ ಮುಂದೆ ಹೋರಾಟ ಮಾಡಲು ನಿರ್ಧರಿಸಲಾಯಿತು.
ಶ್ರೀಮಂತರ ರಾಜಕಾರಣಿಗಳ ಕಾರ್ಯಕ್ರಮಗಳಿಗೆ ದಿನದ 24 ಗಂಟೆ ವಿದ್ಯುತ್ ಪೂರೈಕೆ ಮಾಡುವ ಬೆಸ್ಕಾಂ ಅಧಿಕಾರಿಗಳು ಕಾಡಾನೆಗಳ ಹಾವಳಿಯಿಂದ ತತ್ತರಿಸಿರುವ ಗಡಿಭಾಗದ ರೈತರಿಗೆ ರಾತ್ರಿ 6 ಗಂಟೆಯಿoದ ಬೆಳಿಗ್ಗೆ 6 ಗಂಟೆಯವರೆಗೆ ವಿದ್ಯುತ್ ನೀಡಲು ನಿರಾಕರಿಸುವ ಮೂಲಕ ಗಡಿಭಾಗದ ರೈತ ವಿರೋದಿ ದೋರಣೆ ಅನುಸರಿಸುತ್ತಿದ್ದಾರೆಂದು ಬೆಸ್ಕಾಂ ಅಧಿಕಾರಿಗಳ ವಿರುದ್ದ ರೈತ ಸಂಘದ ತಾ.ಅ ಕದರಿನತ್ತ ಶ್ರೀರಾಮಪ್ಪ, ಅಪ್ಪೋಜಿರಾವ್ ಆಕ್ರೋಶ ವ್ಯಕ್ತಪಡಿಸಿದರು.
ಗಡಿ ಭಾಗಗಳಲ್ಲಿ ಕಾಡಾನೆಗಳ ಹಾವಳಿಯಿಂದ ತತ್ತರಿಸಿರುವ ರೈತರು ಖಾಸಗಿ ಸಾಲ ಮಾಡಿ ಬೆಳೆದಿರುವ ಬೆಳೆ ಕೈಗೆ ಬರುವ ಸಮಯದಲ್ಲಿ ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕಣ್ಣ ಮುಂದೆಯೇ ಬೆಳೆ ನಾಶವಾಗುವ ಜೊತೆಗೆ ಸರ್ಕಾರದ ನಿಯಮವನ್ನು ಉಲ್ಲಂಘನೆ ಮಾಡಿ ರಾತ್ರಿ ವೇಳೆ ತಮಗೆ ಇಷ್ಟ ಬಂದ ಸಮಯದಲ್ಲಿ ವಿದ್ಯುತ್ ನೀಡುವುದರಿಂದ ರೈತರು ಸಮರ್ಪಕವಾದ ಬೆಳೆಗೆ ನೀರು ಹಾಯಿಸಲು ಕಾಡಾನೆಗಳ ಭಯದಿಂದ ತತ್ತರಿಸಿ ಬೆಳೆ ನಾಶ ಮಾಡಿಕೊಳ್ಳುವ ಪರಿಸ್ಥಿತಿ ಬೆಸ್ಕಾಂ ಅಧಿಕಾರಿಗಳ ಬೇಜವಬ್ದಾರಿಯಿಂದ ವರ್ತನೆ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಮಸಮುದ್ರ ಹೋ.ಅ. ಮುನಿಕೃಷ್ಣ ಮತ್ತು ಗಡಿಭಾಗದ ರೈತರು ಮಾತನಾಡಿ, ಸರ್ಕಾರದ ನಿಯಮದಂತೆ ರೈತರಿಗೆ ಅನುಕೂಲವಾಗುವ ರೀತಿ ಬೆಳಗ್ಗೆ 3 ತಾಸು, ಸಂಜೆ 4 ತಾಸು ತ್ರಿ ಫೇಸ್ ವಿದ್ಯುತ್ ನೀಡಬೇಕು. ಆದರೆ, ಬೆಸ್ಕಾಂ ಅಧಿಕಾರಿಗಳು ರೈತರ ಕಷ್ಟ ಗೊತ್ತಿಲ್ಲದೆ ಲೋಡ್ ಶೆಡ್ಡಿಂಗ್ ಹಾಗೂ ಮತ್ತಿತರ ನೂರೊಂದು ನೆಪ ಹೇಳಿ ಮೂರು ತಾಸು ಸಹ ಗುಣಮಟ್ಟದ ವಿದ್ಯುತ್ ನೀಡದೆ ರೈತರಿಗೆ ವಂಚನೆ ಮಾಡುವ ಜೊತೆಗೆ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಕಚೇರಿಗೆ ಹೋಗಿ ವಿಚಾರಿಸಿದರೆ ಬೇಜವಾಬ್ದಾರಿ ಉತ್ತರ ಹಾಗೂ ಅಗೌರವದಿಂದ ನಡೆದುಕೊಳ್ಳುತ್ತಿದ್ದಾರೆ. ರಾಜಕಾರಣಿಗಳ ಮತ್ತು ಶ್ರೀಮಂತರ ಕಾರ್ಯಕ್ರಮಗಳಿಗೆ 24 ಗಂಟೆ ವಿದ್ಯುತ್ ಪೂರೈಕೆ ಮಾಡುವ ಬೆಸ್ಕಾಂ ಅಧಿಕಾರಿಗಳು ರೈತರ ಬೆವರ ಹನಿ ಸುರಿಸಿ ಬೆಳೆದ ಬೆಳೆಗೆ ವಿದ್ಯುತ್ ನೀಡದೆ ವಂಚನೆ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ಕಾಡಾನೆಗಳ ಹಾವಳಿಯಿಂದ ತತ್ತರಿಸಿರುವ ರೈತರಿಗೆ ಅನುಕೂಲವಾಗುವ ರೀತಿ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಲು 48 ಗಂಟೆಗಳ ಒಳಗಾಗಿ ಕ್ರಮಕೈಗೊಂಡು ರೈತರ ಬೆಳೆ ರಕ್ಷಣೆಗೆ ಮುಂದಾಗದ ಬೆಸ್ಕಾಂ ಅಧಿಕಾರಿಗಳ ರೈತ ವಿರೋದಿ ದೋರಣೆಯನ್ನು ಖಂಡಿಸಿ ದಿ. 8 ರ ಬುಧವಾರ ತೊಪ್ಪನಹಳ್ಳಿ ಬೆಸ್ಕಾ ಇಲಾಖೆ ಮುತ್ತಿಗೆ ಹಾಕುವ ನಿರ್ದಾರವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಮನವಿ ನೀಡುವಾಗ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ತೊಪ್ಪನಹಳ್ಳಿ ಸುಧಾಕರ್, ಮುರಳಿ, ಬಾಲು, ಕಾರ್ತಿಕ್, ಅನಿಲ್, ಮುನಿರಾಜು, ವಿಶ್ವ, ರಾಮಪ್ಪ, ಸುಬ್ರಮಣಿ, ಮನೋಹರ್, ಗುಲ್ಲಟ್ಟಿ, ರಾಜಪ್ಪ, ಮಂಜುನಾಥ್, ನಾಗರಾಜ್, ಮತ್ತಿತರರಿದ್ದರು.
ವರದಿ: ವಿಷ್ಣು ಕೋಲಾರ