Newsಚಿಕ್ಕಮಗಳೂರು

ಭದ್ರಾರತಿ ಕಾರ್ಯಕ್ರಮ ಅ.12ಕ್ಕೆ
ವಿಜಯದಶಮಿಯಂದು ಭದ್ರಾ ತಟದಲ್ಲಿ ಆರತಿ: ಮಹೇಂದ್ರ.

ಭದ್ರಾರತಿ ಕಾರ್ಯಕ್ರಮ ಅ.12ಕ್ಕೆವಿಜಯದಶಮಿಯಂದು ಭದ್ರಾ ತಟದಲ್ಲಿ ಆರತಿ: ಮಹೇಂದ್ರ.


(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಬಾಳೆಹೊನ್ನೂರುಪಟ್ಟಣದ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯ ವತಿಯಿಂದ ಈ ಬಾರಿ ಹದಿನೈದನೇ ವರ್ಷದ ನವರಾತ್ರಿ ಮಹೋತ್ಸವದ ಅಂಗವಾಗಿ ಈ ಬಾರಿ ಅ.12ರ ಶನಿವಾರ ರಾತ್ರಿ ಪಟ್ಟಣದ ಭದ್ರಾ ನದಿಯ ದಡದಲ್ಲಿ ವಿಶೇಷ ಭದ್ರಾರತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಮಿತಿಯ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ತಿಳಿಸಿದರು.
ಮಲೆನಾಡು ಹಾಗೂ ಬಯಲು ಸೀಮೆಯ ರೈತರು, ಜನರ ಜೀವನಾಡಿಯಾದ ಭದ್ರಾ ನದಿಗೆ ಪಂಚ ಪುರೋಹಿತರಿಂದ ವಿಶೇಷ ಭದ್ರಾರತಿಯನ್ನು ನಡೆಸಲಾಗುವುದು ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.


ಸನಾತನ ಧರ್ಮವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದು, ದೇಶದ ಸಂಸ್ಕೃತಿಯಲ್ಲಿ ಪ್ರಕೃತಿ, ಭೂಮಿ, ಗಂಗೆಯನ್ನು ದೇವರಿಗೆ ಹೋಲಿಸಿ ಪೂಜಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾಶಿ-ವಾರಾಣಾಸಿಯಲ್ಲಿ ಪವಿತ್ರ ಗಂಗಾನದಿಗೆ ನಡೆಯುವ ಗಂಗಾರತಿಯಂತೆ ಈ ಭಾಗದಲ್ಲಿ ಜನರ ಜೀವನಕ್ಕೆ ಪೂರಕವಾಗಿರುವ ಭದ್ರಾ ನದಿಗೆ ಪ್ರಥಮ ಬಾರಿಗೆ ಆರತಿ ನಡೆಸಲಾಗುತ್ತದೆ.
ಭದ್ರಾರತಿಯ ಧಾರ್ಮಿಕ ಪೂಜಾ ಕಾರ್ಯದಿಂದ ಪವಿತ್ರ ಗಂಗಾ ಮಾತೆಯು ಪ್ರಸನ್ನಳಾಗಿ ಭದ್ರಾ ನದಿಯ ತಟದ ಕೃಷಿ ಭೂಮಿಗಳಿಗೆ, ಬಯಲು ನಾಡಿನ ರೈತರಿಗೆ ಸದಾ ನೀರನ್ನು ಪೂರೈಕೆ ಮಾಡುತ್ತಿರಲಿ ಎಂಬುದು ನಮ್ಮ ಆಶಯವಾಗಿದೆ.
ಧಾರ್ಮಿಕ ನೆಲೆಗಟ್ಟಿನಲ್ಲಿಯೇ ಈ ಕಾರ್ಯಕ್ರಮವನ್ನು ನಡೆಸುತ್ತಿದ್ದು, ಭದ್ರಾರತಿ ಸಂದರ್ಭದಲ್ಲಿ ವಿಶೇಷವಾಗಿ ಮಾತೆಯರು ತಮ್ಮ ಮನೆಗಳಿಂದ ವಿವಿಧ ಪುಷ್ಪಗಳನ್ನು ತಂದು ಪೂಜಾ ವಿಧಾನದ ಮೂಲಕ ಸಮರ್ಪಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.


ಸಮಿತಿಯ ಕೋಶಾಧಿಕಾರಿ ಭಾಸ್ಕರ್ ವೆನಿಲ್ಲಾ ಮಾತನಾಡಿ, ಭದ್ರಾರತಿ ಕಾರ್ಯಕ್ರಮವು ಈ ಭಾಗದಲ್ಲಿಯೇ ವಿಶೇವಾಗಿದ್ದು, ಇದೂವರೆಗೆ ಗಂಗಾರತಿ, ತುಂಗಾರತಿಗಳು ನಡೆದಿದ್ದವು. ಇದೀಗ ಭದ್ರಾರತಿ ಮೂಲಕ ಹೊಸ ಇತಿಹಾಸ ದಾಖಲಾಗಲಿದೆ.
ಇದರೊಂದಿಗೆ ದುರ್ಗಾದೇವಿಯ ಜಲಸ್ತಂಭನಾ ಶೋಭಾ ಯಾತ್ರೆಯು ಅ.12ರಂದು ವೈಶಿಷ್ಟ್ಯವಾಗಿ  ನಡೆಯಲಿದ್ದು, ವಿಶೇಷವಾದ ಸ್ತಬ್ಧ ಚಿತ್ರಗಳು, ಹುಲಿ ವೇಷ, ಮರಗೋಲು, ನವಿಲು ಕುಣಿತ, ಮೀನು ನರ್ತನ, ಥೈಯ್ಯಂ ನೃತ್ಯ, ವಿವಿಧ ಪಕ್ಷಿಗಳ ನರ್ತನ ಸೇರಿದಂತೆ 20ಕ್ಕೂ ಅಧಿಕ ಕಲಾತಂಡಗಳು ಮೆರವಣಿಗೆಗೆ ಕಳೆಗಟ್ಟಲಿವೆ.
ವಿಜಯದಶಮಿಯಂದು 15 ಸಾವಿರ ಭಕ್ತರಿಗೆ ಅನ್ನ ಸಂತರ್ಪಣೆಗೆ ವ್ಯವಸ್ಥೆ ಮಾಡಿಕೊಂಡಿದ್ದು, ಶೋಭಾಯಾತ್ರೆಯಲ್ಲಿ 20 ಸಾವಿರಕ್ಕೂ ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಕಾರ್ಯಕ್ರಮದ ಯಶಸ್ಸಿಗೆ ಭಕ್ತರ ಪಾಲ್ಗೊಳ್ಳುವಿಕೆ ಪ್ರಮುಖವಾಗಿದೆ ಎಂದು ಹೇಳಿದರು.
ಸಮಿತಿಯ ಕಾರ್ಯಾಧ್ಯಕ್ಷ ಬಿ.ಚನ್ನಕೇಶವ ಬರಗಲ್, ಉಪಾಧ್ಯಕ್ಷ ಶಿವರಾಮ್‌ಶೆಟ್ಟಿ, ಜಂಟಿ ಕಾರ್ಯದರ್ಶಿ ಪ್ರಭಾಕರ್, ನಟರಾಜ್ ಶೆಟ್ಟಿ, ಎಚ್.ಡಿ.ಸತೀಶ್, ನಾಗರಾಜ್ ಬರಗಲ್, ಡಿ.ಎನ್.ಸುಧಾಕರ್ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *

Scan the code