ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಗಡಿಪಾರಿಗೆ ಆಗ್ರಹ.
(KOLARA): ಕೋಲಾರ: ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ದೇಶದ್ರೋಹದಡಿಯಲ್ಲಿ ಕೇಸು ದಾಖಲಿಸಿ ಬಿಜೆಪಿ ಪಕ್ಷದಿಂದ ಅಮಾನತ್ತುಗೊಳಿಸಿ ಭಾರತದ ದೇಶದಿಂದ ಗಡಿಪಾರು ಮಾಡಬೇಕೆಂದು ದಲಿತ ನಾಗರೀಕ ಸಮಿತಿಯು ಆಗ್ರಹಿಸಿದೆ.
ತಾಲೂಕಿನ ವೇಮಗಲ್ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ಮಾಡಿ ವೇಮಗಲ್ ಕುರುಗಲ್ ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿಗಳಾದ ವೆಂಕಟೇಶ್ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮಾತನಾಡಿ, ಉತ್ತರಕನ್ನಡ ಜಿಲ್ಲೆಯ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ನಮ್ಮ ಭಾರದ ದೇಶದಲ್ಲಿ ಮೋದಿ ಸರ್ಕಾರ ಬಂದಾಗಿನಿoದಲೂ ಪದೆಪದೇ ಸಂವಿಧಾನವನ್ನು ಕೊತ್ತೊಗೆಯಿರಿ ಎಂದು ಬಹಿರಂಗವಾಗಿ ಹೇಳಿಕೆಗಳನ್ನು ನೀಡುತ್ತಿರುವುದು, ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಮಾಡಿರುವ ಅಪಮಾನವಾಗಿದೆ ಎಂದು ಕಿಡಿ ಕಾರಿದರು.
ಅಂಬೇಡ್ಕರ್ ಅವರು ಸಂವಿಧಾನ ರಚಿಸದೆ ಹೋಗಿದ್ದರೆ ತಾವುಗಳು ರಾಷ್ಟçಪತಿಗಳಾಗುತ್ತಿರಲಿಲ್ಲ ಮತ್ತು ನರೇಂದ್ರಮೋದಿಯವರು ಪ್ರಧಾನಿಗಳಾಗುತ್ತಿರಲಿಲ್ಲ. ಹೀಗಿರುವಾಗ ಅನಂತಕುಮಾರ್ ಹೆಗಡೆ ಪದೇಪದೇ ಸಂವಿಧಾನದ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದು, ಇದರಿಂದ ಭಾರತ ದೇಶವೇ ತಲೆ ತಗ್ಗಿಸುವಂತಾಗಿದೆ ಎಂದು ಆರೋಪಿಸಿದರು.
ಆದ್ದರಿಂದ ತಾವು ಕೂಡಲೇ ಅನಂತಕುಮಾರ್ ಹೆಗಡೆ ಅವರ ಮೇಲೆ ದೇಶದ್ರೋಹ ಅಡಿಯಲ್ಲಿ ಕೇಸನ್ನು ದಾಖಲಿಸಿ ಇವರನ್ನು ಬಿಜೆಪಿ ಪಕ್ಷದಿಂದ ಅಮಾನತ್ತುಗೊಳಿಸಿ ಭಾರತ ದೇಶದಿಂದ ಗಡಿಪಾರು ಮಾಡಬೇಕೆಂದು ಸಂಘಟನೆಯು ಒತ್ತಾಯಿಸಿದೆ.
ಪ್ರತಿಭಟನೆಯಲ್ಲಿ ದಲಿತ ನಾಗರೀಕ ಸಮಿತಿಯ ರಾಜ್ಯಾಧ್ಯಕ್ಷ ಪುರಹಳ್ಲಿ ಜಿ.ಯಲ್ಲಪ್ಪ, ನಾಗನಾಳ ರಮೇಶ್, ರಾಮಪುರ ಮುನಿರಾಜು, ಚನ್ನಪ್ಪನಹಳ್ಳಿ ನಾಗರಾಜ ಜಿ, ಚಂದ್ರಶೇಖರ್, ಎಸ್.ಎಸ್.ಎಸ್.ಸಿ.ಸದಸ್ಯ ಮೇಡಿಹಾಳ ವೆಂಕಟರಾಮ, ಇರಗಸಂದ್ರ ಮಂಜುನಾಥ, ನಾಗನಾಳ ಪಾಪಣ್ಣ, ಮಲಿಯಪನಹಳ್ಳಿ ಈರಣ್ಣ, ಹೊಲೇರಹಳ್ಳಿ ಗೋಪಾಲಪ್ಪ, ಬೆಟ್ಟಸೂರ ಶ್ರೀನಿವಾಸ, ರಾಮಪುರ ಕೃಷ್ಣಪ್ಪ, ಪುರಹಳ್ಳಿ ಎಂ.ತಿಪ್ಪಣ್ಣ ಇನ್ನಿತರರು ಉಪಸ್ಥಿತರಿದ್ದರು.
ವರದಿ: ವಿಷ್ಣು ಕೋಲಾರ