ತಾಳ್ಮೆ, ಹೊಂದಾಣಿಕೆ ಇದ್ದಾಗ ವ್ಯವಹಾರಗಳು ಸುಸೂತ್ರವಾಗಿ ನಡೆಯಲು ಸಾಧ್ಯ – ಡಿ.ಎಸ್ ಶಂಕರ್ ಶೇಟ್
(SHIVAMOGA): ಸೊರಬ: ಬ್ಯಾಂಕ್ ಹಾಗೂ ಗ್ರಾಹಕ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇಬ್ಬರಲ್ಲೂ ತಾಳ್ಮೆ, ಹೊಂದಾಣಿಕೆ ಇದ್ದಾಗ ವ್ಯವಹಾರಗಳು ಸುಸೂತ್ರವಾಗಿ ನಡೆಯಲು ಸಾಧ್ಯ ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ, ಸಮಾಜ ಸೇವಕ ಡಿ.ಎಸ್. ಶಂಕರ್ ಶೇಟ್ ಹೇಳಿದರು.
ಪಟ್ಟಣದ ಕೆನರಾ ಬ್ಯಾಂಕ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೆಂಕಟ್ ಅವರು ಪದೋನ್ನತಿ ಹೊಂದಿ ಆಂಧ್ರಪ್ರದೇಶಕ್ಕೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮೈಸೂರು ಪೇಟ ತೊಡಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಿ ಅವರು ಮಾತನಾಡಿದರು.
ಯಾವುದೇ ಒಂದು ಸಂಸ್ಥೆ ಅಭಿವೃದ್ಧಿಯತ್ತ ಸಾಗಬೇಕಾದರೆ ಅಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿ, ಸಿಬ್ಬಂದಿ ವರ್ಗದವರ ಸಹಕಾರ ಬಹುಮುಖ್ಯವಾಗುತ್ತದೆ. ವೆಂಕಟ್ ರವರು ಗ್ರಾಹಕರೊಂದಿಗೆ ಉತ್ತಮವಾಗಿ ಸ್ಪಂದಿಸಿ, ಸಹಕರಿಸಿ ಬ್ಯಾಂಕಿನ ವ್ಯವಹಾರ ಸುಗಮವಾಗಿ ನಡೆಯಲು ಸಹಕರಿಸಿದ್ದಾರೆ. ಇಲ್ಲಿ ಇದ್ದಷ್ಟು ಕಾಲ ಸ್ನೇಹಜೀವಿಯಾಗಿದ್ದ ಇವರ ವರ್ಗಾವಣೆ ಬೇಸರವನ್ನುಂಟು ಮಾಡಿದ್ದರೂ ವರ್ಗಾವಣೆ ಸಹಜ. ಇವರ ಮುಂದಿನ ಜೀವನ ಉತ್ತಮವಾಗಿರಲಿ ಎಂದು ಹಾರೈಸಿದರು.
ವ್ಯವಸ್ಥಾಪಕ ಮಂಜುನಾಥ್ ಮಾತನಾಡಿ, ಉತ್ತಮ ಸಿಬ್ಬಂದಿಯಾಗಿದ್ದ ವೆಂಕಟ್ರವರು ಸ್ನೇಹಜೀವಿಯಾಗಿದ್ದು, ಎಲ್ಲರೊಂದಿಗೆ ಹೊಂದಿಕೊ0ಡು ಗ್ರಾಹಕರೊಂದಿಗೆ ಸ್ನೇಹಯುತವಾಗಿ ವರ್ತಿಸುತ್ತಿದ್ದರು. ಪದೋನ್ನತಿ ಹೊಂದಿ ವರ್ಗಾವಣೆಗೊಂಡಿರುವ ಇವರ ಮುಂದಿನ ಜೀವನ ಸುಖಯಯವಾಗಿರಲಿ ಎಂದರು.
ಸನ್ಮಾನ ಸ್ವೀಕರಿಸಿದ ವೆಂಕಟ್ ಮಾತನಾಡಿ ಕಳೆದ 3 ವರ್ಷಗಳಿಂದ ಸೇವೆ ಸಲ್ಲಿಸಿದ ಆತ್ಮ ತೃಪ್ತಿ ತಮಗಿದೆ. ಇಲ್ಲಿನ ಪರಿಸರ ಉತ್ತಮವಾಗಿದ್ದು, ಬ್ಯಾಂಕಿನ ನಿಯಮಾವಳಿಯಂತೆ ವರ್ಗಾವಣೆ ಸಹಜವಾಗಿದ್ದು, ಅದರಂತೆ ವರ್ಗಾವಣೆಯಾಗಿ ಹೋಗುತ್ತಿದ್ದೇನೆ. ಮತ್ತೆ ಮುಂದೆ ಅವಕಾಶ ಸಿಕ್ಕರೆ ಇಲ್ಲಿ ಬಂದು ಕಾರ್ಯನಿರ್ವಹಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಮ್ಯಾನೇಜರ್ ಮಂಜುನಾಥ್, ಸುಹಾಸ್, ಸಿಬ್ಬಂದಿಗಳಾದ ಆನಂದ್, ಸಚಿನ್, ನಂದಾದೀಪ, ಪೂಜಾ, ಸಿದ್ದಿವಿನಾಯಕ ಶೇಟ್, ಪ್ರಶಾಂತ್ ಶೇಟ್, ಉಲ್ಲಾಸ, ಜಯಮ್ಮ, ಪಿಗ್ಮಿ ಸಂಗ್ರಾಹಕರಾದ ವೀರೇಶ್, ರಾಜಾರಾಮ ಶಿಂಧೆ, ಶ್ರೀಖರ ಹೆಗಡೆ, ಸುರೇಶ್, ಮಾನಸ, ಸುಧಾಂಶ, ರಾಮಚಂದ್ರ ಚಿಮಣೂರು ಮತ್ತಿತರರಿದ್ದರು.
ವರದಿ: ಸಂದೀಪ ಯು.ಎಲ್ ಸೊರಬ