ಜಾತಿವಾರು ಬಿಡಿ, ಸತೀಶ್ ಜಾರಕಿಹೊಳಿ ಡಿಸಿಎಂ ಮಾಡಿ:- ಸಂಗಪ್ಪಗೋಳ್
(BELAGAVI): ಬೆಳಗಾವಿ: ಉತ್ತರ ಕರ್ನಾಟಕದ ಗಟ್ಟಿ ಧ್ವನಿ, ಅಹಿಂದ ವರ್ಗದ ನಾಯಕ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಗೆ ಡಿಸಿಎಂ ಹುದ್ದೆ ನೀಡಬೇಕೆಂದು ಕಾಂಗ್ರೆಸ್ ಮುಖಂಡ ಹಾಗೂ ಹೋರಾಟಗಾರ ಆರ್.ಬಿ.ಸಂಗಪ್ಪಗೋಳ್ ಹೈಕಮಾಂಡ್ ನಾಯಕರಲ್ಲಿ ಬೇಡಿಕೆ ಇಟ್ಟಿದ್ದಾರೆ.
ಈ ಕುರಿತು ಚಿಕ್ಕೋಡಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಚರ್ಚೆಯಲ್ಲಿರುವ ಜಾತಿವಾರು ಡಿಸಿಎಂ ಹುದ್ದೆಗಳನ್ನು ಸೃಷ್ಟಿಸುವುದು ಅನಗತ್ಯ ಗೊಂದಲಕ್ಕೆ ಕಾರಣವಾಗುತ್ತದೆ. ಜಾತಿವಾರು ಹುದ್ದೆಗಳನ್ನು ನೀಡುವುದು ಸೂಕ್ತವಲ್ಲ. ಬದಲಾಗಿ ಅನುಭವಸ್ಥ ಹಾಗೂ ಸಮಾಜವಾದಿ ನಾಯಕರಾದ ಸತೀಶ್ ಜಾರಕಿಹೊಳಿ ಅವರನ್ನು ಡಿಸಿಎಂ ಮಾಡಬೇಕೆಂದು ಒತ್ತಾಯಿಸಿದರು.
ಹಿಂದಿನ ಹಾಗೂ ಪ್ರಸ್ತುತ ರಾಜ್ಯದ ಆಡಳಿತವನ್ನು ಗಮನಿಸಿದಾಗ ಬಹುತೇಕ ಪ್ರಮುಖ ಹುದ್ದೆಗಳು ದಕ್ಷಿಣ ಕರ್ನಾಟಕದ ಪಾಲಾಗುತ್ತಿರುವುದನ್ನು ನೋಡಿದ್ದೇವೆ. ಆದರೆ ಈ ಬಾರಿ ಆ ರೀತಿಯ ತಾರತಮ್ಯಕ್ಕೆ ಅವಕಾಶ ನೀಡುವುದಿಲ್ಲ ಎಂದು ಗುಡುಗಿದರು.
ಸತೀಶ್ ಜಾರಕಿಹೊಳಿ ಅವರಿಗೆ ಡಿಸಿಎಂ ಹುದ್ದೆ ನೀಡಿದರೆ ಅಹಿಂದ ವರ್ಗದ ಕಲ್ಯಾಣದ ಜೊತೆಗೆ ಉತ್ತರ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಈಗಾಗಲೇ ರಾಜ್ಯದಲ್ಲೇ ಪ್ರಭಾವೀ ನಾಯಕರಾಗಿರುವ ಅವರು ಆಡಳಿತಾತ್ಮಕ ದೃಷ್ಟಿಯಿಂದ ಜೊತೆಗೆ ಅಧಿಕಾರದ ವಿಕೇಂದ್ರೀಕರಣ ಮಾಡುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ಹಾಗೂ ಚಿಕ್ಕೋಡಿಗಳನ್ನು ಜಿಲ್ಲೆಗಳನ್ನಾಗಿ ಘೋಷಿಸುವ ಭರವಸೆ ನೀಡಿದ್ದಾರೆ. ಅವರಿಗೆ ಡಿಸಿಎಂ ಪಟ್ಟ ನೀಡಿದರೆ ಜಿಲ್ಲಾ ವಿಭಜನೆಗೆ ಇನ್ನಷ್ಟು ಬಲ ಬಂದಂತಾಗುತ್ತದೆ ಎಂದು ತಿಳಿಸಿದರು. ಅಭಿವೃದ್ಧಿ ಪರ ದೃಷ್ಟಿ ಕೋನ ಹೊಂದಿರುವ ಅವರಿಗೆ ಡಿಸಿಎಂ ಹುದ್ದೆ ನೀಡಿದರೆ ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ನೀಡುವುದರ ಜೊತೆಗೆ ಅಹಿಂದ ವರ್ಗಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟಂತಾಗುತ್ತದೆ ಎಂದರು.
ಅಲ್ಲದೆ ಸತೀಶ್ ಜಾರಕಿಹೊಳಿ ಅವರು ಡಿಸಿಎಂ ಹುದ್ದೆ ಅಲಂಕರಿಸಿದರೆ ಮುಖ್ಯವಾಗಿ ಉತ್ತರ ಕರ್ನಾಟಕದ ನೀರಾವರಿ ವಂಚಿತ ಶೇ 50% ರಷ್ಟು ಭೂಪ್ರದೇಶಕ್ಕೆ ನೀರು ತಲುಪುತ್ತದೆ. ಇದರಿಂದ ರೈತರಿಗೆ ಮತ್ತಷ್ಟು ಅನುಕೂಲವಾಗಲಿದೆ. ಅಷ್ಟೇ ಅಲ್ಲದೆ ರಾಷ್ಟೀಯ ಹಾಗೂ ಅಂತಾರಾಷ್ಟ್ರೀಯ ಕಂಪನಿಗಳನ್ನು ಉತ್ತರ ಕರ್ನಾಟಕಕ್ಕೆ ಕರೆತಂದು ಇಲ್ಲಿ ತಾಂಡವವಾಡುತ್ತಿರುವ ನಿರುದ್ಯೋಗ ಸಮಸ್ಯೆ ಹೋಗಲಾಡಿಸುವ ಸಾಮರ್ಥ್ಯ ಅವರಲ್ಲಿದೆ ಎಂದು ಸಂಗಪ್ಪಗೋಳ್ ಜಾರಕಿಹೊಳಿ ಪರ ಬ್ಯಾಟ್ ಬೀಸಿದರು.
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯಲಿ….
ರಾಜ್ಯದಲ್ಲಿ ವ್ಯಾಪಕವಾಗಿರುವ ಸಿಎಂ ಬದಲಾವಣೆ ಕೂಗಿಗೆ ನನ್ನ ವಿರೋಧವಿದೆ.
ಸದ್ಯದ ಸ್ಥಿತಿಯಲ್ಲಿ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆಯ ಅಗತ್ಯವಿಲ್ಲ. ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯವು ಅಭಿವೃದ್ಧಿ ಪರವಾದ ಹೆಜ್ಜೆ ಹಾಕುತ್ತಿದೆ. ಅವರೊಬ್ಬ ಅಪ್ರಬುದ್ಧ ಹಾಗೂ ಶುದ್ಧ ಹಸ್ತದ ನಾಯಕರಾಗಿದ್ದಾರೆ. ಪಾರದರ್ಶಕ ಆಡಳಿತ ಅವರ ವಿಶೇಷ ಗುರುತಾಗಿದೆ. ಈಗಾಗಲೇ ಅವರ ನಾಯಕತ್ವದಲ್ಲಿಯೇ ಲೋಕಸಭಾ ಚುನಾವಣೆ ಎದುರಿಸಿ ಪಕ್ಷವು ಉತ್ತಮ ಪ್ರದರ್ಶನ ನೀಡಿದೆ. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ಸಿದ್ದರಾಮಯ್ಯನವರ ನೇತೃತ್ವವೇ ಇರಬೇಕಾಗುತ್ತದೆ. ಇಲ್ಲದಿದ್ದರೆ ಪಕ್ಷಕ್ಕೆ ಸೋಲಿನ ಇತಿಹಾಸ ಮತ್ತೊಮ್ಮೆ ಮರುಕಳಿಸುತ್ತದೆ ಎಂದು ಸಂಗಪ್ಪಗೋಳ್ ಮಾರ್ಮಿಕವಾಗಿ ನುಡಿದರು.
ವರದಿ: ಪ್ರಹ್ಲಾದ್ ಅನ್ವೇಷಣೆ