Entertainment

Entertainmentಮನರಂಜನೆ

‘ಅಮ್ಮ-ಮಗ ತೀರ್ಪುಗಾರರಾಗಿ ಬಂದು ಶಾಲೆಯಲ್ಲಿ ಹೊಸ ಇತಿಹಾಸವನ್ನೆ ಬರೆದಿದ್ದೀರಿ’

(ARTICAL):‘ಆಟ’ ಆಡುವವರನ್ನು, ನೋಡುವವರನ್ನು ತುದಿಗಾಲಲ್ಲಿ ನಿಲ್ಲಿಸುವುದರಲ್ಲಿ ಸಂಶಯವೇ ಇಲ್ಲ. ಒಮ್ಮೆ ಆಟಗಾರರಾಗಿದ್ದವರು ಮುಂದೊಂದು ದಿನ ಆ ಆಟವನ್ನು ಕಲಿಸುವ ತರಬೇತುದಾರರಾಗಬಹುದು, ಆ ಕ್ರೀಡೆಯ ಬೇರೆಬೇರೆ ಮಜಲುಗಳಲ್ಲಿ ಕಾರ್ಯ ನಿರ್ವಹಿಸಿದಾಗ, ಆ ಕ್ರೀಡೆಯ ಬಗೆಗೆ ಆಸಕ್ತಿ ಇನ್ನೂ ಹಾಗೆಯೇ ಇದ್ದಲ್ಲಿ ಅದು ಮತ್ತೊಂದು ರೂಪಕ್ಕೆ ಕರೆದುಕೊಂಡು ಹೋಗಬಹುದಾದ ಸಂಗತಿಯೊಂದು ಖುಷಿ ಕೊಟ್ಟ ಸಮಯ.                 ಶಾಲೆ ಆರಂಭವಾದಾಗ ‘ನವೀ.ಡಿ.ಸಿ’ ಎಂಬ ವಿದ್ಯಾರ್ಥಿ ಹೊಸದಾಗಿ ಶಾಲೆಗೆ ಸೇರಿದ ಸಮಯ. ಆತ ಸ್ಕೌಟ್ ನಲ್ಲಿ ಸಕ್ರೀಯನಾಗಿ ನಮ್ಮ ಮಲ್ನಾಡ್ ಓಪನ್ ಗ್ರೂಪ್ ನ ಸದಸ್ಯನಾಗಿದ್ದ ಚಿರಪರಿಚಿತನೂ ಆಗಿದ್ದವ. ಓದಿನಲ್ಲಿ ಸ್ವಲ್ಪ ಹಿಂದಿದ್ದ. ಒಂದಿಷ್ಟು ಆಟೋಟಗಳಲ್ಲಿ ಮುಂದಿರುತ್ತಿದ್ದ. ತರಗತಿಯಲ್ಲಿ ತನ್ನ ಪಾಡಿಗೆ ತಾನಿರುತ್ತಿದ್ದವನು, ಮಾತು ಮಿತಭಾಷಿ. ಇದರ ಆಚೆಗೆ ಆತ ಟೆಕ್ವಾಂಡೋ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದ ರೀತಿಯೇ ಬೆರಗಾಗಿಸಿತ್ತು. ತರಗತಿಯಲ್ಲಿ ಇಷ್ಟೊಂದು ಮೌನವಾಗಿರುವ ವಿದ್ಯಾರ್ಥಿ ಟೆಕ್ವಾಂಡೋ ಆಡಲು ಮುಂದಾದರೆ, ಆ ಸಾಮರ್ಥ್ಯವನ್ನು ಕಂಡರೆ ಭಯಂಕರ ಎನಿಸುವಂತಿರುತ್ತಿತ್ತು.  ಇವರ ತಂದೆ ದೊರೈ, ತಾಯಿ ಅಶ್ವಿನಿದೊರೈ ತಮ್ಮ ನವನೀತ್ ಎಲ್ಲರೂ ಕೂಡ ‘ಬ್ಲ್ಯಾಕ್ ಬೆಲ್ಟ್’ ಪಡೆದಿರುವವರೇ ಆಗಿದ್ದಾರೆ. ಇಡೀ ಕುಟುಂಬವೇ ಇದರಲ್ಲಿ ತೊಡಗಿಸಿಕೊಂಡಿರುವ ರೀತಿಯೇ ಅನನ್ಯವಾದದ್ದು. ಸಂತೋಷದ ಸಂಗತಿಯೆಂದರೆ ಯಾವುದೇ ಪ್ರತಿಫಲಾಪೇಕ್ಷತೆ ಇಲ್ಲದೇ ಮೇಡಂ ಶಾಲಾ-ಕಾಲೇಜಿನ ಹೆಣ್ಣುಮಕ್ಕಳಿಗೆ ಉಚಿತವಾಗಿ ಆತ್ಮರಕ್ಷಣೆಕಲೆಯನ್ನು ಹೇಳಿಕೊಡುತ್ತಾರೆ. ಒಮ್ಮೆ ‘ಮಕ್ಕಳ ದಸರಾ’ ಕಾರ್ಯಕ್ರಮದ ಉದ್ಘಾಟನೆಯು ನಗರದ ಶಿವಪ್ಪನಾಯಕ ವೃತ್ತದಿಂದ ಆರಂಭವಾಗಲಿದ್ದಿತು.  ನಮ್ಮ ಶಾಲೆಯ ಬ್ಯಾಂಡ್ ತಂಡವನ್ನು ಕರೆದುಕೊಂಡು ಹೋಗಿದ್ದೆವು. ಅಲ್ಲಿ ಒಂದು ಸಣ್ಣ ಟೆಕ್ವಾಂಡೋ/ಕರಾಟೆಯ ಪ್ರಾತ್ಯಕ್ಷಿತೆಯಿತ್ತು. ಆ ತಂಡದಲ್ಲಿ ನವೀ ಮತ್ತು ಆತನ ಸಹೋದರ ಇಬ್ಬರೂ ಇದ್ದರು. ಇಬ್ಬರು ಅಲ್ಲಿ ವಿವಿಧ ಭಂಗಿಗಳು, ಹಂಚು, ಇಟ್ಟಿಗೆಗಳನ್ನು ಒಡೆಯುವುದನ್ನು ಕಂಡ ಜೊತೆಗಿದ್ದ ವಿದ್ಯಾರ್ಥಿಗಳು ಆಶ್ಚರ್ಯಚಕಿತರಾದರು. ‘ಶಾಲೆಲಿ ಒಳ್ಳೆ ಅಮ್ಮಣ್ಣಿಪಾಪು ಇದ್ದ ಹಾಗೇ ಇರ್ತಾನೆ. ಇಲ್ಲಿ ನೋಡಿದರೆ ಕೂಗಿಕೊಂಡು ಹಾರಿಹಾರಿ ಸ್ಟಂಟ್ ಮಾಡೋದನ್ನ ನೋಡಿದರೆ ನಿಜಕ್ಕೂ ಅವನೇನಾ ಇವನು?  ಅಂತ ಅನ್ನಿಸದೇ ಇರದು’ ಎಂದು ಅವನ ತರಗತಿಯ ಮಕ್ಕಳೇ ಹೇಳಿದರು. ನೆರೆದಿದ್ದ ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿದರು. ಇದರ ಮಧ್ಯೆ ಸುತ್ತಲೂ ಒಂದಿಷ್ಟು ಮಕ್ಕಳು ತಟ್ಟೆಗಳಲ್ಲಿ ಕೇಸರಿ, ಬಿಳಿ, ಹಸಿರು ಬಣ್ಣವನ್ನು ಮೇಲಕ್ಕೆ ಎತ್ತಿ ಹಿಡಿದಿದ್ದರು. ಅದನ್ನು ಹಾರಿ ಒಮ್ಮೆಲೆಗೆ  ಅವನ್ನು ಒಡೆದಾಗ ಗಾಳಿಯಲ್ಲಿ ತ್ರಿವರ್ಣವನ್ನು ಕಂಡು ಜೋರಾದ ಕರತಾಡನವಿತ್ತು. ಕಡೆಯದಾಗಿ ಅದೇ ರೀತಿಯಲ್ಲಿ ಹಂಚುಗಳನ್ನು ಹಿಡಿದಿದ್ದರು. ಸುತ್ತಲೂ ತಿರುಗುತ್ತ ಎಲ್ಲವನ್ನು ಒಡೆದನು. ಕಡೆಯದಾಗಿ ಒಂದನ್ನು ಮಾತ್ರ ಒಡೆಯಲಾಗಲಿಲ್ಲ. ಎರಡು ಸೆಕೆಂಡ್ ಸಮಯ ತೆಗೆದುಕೊಂಡು ಮತ್ತೊಮ್ಮೆ ಅದನ್ನು ಇನ್ನೂ ಸ್ವಲ್ಪ ಎತ್ತರದಲ್ಲಿ ಹಿಡಿಯುವಂತೆ ಹೇಳಿ. ತದೇಕಚಿತ್ತದಿಂದ ಅದನ್ನೇ ಗಮನಿಸಿ ದೂರದಿಂದ ಓಡಿಬಂದು ಅದನ್ನು ಒಡೆದಾಗ ನಮ್ಮ ಶಾಲೆಯ ಮಕ್ಕಳು ಕೂಗುತ್ತ ಚಪ್ಪಾಳೆ ತಟ್ಟಿದರು. ೧೦-೧೫ ನಿಮಿಷ ರೋಮಾಂಚನ ಎನಿಸುವಂತಿತ್ತು ನವೀ ಮತ್ತು ತಂಡದ ಕಾರ್ಯಕ್ರಮ. ಅದಾದ ನಂತರ ನಮ್ಮ ಶಾಲೆಯ ಮಕ್ಕಳು ಅವನಿಗೆ ಅಭಿನಂದನೆ ಸಲ್ಲಿಸಿದರು. ಎಷ್ಟೋ ಮಕ್ಕಳು, ‘ಲೋ ಏನೋ ಇಷ್ಟೆಲ್ಲಾ ಪ್ರತಿಭೆ ಇಟ್ಟಿದಿಯ. ಒಂದುದಿನವೂ ಈ ತರದ್ದು ಗೊತ್ತಿದೆ ಅಂತ ಹೇಳಲಿಲ್ಲವಲ್ಲೋ?’ ಎಂದು ಜೋರು ಮಾಡಿದ್ದಾರೆ. ಕೆಲವರು ‘ಸೈಲೆಂಟ್ ಇದಾನೆ ಅಂತ ಕೆಣಕಬೇಡಿ, ಭಯಂಕರ ಸಾಮರ್ಥ್ಯ ಇರುವವನು’ ಎಂದರು. ಅವರ ತಾಯಿಯ ಸೂಚನೆಯ ಮೇರೆಗೆ ನಮ್ಮ ಶಾಲೆಯ ಶಿಕ್ಷಕರನ್ನು ಮಾತನಾಡಿಸಲು ಬಂದಾಗ, ‘ಶಾಲೆಲಿ ಇರೋನು ನೀನೇನಾ? ಅಥವಾ ಬೇರೆಯವನಾ? ದೊಡ್ಡ ಪ್ರತಿಭೆ ನೀನು. ಒಳ್ಳೆಯದಾಗಲಿ’ ಎಂದಾಗ ಅಷ್ಟೇ ನಮ್ರತೆಯಿಂದ ನಡೆದುಕೊಂಡು. ನಂತರ ತಮ್ಮ ತಂಡದೊಂದಿಗೆ ಸೇರಿದನು.                 ಇವನ ಪ್ರತಿಭೆಯನ್ನು ಕಣ್ಣಾರೆ ಕಂಡ ಆತನ ಸ್ನೇಹಿತರು, ಶಿಕ್ಷಕರು ಶಾಲೆಯಲ್ಲಿ ಇವನಿಂದ ಒಂದು ಕಾರ್ಯಕ್ರಮ ಕೊಡಿಸಬೇಕು ಎಂದುಕೊಂಡರು. ತಿಂಗಳಲ್ಲಿ ಒಂದೆರಡು ಶನಿವಾರ ‘ಮಕ್ಕಳ ಪ್ರತಿಭಾ ಪ್ರದರ್ಶನ’ ಇದ್ದೇ ಇರುತ್ತಿತ್ತು. ಇದರಲ್ಲಿ  ನವೀ ಒಂದು ಕಾರ್ಯಕ್ರಮವನ್ನು ನೀಡಬೇಕು ಎಂದು ಹೇಳಿದೆವು. ಆದರೆ ಸಂಕೋಚ ಸ್ವಭಾವದವನಾಗಿದ್ದರಿಂದ ಬೇಡಬೇಡ ಎಂದು ಹಿಂದೇಟು ಹಾಕುತ್ತಿದ್ದ. ಹಾಗಾಗಿ ಆತನ ತಂದೆಗೆ ಕಾಲ್ ಮಾಡಿ, ‘ಗುರುಗಳೇ ಶಾಲೆಯಲ್ಲಿ ನಿಮ್ಮ ಮಗನ ಪ್ರತಿಭೆಯನ್ನು ಪ್ರದರ್ಶಿಸುವಂತೆ ತಿಳಿಹೇಳಿ’ ಎಂದೆ. ನಂತರ ತಂದೆ ಏನು ಹೇಳಿದರೋ ತಿಳಿಯದೋ ‘ಮುಂದಿನ ಶನಿವಾರ ಕಾರ್ಯಕ್ರಮ ಕೊಡ್ತಿನಿ’ ಎಂದು ಒಪ್ಪಿಕೊಂಡನು. ನಿಗಧಿತ ಶನಿವಾರದಂದು ಒಂದಿಷ್ಟು ಕಾರ್ಯಕ್ರಮಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು. ಹಾಡು, ನೃತ್ಯ, ಅಭಿನಯ ಹೀಗೆ ಒಂದಿಷ್ಟು ಕಾರ್ಯಕ್ರಮಗಳು ಮುಗಿದ ನಂತರ ಕಡೆಯದಾಗಿ ನವೀ ಕಾರ್ಯಕ್ರಮ ನೀಡಲಿದ್ದಾನೆ ಎಂದಾಗ. ಇವನ ಪ್ರತಿಭೆಯ ಬಗ್ಗೆ ತಿಳಿಯದವರು. ‘ಇವನೇನು ಕಾರ್ಯಕ್ರಮ ನೀಡುತ್ತಾನೆ?’ ಎಂದುಕೊಂಡರೆ, ವಿಷಯ ಗೊತ್ತಿದ್ದವರು, ‘ಈಗ ನೋಡು ಏನು ಅದ್ಭುತವಾದ ಕಾರ್‍ಯಕ್ರಮ ಕೊಡ್ತಾನೆ ಅಂತ. ಎಲ್ಲಾರೂ ಕಳೆದು ಹೋಗಿ ಬಿಡ್ತಾರೆ’ ಎಂದು ಹೇಳುತ್ತಿದ್ದರು. ಅಂತೂ ಆತ ಸಮವಸ್ತ್ರ ಧರಿಸಿ ತನಗೆ ಏನೇನು ಬೇಕಿದೆ? ಎಲ್ಲಿಲಿ ಅದನ್ನು ಇಡಬೇಕಿದೆ? ಎಂಬುದನ್ನು ತಿಳಿಸಿದಂತೆ ಒಂದಿಷ್ಟು ಮಕ್ಕಳ ಸಹಾಯ ಪಡೆದು ಅದನ್ನು ಸಿದ್ಧಪಡಿಸಿದೆವು. ಆತನ ಒಂದೊಂದು ಚಟುವಟಿಕೆಯನ್ನು ಸೂಕ್ಷವಾಗಿ ಮಕ್ಕಳು ವೀಕ್ಷಿಸತೊಡಗಿದರು. ಅದ್ಭುತ ಎಂದಾಗ ಕೊಠಡಿಯಲ್ಲಿದ್ದವರೆಲ್ಲ ಚಪ್ಪಾಳೆ ತಟ್ಟಿ ಆತನನ್ನು ಹುರಿದುಂಬಿಸುತ್ತಿದ್ದರು. ಬರಿಗೈಲಿ ಹಂಚನ್ನು ಒಡೆಯುವಾಗ ಬಾಯಿಯ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಇಷ್ಟೊಂದು ಸೈಲೆಂಟ್ ಆಗಿರುವ ಈತ ಹೀಗಿದ್ದಾನಲ್ಲ? ‘ಸೂಪರ್’ ಎಂದವರಿದ್ದಾರೆ. ಇದಾದ ಕೆಲವು ದಿನಗಳ ನಂತರ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದು ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾದನು. ಈ  ವಿಷಯವು ಆತನ ಪೋಷಕರಿಂದಲೇ ತಿಳಿಯಿತೇ ಹೊರತು ನವೀ ಇದನ್ನು ತನ್ನ ಗೆಳೆಯರ ಬಳಗದೊಂದಿಗೆ ಹೇಳಲೇ ಇಲ್ಲ. ಕಡೆಯದಾಗಿ ಆ ಟೂರ್ನಿಮೆಂಟ್ ನಲ್ಲಿ ಭಾಗವಹಿಸಲು ರಜೆಯನ್ನು ಕೇಳಲು ಬಂದಾಗಲೇ ತಿಳಿದದ್ದು ಈತ ‘ಭಾರತ’ವನ್ನು ಪ್ರತಿನಿಧಿಸುವ ಅವಕಾಶವನ್ನು ಪಡೆದಿದ್ದಾನೆ ಎಂದು. ‘ನೇಪಾಳ’ದಲ್ಲಿ ಪಂದ್ಯಗಳು ನಡೆಯಲಿದ್ದು ಬೇರೆಬೇರೆ ವಯಸ್ಸಿನ ವಿಭಾಗದಲ್ಲಿ ಶಿವಮೊಗ್ಗದ ಕೆಲವರು ಭಾಗವಹಿಸುತ್ತಿದ್ದಾರೆ ಎಂಬುದು ತಿಳಿಯಿತು. ನಮ್ಮ ಶಾಲೆಯಲ್ಲಿ ಓದುತ್ತಿರುವವನೊಬ್ಬ ದೇಶವನ್ನು ಪ್ರತಿನಿಧಿಸುತ್ತಾನೆ ಎಂದರೆ ಯಾರಿಗೆ ತಾನೇ ಖುಷಿಯಾಗುವುದಿಲ್ಲ? ದೈಹಿಕ ಶಿಕ್ಷಕರಾದ ಬಸವರಾಜ್ ಸರ್ ಈ ವಿಷಯವನ್ನು ಎಲ್ಲಾ ಶಿಕ್ಷಕರಿಗೂ ತಿಳಿಸಿ ಎಲ್ಲರೂ ಶುಭಹಾರೈಸಿದರು. ಸ್ಕೌಟ್ ಭವನ್ ನಲ್ಲೂ ಕೂಡ ನಮ್ಮ ಮಲ್ನಾಡ್ ಓಪನ್ ಗ್ರೂಪ್ ನ ಸದಸ್ಯರು ಒಂದು ಸಂಜೆ ಸೇರಿ ಶುಭಾಶಗಳನ್ನು ತಿಳಿಸಿ, ಗೆಲುವು ನಿನ್ನದಾಗಲಿ ಎಂದು ಹಾರೈಸಿದರು.                 ನವೀ ವಿವಿಧ ಪಂದ್ಯಗಳಲ್ಲಿ ಶ್ರೀಲಂಕಾ, ಬಾಂಗ್ಲಾದೇಶ್ ಇತರ ರಾಷ್ಟ್ರಗಳ ಮೇಲೆ ಗೆಲುವನ್ನು ಸಾಧಿಸಿದ ಸುದ್ಧಿ ತಿಳಿಯಿತು. ಸಹಜವಾಗಿ ಎಲ್ಲರಿಗೂ ಸಂತೋಷವಾದ ಸಂಗತಿಯಾಗಿತ್ತು. ಗೆಲುವಿಗೆ ಒಂದೇ ಮೆಟ್ಟಿಲು ಬಾಕಿಯಿದ್ದದ್ದು ಎಂದು ತಿಳಿಯಿತು. ಈ ಮಟ್ಟಕ್ಕೆ ಈ ವಿದ್ಯಾರ್ಥಿ ಇರಬಹುದು ಎಂದು ಶಾಲೆಯಲ್ಲಿ, ತರಗತಿಯಲ್ಲಿ ನೋಡಿದಾಗ ಅನ್ನಿಸುತ್ತಲೇ ಇರಲಿಲ್ಲ. ಆತ ಈಗ ಪದಕದ ಹೊಸ್ತಿಲಲ್ಲಿ ಎನ್ನುವುದು ಸಂಭ್ರಮವನ್ನು ಇಮ್ಮಡಿ ಮಾಡಲಿ ಎನಿಸಿತು. ಪಂದ್ಯ ಏನಾಗುವುದೋ ಏನು? ಎಂದು ಕೊಳ್ಳುತ್ತಿದ್ದೆವು. ಅಷ್ಟರಲ್ಲಿ ಫೈನಲ್ ಪಂದ್ಯದ  ಗೆಲುವಿನ ವಿಡಿಯೋ ಮತ್ತು ರಾಷ್ಟ್ರಧ್ವಜವನ್ನು ಹೊದ್ದು ಪ್ರಶಸ್ತಿಯನ್ನು ಸ್ವೀಕರಿಸುವ ವಿಡಿಯೋವನ್ನು ದೊರೈ ಸರ್ ಕಳಿಸಿದರು. ನಮ್ಮ ಶಾಲೆಯ ವಿದ್ಯಾರ್ಥಿಯೊಬ್ಬ ಹೀಗೆ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದಿದ್ದಾನೆ. ಅದಕ್ಕಿಂತ ಹೆಚ್ಚಾಗಿ ರಾಷ್ಟ್ರಧ್ವಜವನ್ನು ಹೊದ್ದು ಸಂಭ್ರಮಿಸಿರುವುದೇ ನಮಗೂ ಹೆಮ್ಮೆಯ ಸಂಗತಿಯಾಗಿತ್ತು. ಪ್ರಶಸ್ತಿಯನ್ನು ಪಡೆದುಕೊಂಡು ಮರಳಿದ ತಂಡವನ್ನು ರೈಲ್ವೇ ನಿಲ್ದಾಣದಲ್ಲಿ ಹಾರಹಾಕಿ ಸ್ವಾಗತಿಸಲಾಯಿತು. ಪದಕವನ್ನು ಹಾಕಿಕೊಂಡು ನಿಂತ ತಂಡದ ಸದಸ್ಯರನ್ನು ನೋಡುವುದೇ ಖುಷಿಯಾಗಿತ್ತು. ಅದರಲ್ಲೂ ನಮ್ಮ ಶಾಲೆಯ ವಿದ್ಯಾರ್ಥಿ ‘ಚಿನ್ನದಪದಕ’ ಸಾಧನೆ ಮಾಡಿರುವುದು ಇನ್ನೂ ಹೆಚ್ಚಿನ ಖುಷಿ ನೀಡಿತ್ತು.                  ಓದಿನಲ್ಲಿ ಸ್ಪಲ್ಪ ನಿಧಾನವಿದ್ದರೂ ಟೆಕ್ವಾಂಡೋ ವಿಭಾಗದಲ್ಲಿ ಮುನ್ನುಗ್ಗುವ ಈತನ ಈ ಪರಿ ಆಟದ ಶಿಸ್ತು ಬೆರಗುಗೊಳಿಸಿತ್ತು. ದಿನಕಳೆದಂತೆ ಒಂದಿಷ್ಟು ತರಲೆಗಳು ಇವನಿಂದ ಆಗುತ್ತಿತ್ತು. ಕೆಲವೊಮ್ಮೆ ಈತ ಮಾಡಿದ ತಪ್ಪಿನಿಂದಾಗಿ, ಮತ್ತೆ ಈತನ ಜೊತೆಗಿದ್ದವರು ಮಾಡಿದ ತಪ್ಪಿನಿಂದಾಗಿ ಪೆಟ್ಟು ಕೂಡ ತಿಂದಿದ್ದಾನೆ. ಈತನನ್ನು ದಂಡಿಸುವಾಗ ‘ನಿನ್ನಿಂದ ಈ ರೀತಿಯ ವರ್ತನೆ ನಿರೀಕ್ಷಿಸಿರಲಿಲ್ಲ’ ಎಂದು ಹೇಳಿಯೇ ಪೆಟ್ಟನ್ನು ಕೊಟ್ಟಿದ್ದಾರೆ. ನಿಧಾನವಾಗಿ ತನ್ನ ತಪ್ಪನ್ನು ತಿದ್ದಿಕೊಂಡು ಬದಲಾಗಿದ್ದಾನೆ. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚಿಗೆ ಅಲ್ಲದೇ ಹೋದರೂ ನಿರೀಕ್ಷೆಗಿಂತ ಹೆಚ್ಚಿನ ಅಂಕಗಳನ್ನು ಪಡೆದು ಉತ್ತೀರ್ಣನೂ ಆಗಿದ್ದಾನೆ. ಆ ಸಮಯದಲ್ಲಿ ಎಲ್ಲರೂ ಈತನಿಗೆ ಹೇಳಿದ್ದು ಒಂದೇ, ‘ಯಾವುದೇ ಕಾರಣಕ್ಕೂ ಟೆಕ್ವಾಂಡೋ ವನ್ನು ಮಾತ್ರ ಬಿಡಬೇಡ, ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಲಿ’ ಎಂದು ಶುಭಹಾರೈಸಿ ಕಳಿಸಿಕೊಡಲಾಯಿತು. ನಂತರದ ದಿನಗಳಲ್ಲಿ ‘ಡಿಪ್ಲೊಮೊ’ ಸೇರಿಕೊಂಡು ಅಲ್ಲಿ ಅಧ್ಯಯನ ಮಾಡಿದ್ದಾನೆ. ಜೊತೆಜೊತೆಗೆ  ಟೆಕ್ವಾಂಡೋವನ್ನು ಕೂಡ ಬಿಡದೇ ಆಡುತ್ತಿದ್ದಾನೆ ಎಂದು ತಿಳಿಯಿತು. ಇತ್ತೀಚೆಗೆ ತಾನು ಅಭ್ಯಾಸ ಮಾಡುತ್ತ, ಟೆಕ್ವಾಂಡೋ ತರಬೇತಿಗೆ ಬರುತ್ತಿರುವ ಸಣ್ಣ ಮಕ್ಕಳಿಗೆ ಈತನೇ ತರಬೇತುದಾರನಾಗಿ ಅಭ್ಯಾಸ ಮಾಡಿಸುತ್ತಿದ್ದಾನೆ ಎಂಬುದು ತಿಳಿಯಿತು. ಶಾಲೆಯಲ್ಲಿ ಮಕ್ಕಳಿಗೆ ‘ವಸ್ತು ಪ್ರದರ್ಶನ ಸ್ಪರ್ಧೆ’ ಇದ್ದಾಗ ಅದರಲ್ಲಿ ಕ್ರೀಡಾ ವಿಭಾಗಕ್ಕೆ ಸಂಬಂಧಿಸಿದಂತೆ ನವೀಯ ತಾಯಿ ಅಶ್ವಿನಿದೊರೈ ಮೇಡಂ ತೀರ್ಪುಗಾರರಾಗಿ ಬಂದಿದ್ದರು. ಅವರನ್ನು ನವೀ ಶಾಲೆಗೆ ಕರೆದುಕೊಂಡು ಬಂದಿದ್ದ. ಇದನ್ನು ಗಮನಿಸಿದ ಮುಖ್ಯೋಪಾಧ್ಯಾಯರು ಈತನೂ ಕ್ರೀಡೆಯಲ್ಲಿ ತೊಡಗಿಸಿಕೊಂಡವನೇ ಆಗಿರುವುದರಿಂದ ಇಬ್ಬರೂ ತೀರ್ಪುಗಾರರಾಗಿರಿ ಎಂದು ಹೇಳಿದಾಗ ಮರುಮಾತಿಲ್ಲದೆ ಒಪ್ಪಿಕೊಂಡನು. ತದ ನಂತರ ಇಬ್ಬರಿಗೂ ಕ್ರೀಡಾವಿಭಾಗದ ಕೊಠಡಿಗೆ ಕರೆದುಕೊಂಡು ಹೋಗಲಾಯಿತು. ನವ್ಯಕಷ್ಯಪ್ ಮೇಡಂರ ಪರಿಚಯ ಮಾಡಿಕೊಟ್ಟಳು. ನವೀಯ ಪರಿಚಯ ತಿಳಿಸಿ, ಶಾಲೆಯಲ್ಲಿ ಓದಿದ ವಿದ್ಯಾರ್ಥಿ ಜೊತೆಗೆ ಅಮ್ಮ-ಮಗ ಇಬ್ಬರೂ ಒಟ್ಟಿಗೇ ತೀರ್ಪುಗಾರರಾಗಿ ಬಂದಿರುವುದು ಇದೇ ಮೊದಲು’ ಎಂದೆ. ನನಗೂ ಹೆಮ್ಮೆಯ ಸಂಗತಿ. ಎಲ್ಲಾ ಮಕ್ಕಳಿಗೂ ಸಂತೋಷ ಮತ್ತು ಆಶ್ಚರ್ಯವಾಯಿತು. ಮೊದಲು ಎಲ್ಲಾ ಮಾದರಿಗಳನ್ನು ವೀಕ್ಷಿಸಿದರು. ನಂತರ ಒಂದೊಂದೇ ತಂಡದ ವಿದ್ಯಾರ್ಥಿಗಳು ತಾವು ಮಾಡಿದ್ದ ಮಾದರಿಯ ಬಗ್ಗೆ ವಿವರಿಸಿದರು. ಅದಕ್ಕೊಂದಿಷ್ಟು ಪ್ರಶ್ನೆಗಳನ್ನು ಕೇಳುತ್ತ ಇಬ್ಬರೂ ಯಾವ ಮಕ್ಕಳಿಗೂ ಹೆದರಿಸದೇ ಸಮಾಧಾನವಾಗಿ ಮಕ್ಕಳ ಮಾತನ್ನು ಆಲಿಸಿದರು. ಎಲ್ಲಾ ಮುಗಿಸಿ ಇಬ್ಬರಿಗೆ ಒಂದೆಡೆ ಕೂರಿಸಿ ‘ಯಾರೂ ನಿಮ್ಮ ಬಳಿಗೆ ಬರುವುದಿಲ್ಲ, ಅವರಿಗೆ ಬಹುಮಾನ ಕೊಡಿ, ಇವರಿಗೆ ಕೊಡಿ ಎಂದು ಪ್ರಭಾವವನ್ನೂ ಬೀರುವುದಿಲ್ಲ. ಮಕ್ಕಳು ಮಾತ್ರವಲ್ಲ ಶಿಕ್ಷಕರೂ ಇತ್ತ ಸುಳಿಯುವುದಿಲ್ಲ. ನಿಮ್ಮ ತೀರ್ಪನ್ನು ಕೊಡಬಹುದು’ ಎಂದು ಹೇಳಿ ಬಂದೆ. ಒಂದಿಷ್ಟು ಸಮಯದ ನಂತರ ಬಹುಮಾನ ಪಡೆದ ತಂಡದ ಸದಸ್ಯರ ಹೆಸರನ್ನು ಮತ್ತೊಂದು ಹಾಳೆಯಲ್ಲಿ ಬರೆದರು. ಅದಕ್ಕೆ ಇಬ್ಬರೂ ಸಹಿ ಹಾಕಿರಿ ಎಂದು ಮಡಚಿಕೊಟ್ಟ ‘ಫಲಿತಾಂಶ’ವನ್ನು ಹಾಗೆಯೇ ಮುಖ್ಯೋಪಾಧ್ಯಾಯರಿಗೆ ತಲುಪಿಸಲಾಯಿತು. ಎಲ್ಲಾ ತೀರ್ಪುಗಾರರೊಟ್ಟಿಗೆ ಫೋಟೋ ತೆಗೆಸಿಕೊಂಡು ಅವರಿಗೆ ನೆನಪಿನಕಾಣಿಕೆಯನ್ನು ವಿತರಿಸಿ, ನಂತರ ಒಟ್ಟಿಗೆ ಊಟ ಮಾಡಿ ಎಲ್ಲರನ್ನು ಪ್ರೀತಿಯಿಂದ ಬೀಳ್ಕೊಟ್ಟೆವು.                  ನವೀಯ ಇಡೀ ಕುಟುಂಬವೇ ಟೆಕ್ವಾಂಡೋದಲ್ಲಿ ತೊಡಗಿಸಿಕೊಂಡಿರುವುದು ಸಂತೋಷದ ಸಂಗತಿ. ಇಂದಿಗೂ ಆತ ಅದನ್ನು ಬಿಡದೇ ತನ್ನ ಓದಿನ ಜೊತೆಜೊತೆಗೆ ಇದನ್ನು ಕೊಂಡೊಯ್ಯುತ್ತಿದ್ದಾನೆ. ಮೊದಲಬಾರಿಗೆ ತೀರ್ಪುಗಾರರಾಗಿ ಬಂದ ಅಮ್ಮ-ಮಗ ಎನಿಸಿಕೊಂಡಿದ್ದಾರೆ. ಈಗಲೂ ಕೂಡ ಅವರು ಸಿಕ್ಕಾಗ ‘ಅಮ್ಮ-ಮಗ ತೀರ್ಪುಗಾರರಾಗಿ ಬಂದು ಶಾಲೆಯಲ್ಲಿ ಒಂದು ಹೊಸ ಇತಿಹಾಸವನ್ನೆ ಬರೆದಿದ್ದೀರಿ’ ಎಂದು ಹೇಳುತ್ತಲೇ ಇರುತ್ತೇನೆ. ‘ವರ್ಮಾಸರ್ ಹೀಗೆ ಬನ್ನಿ ಎಂದಾಗ ಇಲ್ಲ ಅಂತ ಹೇಳೋಕೆ ಆಗಲ್ಲ. ಹಾಗಾಗಿ ಬಂದಿದ್ದೇವೆ ಹೊರತು ಇನ್ನೇನು ಇಲ್ಲ. ಜೊತೆಗೆ ನಮ್ಮಿಬ್ಬರಿಗೂ ಒಂದು ಒಳ್ಳೆಯ ಅವಕಾಶ ಇದನ್ನು ನೀಡಿದ ಶಾಲೆಗೆ, ಶಿಕ್ಷಕರಿಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಕಾಗಲ್ಲ’ ಎಂದು ಅಶ್ವಿನಿ ಮೇಡಂ ನುಡಿಯುವಾಗ ಅವರಲ್ಲಿ ಅದೇನೋ ಸಾರ್ಥಕ ಭಾವ ಕಂಡಿದ್ದಂತೂ ಸುಳ್ಳಲ್ಲ. ಈ ರೀತಿಯ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕರೆ ಅದೊಂದು ಮರೆಯಲಾಗದ ನೆನಪಾಗಿ ಉಳಿಯುವುದರಲ್ಲಿ ಅನುಮಾನವಿಲ್ಲ…

Read more
Entertainmentಮನರಂಜನೆ

‘ನಿನ್ನ ಸಾಧನೆ ಇತರರಿಗೂ ಸ್ಪೂರ್ತಿಯಾಗಲಿ ಎಂಬುದೇ ನಮ್ಮೆಲ್ಲರ ಆಸೆ’

  (ARTICLE): ಕಣ್ಣಮುಂದೆ ಬೆಳೆದ ಮಗು ‘ಚಿನ್ನದ ಪದಕ’ ‘ಮೊದಲ RANK’ ಪಡೆಯುವ ಮಟ್ಟಿಗೆ ಸಾಗಿಬಂದ ಪರಿಯನ್ನು, ಪ್ರತಿಯೊಂದು ಹಂತದಲ್ಲೂಬೆಳವಣಿಗೆ ಹೊಂದಿದ ರೀತಿ, ಈಗ ಪ್ರತಿಷ್ಠಿತ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವುದನ್ನು ಕಂಡಾಗ ಅದೊಂದು ಹೆಮ್ಮೆಯ ಸಮಯ. ಎಷ್ಟೇ ದೊಡ್ಡವರಾದರೂ ತಾವು  ಬೆಳೆದು ಬಂದ ಹಾದಿಯನ್ನು ಮರೆಯದೇ ಎಲ್ಲವನ್ನೂ, ಎಲ್ಲರನ್ನೂ ನೆನಪಿಸಿಕೊಂಡಾಗ ಆಗುವ ಸಂತೋಷಕ್ಕೆ ಕೊನೆ ಎಂಬುದೇ ಇರುವುದಿಲ್ಲ.  ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಮಲ್ನಾಡ್ ಓಪನ್ ಗ್ರೂಪ್ ನಲ್ಲಿ ಸದಸ್ಯನಾಗಿದ್ದ ಸಮಯ. ವಿವಿಧ ಶಾಲೆಯ/ಕಾಲೇಜಿನ ವಿದ್ಯಾರ್ಥಿಗಳು ಇಲ್ಲಿ ಸದಸ್ಯರಾಗಿ ತಮ್ಮ ಸ್ಕೌಟಿಂಗ್ ಜೀವನವನ್ನು ಮುಂದುವರೆಸುತ್ತಿದ್ದರು. ದುರ್ಗಿಗುಡಿ ಶಾಲೆಯ ನಾಲ್ವರು ವಿದ್ಯಾರ್ಥಿನಿಯರು ಶಾಲಾದಳದಲ್ಲಿದ್ದರೂ ಮಲ್ನಾಡ್ ಓಪನ್ ಗ್ರೂಪ್ ನ ವತಿಯಿಂದ ಹೆಚ್ಚಿನದನ್ನು ಕಲಿಯುವ ಆಸಕ್ತಿಯನ್ನು ತೋರಿದ ಪ್ರತಿಮಾ, ಭಾವನಾ, ಅಮೃತ ಮತ್ತು ಸೌಜನ್ಯ. ಇವರು ಹೇಳಿದ ಕೆಲಸವನ್ನು ಚಾಚೂ ತಪ್ಪದೇ ಮಾಡುತ್ತಿದ್ದರು. ದುರ್ಗಿಗುಡಿ ಶಾಲೆಯ ಚಿತ್ರಕಲಾ ಶಿಕ್ಷಕರಾದ ದೀಪುಸರ್ ಈ ಮಕ್ಕಳ ಬೆಳವಣಿಗೆಗೆ ಸರಿಯಾದ ಸ್ಥಳವೆಂದು ನಮ್ಮ ಗ್ರೂಪ್ ಗೆ ಪರಿಚಯಿಸಿದರು. ಗ್ರೂಪ್ ನ ರಾಜೇಶ್ ಅವಲಕ್ಕಿಸರ್ ಅವರ ಮಾರ್ಗದರ್ಶನದಲ್ಲಿ ಹಲವಾರು ಪದಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿ ಎಲ್ಲದರಲ್ಲೂ ಸೈ ಎನಿಸಿಕೊಂಡವರು. ಗ್ರೂಪ್ ನ ಎಲ್ಲ ಶಿಕ್ಷಕರ ಮಾರ್ಗದರ್ಶನದಲ್ಲಿ ಪ್ರಾವೀಣ್ಯತಾ ಪದಕವನ್ನು ಗಳಿಸಲು ನಿರಂತರ ಅಭ್ಯಾಸವನ್ನು ಮಾಡತೊಡಗಿದರು. ಒಮ್ಮೆ ಹಳ್ಳಿಯ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ, ನೀರಿನ ಸಂಗ್ರಹಣೆ, ಸುತ್ತಮುತ್ತಲೂ ಸೊಳ್ಳೆಗಳು ಹರಡದಂತೆ ನೋಡಿಕೊಳ್ಳಲು ಏನೇನು ಮಾಡಬೇಕು? ಎಂಬುದನ್ನು ತಿಳಿಸಲು ಯೋಚಿಸುತ್ತಿದ್ದಾಗ ಸೌಜನ್ಯ, ತಮ್ಮ ಮನೆಯ ಸಮೀಪ ಇರುವ ಹಕ್ಕಿಪಿಕ್ಕಿ ಕ್ಯಾಂಪ್ ಇದ್ದು ಅವರಿಗೆ ಈ ವಿಷಯದ ಬಗ್ಗೆ ತಿಳಿಸಬಹುದು ಜೊತೆಗೆ ತನ್ನ ತಾಯಿಯು ಗ್ರಾಮಪಂಚಾಯಿತಿ ಸದಸ್ಯರಾಗಿರುವ ಕಾರಣ ಈ ಕೆಲಸಕ್ಕೆ ಗ್ರಾಮಪಂಚಾಯಿತಿಯವರು ಕೈ ಜೋಡಿಸುತ್ತಾರೆ ಎಂಬ ಸಲಹೆ ನೀಡಿದಳು. ಕಡೆಯದಾಗಿ ಅವಳ ಮಾತಿಗೆ ಒಪ್ಪಿ ಅಲ್ಲಿಗೆ ಹೋಗಿ ಎಲ್ಲರಿಗೂ ವಿಷಯವನ್ನು ತಿಳಿಸಿ, ಜಾಗ್ರತೆಯಿಂದ ಇರಲು ಏನೇನು ಮಾಡಬೇಕು? ಯಾವ ಕೆಲಸವನ್ನು ಮಾಡಬಾರದು ಎಂಬೆಲ್ಲಾ ಮಾಹಿತಿಯನ್ನು ಮಕ್ಕಳು ನೀಡತೊಡಗಿದರು. ಇದರ ಒಂದಿಷ್ಟು ಫೋಟೋಗಳನ್ನು ತೆಗೆದುಕೊಂಡೆವು. ಎಲ್ಲಾ ಮುಗಿಸಿ ಹೊರಡುವಾಗ ಸೌಜನ್ಯಳಿಗೆ ‘ಹಕ್ಕಿಪಿಕ್ಕಿ’ ಎಂದೇ ಕರೆಯತೊಡಗಿದರು. ಅದನ್ನು ಪರಿಚಯಿಸಿದ್ದೇ ತಾನು ಎಂಬುದು ಎಂದಿಗೂ ಮರೆತು ಹೋಗದಂತೆ ಮರುನಾಮಕರಣವಾಗಿತ್ತು. ಹಂತಹಂತವಾಗಿ ಜಿಲ್ಲಾ ಪುರಸ್ಕಾರ, ರಾಜ್ಯ ಪುರಸ್ಕಾರವನ್ನು ಪಡೆದರು. ಮುಂದಿನ ಹಂತ ರಾಷ್ಟ್ರಪತಿ ಪುರಸ್ಕಾರ. ಅದೇ ಸಮಯದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯೂ ಇದ್ದ ಕಾರಣ ಈ ವಿದ್ಯಾರ್ಥಿನಿಯರು ಬಹುತೇಕ ಸ್ಕೌಟಿಂಗ್ ಪರೀಕ್ಷೆಯನ್ನು ತೆಗೆದುಕೊಳ್ಳುವುದಿಲ್ಲ ಎಂದುಕೊಂಡಿದ್ದೆವು. ಆದರೆ ಅದನ್ನು ಸುಳ್ಳಾಗಿಸಿ, ಆ ಕಡೆ ಶಾಲಾ ಪರೀಕ್ಷೆ, ಈ ಕಡೆ ಸ್ಕೌಟಿಂಗ್ ಪರೀಕ್ಷೆ ಎರಡನ್ನೂ ನಿಭಾಯಿಸುವೆವು ಎಂದರು. ಹಾಗೆಯೇ ಅಭ್ಯಾಸವನ್ನು ಮಾಡಿದರು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲೂ ಉತ್ತಮ ಅಂಕಗಳನ್ನು ಪಡೆದುಕೊಂಡ ಇವರು ಸ್ಕೌಟಿಂಗ್ ನಲ್ಲಿ ದುರ್ಗಿಗುಡಿ ಶಾಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಈ ವಿದ್ಯಾರ್ಥಿನಿಯರು ಒಟ್ಟಿಗೆ ‘ರಾಷ್ಟ್ರಪತಿ ಪುರಸ್ಕಾರ’ವನ್ನು ಪಡೆದರು.  ಶಾಲೆಯಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಅಂದಿನ ಶಿವಮೊಗ್ಗ ವಿಧಾನಸಭಾ ಸದಸ್ಯರಾಗಿದ್ದ ಪ್ರಸನ್ನಕುಮಾರ್ ಅವರು, ಶಾಲೆಯ ಎಸ್.ಡಿ.ಎಂ.ಸಿ ಸದಸ್ಯರು ಈ ಮಕ್ಕಳನ್ನು ಗೌರವಿಸಿದರು. ಆ ವರದಿ ಪತ್ರಿಕೆಯಲ್ಲಿ ಬಂದಾಗ ಇವರಿಗೆ ಹಿಗ್ಗೋಹಿಗ್ಗು. ನಂತರ ಪಿ.ಯು.ಸಿ ಸಮಯ ಹೆಚ್ಚಿನ ಓದು ಇದ್ದೇ ಇರುತ್ತದೆ. ಹಾಗಾಗಿ ಸ್ಕೌಟಿಂಗ್ ಚಟುವಟಿಕೆಗಳಿಗೆ ಬನ್ನಿ ಎಂದು ಯಾರಿಗೂ ಒತ್ತಾಯ ಮಾಡಲಿಲ್ಲ. ಬಿಡುವಿದ್ದಾಗ ,ರಾಷ್ಟ್ರೀಯ ಹಬ್ಬಗಳಿದ್ದಾಗ ಪ್ರತಿಮಾ, ಭಾವನ ತಪ್ಪದೇ ಬರುತ್ತಿದ್ದರು. ಎಲ್ಲರೂ ಮತ್ತೆ ಸೇರಿದ್ದೇ ಪಿ.ಯು.ಸಿ ಪರೀಕ್ಷೆ ಮುಗಿಸಿದ ನಂತರ. ಅಷ್ಟರಲ್ಲಿ ಒಬ್ಬೊಬ್ಬರು ಒಂದೊಂದು ಕಾಲೇಜ್ ಬೇರೆಬೇರೆ ಕೋರ್ಸ್ ಗಳಲ್ಲಿ ಅಭ್ಯಾಸ ಮಾಡಲು ಸಿದ್ಧರಾಗಿದ್ದ ಸಮಯ. ಇದೇ ಸಮಯದಲ್ಲಿ ಶಿವಮೊಗ್ಗದಲ್ಲಿ ಮೊದಲ ಬಾರಿಗೆ ಮಾನಸ ಸಮೂಹ ಸಂಸ್ಥೆಗಳ ವತಿಯಿಂದ ‘ಕಟೀಲು ಅಶೋಕ್ ಪೈ ಸ್ಮಾರಕ ಸಂಸ್ಥೆ’ಯನ್ನು ಡಾ.ಅಶೋಕ್ ಪೈ ಅವರ ಹೆಸರನ್ನ ಚಿರಸ್ಥಾಯಿಯಾಗಿಸುವ ಸಲುವಾಗಿ ಡಾ.ರಜನಿಪೈ, ಡಾ.ವಾಮನ್ ಶಾನ್ ಭಾಗ್ ಮತ್ತು ಡಾ.ಪ್ರೀತಿಪೈ ಇವರ ಮಾರ್ಗದರ್ಶನದಲ್ಲಿ ಆರಂಭಿಸಲಾಯಿತು. ಡಾ.ಸಂಧ್ಯಾಕಾವೇರಿ ಅವರ ಪ್ರಾಚಾರ್ಯರಾಗಿದ್ದರು. ಗೆಳೆಯ ಮಂಜುನಾಥ ಸ್ವಾಮಿ ಸಮಾಜಕಾರ್ಯ ವಿಭಾಗದ ಉಪನ್ಯಾಸಕರಾಗಿ, ನಾನು ಗ್ರಂಥಪಾಲಕನಾಗಿದ್ದಾಗ ಸೌಜನ್ಯ ಇದೇ ಸಂಸ್ಥೆಗೆ ಸೇರಿದಳು. ಆಗ ಈ ಸಂಸ್ಥೆಯು ಮಲ್ಲಿಕಾರ್ಜುನ ಚಿತ್ರಮಂದಿರದ ಸಮೀಪವಿತ್ತು. ಮೊದಲವರ್ಷವಾದ್ದರಿಂದ ಹೇಗೆ ಸಾಗುವುದು? ಎಂಬುದೊಂದು ಎಲ್ಲರ ಯೋಚನೆಯಾಗಿತ್ತು. ಮೊದಲ ವರ್ಷದ ಕಾಲೇಜ್ ಆದರೂ ೩೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು.                 ಇದೇ ಸಮಯದಲ್ಲಿ ಮಲ್ನಾಡ್ ಓಪನ್ ಗ್ರೂಪ್ ವತಿಯಿಂದ ‘ಗೀತಭಾರತಿ’ ಎಂಬ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು. ನಗರದ ಹಲವಾರು ಶಾಲೆಯ ವಿದ್ಯಾರ್ಥಿ ಸಮೂಹವೇ ಈ ಕಾರ್ಯಕ್ರಮದ ಭಾಗವಾಗಿರುತ್ತಿತ್ತು. ಒಮ್ಮೆ ಗೆಳೆಯ ಮಂಜುನಾಥಸ್ವಾಮಿ, ‘ಗೀತಭಾರತಿಯಲ್ಲಿ ನಮ್ಮ ಕಾಲೇಜಿಗೂ ಅವಕಾಶ ಸಿಗಬಹುದೇ?’ ಎಂದನು. ಈ ವಿಷಯವನ್ನು ವರ್ಮಾಸರ್, ರಾಜೇಶ್ ಸರ್, ಪರಮೇಶ್ವರಸರ್ ಇವರಿಗೆ ತಿಳಿಸಿದಾಗ, ‘ಕಾಲೇಜ್ ನವರು ತಾವಾಗಿ ಬರಲು ಆಸಕ್ತಿ ತೋರಿಸುತ್ತಿದ್ದಾರೆ ಎಂದರೆ ಬರಲಿ. ನಮ್ಮದೇನು ಅಭ್ಯಂತರವಿಲ್ಲ’ ಎಂದರು. ಒಮ್ಮೆ ಗೀತಭಾರತಿಗೆ ಪೂರ್ವ ಸಭೆಗೆ ಸಂಗೀತ ಶಿಕ್ಷಕರು ಜೊತೆಗೆ ಸಂಗೀತದಲ್ಲಿ ಆಸಕ್ತಿ ಇರುವ ಇಬ್ಬರು ವಿದ್ಯಾರ್ಥಿಗಳನ್ನು ಕರೆದುಕೊಂಡು ಬನ್ನಿ, ಹಾಡನ್ನು ಆಯ್ಕೆ ಮಾಡಿಕೊಳ್ಳಲು ಎಂದು ತಿಳಿಸಿದಾಗ. ನಮ್ಮ ಕಾಲೇಜ್ ನಿಂದ ಕುಮಾರಿ ಸೌಜನ್ಯಗಳನ್ನು ಕರೆದುಕೊಂಡು ಬಂದರು. ಬಂದವರಿಗೆ ಕಾಫಿ-ಟೀ, ಬಿಸ್ಕೇಟ್ ಗಳನ್ನು ನೀಡುವುದಿತ್ತು. ಒಂದಿಬ್ಬರು ಈ ಕೆಲಸವನ್ನು ಮಾಡುವಾಗ ಕಾಲೇಜ್ ಪ್ರತಿನಿಧಿಯಾಗಿದ್ದ ಸೌಜನ್ಯ ನಮ್ಮಗಳ ಜೊತೆ ಸೇರಿ ಎಲ್ಲರಿಗೂ ಕಾಫಿ-ಟೀ ವಿತರಿಸುವಲ್ಲಿ ನೆರವಾದಳು. ‘ನೀನೀಗ ಕಾಲೇಜ್ ಪ್ರತಿನಿಧಿ’ ಎಂದರೆ, ‘ನಾನು ಬೆಳೆದ ಜಾಗ ಇದು. ಇಲ್ಲಿ ಸುಮ್ಮನೆ ಕುಳಿತು ಅಭ್ಯಾಸವೇ ಇಲ್ಲ. ಏನಾದರೂ ಕೆಲಸ ಮಾಡುತ್ತಲೇ ಇದ್ದೆವು. ಈಗಲೂ ಇದು ನನ್ನ ಕೆಲಸ’ ಎಂದಳು.                  ಕಾಲೇಜ್ ನ ಇತರ ಕಾರ್ಯಕ್ರಮಗಳಲ್ಲಿ ಆಕೆ ಭಾಗವಹಿಸುತ್ತಿದ್ದ ರೀತಿ, ಇತರರಿಗೆ ಹೇಳಿಕೊಡುವ, ಜೊತೆಗಿದ್ದು ಕಲಿಯುವುದು ಎಲ್ಲವೂ ಅಲ್ಲಿನ ಎಲ್ಲಾ ಉಪನ್ಯಾಸಕರಿಗೂ ಇಷ್ಟವಾಗಿತ್ತು. ಅನೇಕ ಬಾರಿ ಸಂಧ್ಯಾಕಾವೇರಿ ಮೇಡಂ’ ಸ್ಕೌಟಿಂಗ್ ನಲ್ಲಿ ಕಲಿಸಿರುವ ಶಿಸ್ತು ಈಕೆಯ ನಡೆನುಡಿಗಳಲ್ಲೂ ಕಾಣಬಹುದು’ ಎಂದು ಹೇಳಿದ್ದರು. ಇತರ ಚಟುವಟಿಕೆಗಳಲ್ಲೂ ಮುಂದಿದ್ದ ಸೌಜನ್ಯ ಪದವಿಯನ್ನು ಮುಗಿಸುವ ಹಂತಕ್ಕೆ ಬಂದಾಗ ಆಕೆಯ ಮೇಲೆ ನಿರೀಕ್ಷೆಯೊಂದಿತ್ತು. ಪ್ರತೀ ಬಾರಿಯೂ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುತ್ತಿದ್ದಳು. ಕುವೆಂಪು ವಿಶ್ವವಿದ್ಯಾಲಯದ ಬಿ.ಎಸ್.ಡಬ್ಲ್ಯು ವಿಭಾಗದಲ್ಲಿ ಹೆಚ್ಚಿನ ಅಂಕ ಇವಳದ್ದೇ ಆಗಿತ್ತು. ಹಾಗಾಗಿ ಈ ಬಾರಿ RANK ಬರಬಹುದು, ನಮ್ಮ ಕಾಲೇಜಿಗೊಂದು ಚಿನ್ನದ ಪದಕ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದೆವು. ಆ ನಿರೀಕ್ಷೆ ಹುಸಿಯಾಗಲಿಲ್ಲ. ಆಕೆಯ ಶ್ರಮಕ್ಕೆ, ಇದೇ ಮೊದಲ ಬಾರಿ ಆರಂಭವಾದ ಕಾಲೇಜ್ ಒಂದರ, ಮೊದಲ ಬ್ಯಾಚ್ ನ ವಿದ್ಯಾರ್ಥಿ ‘ಚಿನ್ನದ ಪದಕ’ ಪಡೆಯುವ ಸಾಧನೆ ಮಾಡುತ್ತಾಳೆ ಎಂದರೆ ಎಲ್ಲರೂ ಒಮ್ಮೆ ಇತ್ತ ತಿರುಗಿ ನೋಡುವಂತೆ ಮಾಡಿತು.                 ನಮ್ಮ ಮಲ್ನಾಡ್ ಓಪನ್ ಗ್ರೂಪ್ ನಲ್ಲಿ ಬೆಳೆದ ಹುಡುಗಿ ಈ ಮಟ್ಟಕ್ಕೆ ಸಾಧನೆ ಮಾಡಿದ್ದಾಳೆಂದರೆ ಅದು ಎಲ್ಲರಿಗೂ ಹೆಮ್ಮೆಯ ಸಂಗತಿಯಾಗಿತ್ತು. ಕುವೆಂಪು ವಿಶ್ವವಿದ್ಯಾಲಯದ ೧೯ನೇ ಘಟಿಕೋತ್ಸವದಲ್ಲಿ ‘ಅನಿಕೇತನ ಚಿನ್ನದ ಪದಕ’ ಪಡೆದಿದ್ದ ನನಗೆ, ನನ್ನ ಜೊತೆಗಿದ್ದ ಸ್ಕೌಟಿಂಗ್ ಸಹೋದರಿ, ಕಾಲೇಜ್ ವಿದ್ಯಾರ್ಥಿನಿ ಚಿನ್ನದಪದಕ ಪಡೆಯುತ್ತಾಳೆ ಎಂದರೆ ನನಗೂ ಅದೊಂತರ ಹೆಮ್ಮೆ. ಒಟ್ಟಿಗೆ ಎಲ್ಲಾದರೂ ಇದ್ದಾಗ ಅಲ್ಲಿದ್ದವರಿಗೆ, ‘ಎರಡು ಚಿನ್ನದ ಪದಕಗಳು ಒಟ್ಟಿಗೆ ಇದೇ ನೋಡಿ’ ಎಂದು ತಮಾಷೆಯಾಗಿ ಹೇಳುತ್ತಿದ್ದೆವು. ಸೌಜನ್ಯ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಮಂಗಳೂರಿಗೆ ತೆರಳಿದಳು. ಆಗಸ್ಟ್ ಬಂತೆಂದರೆ ‘ಗೀತಭಾರತಿ’ ಯ ಸಮಯ. ಈ ಸಮಯದಲ್ಲೂ ಕಟೀಲ್ ಅಶೋಕ್ ಪೈ ಸ್ಮಾರಕ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದರು. ಇದೇ ಸಮಯದಲ್ಲಿ ಮಲ್ನಾಡ್ ಓಪನ್ ಗ್ರೂಪ್ ವತಿಯಿಂದ ಸೌಜನ್ಯಳಿಗೊಂದು ಅಭಿನಂದನೆ ಸಲ್ಲಿಸಬೇಕು ಎಂದು ತೀರ್ಮಾನಿಸಲಾಯಿತು. ಕಾಲೇಜ್ ಗೂ ಮಾಹಿತಿ ನೀಡಿದೆವು. ಸೌಜನ್ಯಳಿಗೂ ಬರುವಂತೆ ಎರಡೂ ಸಂಸ್ಥೆಯ ಕಡೆಯಿಂದಲೂ ಕೇಳಿದಾಗ ಇಲ್ಲವೆನ್ನದೆ ಬರಲು ಒಪ್ಪಿದಳು. ನಾವು ಸುಮ್ಮನೆ ಇರದೇ, ‘ನಿಮ್ಮ ಕಾಲೇಜ್ ಜೊತೆಗೆ ಹಾಡನ್ನು ಹಾಡಬೇಕು. ಅದಕ್ಕೂ ಅಭ್ಯಾಸ ಮಾಡ್ಕೋ’ ಎಂದೆವು. ‘ಅಣ್ಣಾ ಅವರೆಲ್ಲ ಚೆನ್ನಾಗಿ ಅಭ್ಯಾಸ ಮಾಡಿರ್ತಾರೆ. ಅದರ ಮಧ್ಯೆ ನಾನು ಅವರ ಜೊತೆಗೆ ಒಂದು ಸಲವೂ ಪ್ರಾಕ್ಟೀಸ್ ಮಾಡದೇ ನೇರವಾಗಿ ಬಂದು ಹಾಡೋದು ಸರಿ ಅನ್ನಿಸಲ್ಲ.’ ಎಂದಳು. ‘ನಿನಗೆ ಹಾಡು, ಅದರ್ ಟ್ರ್ಯಾಕ್ ಎರಡನ್ನೂ ಕಳಿಸುವೆ. ಅಲ್ಲಿಯೇ ಬಿಡುವಿದ್ದಾಗ ಅಭ್ಯಾಸ ಮಾಡು. ಸಮಸ್ಯೆ ಇಲ್ಲ ‘ಎಂದಾಗ ‘ಸರಿ ಆಗಲಿ’ ಎಂದು ಒಪ್ಪಿದಳು.                  ಅಂದು ಗೀತಭಾರತಿಗೆ ಬಂದಳು. ತಮ್ಮ ಕಾಲೇಜ್ ಜೊತೆ ಸೇರಿ ಹಾಡಿದಳು. ಸಮವಸ್ತ್ರ ಧರಿಸಿದ ಕಾಲೇಜ್ ವಿದ್ಯಾರ್ಥಿಗಳ ಮಧ್ಯೆ ಭಿನ್ನವಾಗಿದ್ದ ಈಕೆಯನ್ನು ಮುಂದಕ್ಕೆ ಕರೆದು ನಮ್ಮ ಗ್ರೂಪ್ ನ ಹುಡುಗಿ, ಈ ಕಾಲೇಜ್ ನ ಮೊದಲ ಬ್ಯಾಚ್, ಮೊದಲ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ. ಅದೇ ನಮ್ಮ ಹೆಮ್ಮೆ’ ಎಂದು ಆಕೆಯ ಪೋಷಕರನ್ನು, ಕಾಲೇಜ್ ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯರನ್ನು ಕರೆದು ಅವರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಎನ್ನುವ ವಿಷಯವನ್ನು ಆಕೆಗೆ ತಿಳಿಸಿಯೇ ಇರಲಿಲ್ಲ. ಆಕೆಗೆ ಸಂತೋಷದ ಜೊತೆಗೆ ಸಣ್ಣ ಮುಜುಗರವು ಆಯಿತು. ಸಂತೋಷ ಸನ್ಮಾನವನ್ನು ನಿರೀಕ್ಷಿಸಿರಲಿಲ್ಲ, ಮುಜುಗರ ತನಗೆ ಮಾರ್ಗದರ್ಶನ ಮಾಡಿದವರ ಎದುರಲ್ಲಿ ಕುಳಿತು, ಅವರಿಂದಲೇ ಸನ್ಮಾನ ಸ್ವೀಕರಿಸುವುದು. ಕಡೆಯದಾಗಿ ಆಕೆಗೆ ‘ನಿನ್ನ ಈ ಸಾಧನೆ ಇತರರಿಗೂ ಸ್ಪೂರ್ತಿಯಾಗಲಿ ಎಂಬುದೇ ನಮ್ಮೆಲ್ಲರ ಆಸೆ. ವಿದ್ಯೆ-ವಿನಯವಿದ್ದಲ್ಲಿ ಎಲ್ಲವೂ ಅರಸಿಕೊಂಡು ಬಂದೇ ಬರುತ್ತದೆ ಎನ್ನುವುದಕ್ಕೆ ಸೌಜನ್ಯಳೇ ಸಾಕ್ಷಿ’ ಎಂದು ವೇದಿಕೆಯಲ್ಲಿ ಹೇಳಿದಾಗ ಜೋರಾದ ಚಪ್ಪಾಳೆ. ನಮ್ಮೆಲ್ಲರಿಗೂ ಹಿಗ್ಗೋಹಿಗ್ಗು. ಅಂದು ಆಕೆಯ ಪೋಷಕರಲ್ಲಿ ಕಂಡದ್ದು ಸಾರ್ಥಕತೆಯ ಭಾವ. ರಾಷ್ಟ್ರಪತಿ ಪುರಸ್ಕಾರ, ಚಿನ್ನದ ಪದಕ ಪಡೆದರೂ ಎಲ್ಲೂ ಅಹಂಕಾರದ ಗುಣ ತನ್ನಲ್ಲಿ ಮನೆ ಮಾಡದಂತೆ,  ಯಾರಾದರೂ ಈಕೆಯ ಸಾಧನೆಯನ್ನು ಪರಿಚಯ ಮಾಡಿಕೊಟ್ಟಾಗ ಹುಬ್ಬೇರುವಂತೆ ಮಾಡುವ ಸರಳವಾಗಿರುವ, ಹೆಸರಿಗೆ ತಕ್ಕಂತೆ ಸೌಜನ್ಯಯುತವಾಗಿ ಎಲ್ಲರೊಂದಿಗೆ ಬೆರೆಯುವ, ಸ್ಕೌಟ್ ಭವನ್ ಗೆ ಭೇಟಿ ನೀಡಿದಾಗ ಅಲ್ಲಿದ್ದವರು ಅಷ್ಟೇ ಅಕ್ಕರೆಯಿಂದ ಮಾತನಾಡಿಸುವ, ಗುರು-ಹಿರಿಯರನ್ನು ಗೌರವಭಾವದಿಂದ ಕಾಣುವ ಸೌಜನ್ಯ ಇತರರಿಗೆ ಮಾದರಿ ಎಂದರೆ ತಪ್ಪಿಲ್ಲ. ಇಂದು ಉನ್ನತ ಶಿಕ್ಷಣವನ್ನು ಮುಗಿಸಿ ಮಂಗಳೂರಿನ ಪ್ರತಿಷ್ಠಿತ ಶಿಕ್ಷಕ ಸಂಸ್ಥೆಯಲ್ಲಿ ಉಪನ್ಯಾಸಕಿಯಾಗಿ ಕಾರ್‍ಯ ನಿರ್ವಹಿಸುತ್ತಿದ್ದಾಳೆ. ಇತ್ತೀಚೆಗೆ ಅವಳ ಗೆಳತಿಯ ಮದುವೆಗೆಂದು ಬಂದಾಗ, ಆಗ ಹೇಗಿದ್ದಳೋ ಈಗಲೂ ಅದೇ ಗುಣ, ಮಿತ ಮಾತು. ಏನಮ್ಮ ಸೌಜು ಎಂದರೆ ಮುಗುಳುನಗೆ, ‘ಹಕ್ಕಿಪಿಕ್ಕಿ’ ಎಂದರೆ ಜೋರಾಗಿ ನಕ್ಕು, ‘ಅದು ಯಾವುದೋ ಕಾಲದ್ದು, ಈಗ ನಾನು ಉಪನ್ಯಾಸಕಿ. ಇರಲಿ. ಹೀಗೆ ಕರೆಸಿಕೊಳ್ಳದೇ ಬಹಳ ದಿನವಾಗಿತ್ತು. ಇವೆಲ್ಲ ಕೇಳಿದಾಗ ನನಗೆ ನಾನಿನ್ನು ಗೈಡ್ ಹುಡುಗಿ, ಸ್ಕೌಟ್  ಭವನ್ ತುಂಬಾ ಓಡಾಡುತ್ತಿದ್ದ ಘಟನೆಗಳೇ ಕಣ್ಣಮುಂದೆ ಬರುತ್ತವೆ’ ಎಂದಾಗ ಮೂಡುವ ಕಿರುನಗೆ ಆಗಿಹೋದ ಎಲ್ಲ ಸಂಗತಿಗಳನ್ನು ಒಮ್ಮೆ ನೆನಪಿಸುತ್ತವೆ. ತಮ್ಮ ಜೊತೆಗೆ ಆಡಿ ಬೆಳೆದ ಗೆಳತಿಯರಿಗೆ ಈಕೆಯ ಸಾಧನೆಯ ಬಗ್ಗೆ ಹೆಮ್ಮೆಯಿದೆ. ಶಿಕ್ಷಕರು-ಮಾರ್ಗದರ್ಶಕರಿಗೂ ಸರಿಯಾದ ದಾರಿಯಲ್ಲಿ ಸಾಗುತ್ತಿರುವುದಕ್ಕೆ ತೃಪ್ತಿಯಿದೆ. ಜೊತೆಗಿದ್ದ ಸಹೋದರಿಯೊಬ್ಬಳ ಸಾಧನೆ ಇತರರಿಗೆ ತಿಳಿಸುತ್ತ, ಬೆಳವಣಿಗೆ ಎಂದರೇ ಈ ರೀತಿಯಲ್ಲಿರಲಿ ಎಂದು ಹೇಳಿದ್ದೇವೆ. ಎಲ್ಲೋ ಕಾಣದ ಘಟನೆಗಳಿಗಿಂತ ಕಣ್ಣ ಮುಂದಿರುವ ಉದಾಹರಣೆಗಳನ್ನು ನೀಡಿ, ‘ಬೆಳೆದರೆ ಹೀಗೆ ಬೆಳೆಯಿರಿ’ ಎಂದು ಈಕೆಯ ಸಾಧನೆ ತಿಳಿಸಿದ್ದೇವೆ. ಎಲ್ಲರೂ ಹೀಗಾಗಬಹುದೆಂದಲ್ಲ, ಒಬ್ಬರಾದರೂ ಇದೇ ರೀತಿಯ ದಾರಿಯಲ್ಲಿ ಸಾಗಿದಲ್ಲಿ ಅದೇ ಸಾರ್ಥಕ ಎಂದೆನಿಸುತ್ತದೆ…

Read more
Entertainmentಮನರಂಜನೆ


 ‘ಸರ್ ನನಗೆ ಕೆಲಸ ಸಿಕ್ಕಿದೆ. ಸಂಬಳ ನಿಮಗಿಂತ ಜಾಸ್ತಿ’
 

(ARTICLE):ಪ್ರತೀ ವಿದ್ಯಾರ್ಥಿಯೂ ಭಿನ್ನ, ವಿಭಿನ್ನ. ಅದರಲ್ಲೂ ನಮ್ಮ ಮಾರ್ಗದರ್ಶನದಲ್ಲಿ ಬೆಳೆದ ಮಕ್ಕಳು ನಮ್ಮನ್ನು ಮೀರಿಸಿದಾಗ ಅದೊಂತರ ಹೆಮ್ಮೆ. ಶಾಲೆಯಲ್ಲಿದ್ದಾಗ ಹೇಗೇಗೋ ಇದ್ದವರು ಇಂದು ಒಳ್ಳೆಯ ಗುಣಗಳನ್ನು ಉಳಿಸಿಕೊಂಡಿದ್ದಾರೆ, ಇತರರಿಗೂ ಮಾದರಿಯಾಗಿದ್ದಾರೆ ಎಂಬುದು ತಿಳಿದಾಗ ಆಗುವ ಸಂತೋಷ ಅವಿಸ್ಮರಣೀಯವಾಗಿರುವುದರಲ್ಲಿ ಅನುಮಾನವೇ ಇಲ್ಲ.  ಬಹಳಷ್ಟು ವರ್ಷಗಳ ಹಿಂದೆ ೮ನೇ ತರಗತಿ ‘ಸಿ’ ವಿಭಾಗದಲ್ಲಿದ್ದ ಶಾರ್ವರಿ.ಆರ್.ಆರ್ ಆರಂಭದ ದಿನಗಳಲ್ಲಿ ಓದಿನಲ್ಲಿ ಹೇಳಿಕೊಳ್ಳುವಷ್ಟು ಚುರುಕಾಗಿ ಇರಲಿಲ್ಲ. ಎಲ್ಲರಿಗೂ ಆಕೆಯ ಪೋಷಕರು ಪರಿಚಿತರಿದ್ದರು. ನಮ್ಮ ಶಾಲೆಯ ಪ್ರವಾಸಗಳ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದವರು ಅವರ ತಂದೆ ಲಕ್ಷ್ಮೀ ಟ್ರಾವೆಲ್ಸ್ ನ ಮಾಲೀಕರಾದ ರುದ್ರೇಶ್ ರವರು. ಹಾಗಾಗಿ ಅವಳನ್ನು ಶಾರ್ವರಿ ಎಂದು ಕರೆದಿದ್ದಕ್ಕಿಂತಲೂ ‘ಸಂಚಾರಿ’ ಎಂದೇ ಕರೆಯುತ್ತಿದ್ದೆ. ಅದಕ್ಕೆ ಬೇಸರಿಸಿಕೊಳ್ಳದೇ ನಗುತ್ತ ಪ್ರತಿಕ್ರಿಯಿಸುತ್ತಿದ್ದಳು. ಶಿಕ್ಷಕರ ಬಳಿಯಲ್ಲಿ ಒಂದಿಷ್ಟು ಪೆಟ್ಟು ತಿಂದಿದ್ದಾಳೆ. ಸರಿಯಾದ ದಾರಿಯಲ್ಲಿ ಸಾಗಲು ಬಹಳ ಪ್ರಯತ್ನ ಪಟ್ಟಿದ್ದಾಳೆ. ದಿನದಿಂದ ದಿನಕ್ಕೂ ಓದಿನ ಬಗ್ಗೆ ಆಸಕ್ತಿ ವಹಿಸುತ್ತಿದ್ದರು ಹೇಳಿಕೊಳ್ಳುವ ಹಂತಕ್ಕೆ ಬರದಿದ್ದರೂ ಓದುವ ಪ್ರಯತ್ನವನ್ನು ಬಿಡಲಿಲ್ಲ.   ದಿನಗಳು ಕಳೆದಂತೆ ಓದಿನಲ್ಲಿ ತಾನು ಪಟ್ಟ ಪ್ರಯತ್ನಕ್ಕೆ ಒಳ್ಳೆಯ ಅಂಕಗಳನ್ನು ಪಡೆದುಕೊಂಡಳು. ನಂತರದ ಶಿಕ್ಷಣವನ್ನು ಕೂಡ ಉತ್ತಮ ಅಂಕಗಳಲ್ಲಿಯೇ ಪಡೆದುಕೊಂಡಳು. ಪದವಿಯನ್ನು ಓದುವ ಸಲುವಾಗಿ ಸಹ್ಯಾದ್ರಿ ಕಾಲೇಜ್ ಸೇರಿದಳು. ಈ ವಿಷಯ ತಿಳಿದಾಗ,’ನಮ್ಮ ಕಾಲೇಜ್ ಗೆ ಸೇರಿದಿಯಾ? ಒಳ್ಳೆಯದಾಗಲಿ’ ಎಂದೆ. ಕಾಲೇಜ್ ನಲ್ಲಿ ಇತರ ಕಾರ್ಯಕ್ರಮಗಳು ಇದ್ದೇ ಇರುತ್ತವೆ. ಸಾಧ್ಯವಾದರೆ ಅವುಗಳಲ್ಲಿ ಭಾಗವಹಿಸುತ್ತಿರು. ಓದಿನ ಜೊತೆಜೊತೆಗೆ ಇತರ ಸಾಂಸ್ಕೃತಿಕ, ಎನ್.ಎಸ್.ಎಸ್. ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಉತ್ತಮವಾಗುತ್ತಿದೆ. ಎಂಬ ಸಲಹೆಯನ್ನು ನೀಡಿದ್ದೆ. ಅದೆಷ್ಟು ಕೇಳಿಸಿಕೊಂಡಳೋ ತಿಳಿಯೇ.  ಶಾರ್ವರಿಯ ತಂಗಿ ಶರಣ್ಯ ಒಂದನೇ ತರಗತಿಯಿಂದ ನಮ್ಮ ಶಾಲೆಯಲ್ಲಿಯೇ ಓದತೊಡಗಿದ್ದಳು. ಮತ್ತೊಬ್ಬ ಕಿರಿಯ ಸಹೋದರಿ ಶಮಿತ ಕೂಡ ನಮ್ಮ ಶಾಲೆಯಲ್ಲಿಯೇ ಓದುತ್ತಿದ್ದಳು. ಈ ಸಮಯದಲ್ಲಿ ಇಡೀ ಜಗತ್ತನ್ನೇ ಆವರಿಸಿಕೊಂಡ ‘ಕೊರೋನಾ’ ಎಂಬ ಮಹಾಮಾರಿಯ ಹೊಡೆತಕ್ಕೆ ಸಿಕ್ಕ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದವರಿಗೆ ಕೆಲಸ ಕಳೆದುಕೊಳ್ಳುವಂತಾಯಿತು. ನಮ್ಮ ಶಿಕ್ಷಕರದ್ದು ಮತ್ತೊಂದು ರೀತಿಯ ಪಾಡಾಗಿತ್ತು. ಶಾಲೆಯೇ ನಡೆಯದಂತ ಸಮಯದಲ್ಲಿ ‘ಆನ್ ಲೈನ್’ ತರಗತಿಗಳು ಮಕ್ಕಳಿಗೆ ಪಾಠ ಹೇಳುವುದಾಗಿತ್ತು. ಅದೊಂತರ ಹೊಸ ರೀತಿಯದಾಗಿತ್ತು. ಶಿಕ್ಷಕರುಗಳು ಹೊಸದಾಗಿ ಮೊಬೈಲ್ ನಲ್ಲಿ ಪಾಠ ಮಾಡುವ ಬಗ್ಗೆ ಕಲಿತದ್ದು, ಅದರಿಂದ ಮಕ್ಕಳನ್ನು ಮತ್ತೆ ನೋಡುವಂತೆ ಆದದ್ದು ಹೊಸ ಬಗೆಯ ಅನುಭವವಾಗಿತ್ತು.  ನಮ್ಮ ಶಿಕ್ಷಕರದ್ದು ಒಂದು ಬಗೆಯದ್ದಾದರೆ ಇತರ ವರ್ಗಗಳ ಕಥೆಯೂ ಭಿನ್ನವಾಗಿತ್ತು. ಜನಗಳ ಓಡಾಟವೇ ಕಡಿಮೆಯಿದ್ದ ಸಂದರ್ಭದಲ್ಲಿ ಕೆಲವೊಂದು ಕ್ಷೇತ್ರಗಳಿಗೆ ಬಿದ್ದ ಹೊಡೆತ ಬೇರೆಯದೇ ಆಗಿತ್ತು. ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತವೇ ಬಿದ್ದಿತ್ತು. ವಾಹನಗಳ ಮಾಲೀಕರು ತಮ್ಮ ವಾಹನಗಳಿಗೆ ತೆರಿಗೆಯನ್ನು ಕಟ್ಟಬೇಕಿದ್ದರಿಂದ ಒಂದಿಷ್ಟು ಹಣಕಾಸಿನ ತೊಂದರೆ ಅವರಿಗೆ ಉಂಟಾಗಿದ್ದಂತೂ ಸತ್ಯ. ದಿನಕಳೆದಂತೆ ಒಂದೊಂದೇ ಕ್ಷೇತ್ರಗಳಲ್ಲಿ ಕಳೆದು ಹೋಗಿದ್ದ ಸುಂದರ ಕ್ಷಣಗಳು ನಿಧಾನವಾಗಿ ಮೂಡತೊಡಗಿದವು. ಶಾಲೆಗೆ ಮಕ್ಕಳು ಬರುವಂತಾಯಿತು. ದೂರದೂರ ಮಾಸ್ಕ್ ಧರಿಸಿರುವ ಮಕ್ಕಳನ್ನು ಕೂರಿಸಿ ಪಾಠ ಮಾಡುತ್ತಿದ್ದರು. ಮಕ್ಕಳನ್ನು ಕಾಣುವಂತಾಯಿತಲ್ಲ ಶಿಕ್ಷಕರಿಗೆ ಅದೇ ಸಂತೋಷ ಎನಿಸಿತು. ಇದರ ಮಧ್ಯೆ ಶಿಕ್ಷಣವೂ ಕೂಡ ಆನ್ ಲೈನ್ ತರಗತಿಯ ಸ್ವರೂಪ ಪಡೆದುಕೊಂಡಿತ್ತು. ಇದೊಂದು ಹೊಸ ಬೆಳವಣಿಗೆ ಎನಿಸಿತು. ಇದರ ಮಧ್ಯೆ ಶಾರ್ವರಿ ಹೆಚ್ಚುವರಿ ಶಿಕ್ಷಣವನ್ನು ಪಡೆಯತೊಡಗಿದಳು. ಇದರ ಮಧ್ಯೆ ತಮ್ಮ ಮನೆಯಲ್ಲಿನ ಒಂದಿಷ್ಟು ಸಮಸ್ಯೆಗಳಿಂದಾಗಿ ಕುಟುಂಬದವರು ಅತ್ತ ಕಡೆಗೆ ಗಮನಹರಿಸುವಂತಾಯಿತು. ಇದರ ಮಧ್ಯೆ ಶಾರ್ವರಿಗೆ ಕೆಲಸ ಸಿಕ್ಕಿತು. ಇದನ್ನು ತಿಳಿಸಲೆಂದು ಶಾಲೆಗೆ ಸಿಹಿಯನ್ನು ತೆಗೆದುಕೊಂಡು ಬಂದಿದ್ದಳು. ಎಲ್ಲಾ ಶಿಕ್ಷಕರಿಗೂ ಸಿಹಿಯನ್ನು ವಿತರಿಸಿದಳು. ಈಕೆಯ ನೆಚ್ಚಿನ ಶಾಲೆಯ ಆಂಟಿ ಮೀನಾಳೊಂದಿಗೆ ಕೂತು ಬಹಳ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಳು. ಆಗ ಅಲ್ಲಿಗೆ ಬಂದ ನನ್ನನ್ನು ಕಂಡು ಆತ್ಮೀಯವಾಗಿ ಮಾತನಾಡಿಸಿದಳು. ಜೊತೆಗೆ ನನ್ನೊಂದಿಗಿದ್ದ ಸಲುಗೆಯಿಂದ ಮಾತನಾಡತೊಡಗಿದಳು. ‘ಸರ್ ನನಗೆ ಕೆಲಸ ಸಿಕ್ಕಿದೆ. ಸಂಬಳ ನಿಮಗಿಂತ ಜಾಸ್ತಿ’ ಎಂದಾಗ ‘ಓಹೋ ನಿಜವಾಗಿಯೂ… ಒಳ್ಳೆಯದಾಗಲಿ. ಇನ್ನು ಮುಂದಿನದಿನಗಳು ಸಂತೋಷದಿಂದನೇ ಇರಲಿ’ ಎಂದು ಹಾರೈಸಿದೆ. ಅಷ್ಟರಲ್ಲಿ ಮೀನಮ್ಮ, ‘ಸರ್ ಜೊತೆಗೆ ಹಾಗೇ ಮಾತಾಡೋದಾ? ಗೊತ್ತಾಗಲ್ವಾ ನಿನಗೆ?’ ಎಂದಳು. ನಾನೇ ಮಧ್ಯೆ ಪ್ರವೇಶಿಸಿ. ‘ಆಕೆ ಹೇಳಿದ್ದರಲ್ಲಿ ತಪ್ಪೇನಿದೆ. ನನಗಿಂತಲೂ ಸಂಬಳ ಹೆಚ್ಚು ಎನ್ನುವ ಆಕೆಯ ಮಾತಿನಲ್ಲಿ ಎಲ್ಲೂ ಅಹಂಕಾರದ ಭಾವ ಇರಲಿಲ್ಲ. ಅದರ ಬದಲಿಗೆ ತನಗನಿಸಿದ್ದನ್ನು ನನ್ನೊಂದಿಗೆ ಹೇಳಿಕೊಳ್ಳುವ ಮುಗ್ದತೆ ಇನ್ನೂ ಹಾಗೆಯೇ ಇದೇ ಅದೇ ಖುಷಿ ನನಗೆ’ ಎಂದಾಗ ಶಾರ್ವರಿ, ‘ಹೆಂಗೆ ನಮ್ಮ ಸರ್. ನನ್ನ ಬಿಟ್ಟು ಕೊಡಲ್ಲ. ನಾನು ಹೇಳಿದ ಮಾತು ನಮ್ಮ ಸರ್ ಗೆ ಬೇಜಾರು ಮಾಡೋಕಲ್ಲ. ಅದು ಅವರಿಗೂ ಗೊತ್ತು. ನಾನು ಕೂಡ ದುಡಿಯುವ ಸಮಯ ಶುರು ಆಗಿದೆ ಅಂತ ಹೇಳೋಕೆ ಹೋದೆ ಅಷ್ಟೇ…’ ಎಂದಳು ಆದರೂ ಮೀನಮ್ಮಳು ಈಕೆಯ ಮಾತಿನಿಂದ ತೃಪ್ತಳಾಗಲಿಲ್ಲ. ಆಕೆ ಗೊಣಗುತ್ತಲೇ ಇದ್ದಳು. ನಂತರ ಶಾರ್ವರಿಯನ್ನು ಕರೆದು, ‘ಹೇ ಲೂಜ್ ನನ್ನ ಜೊತೆಗೆ ಹೇಳಿದ ಹಾಗೇ ಉಳಿದಿರೋ ಟೀಚರ್ ಗಳ ಹತ್ರನೂ ಹೇಳಬೇಡ. ಎಲ್ಲರೂ ನನ್ನಂಗೆ ನಿನ್ನ ಸಹಿಸಿಕೊಳ್ಳಲ್ಲ ತಾಯಿ’ ಎಂದಾಗ. ‘ಅದು ಗೊತ್ತು. ಅದಕ್ಕೆ ನಿಮ್ಮ ಹತ್ರ ಮಾತ್ರ ಹಾಗೇ ಹೇಳಿದೆ. ಎಲ್ಲರ ಹತ್ರ ಹಾಗೇ ಹೇಳೋ ಅಷ್ಟು ಧೈರ್ಯ ನನಗಿಲ್ಲ ಬಿಡಿ’ ಎಂದು ನಕ್ಕಳು.  ನಂತರ ಸಿಹಿಯನ್ನು ಕೊಡಲು ಮುಂದಾದಳು. ‘ಎಷ್ಟು ತಗೋಬೇಕು’ ಎಂದೆ. ‘ನಿಮ್ಮ ಇಷ್ಟ. ಎಷ್ಟಾದರೂ ತಗೊಳ್ಳಿ’ ಎಂದಳು. ಸಾಕು ಒಂದು ಎಂದಾಗ ಮತ್ತೊಂದನ್ನು ತಗೊಳಿ ಸರ್ ಎಂದು ನೀಡಿದಳು. ‘ಕೆಲಸ ಮಾಡೋ ಹತ್ರವೂ ಹೀಗೆ ಮಂಗನ ತರ ಆಡಬೇಡ. ಎಲ್ಲರೂ ನನ್ನ ಹಾಗೇ, ನಿನ್ನ ಮನೆಯವರ ಹಾಗೇ, ನಿನ್ನ ಅಲ್ಲೆಲ್ಲ ಸಹಿಸಿಕೊಳ್ಳಲ್ಲ. ಸ್ವಲ್ಪ ಗಂಭೀರವಾಗಿ ಇರು’ ಎಂದಾಗ ‘ಹೇ ಗೊತ್ತಿದೆ ಸರ್. ಇಲ್ಲೇನೋ ಆ ಸಲುಗೆ ಇದೆ ಹಾಗಾಗಿ ಹೀಗೆ ಆಡ್ತಿನಿ. ಆದರೆ ಅಲ್ಲಿ ಹೀಗೆ ಆಗಲ್ಲ. ಚೆನಾಗಿ ಕೆಲಸ ಮಾಡಿ ಒಳ್ಳೆಯ ಕೆಲಸಗಾರ್ತಿ ಅನಿಸಿಕೊಳ್ತಿನಿ ನೋಡಿ’ ಎಂಬ ಭರವಸೆಯನ್ನು ನೀಡಿದಳು. ಜೊತೆಗೆ ಎಲ್ಲಾ ಶಿಕ್ಷಕರುಗಳು ಹೇಳಿದಂತಹ ಒಂದಿಷ್ಟು ಬುದ್ಧಿಮಾತುಗಳು, ಸಲಹೆ-ಸೂಚನೆಗಳನ್ನು ನಮ್ರತೆಯಿಂದಲೇ ಸ್ವೀಕರಿಸಿದಳು.                  ಒಂದಿಷ್ಟು ದಿನಗಳ ನಂತರ ಕೆಲಸದ ಜೊತೆಜೊತೆಗೆ ಮತ್ತೊಂದಿಷ್ಟು ಹೆಚ್ಚಿನ ಓದನ್ನು ಮಾಡತೊಡಗಿದಳು. ಈ ವಿಷಯವನ್ನು ಕೇಳಿಯೇ ಸಂತೋಷವಾಯಿತು.  ಕೆಲ ವರ್ಷದ ಹಿಂದೆ ಈಗ ಶಾಲೆಯಲ್ಲಿ ಓದುತ್ತಿರುವ ಈಕೆಯ ಇಬ್ಬರು ಸಹೋದರಿಯರು ಮತ್ತೊಬ್ಬ ಸಹೋದರರ ಶಾಲಾ ಶುಲ್ಕವನ್ನು ಭರಿಸಬೇಕಿತ್ತು. ಒಂದು ಮಧ್ಯಾಹ್ನ ಶಾರ್ವರಿಯ ತಾಯಿ ಲಕ್ಷ್ಮೀ ರವರು ಶಾಲೆಗೆ ಬಂದರು. ‘ಎನು ಹೀಗೆ ಶಾಲೆಗೆ ಕಡೆಗೆ? ಬಹಳ ಬಿಡುವು ಮಾಡಿಕೊಂಡು ಬಂದಿದ್ದೀರಿ?’ ಎಂದಾಗ ‘ಮಕ್ಕಳ ಫೀಜ್ ಕಟ್ಟಬೇಕಲ್ಲವೇ ಸಹೋದರ ಹಾಗಾಗಿ ಬಂದೆ. ಹಾ… ಈ ಹಣವನ್ನು ನಾನಾಗಲಿ ನನ್ನ ಮನೆಯವರಾಗಲಿ ದುಡಿದದ್ದು ಅಲ್ಲ. ಮಗಳ ದುಡಿಮೆ. ತನ್ನ ತಂಗಿ-ತಮ್ಮರ ಓದಿನ ಜವಾಬ್ದಾರಿಯನ್ನು ತಾನು ವಹಿಸಿಕೊಂಡಿದ್ದಾಳೆ. ಟ್ರಾವೆಲ್ಸ್  ಇನ್ನೂ ಸರಿದಾರಿಗೆ ಬಂದಿಲ್ಲ, ಜೊತೆಗೆ ತನಗೂ ಮೆಟ್ರೋ ಆಸ್ಪತ್ರೆಯಲ್ಲಿ ಯೋಗವನ್ನು ಕಲಿಸಲು ಅವಕಾಶ ಸಿಕ್ಕಿದೆ. ಹೇಗೋ ಮಗಳು ಜವಾಬ್ದಾರಿಯನ್ನು ತೆಗೆದುಕೊಂಡಿರುವುದು ಕೊಂಚ ನೆಮ್ಮದಿ ತಂದಿದೆ’ ಎಂದರು.  ಶಾರ್ವರಿ ಶಾಲೆಯಲ್ಲಿ ಓದುತ್ತಿದ್ದಾಗ ಇದ್ದ ರೀತಿಗೂ ಈಗಿರುವ ರೀತಿಗೂ ಅದೆಷ್ಟು ಬದಲಾವಣೆಯಾಗಿದೆ. ಪ್ರೌಢಿಮೆ ಮೂಡಿದೆ ಎನಿಸದಿರದು. ತಾನು ಶಿಕ್ಷಣವನ್ನು ಗಳಿಸುವುದರ ಜೊತೆಗೆ ಈಗಲೂ ಇತರ ಕೋರ್ಸ್ ತೆಗೆದುಕೊಂಡು ಮತ್ತೊಂದಿಷ್ಟು ಓದಿನ ಕಡೆಗೆ ಗಮನಹರಿಸಿದ್ದಾಳೆ ಎಂಬುದು ಸಂತೋಷ ಎನಿಸಿದೆ. ಇದರ ಜೊತೆಗೆ ಮನೆಯ ಜವಾಬ್ದಾರಿಯನ್ನು ತೆಗೆದುಕೊಳ್ಳುವುದರಲ್ಲಿ ತಾನೂ ಪಾಲು ತೆಗೆದುಕೊಳ್ಳುತ್ತಿದ್ದಾಳೆ ಎಂಬುದು ಈಕೆಯ ಬಗೆಗೆ ಅಭಿಮಾನ ಹೆಚ್ಚಿಸಿದೆ. ಈ ವಿಷಯ ತಿಳಿದಾಗಿನಿಂದ ಅವಳಿಗೆ ಒಮ್ಮೆ ಅಭಿನಂದನೆಗಳನ್ನು ತಿಳಿಸಬೇಕು ಎಂದು ಕಾಯುತ್ತಲೇ ಇದ್ದೆ. ಒಮ್ಮೆ ಆಕೆ ಊರಿಗೆ ಬಂದಿದ್ದಾಳೆ ಎಂಬುದ ತಿಳಿದಾಗ ಕೇಳಿದೆ. ‘ಖುಷಿ ಆಯ್ತು ನಿನ್ನ ಈ ಕೆಲಸ. ತಮ್ಮ-ತಂಗಿಯರ ಮೇಲಿನ ಕಾಳಜಿ’ ಎಂದಾಗ, ‘ಹೆಂಗೆ ನಾವು?’ ಅಂತ ಒಂದಿಷ್ಟು ಡೈಲಾಗ್ ಹೇಳಿದಳು. ‘ನೀನು ಇನ್ನೂ ಬದಲಾಗಿಲ್ಲ ಕಣೆ ತಾಯಿ. ಹಾಗೇ ಇದೀಯ’ ಎಂದರೆ ‘ನಾನು ಬದಲಾಗೋ ಛಾನ್ಸೇ ಇಲ್ಲ ಬಿಡಿ’. ‘ಹಾ ನಮ್ಮ ಕಛೇರಿಯಲ್ಲಿ ಕನ್ನಡ ರಾಜ್ಯೋತ್ಸವ ಹೇಗೆ ಆಚರಿಸದರು ಗೊತ್ತಾ?’ ಎಂದು ಇಂಗ್ಲೀಷ್ ನಲ್ಲಿ ಶುಭಾಶಯ ತಿಳಿಸಿದ ಫೋಟೋ ತೋರಿಸಿದಳು.  ‘ಇದೇನಮ್ಮ ಹೀಗೆ?’ ಎಂದರೆ ‘ನೀವು ಖುಷಿ ಪಡಿ ನಮ್ಮ ಕಛೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿರೋದಕ್ಕೆ. ಕೆಲವು ಕಡೆಗಳಲ್ಲಿ ಅದು ಹಾಗಿಲ್ಲ. ಈ ವರ್ಷ ಆಚರಣೆ ಆಗಿದೆ. ಮುಂದಿನ ದಿನಗಳಲ್ಲಿ ಕನ್ನಡದಲ್ಲಿ ಶುಭಾಶಯ ತಿಳಿಸೋ ಸಮಯ ಬಂದರೂ ಬರಬಹುದು. ಆ ನಿಟ್ಟಿನಲ್ಲಿ ನಾನು ಪ್ರಯತ್ನ ಮಾಡಿಯೇ ಮಾಡ್ತಿನಿ’ ಎಂದಳು.             ಓದಿನಲ್ಲಿ ಕೊಂಚ ಹಿಂದಿದ್ದ ವಿದ್ಯಾರ್ಥಿನಿ. ಈಗ ಓದನ್ನು ತೆಗೆದುಕೊಂಡಿರುವ ರೀತಿ, ಜೊತೆಗೆ ಓದಿಸಲು ತೆಗೆದುಕೊಳ್ಳುತ್ತಿರುವ ಕಾಳಜಿ ಗಮನಿಸಿದಾಗ ‘ಸಂಸ್ಕಾರ’ ಒಂದಿದ್ದರೆ ಎಲ್ಲವೂ ಹಿಂಬಾಲಿಸಿಕೊಂಡು ಬರುತ್ತವೆ ಎನ್ನುವಂತೆ ಈಕೆಯ ನಡೆ-ನುಡಿಗಳಲ್ಲಿ ತಿಳಿಯಬಹುದಾಗಿದೆ. ವಿದ್ಯಾರ್ಥಿನಿಯೊಬ್ಬಳು ಮನೆಯ ಜವಾಬ್ದಾರಿ ತೆಗೆದುಕೊಂಡಿದ್ದಾಳೆ ಎಂಬುದನ್ನು ಕೇಳುವುದೇ ಸಂತೋಷ. ಜೊತೆಗೆ ಆಕೆ ಸಾಗುತ್ತಿರುವ ದಾರಿ ಸರಿಯಾಗಿದೆ ಎನ್ನುವಾಗ ಒಬ್ಬ ಶಿಕ್ಷಕನಾಗಿ ಅದಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ ಎನಿಸುತ್ತದೆ. ನನಗಿಂತಲೂ ಸಂಬಳ ಹೆಚ್ಚು ಎಂದಿದ್ದ ಹುಡುಗಿ ಗುಣದಲ್ಲೂ ನನಗಿಂತಲೂ ಮುಂದಿದ್ದಾಳೇನೋ ಎನಿಸುತ್ತದೆ. ಅಕ್ಕ-ತಂಗಿ, ಅಣ್ಣ-ತಮ್ಮಂದಿರ ನಡುವೆ ಮನೆಯಲ್ಲಿ ಜಗಳ ಇದ್ದೇ ಇರುತ್ತದೆ. ಅದರ ನಡುವೆ ಜಗಳಕ್ಕಿಂತ ಪ್ರೀತಿ ದೊಡ್ಡದು ಎಂದು ಈ ರೀತಿಯ ಕಾಳಜಿ ವಹಿಸುವ ಮನಸ್ಥಿತಿಯ ಮಕ್ಕಳ ಸಂಖ್ಯೆ ಹೆಚ್ಚಾದರೆ ಪಾಠ ಕಲಿಸಿದವರಿಗೆ ಮನದ ಮೂಲೆಯಲ್ಲಿ ಮೂಡುವ ಸಂತೃಪ್ತಿಯನ್ನು ವರ್ಣಿಸುವುದೇ ಕಷ್ಟ ಎನಿಸುತ್ತದೆ…

Read more
Entertainmentಮನರಂಜನೆ

ಅತಿಥಿಗಳನ್ನು ವೇದಿಕೆಯಲ್ಲಿ ಕರೆದುಕೊಂಡು ಹೋಗುವ ಜವಾಬ್ದಾರಿ ನಿಮ್ಮದು’

(ARTICAL):  ‘ಕಾರ್ಗಿಲ್ ದಿವಸ್’ ಎನ್ನುವುದು ಭಾರತೀಯರ ಪಾಲಿಗೆ ಹೆಮ್ಮೆಯ ಮತ್ತು ನೋವಿನ ದಿನವೂ ಹೌದು. ಈ ಯುದ್ಧದಲ್ಲಿ ಭಾರತ ಗೆಲುವನ್ನು ಸಾಧಿಸಿದೆ. ಜೊತೆಗೆ ೫೨೭ಕ್ಕೂ ಹೆಚ್ಚಿನ ವೀರ

Read more
Entertainmentಮನರಂಜನೆ

ದೀಪಗಳ ಹಬ್ಬ ದೀಪಾವಳಿ, ಅಂದು ಇಂದು…!

(ARTICLE): ಕಾರ್ತಿಕ ಮಾಸದಲ್ಲಿ ಬರುವ ಈ ಹಬ್ಬ ಮಲೆನಾಡಿನಲ್ಲಿ ದೊಡ್ಡ ಹಬ್ಬ ಎಂದೇ ಕರೆಸಿಕೊಳ್ಳುತ್ತದೆ. ದೀಪಾವಳಿ ಎಂದರೆ ಅದೇನೋ ಸಂಭ್ರಮ, ಬದುಕ ಬೆಳಗುವ ಹಬ್ಬ, ಅಂಧಕಾರದಿಂದ ಬೆಳಕಿನೆಡೆಗೆ

Read more
Entertainmentಮನರಂಜನೆ

‘ನಮ್ಮ ಟೀಚರ್ ಗಳು ಇಷ್ಟು ಚೆನ್ನಾಗಿ  ಆಟ ಆಡ್ತಾರೆ ಅಂತ ಅನ್ಕೊಂಡೇ ಇರಲಿಲ್ಲ’

(ARTICAL): ಪ್ರತಿಯೊಬ್ಬ ಶಿಕ್ಷಕರ ಬದುಕಲ್ಲೂ ‘ಶಿಕ್ಷಕರ ದಿನಾಚರಣೆ’ ಎಂಬುದು ಮರೆಯದ ದಿನವಾಗಿರುತ್ತದೆ. ಅಂದು ಯಾವುದೇ ಶಿಕ್ಷಕರು ಪಾಠವನ್ನು ಮಾಡುವುದಿಲ್ಲ ಎಂದೇ ಮಕ್ಕಳು ಭಾವಿಸಿರುತ್ತಾರೆ. ಶಿಕ್ಷಕರು ತರಗತಿಗೆ ಬಂದಾಗ

Read more
Entertainmentಮನರಂಜನೆ

ಖಾಲಿಬೆಂಚ್ ಗಳು ಕಥೆಗಳನ್ನು ಹೇಳುತ್ತವೆ, ಮಕ್ಕಳನ್ನು ನೆನಪಿಸುತ್ತವೆ…

(ARTICAL): ಮಕ್ಕಳು ಶಾಲೆಗೆ ಯವಾಗ ರಜೆ ಸಿಗತ್ತೆ ಅಂತ ಕಾಯುವ ಸಮಯವೇ ಸುಂದರ ಎನಿಸುತ್ತದೆ. ಅದೆಷ್ಟೋ ಬಾರಿ ಎಲ್ಲಾ ಮಕ್ಕಳು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ಸರ್ಕಾರಿ ರಜಾ ದಿನಗಳನ್ನು

Read more
Entertainmentಮನರಂಜನೆ

ಮಜ್ಜಿಗೆ ಸಾರಿಗೆ ಗಾಳಿಸೋಕಿನ ಬೀಜ ಮತ್ತು ಗಿಡ.

(ARTICAL): ಇವತ್ತು ಯಾಕೋ ಬೇಜಾರು ಆತು ಇಷ್ಟು ದಿನ ಮಹಾಲಯ ಉಂಡು ಉಂಡು ನವರಾತ್ರಿಲಿ ಹೊಲಸು ಮಾಡಾಂಗಿಲ್ಲ. ಏನ್ಮಾಡೋದು ಆಂತ ಚಿಂತಿ ಮಾಡ್ತಾ ಕೂತೇ..ನಮ್ಮವು ಏಳೆಂಟು ದನ

Read more
Entertainmentಮನರಂಜನೆ

ಪ್ರೇಕ್ಷಕರ ಮನಗೆದ್ದ ಜೈ ಶ್ರೀರಾಮ್ ನಾಟಕ, ನಗೆಯ ಅಲೆಯ ನಾಟಕ.

(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಪಟ್ಟಣದ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯ ಶರನ್ನವರಾತ್ರಿ ಮಹೋತ್ಸವದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ರೇಣುಕನಗರದ ವಿಘ್ನೇಶ್ವರ ಕಲಾಬಳಗದ ಹವ್ಯಾಸಿ ಕಲಾವಿದರು ಪ್ರದರ್ಶಿಸಿದ ಜೈ

Read more
EntertainmentNewsಮನರಂಜನೆ

ನವರಾತ್ರಿಯ ನವಬಣ್ಣದಹಬ್ಬ ಒಂಬತ್ತನೇ ದಿನದ ನೇರಳೆ ಬಣ್ಣ 

ದಿನಾಂಕ 11.10.2024 ನವರಾತ್ರಿಯ ಎಂಟನೇ ದಿನದ ಗುಲಾಬಿ ಬಣ್ಣದ ಸೀರೆ ಹಾಗೂ ವಸ್ತ್ರವನ್ನು ಉಟ್ಟು ನಮಗೆ ಕಳುಹಿಸಿ ಕೊಟ್ಟಿರುವ ಚಿತ್ರಗಳು ಇಲ್ಲಿವೆ. ದಸರಾ ಹಬ್ಬವನ್ನು ಇನ್ನಷ್ಟು ಹೆಚ್ಚು

Read more
EntertainmentNewsಮನರಂಜನೆ

ನವರಾತ್ರಿಯ ನವಬಣ್ಣದಹಬ್ಬ ಎಂಟನೇ ದಿನದ ಗುಲಾಬಿ ಬಣ್ಣ 

ದಿನಾಂಕ 10.10.2024 ನವರಾತ್ರಿಯ ಎಂಟನೇ ದಿನದ ಗುಲಾಬಿ ಬಣ್ಣದ ಸೀರೆ ಹಾಗೂ ವಸ್ತ್ರವನ್ನು ಉಟ್ಟು ನಮಗೆ ಕಳುಹಿಸಿ ಕೊಟ್ಟಿರುವ ಚಿತ್ರಗಳು ಇಲ್ಲಿವೆ. ದಸರಾ ಹಬ್ಬವನ್ನು ಇನ್ನಷ್ಟು ಹೆಚ್ಚು

Read more
EntertainmentNewsಮನರಂಜನೆ

ನವರಾತ್ರಿಯ ನವಬಣ್ಣದಹಬ್ಬ ಏಳನೇ ದಿನ ನೀಲಿ ಬಣ್ಣ

ದಿನಾಂಕ 09.10.2024 ನವರಾತ್ರಿಯ ಏಳನೇ ದಿನದಂದು ನೀಲಿ ಬಣ್ಣದ ಸೀರೆ ಹಾಗೂ ವಸ್ತ್ರವನ್ನು ಉಟ್ಟು ನಮಗೆ ಕಳುಹಿಸಿ ಕೊಟ್ಟಿರುವ ಚಿತ್ರಗಳು ಇಲ್ಲಿವೆ. ದಸರಾ ಹಬ್ಬವನ್ನು ಇನ್ನಷ್ಟು ಹೆಚ್ಚು

Read more
EntertainmentNewsಮನರಂಜನೆ

ನವರಾತ್ರಿಯ ನವಬಣ್ಣದಹಬ್ಬ ಆರನೇ ದಿನ ಕೆಂಪು ಬಣ್ಣ

ದಿನಾಂಕ 08.10.2024 ನವರಾತ್ರಿಯ ಆರನೇ ದಿನದಂದು ಕೆಂಪು ಬಣ್ಣದ ಸೀರೆ ಹಾಗೂ ವಸ್ತ್ರವನ್ನು ಉಟ್ಟು ನಮಗೆ ಕಳುಹಿಸಿ ಕೊಟ್ಟಿರುವ ಚಿತ್ರಗಳು ಇಲ್ಲಿವೆ. ದಸರಾ ಹಬ್ಬವನ್ನು ಇನ್ನಷ್ಟು ಹೆಚ್ಚು

Read more
EntertainmentNewsಮನರಂಜನೆ

ನವರಾತ್ರಿಯ ನವಬಣ್ಣದಹಬ್ಬ ಐದನೇ  ದಿನ ಬಿಳಿ ಬಣ್ಣ

ದಿನಾಂಕ 07.10.2024 ನವರಾತ್ರಿಯ ಐದನೇ ದಿನದಂದು ಬಿಳಿ ಬಣ್ಣದ ಸೀರೆ ಹಾಗೂ ವಸ್ತ್ರವನ್ನು ಉಟ್ಟು ನಮಗೆ ಕಳುಹಿಸಿ ಕೊಟ್ಟಿರುವ ಚಿತ್ರಗಳು ಇಲ್ಲಿವೆ. ದಸರಾ ಹಬ್ಬವನ್ನು ಇನ್ನಷ್ಟು ಹೆಚ್ಚು

Read more
EntertainmentNewsಮನರಂಜನೆ

ನವರಾತ್ರಿಯ ನವಬಣ್ಣದಹಬ್ಬ ನಾಲ್ಕನೆ ದಿನ ಕೇಸರಿ ಬಣ್ಣ

ದಿನಾಂಕ 06-10-2024 ನವರಾತ್ರಿಯ ನಾಲ್ಕನೆ ದಿನದಂದು ಕೇಸರಿ ಬಣ್ಣದ ಸೀರೆ ಹಾಗೂ ವಸ್ತ್ರವನ್ನು ಉಟ್ಟು ನಮಗೆ ಕಳುಹಿಸಿ ಕೊಟ್ಟಿರುವ ಚಿತ್ರಗಳು ಇಲ್ಲಿವೆ. ಸಂಜೆ 6 ಗಂಟೆಯೊಳಗೆ ನಮಗೆ

Read more
EntertainmentNewsಮನರಂಜನೆ

ನವರಾತ್ರಿಯ ನವಬಣ್ಣದಹಬ್ಬ ಮೂರನೆ ದಿನ ಬೂದು ಬಣ್ಣ

ದಿನಾಂಕ 05-10-2024 ನವರಾತ್ರಿಯ ಮೂರನೆ ದಿನದಂದು ಬೂದು ಬಣ್ಣದ ಸೀರೆಯನ್ನು ಉಟ್ಟು ನಮಗೆ ಕಳುಹಿಸಿ ಕೊಟ್ಟಿರುವ ಚಿತ್ರಗಳು ಇಲ್ಲಿವೆ. ದಸರಾ ಹಬ್ಬವನ್ನು ಇನ್ನಷ್ಟು ಹೆಚ್ಚು ವರ್ಣಮಯಗೊಳಿಸಲು ಬಣ್ಣದ

Read more
Entertainmentಮನರಂಜನೆ

ನವರಾತ್ರಿಯ ನವಬಣ್ಣದಹಬ್ಬ ಮೊದಲ ದಿನ ಹಳದಿ ಬಣ್ಣ

ದಿನಾಂಕ 03-10-2024 ನವರಾತ್ರಿಯ ಮೊದಲ ದಿನದಂದು ಹಳದಿ ಬಣ್ಣದ ಸೀರೆಯನ್ನು ಉಟ್ಟು ನಮಗೆ ಕಳುಹಿಸಿ ಕೊಟ್ಟಿರುವ ಚಿತ್ರಗಳು ಇಲ್ಲಿವೆ. ದಸರಾ ಹಬ್ಬವನ್ನು ಇನ್ನಷ್ಟು ಹೆಚ್ಚು ವರ್ಣಮಯಗೊಳಿಸಲು ಬಣ್ಣದ

Read more
Entertainmentನ್ಯೂಸ್ಮನರಂಜನೆ

ಭಾರತದ ರಾಷ್ಟ್ರಪಿತ ಗಾಂಧಿ. ಭಾರತದ ರಾಷ್ಟ್ರೀಯ ಹೋರಾಟದಲ್ಲಿ ಗಾಂಧಿಯವರ ಪಾತ್ರ ಬಹಳ ಪ್ರಮುಖವಾದದ್ದು.

(ARTICAL): ಭಾರತದ ರಾಷ್ಟ್ರೀಯ ಹೋರಾಟದಲ್ಲಿ ಗಾಂಧಿಯವರ ಪಾತ್ರ ಬಹಳ ಪ್ರಮುಖವಾದದ್ದು. ಇವರನ್ನು ರಾಷ್ಟ್ರಪಿತ, ಮಹಾತ್ಮ ಮುಂತಾದ ಹೆಸರಿಂದ ಕರೆಯಲಾಗುತ್ತದೆ. ಇವರು ಮೂಲತಃ ಗುಜರಾತಿನ ಪೊರ ಬಂದರನಲ್ಲಿ 1869

Read more
Entertainmentಮನರಂಜನೆ

‘ಇಲ್ಲಿ ಸಿಗೋ ತಿಂಡಿನ ಮಿಸ್ ಮಾಡೋಕೆ ಇಷ್ಟ ಇರಲಿಲ್ಲ ಹಾಗಾಗಿ ಬಂದೆ’

(ARTICAL): ‘ಪಥಸಂಚಲನ’ ಅನ್ನೋದು ಅಲ್ಲಿಗೆ ಅಭ್ಯಾಸಕ್ಕೆಂದು ಹೋಗುವ ಮಕ್ಕಳಿಗೆ ಮಾತ್ರ ಅರ್ಥ ಆಗತ್ತೆ. ಅದೊಂದು ಶಿಸ್ತನ್ನು ಕಲಿಯುವ ಜಾಗ. ಅದಕ್ಕೆ ತಯಾರಿ, ತರಗತಿಯಿಂದ ಹೊರಬಂದು ಅಭ್ಯಾಸ ಮಾಡುವ

Read more
Entertainmentಮನರಂಜನೆ

‘ನಾವು ಗೆದ್ದಿದ್ದರೆ ಈ ರೀತಿ ಟ್ರೋಫಿ ನಮ್ಮ ಕೈಯಲ್ಲೂ ಇರುತ್ತಿತ್ತು’

(ARTICAL):ಮಕ್ಕಳು ಶಾಲೆಲಿ ಇದ್ದಾಗ ಅವರು ಆಟ-ಪಾಠಗಳಲ್ಲಿ ತೊಡಗಿಸಿಕೊಳ್ಳುವುದು, ತರಗತಿ ತಪ್ಪಿಸಿಕೊಳ್ಳುವುದನ್ನು ಕಂಡಾಗ, ಶಿಕ್ಷಕರು ಬರದೇ ಇದ್ದಾಗ ಮೈದಾನದಲ್ಲಿ ಆಟವಾಡಲು ಬಿಡಿ ಎಂದು ಕೇಳುವಾಗ, ಆಟವಾಡಲೆಂದು ಮೈದಾನದಲ್ಲಿ ಕಾಲ ಕಳೆಯುವುದನ್ನು ಕಂಡಾಗ, ಆಟದ ಮೈದಾನದವನ್ನು ತಾವೇ ಸಿದ್ದಮಾಡುವುದನ್ನು ಕಂಡಾಗ ಒಮ್ಮೆ ನನ್ನನ್ನೇ ನಾನು ಕಂಡಂತೆ ಆಯಿತು. ಚಿಕ್ಕಮಗಳೂರಿನ ಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಾಗಿದ್ದಾಗ ನಮ್ಮ ದೈಹಿಕ ಶಿಕ್ಷಕಿ ವೇದಾವತಿ ಟೀಚರ್ ಎಲ್ಲಾ ಮಕ್ಕಳನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತಿದ್ದರು. ನಮ್ಮ ಶಾಲೆಯ ಚಿಕ್ಕಚೊಕ್ಕ ಕ್ರೀಡಾಂಗಣದಲ್ಲಿ ಒಂದಿಷ್ಟು ಆಟೋಟಗಳನ್ನು ಅಭ್ಯಾಸ ಮಾಡುತ್ತಿದ್ದೆವು. ವಾಲಿಬಾಲ್, ಕಬ್ಬಡ್ಡಿ, ಕೊಕ್ಕೋ, ಓಟಕ್ಕೆ ಅನುಕೂಲವಾಗುವಂತಿತ್ತು. ಆದರೂ ಇದರ ಮಧ್ಯೆ ನಮ್ಮಲ್ಲಿ ಏನಾದರೂ ಕಿತಾಪತಿ ಮಾಡಿದಾಗ ಓಡಿಸಿಕೊಂಡು ಬರುವ ಗೆಳೆಯರಿಂದ ತಪ್ಪಿಸಿಕೊಳ್ಳಲು ಓಡುವುದರ ಮೂಲಕ ಓಟದ ಅಭ್ಯಾಸ, ಅದೇ ಓಟ ಹೆಚ್ಚಾದಾಗ ಶಾಲೆಯ ತಂತಿಬೇಲಿಯನ್ನು ಹಾರುವ ಮೂಲಕ ಹೈಜಂಪ್ ಕೂಡ ಅಭ್ಯಾಸವಾಗಿತ್ತು. ತಂತಿಬೇಲಿ ಹಾರುವಾಗ ತರಚಿದ ಗಾಯವಾಗಿದ್ದು, ಬಟ್ಟೆ ಹರಿದುಕೊಂಡದ್ದು ಉಂಟು. ಮನೆಗೆ ಸಮೀಪದಲ್ಲಿ ಕಬ್ಬಿನಗದ್ದೆ ಇದ್ದದ್ದರಿಂದ ಶನಿವಾರ ಮಧ್ಯಾಹ್ನ ಗದ್ದೆಗೆ ಹೋಗಿ ಕಬ್ಬನ್ನು ತರುತ್ತಿದ್ದದ್ದು, ಗದ್ದೆಯ ಮಾಲೀಕ ಓಡಿಸಿಕೊಂಡು ಬಂದಾಗ ಸಿಗದಂತೆ ಓಡಿದ್ದು, ಬಿದ್ದು ಗಾಯ ಮಾಡಿಕೊಂಡದ್ದು ಇದ್ದೇಇತ್ತು. ಹೀಗೆ ಓಡುವ ಅಭ್ಯಾಸ ಹೆಚ್ಚಾಗಿದ್ದರಿಂದ ಕೊಕ್ಕೋ ಆಟಕ್ಕೆ ನಮ್ಮ ಟೀಚರ್ ಸೇರಿಸಿಕೊಂಡರು. ನಮ್ಮ ತಂಡದ ಎಲ್ಲಾ ಸದಸ್ಯರಿಗೆ ಓಡಿಓಡಿ ಅಭ್ಯಾಸ ಇದ್ದಿದ್ದರಿಂದ ಬಹುತೇಕ ಕೊಕ್ಕೋ ಆಟದಲ್ಲಿ ಇದ್ದೆವು. ಅದೆಷ್ಟೋ ಬಾರಿ ಹಿಡಿಯಲು ಹೊರಟಾಗ ಅದೇನು ಗೂಳಿ ಓಡಿದ ಹಾಗೇ ಓಡ್ತಿಯಾ? ಅಂತ ಅಂದಿದ್ದಾರೆ. ಆಟಕ್ಕಾಗಿ ನಾವೆಲ್ಲ ಒಂದಾಗುತ್ತಿದ್ದೆವು. ಮಲೆನಾಡಿನ ಮಳೆಯಿಂದಾಗಿ ನಮ್ಮ ಶಾಲಾ ಮೈದಾನದಲ್ಲಿ ನೀರು ತುಂಬಿರುತ್ತಿತ್ತು. ಅದನ್ನು ತೆಗೆದು ಸರಿ ಮಾಡುವಷ್ಟರಲ್ಲಿ ಸಾಕುಸಾಕಾಗಿರುತ್ತಿತ್ತು. ಅಂತೂ ಕ್ರೀಡಾಕೂಟ ನಡೆದು ಸ್ವಲ್ಪ ಅಂಕಗಳ ಅಂತರದಲ್ಲಿ ಸೋತೆವು. ನಮ್ಮ ವೇದಾವತಿ ಟೀಚರ್ ಸೋತರೂ ಮುಂದಿನಬಾರಿಗೆ ಇನ್ನೂ ಹೆಚ್ಚಿನ ಅಭ್ಯಾಸ ಮಾಡಿ ಬರೋಣ ಎಂದು ಹುರಿದುಂಬಿಸಿದರು. ನಮ್ಮ ಶಾಲೆಯ ಇತರ ವಿದ್ಯಾರ್ಥಿಗಳಿಗೆ ಬಂದ ಬಹುಮಾನವನ್ನೇ ನಮ್ಮದು ಎನ್ನುವ ರೀತಿಯಲ್ಲಿ ಸಂಭ್ರಮಿಸಿದ್ದೇವೆ. ನಂತರ ಪ್ರೌಢಶಾಲೆಯಲ್ಲೂ ಅನೇಕ ಕ್ರೀಡೆಗಳಿದ್ದರೂ ನನ್ನ ಒಲವು ಕೊಕ್ಕೋ ಮೇಲೆಯೇ ಇತ್ತು. ಅಲ್ಲಿ ದೈಹಿಕಶಿಕ್ಷಕ ಷಡಕ್ಷರಿಸರ್ ಆಟಗಳ ಒಳಹೊರಗುಗಳನ್ನು ಹೇಳಿಕೊಟ್ಟು, ಚೆನ್ನಾಗಿ ಅಭ್ಯಾಸ ಮಾಡಿಸಿದರು. ಅಷ್ಟೇ ಪೆಟ್ಟು ಕೂಡ ಕೊಡುತ್ತಿದ್ದರು. ಅವರ ಪೆಟ್ಟಿನಿಂದ ಏನು ಕಲಿತಿದ್ದೇವೋ ಮರೆತಿದ್ದೇವೆ. ಆದರೆ ಆ ಪೆಟ್ಟುಗಳು ಇನ್ನೂ ನೆನಪಿವೆ, ಎಲ್ಲವೂ ಮಧುರ ನೆನಪುಗಳಾಗಿ…                  ಶಿಕ್ಷಕನಾಗಿ ಈ ಶಾಲೆಗೆ ಬಂದಾಗಿನಿಂದ ವಾಲಿಬಾಲ್, ಥ್ರೋಬಾಲ್ ಪ್ರಮುಖವಾಗಿದ್ದ ಕ್ರೀಡೆಗಳಾಗಿದ್ದವು. ಒಂದಿಷ್ಟು ವರ್ಷಗಳ ನಂತರ ಕೊಕ್ಕೋ ಅಂಕಣ ಸಿದ್ಧವಾಗ ತೊಡಗಿತು. ಎರಡು ಪೋಲ್ ಬಂದು ನಿಂತಾಗ,  ಅದೊಂತರ ಸಂಭ್ರಮ ನನಗೆ. ದೈಹಿಕಶಿಕ್ಷಕ ಬಸವರಾಜ್ ಸರ್ ದೆಸೆಯಿಂದ ಆಸಕ್ತಿ ಇದ್ದ ಮಕ್ಕಳು ನಿಧಾನವಾಗಿ ಕೊಕ್ಕೋ ಅಂಕಣಕ್ಕೆ ಬರತೊಡಗಿದರು. ಒಮ್ಮೆ ಮಕ್ಕಳ ದಿನಾಚರಣೆಯ ಸಮಯದಲ್ಲಿ  ಮಕ್ಕಳೊಂದಿಗೆ ಬೆರೆತು ಆಟವಾಡುತ್ತಿದ್ದಾಗ ಪುಷ್ಪಮೇಡಂ ಮಕ್ಕಳೊಂದಿಗೆ ಕೊಕ್ಕೋ ಆಟದಲ್ಲಿ ಭಾಗವಹಿಸಿದ್ದರು. ಆಗಲೇ ತಿಳಿದದ್ದು ಅವರು ಕೂಡ ಕೊಕ್ಕೋ ಆಟದಲ್ಲಿ ಬಹುಮಾನವನ್ನು ಪಡೆದಿದ್ದರೆಂದು. ಅದಾದ ನಂತರ ನಾನು ಮತ್ತು ಚನ್ನೇಶ್ ಸರ್ ಕೂಡ ಮಕ್ಕಳೊಂದಿಗೆ ಬೆರೆತು ಆಡಿದೆವು. ಆ ಸಮಯದಲ್ಲಂತೂ ನನ್ನ ಬಾಲ್ಯದ ದಿನಗಳು, ಕೊಕ್ಕೋ ಆಟ, ಏಳು-ಬೀಳು, ಮೈದಾನ ಸಿದ್ದಗೊಳಿಸುತ್ತಿದ್ದದ್ದು ಎಲ್ಲವೂ ಒಮ್ಮೆ ಕಣ್ಣಮುಂದೆ ಬಂದು ಹೋಯಿತು. ಮಕ್ಕಳು ಪಿ.ಇ ತರಗತಿಗೆ ಬಂದಾಗ, ಸಂಜೆ ಕೋಚಿಂಗ್ ತರಗತಿಯ ಸಮಯದಲ್ಲಿ, ಶಾಲೆ ಮುಗಿದಾಗ ಕ್ರೀಡಾಕೂಟಕ್ಕೆ ಸಿದ್ಧರಾಗುತ್ತಿದ್ದ ಮಕ್ಕಳ ಜೊತೆಗೆ ಒಂದಿಷ್ಟು ದಿನಗಳ ಕಾಲ ಆಗಾಗ ಕೊಕ್ಕೋ ಆಡುತ್ತಿದ್ದೆ. ಅದಾಗಿ ಕೆಲವೇ ವರ್ಷಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕೊಕ್ಕೋ ತಂಡ ತಯಾರಾಗತೊಡಗಿತು. ಕಳೆದ ಎರಡುಮೂರು ವರ್ಷಗಳಲ್ಲಿ ಒಳ್ಳೆಯ ಕೊಕ್ಕೋ ಆಡುವ ಮಕ್ಕಳ ಸಂಖ್ಯೆಯೂ ಹೆಚ್ಚಾಯಿತು. ಮೊದಲ ಬಾರಿಗೆ ಬಾಲಕ-ಬಾಲಕಿಯರ ತಂಡ ಭಾಗವಹಿಸಿತು. ಪ್ರಶಸ್ತಿ ಪಡೆಯದೆ ಹೋದರೂ ಮಕ್ಕಳು ಬೇರೆ ತಂಡಗಳೊಂದಿಗೆ ಒಳ್ಳೆಯ ಪೈಪೋಟಿ ನೀಡಿದ್ದರು. ಕಳೆದ ವರ್ಷವೂ ಒಂದೊಳ್ಳೆಯ ತಂಡ ತಯಾರಾಗಿತ್ತು. ಯಾವುದಾದರೊಂದು ಬಹುಮಾನ ಬಂದೇ ಬರುತ್ತದೆ ಎನ್ನುವಂತೆ ತಯಾರಾಗಿದ್ದರು. ಪ್ರಶಸ್ತಿಗೆ ಒಂದೇ ಮೆಟ್ಟಿಲು ಎನ್ನುವಂತೆ ಸೆಮಿಫೈನಲ್ ನಲ್ಲಿ ಸೋತರು. ಆದರೆ ಸೋಲಿಗಿಂತ ಹೆಚ್ಚಾಗಿ ಕಾಡಿದ್ದು ಗೆದ್ದ ತಂಡದವರು ನಮ್ಮ ಮಕ್ಕಳ ತಂಡದ ಎದುರು ‘ತೊಡೆತಟ್ಟಿ’ ಗೆಲುವನ್ನು ಸಂಭ್ರಮಿಸಿದ್ದರು. ಇದು ನಮ್ಮ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಪೈಪೋಟಿ ಕೊಡಲು, ಸರಿಯಾದ ಉತ್ತರ ಕೊಡಲೇಬೇಕು ಎನ್ನುವಂತೆ ತಯಾರಾಗಲು ಅನುವು ಮಾಡಿಕೊಟ್ಟಿತು  ಇತ್ತೀಚೆಗೆ ಸಂಜೆ ಹೆಚ್ಚಿನ ಸಮಯದಲ್ಲಿ ಅಭ್ಯಾಸ ಮಾಡುವಾಗ ಮಕ್ಕಳೊಂದಿಗೆ ಆಡುವಾಗ ರಾಹುಲ್ ‘ಮೊದಲು ಈಸರ್ ನ ಔಟ್ ಮಾಡಬೇಕು’ ಎನ್ನುತ್ತಿದ್ದನು. ಅದನ್ನು ಕೇಳಿಸಿಕೊಂಡು ನಕ್ಕು ಆಟ ವಾಡಿದ್ದೆ. ದೈಹಿಕಶಿಕ್ಷಕ ಪ್ರಶಾಂತ್ ಅವರು ಇತರ ಕ್ರೀಡೆಗಳಲ್ಲಿರ ವ ಮಕ್ಕಳಿಗೆ ಅಭ್ಯಾಸ ಮಾಡಿಸುತ್ತಿದ್ದುದರಿಂದ ನಾನೇ ಅನೇಕ ಸಲ ಕೊಕ್ಕೋ ತಂಡಗಳನ್ನು ರಚಿಸಿ ಆಡಿಸಿದ್ದೇನೆ. ಆಗಂತೂ ಸರ್ ಅದು ಔಟ್, ಇದು ಔಟ್ ಇಲ್ಲ, ಅದು ಹಾಗಲ್ಲ, ಇದು ಈಗಲ್ಲ, ಅದು ಇದು ಎಂದು ಹೇಳುತ್ತಿದ್ದರು. ಆಗ ಅಂತರಾಷ್ಟ್ರೀಯ ಪಂದ್ಯಗಳಲ್ಲೇ ಕ್ಯಾಮರಾಗಳು ಇದ್ದರೂ ಒಮ್ಮೊಮ್ಮೆ ತೀರ್ಪುಗಳು ಏನೇನೋ ಆಗಿರುತ್ತವೆ. ಅಂತದ್ದರಲ್ಲಿ ಇವರು ಹೇಳುವುದನ್ನು ಕೇಳಿ ನಕ್ಕಿದ್ದೇನೆ. ಸಮಾಧಾನ ಮಾಡಿಕೊಂಡಿದ್ದೇನೆ. ಒಮ್ಮೆ ಆಟ ಅರ್ಧ ನಡೆಯುವಾಗ ಮಳೆ ಬಂದು ಆಟವನ್ನು ನಿಲ್ಲಿಸಲು ಮುಂದಾದಾಗ ‘ಸರ್ ಅಂತ ಜೋರು ಮಳೆ ಏನು ಅಲ್ಲ, ಆಟ ಆಡಿ ಮುಗಿಸೋಣ’ ಎಂದು ಮಕ್ಕಳೇ ಕೇಳಿಕೊಂಡರು. ಆರೋಗ್ಯದ ದೃಷ್ಟಿಯಿಂದ ಒಪ್ಪದೇ ಅನಿವಾರ್ಯವಾಗಿ ಆಟವನ್ನು ನಿಲ್ಲಿಸಬೇಕಾಯಿತು. ಮಕ್ಕಳಂತೂ ಬೇಸರದಿಂದ ಆಟವನ್ನು ನಿಲ್ಲಿಸಿದರು. ಬೆಳಗ್ಗೆಯಿಂದ ಇಲ್ಲದ ಮಳೆ ಈಗಲೇ ಬರಬೇಕಿತ್ತೇ? ಎಂದು ಬೈದುಕೊಂಡಿದ್ದಾರೆ.  ಮರುದಿನ ಬೆಳಗ್ಗೆಯಿಂದಲೂ ಮಳೆ ಬಿಡದೇ ಸುರಿಯುತ್ತಿದ್ದುದರಿಂದ ಸಂಜೆ ಅಭ್ಯಾಸದ ಸಮಯಕ್ಕೆ ಅದಾಗಲೇ ಕೊಕ್ಕೋ ಅಂಕಣ ನೀರಿನಿಂದ ತುಂಬಿತ್ತು. ಮಳೆ ಬಂದು ಕಟ್ಟಡದಿಂದ ಸುರಿದ ನೀರು ಕೊಕ್ಕೋ ಅಂಕಣಕ್ಕೆ ಬರುತ್ತಿದ್ದದ್ದನ್ನು ಕಂಡು ಒಂದಿಷ್ಟು ಮಕ್ಕಳು ಪಕ್ಕದ ಎತ್ತರದ ಜಾಗದಲ್ಲಿದ್ದ ಮಣ್ಣನ್ನು ತೆಗೆದುಕೊಂಡು ಬಂದು ಕೊಕ್ಕೋ ಅಂಕಣದಲ್ಲಿ ಎಲ್ಲೆಲ್ಲಿ ಒದ್ದೆಯಾಗಿತ್ತೋ ಅಲ್ಲಲ್ಲಿ ಹಾಕಿದ್ದಾರೆ, ಆ ಜಾಗವನ್ನು ಗಟ್ಟಿಗೊಳಿಸುವ ಪ್ರಯತ್ನ ಕೂಡ ಮಾಡಿದ್ದಾರೆ. ಅಂದು ಆಟವನ್ನೇ ಆಡದೇ ದೈಹಿಕಶಿಕ್ಷಕರೊಂದಿಗೆ ಸೇರಿ ಅಂಕಣದ ಸುತ್ತಲೂ ನೀರು ಬರದಂತೆ ಗುಂಡಿ ತೆಗೆದು ಮಣ್ಣನ್ನು ತಂದು ಕಟ್ಟೆ ಕಟ್ಟಿದ್ದಾರೆ. ಮರುದಿನದಿಂದ ಮಳೆ ಬಂದರೂ ಅಷ್ಟೊಂದು ಸಮಸ್ಯೆ ಆಗದಂತೆ ಮಾಡಿಕೊಂಡಿದ್ದ ವ್ಯವಸ್ಥೆಯಿಂದಾಗ ಆಟವನ್ನು ಆಡಿದ್ದಾರೆ. ಶಾಲೆ ಮುಗಿದ ನಂತರ ಹೆಚ್ಚಿನ ಸಮಯ ಅಭ್ಯಾಸಕ್ಕೆ ಬರುತ್ತಿದ್ದುದರಿಂದ ಇವರನ್ನು ಕರೆದುಕೊಂಡು ಹೋಗಲು ಪೋಷಕರು ತಡವಾಗಿಯೇ ಬರುತ್ತಿದ್ದರು, ಕೆಲವರು ಬೇಗನೇ ಬಂದು, ‘ಅದೇನು ಆಡ್ತಾರೋ ನೋಡೋಣ ಅಂತ ಬೇಗ ಬಂದೆ’ ಎಂದಿದ್ದಾರೆ.

Read more
Scan the code