‘ಅಮ್ಮ-ಮಗ ತೀರ್ಪುಗಾರರಾಗಿ ಬಂದು ಶಾಲೆಯಲ್ಲಿ ಹೊಸ ಇತಿಹಾಸವನ್ನೆ ಬರೆದಿದ್ದೀರಿ’
(ARTICAL):‘ಆಟ’ ಆಡುವವರನ್ನು, ನೋಡುವವರನ್ನು ತುದಿಗಾಲಲ್ಲಿ ನಿಲ್ಲಿಸುವುದರಲ್ಲಿ ಸಂಶಯವೇ ಇಲ್ಲ. ಒಮ್ಮೆ ಆಟಗಾರರಾಗಿದ್ದವರು ಮುಂದೊಂದು ದಿನ ಆ ಆಟವನ್ನು ಕಲಿಸುವ ತರಬೇತುದಾರರಾಗಬಹುದು, ಆ ಕ್ರೀಡೆಯ ಬೇರೆಬೇರೆ ಮಜಲುಗಳಲ್ಲಿ ಕಾರ್ಯ ನಿರ್ವಹಿಸಿದಾಗ, ಆ ಕ್ರೀಡೆಯ ಬಗೆಗೆ ಆಸಕ್ತಿ ಇನ್ನೂ ಹಾಗೆಯೇ ಇದ್ದಲ್ಲಿ ಅದು ಮತ್ತೊಂದು ರೂಪಕ್ಕೆ ಕರೆದುಕೊಂಡು ಹೋಗಬಹುದಾದ ಸಂಗತಿಯೊಂದು ಖುಷಿ ಕೊಟ್ಟ ಸಮಯ. ಶಾಲೆ ಆರಂಭವಾದಾಗ ‘ನವೀ.ಡಿ.ಸಿ’ ಎಂಬ ವಿದ್ಯಾರ್ಥಿ ಹೊಸದಾಗಿ ಶಾಲೆಗೆ ಸೇರಿದ ಸಮಯ. ಆತ ಸ್ಕೌಟ್ ನಲ್ಲಿ ಸಕ್ರೀಯನಾಗಿ ನಮ್ಮ ಮಲ್ನಾಡ್ ಓಪನ್ ಗ್ರೂಪ್ ನ ಸದಸ್ಯನಾಗಿದ್ದ ಚಿರಪರಿಚಿತನೂ ಆಗಿದ್ದವ. ಓದಿನಲ್ಲಿ ಸ್ವಲ್ಪ ಹಿಂದಿದ್ದ. ಒಂದಿಷ್ಟು ಆಟೋಟಗಳಲ್ಲಿ ಮುಂದಿರುತ್ತಿದ್ದ. ತರಗತಿಯಲ್ಲಿ ತನ್ನ ಪಾಡಿಗೆ ತಾನಿರುತ್ತಿದ್ದವನು, ಮಾತು ಮಿತಭಾಷಿ. ಇದರ ಆಚೆಗೆ ಆತ ಟೆಕ್ವಾಂಡೋ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದ ರೀತಿಯೇ ಬೆರಗಾಗಿಸಿತ್ತು. ತರಗತಿಯಲ್ಲಿ ಇಷ್ಟೊಂದು ಮೌನವಾಗಿರುವ ವಿದ್ಯಾರ್ಥಿ ಟೆಕ್ವಾಂಡೋ ಆಡಲು ಮುಂದಾದರೆ, ಆ ಸಾಮರ್ಥ್ಯವನ್ನು ಕಂಡರೆ ಭಯಂಕರ ಎನಿಸುವಂತಿರುತ್ತಿತ್ತು. ಇವರ ತಂದೆ ದೊರೈ, ತಾಯಿ ಅಶ್ವಿನಿದೊರೈ ತಮ್ಮ ನವನೀತ್ ಎಲ್ಲರೂ ಕೂಡ ‘ಬ್ಲ್ಯಾಕ್ ಬೆಲ್ಟ್’ ಪಡೆದಿರುವವರೇ ಆಗಿದ್ದಾರೆ. ಇಡೀ ಕುಟುಂಬವೇ ಇದರಲ್ಲಿ ತೊಡಗಿಸಿಕೊಂಡಿರುವ ರೀತಿಯೇ ಅನನ್ಯವಾದದ್ದು. ಸಂತೋಷದ ಸಂಗತಿಯೆಂದರೆ ಯಾವುದೇ ಪ್ರತಿಫಲಾಪೇಕ್ಷತೆ ಇಲ್ಲದೇ ಮೇಡಂ ಶಾಲಾ-ಕಾಲೇಜಿನ ಹೆಣ್ಣುಮಕ್ಕಳಿಗೆ ಉಚಿತವಾಗಿ ಆತ್ಮರಕ್ಷಣೆಕಲೆಯನ್ನು ಹೇಳಿಕೊಡುತ್ತಾರೆ. ಒಮ್ಮೆ ‘ಮಕ್ಕಳ ದಸರಾ’ ಕಾರ್ಯಕ್ರಮದ ಉದ್ಘಾಟನೆಯು ನಗರದ ಶಿವಪ್ಪನಾಯಕ ವೃತ್ತದಿಂದ ಆರಂಭವಾಗಲಿದ್ದಿತು. ನಮ್ಮ ಶಾಲೆಯ ಬ್ಯಾಂಡ್ ತಂಡವನ್ನು ಕರೆದುಕೊಂಡು ಹೋಗಿದ್ದೆವು. ಅಲ್ಲಿ ಒಂದು ಸಣ್ಣ ಟೆಕ್ವಾಂಡೋ/ಕರಾಟೆಯ ಪ್ರಾತ್ಯಕ್ಷಿತೆಯಿತ್ತು. ಆ ತಂಡದಲ್ಲಿ ನವೀ ಮತ್ತು ಆತನ ಸಹೋದರ ಇಬ್ಬರೂ ಇದ್ದರು. ಇಬ್ಬರು ಅಲ್ಲಿ ವಿವಿಧ ಭಂಗಿಗಳು, ಹಂಚು, ಇಟ್ಟಿಗೆಗಳನ್ನು ಒಡೆಯುವುದನ್ನು ಕಂಡ ಜೊತೆಗಿದ್ದ ವಿದ್ಯಾರ್ಥಿಗಳು ಆಶ್ಚರ್ಯಚಕಿತರಾದರು. ‘ಶಾಲೆಲಿ ಒಳ್ಳೆ ಅಮ್ಮಣ್ಣಿಪಾಪು ಇದ್ದ ಹಾಗೇ ಇರ್ತಾನೆ. ಇಲ್ಲಿ ನೋಡಿದರೆ ಕೂಗಿಕೊಂಡು ಹಾರಿಹಾರಿ ಸ್ಟಂಟ್ ಮಾಡೋದನ್ನ ನೋಡಿದರೆ ನಿಜಕ್ಕೂ ಅವನೇನಾ ಇವನು? ಅಂತ ಅನ್ನಿಸದೇ ಇರದು’ ಎಂದು ಅವನ ತರಗತಿಯ ಮಕ್ಕಳೇ ಹೇಳಿದರು. ನೆರೆದಿದ್ದ ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿದರು. ಇದರ ಮಧ್ಯೆ ಸುತ್ತಲೂ ಒಂದಿಷ್ಟು ಮಕ್ಕಳು ತಟ್ಟೆಗಳಲ್ಲಿ ಕೇಸರಿ, ಬಿಳಿ, ಹಸಿರು ಬಣ್ಣವನ್ನು ಮೇಲಕ್ಕೆ ಎತ್ತಿ ಹಿಡಿದಿದ್ದರು. ಅದನ್ನು ಹಾರಿ ಒಮ್ಮೆಲೆಗೆ ಅವನ್ನು ಒಡೆದಾಗ ಗಾಳಿಯಲ್ಲಿ ತ್ರಿವರ್ಣವನ್ನು ಕಂಡು ಜೋರಾದ ಕರತಾಡನವಿತ್ತು. ಕಡೆಯದಾಗಿ ಅದೇ ರೀತಿಯಲ್ಲಿ ಹಂಚುಗಳನ್ನು ಹಿಡಿದಿದ್ದರು. ಸುತ್ತಲೂ ತಿರುಗುತ್ತ ಎಲ್ಲವನ್ನು ಒಡೆದನು. ಕಡೆಯದಾಗಿ ಒಂದನ್ನು ಮಾತ್ರ ಒಡೆಯಲಾಗಲಿಲ್ಲ. ಎರಡು ಸೆಕೆಂಡ್ ಸಮಯ ತೆಗೆದುಕೊಂಡು ಮತ್ತೊಮ್ಮೆ ಅದನ್ನು ಇನ್ನೂ ಸ್ವಲ್ಪ ಎತ್ತರದಲ್ಲಿ ಹಿಡಿಯುವಂತೆ ಹೇಳಿ. ತದೇಕಚಿತ್ತದಿಂದ ಅದನ್ನೇ ಗಮನಿಸಿ ದೂರದಿಂದ ಓಡಿಬಂದು ಅದನ್ನು ಒಡೆದಾಗ ನಮ್ಮ ಶಾಲೆಯ ಮಕ್ಕಳು ಕೂಗುತ್ತ ಚಪ್ಪಾಳೆ ತಟ್ಟಿದರು. ೧೦-೧೫ ನಿಮಿಷ ರೋಮಾಂಚನ ಎನಿಸುವಂತಿತ್ತು ನವೀ ಮತ್ತು ತಂಡದ ಕಾರ್ಯಕ್ರಮ. ಅದಾದ ನಂತರ ನಮ್ಮ ಶಾಲೆಯ ಮಕ್ಕಳು ಅವನಿಗೆ ಅಭಿನಂದನೆ ಸಲ್ಲಿಸಿದರು. ಎಷ್ಟೋ ಮಕ್ಕಳು, ‘ಲೋ ಏನೋ ಇಷ್ಟೆಲ್ಲಾ ಪ್ರತಿಭೆ ಇಟ್ಟಿದಿಯ. ಒಂದುದಿನವೂ ಈ ತರದ್ದು ಗೊತ್ತಿದೆ ಅಂತ ಹೇಳಲಿಲ್ಲವಲ್ಲೋ?’ ಎಂದು ಜೋರು ಮಾಡಿದ್ದಾರೆ. ಕೆಲವರು ‘ಸೈಲೆಂಟ್ ಇದಾನೆ ಅಂತ ಕೆಣಕಬೇಡಿ, ಭಯಂಕರ ಸಾಮರ್ಥ್ಯ ಇರುವವನು’ ಎಂದರು. ಅವರ ತಾಯಿಯ ಸೂಚನೆಯ ಮೇರೆಗೆ ನಮ್ಮ ಶಾಲೆಯ ಶಿಕ್ಷಕರನ್ನು ಮಾತನಾಡಿಸಲು ಬಂದಾಗ, ‘ಶಾಲೆಲಿ ಇರೋನು ನೀನೇನಾ? ಅಥವಾ ಬೇರೆಯವನಾ? ದೊಡ್ಡ ಪ್ರತಿಭೆ ನೀನು. ಒಳ್ಳೆಯದಾಗಲಿ’ ಎಂದಾಗ ಅಷ್ಟೇ ನಮ್ರತೆಯಿಂದ ನಡೆದುಕೊಂಡು. ನಂತರ ತಮ್ಮ ತಂಡದೊಂದಿಗೆ ಸೇರಿದನು. ಇವನ ಪ್ರತಿಭೆಯನ್ನು ಕಣ್ಣಾರೆ ಕಂಡ ಆತನ ಸ್ನೇಹಿತರು, ಶಿಕ್ಷಕರು ಶಾಲೆಯಲ್ಲಿ ಇವನಿಂದ ಒಂದು ಕಾರ್ಯಕ್ರಮ ಕೊಡಿಸಬೇಕು ಎಂದುಕೊಂಡರು. ತಿಂಗಳಲ್ಲಿ ಒಂದೆರಡು ಶನಿವಾರ ‘ಮಕ್ಕಳ ಪ್ರತಿಭಾ ಪ್ರದರ್ಶನ’ ಇದ್ದೇ ಇರುತ್ತಿತ್ತು. ಇದರಲ್ಲಿ ನವೀ ಒಂದು ಕಾರ್ಯಕ್ರಮವನ್ನು ನೀಡಬೇಕು ಎಂದು ಹೇಳಿದೆವು. ಆದರೆ ಸಂಕೋಚ ಸ್ವಭಾವದವನಾಗಿದ್ದರಿಂದ ಬೇಡಬೇಡ ಎಂದು ಹಿಂದೇಟು ಹಾಕುತ್ತಿದ್ದ. ಹಾಗಾಗಿ ಆತನ ತಂದೆಗೆ ಕಾಲ್ ಮಾಡಿ, ‘ಗುರುಗಳೇ ಶಾಲೆಯಲ್ಲಿ ನಿಮ್ಮ ಮಗನ ಪ್ರತಿಭೆಯನ್ನು ಪ್ರದರ್ಶಿಸುವಂತೆ ತಿಳಿಹೇಳಿ’ ಎಂದೆ. ನಂತರ ತಂದೆ ಏನು ಹೇಳಿದರೋ ತಿಳಿಯದೋ ‘ಮುಂದಿನ ಶನಿವಾರ ಕಾರ್ಯಕ್ರಮ ಕೊಡ್ತಿನಿ’ ಎಂದು ಒಪ್ಪಿಕೊಂಡನು. ನಿಗಧಿತ ಶನಿವಾರದಂದು ಒಂದಿಷ್ಟು ಕಾರ್ಯಕ್ರಮಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು. ಹಾಡು, ನೃತ್ಯ, ಅಭಿನಯ ಹೀಗೆ ಒಂದಿಷ್ಟು ಕಾರ್ಯಕ್ರಮಗಳು ಮುಗಿದ ನಂತರ ಕಡೆಯದಾಗಿ ನವೀ ಕಾರ್ಯಕ್ರಮ ನೀಡಲಿದ್ದಾನೆ ಎಂದಾಗ. ಇವನ ಪ್ರತಿಭೆಯ ಬಗ್ಗೆ ತಿಳಿಯದವರು. ‘ಇವನೇನು ಕಾರ್ಯಕ್ರಮ ನೀಡುತ್ತಾನೆ?’ ಎಂದುಕೊಂಡರೆ, ವಿಷಯ ಗೊತ್ತಿದ್ದವರು, ‘ಈಗ ನೋಡು ಏನು ಅದ್ಭುತವಾದ ಕಾರ್ಯಕ್ರಮ ಕೊಡ್ತಾನೆ ಅಂತ. ಎಲ್ಲಾರೂ ಕಳೆದು ಹೋಗಿ ಬಿಡ್ತಾರೆ’ ಎಂದು ಹೇಳುತ್ತಿದ್ದರು. ಅಂತೂ ಆತ ಸಮವಸ್ತ್ರ ಧರಿಸಿ ತನಗೆ ಏನೇನು ಬೇಕಿದೆ? ಎಲ್ಲಿಲಿ ಅದನ್ನು ಇಡಬೇಕಿದೆ? ಎಂಬುದನ್ನು ತಿಳಿಸಿದಂತೆ ಒಂದಿಷ್ಟು ಮಕ್ಕಳ ಸಹಾಯ ಪಡೆದು ಅದನ್ನು ಸಿದ್ಧಪಡಿಸಿದೆವು. ಆತನ ಒಂದೊಂದು ಚಟುವಟಿಕೆಯನ್ನು ಸೂಕ್ಷವಾಗಿ ಮಕ್ಕಳು ವೀಕ್ಷಿಸತೊಡಗಿದರು. ಅದ್ಭುತ ಎಂದಾಗ ಕೊಠಡಿಯಲ್ಲಿದ್ದವರೆಲ್ಲ ಚಪ್ಪಾಳೆ ತಟ್ಟಿ ಆತನನ್ನು ಹುರಿದುಂಬಿಸುತ್ತಿದ್ದರು. ಬರಿಗೈಲಿ ಹಂಚನ್ನು ಒಡೆಯುವಾಗ ಬಾಯಿಯ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಇಷ್ಟೊಂದು ಸೈಲೆಂಟ್ ಆಗಿರುವ ಈತ ಹೀಗಿದ್ದಾನಲ್ಲ? ‘ಸೂಪರ್’ ಎಂದವರಿದ್ದಾರೆ. ಇದಾದ ಕೆಲವು ದಿನಗಳ ನಂತರ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದು ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾದನು. ಈ ವಿಷಯವು ಆತನ ಪೋಷಕರಿಂದಲೇ ತಿಳಿಯಿತೇ ಹೊರತು ನವೀ ಇದನ್ನು ತನ್ನ ಗೆಳೆಯರ ಬಳಗದೊಂದಿಗೆ ಹೇಳಲೇ ಇಲ್ಲ. ಕಡೆಯದಾಗಿ ಆ ಟೂರ್ನಿಮೆಂಟ್ ನಲ್ಲಿ ಭಾಗವಹಿಸಲು ರಜೆಯನ್ನು ಕೇಳಲು ಬಂದಾಗಲೇ ತಿಳಿದದ್ದು ಈತ ‘ಭಾರತ’ವನ್ನು ಪ್ರತಿನಿಧಿಸುವ ಅವಕಾಶವನ್ನು ಪಡೆದಿದ್ದಾನೆ ಎಂದು. ‘ನೇಪಾಳ’ದಲ್ಲಿ ಪಂದ್ಯಗಳು ನಡೆಯಲಿದ್ದು ಬೇರೆಬೇರೆ ವಯಸ್ಸಿನ ವಿಭಾಗದಲ್ಲಿ ಶಿವಮೊಗ್ಗದ ಕೆಲವರು ಭಾಗವಹಿಸುತ್ತಿದ್ದಾರೆ ಎಂಬುದು ತಿಳಿಯಿತು. ನಮ್ಮ ಶಾಲೆಯಲ್ಲಿ ಓದುತ್ತಿರುವವನೊಬ್ಬ ದೇಶವನ್ನು ಪ್ರತಿನಿಧಿಸುತ್ತಾನೆ ಎಂದರೆ ಯಾರಿಗೆ ತಾನೇ ಖುಷಿಯಾಗುವುದಿಲ್ಲ? ದೈಹಿಕ ಶಿಕ್ಷಕರಾದ ಬಸವರಾಜ್ ಸರ್ ಈ ವಿಷಯವನ್ನು ಎಲ್ಲಾ ಶಿಕ್ಷಕರಿಗೂ ತಿಳಿಸಿ ಎಲ್ಲರೂ ಶುಭಹಾರೈಸಿದರು. ಸ್ಕೌಟ್ ಭವನ್ ನಲ್ಲೂ ಕೂಡ ನಮ್ಮ ಮಲ್ನಾಡ್ ಓಪನ್ ಗ್ರೂಪ್ ನ ಸದಸ್ಯರು ಒಂದು ಸಂಜೆ ಸೇರಿ ಶುಭಾಶಗಳನ್ನು ತಿಳಿಸಿ, ಗೆಲುವು ನಿನ್ನದಾಗಲಿ ಎಂದು ಹಾರೈಸಿದರು. ನವೀ ವಿವಿಧ ಪಂದ್ಯಗಳಲ್ಲಿ ಶ್ರೀಲಂಕಾ, ಬಾಂಗ್ಲಾದೇಶ್ ಇತರ ರಾಷ್ಟ್ರಗಳ ಮೇಲೆ ಗೆಲುವನ್ನು ಸಾಧಿಸಿದ ಸುದ್ಧಿ ತಿಳಿಯಿತು. ಸಹಜವಾಗಿ ಎಲ್ಲರಿಗೂ ಸಂತೋಷವಾದ ಸಂಗತಿಯಾಗಿತ್ತು. ಗೆಲುವಿಗೆ ಒಂದೇ ಮೆಟ್ಟಿಲು ಬಾಕಿಯಿದ್ದದ್ದು ಎಂದು ತಿಳಿಯಿತು. ಈ ಮಟ್ಟಕ್ಕೆ ಈ ವಿದ್ಯಾರ್ಥಿ ಇರಬಹುದು ಎಂದು ಶಾಲೆಯಲ್ಲಿ, ತರಗತಿಯಲ್ಲಿ ನೋಡಿದಾಗ ಅನ್ನಿಸುತ್ತಲೇ ಇರಲಿಲ್ಲ. ಆತ ಈಗ ಪದಕದ ಹೊಸ್ತಿಲಲ್ಲಿ ಎನ್ನುವುದು ಸಂಭ್ರಮವನ್ನು ಇಮ್ಮಡಿ ಮಾಡಲಿ ಎನಿಸಿತು. ಪಂದ್ಯ ಏನಾಗುವುದೋ ಏನು? ಎಂದು ಕೊಳ್ಳುತ್ತಿದ್ದೆವು. ಅಷ್ಟರಲ್ಲಿ ಫೈನಲ್ ಪಂದ್ಯದ ಗೆಲುವಿನ ವಿಡಿಯೋ ಮತ್ತು ರಾಷ್ಟ್ರಧ್ವಜವನ್ನು ಹೊದ್ದು ಪ್ರಶಸ್ತಿಯನ್ನು ಸ್ವೀಕರಿಸುವ ವಿಡಿಯೋವನ್ನು ದೊರೈ ಸರ್ ಕಳಿಸಿದರು. ನಮ್ಮ ಶಾಲೆಯ ವಿದ್ಯಾರ್ಥಿಯೊಬ್ಬ ಹೀಗೆ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದಿದ್ದಾನೆ. ಅದಕ್ಕಿಂತ ಹೆಚ್ಚಾಗಿ ರಾಷ್ಟ್ರಧ್ವಜವನ್ನು ಹೊದ್ದು ಸಂಭ್ರಮಿಸಿರುವುದೇ ನಮಗೂ ಹೆಮ್ಮೆಯ ಸಂಗತಿಯಾಗಿತ್ತು. ಪ್ರಶಸ್ತಿಯನ್ನು ಪಡೆದುಕೊಂಡು ಮರಳಿದ ತಂಡವನ್ನು ರೈಲ್ವೇ ನಿಲ್ದಾಣದಲ್ಲಿ ಹಾರಹಾಕಿ ಸ್ವಾಗತಿಸಲಾಯಿತು. ಪದಕವನ್ನು ಹಾಕಿಕೊಂಡು ನಿಂತ ತಂಡದ ಸದಸ್ಯರನ್ನು ನೋಡುವುದೇ ಖುಷಿಯಾಗಿತ್ತು. ಅದರಲ್ಲೂ ನಮ್ಮ ಶಾಲೆಯ ವಿದ್ಯಾರ್ಥಿ ‘ಚಿನ್ನದಪದಕ’ ಸಾಧನೆ ಮಾಡಿರುವುದು ಇನ್ನೂ ಹೆಚ್ಚಿನ ಖುಷಿ ನೀಡಿತ್ತು. ಓದಿನಲ್ಲಿ ಸ್ಪಲ್ಪ ನಿಧಾನವಿದ್ದರೂ ಟೆಕ್ವಾಂಡೋ ವಿಭಾಗದಲ್ಲಿ ಮುನ್ನುಗ್ಗುವ ಈತನ ಈ ಪರಿ ಆಟದ ಶಿಸ್ತು ಬೆರಗುಗೊಳಿಸಿತ್ತು. ದಿನಕಳೆದಂತೆ ಒಂದಿಷ್ಟು ತರಲೆಗಳು ಇವನಿಂದ ಆಗುತ್ತಿತ್ತು. ಕೆಲವೊಮ್ಮೆ ಈತ ಮಾಡಿದ ತಪ್ಪಿನಿಂದಾಗಿ, ಮತ್ತೆ ಈತನ ಜೊತೆಗಿದ್ದವರು ಮಾಡಿದ ತಪ್ಪಿನಿಂದಾಗಿ ಪೆಟ್ಟು ಕೂಡ ತಿಂದಿದ್ದಾನೆ. ಈತನನ್ನು ದಂಡಿಸುವಾಗ ‘ನಿನ್ನಿಂದ ಈ ರೀತಿಯ ವರ್ತನೆ ನಿರೀಕ್ಷಿಸಿರಲಿಲ್ಲ’ ಎಂದು ಹೇಳಿಯೇ ಪೆಟ್ಟನ್ನು ಕೊಟ್ಟಿದ್ದಾರೆ. ನಿಧಾನವಾಗಿ ತನ್ನ ತಪ್ಪನ್ನು ತಿದ್ದಿಕೊಂಡು ಬದಲಾಗಿದ್ದಾನೆ. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚಿಗೆ ಅಲ್ಲದೇ ಹೋದರೂ ನಿರೀಕ್ಷೆಗಿಂತ ಹೆಚ್ಚಿನ ಅಂಕಗಳನ್ನು ಪಡೆದು ಉತ್ತೀರ್ಣನೂ ಆಗಿದ್ದಾನೆ. ಆ ಸಮಯದಲ್ಲಿ ಎಲ್ಲರೂ ಈತನಿಗೆ ಹೇಳಿದ್ದು ಒಂದೇ, ‘ಯಾವುದೇ ಕಾರಣಕ್ಕೂ ಟೆಕ್ವಾಂಡೋ ವನ್ನು ಮಾತ್ರ ಬಿಡಬೇಡ, ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಲಿ’ ಎಂದು ಶುಭಹಾರೈಸಿ ಕಳಿಸಿಕೊಡಲಾಯಿತು. ನಂತರದ ದಿನಗಳಲ್ಲಿ ‘ಡಿಪ್ಲೊಮೊ’ ಸೇರಿಕೊಂಡು ಅಲ್ಲಿ ಅಧ್ಯಯನ ಮಾಡಿದ್ದಾನೆ. ಜೊತೆಜೊತೆಗೆ ಟೆಕ್ವಾಂಡೋವನ್ನು ಕೂಡ ಬಿಡದೇ ಆಡುತ್ತಿದ್ದಾನೆ ಎಂದು ತಿಳಿಯಿತು. ಇತ್ತೀಚೆಗೆ ತಾನು ಅಭ್ಯಾಸ ಮಾಡುತ್ತ, ಟೆಕ್ವಾಂಡೋ ತರಬೇತಿಗೆ ಬರುತ್ತಿರುವ ಸಣ್ಣ ಮಕ್ಕಳಿಗೆ ಈತನೇ ತರಬೇತುದಾರನಾಗಿ ಅಭ್ಯಾಸ ಮಾಡಿಸುತ್ತಿದ್ದಾನೆ ಎಂಬುದು ತಿಳಿಯಿತು. ಶಾಲೆಯಲ್ಲಿ ಮಕ್ಕಳಿಗೆ ‘ವಸ್ತು ಪ್ರದರ್ಶನ ಸ್ಪರ್ಧೆ’ ಇದ್ದಾಗ ಅದರಲ್ಲಿ ಕ್ರೀಡಾ ವಿಭಾಗಕ್ಕೆ ಸಂಬಂಧಿಸಿದಂತೆ ನವೀಯ ತಾಯಿ ಅಶ್ವಿನಿದೊರೈ ಮೇಡಂ ತೀರ್ಪುಗಾರರಾಗಿ ಬಂದಿದ್ದರು. ಅವರನ್ನು ನವೀ ಶಾಲೆಗೆ ಕರೆದುಕೊಂಡು ಬಂದಿದ್ದ. ಇದನ್ನು ಗಮನಿಸಿದ ಮುಖ್ಯೋಪಾಧ್ಯಾಯರು ಈತನೂ ಕ್ರೀಡೆಯಲ್ಲಿ ತೊಡಗಿಸಿಕೊಂಡವನೇ ಆಗಿರುವುದರಿಂದ ಇಬ್ಬರೂ ತೀರ್ಪುಗಾರರಾಗಿರಿ ಎಂದು ಹೇಳಿದಾಗ ಮರುಮಾತಿಲ್ಲದೆ ಒಪ್ಪಿಕೊಂಡನು. ತದ ನಂತರ ಇಬ್ಬರಿಗೂ ಕ್ರೀಡಾವಿಭಾಗದ ಕೊಠಡಿಗೆ ಕರೆದುಕೊಂಡು ಹೋಗಲಾಯಿತು. ನವ್ಯಕಷ್ಯಪ್ ಮೇಡಂರ ಪರಿಚಯ ಮಾಡಿಕೊಟ್ಟಳು. ನವೀಯ ಪರಿಚಯ ತಿಳಿಸಿ, ಶಾಲೆಯಲ್ಲಿ ಓದಿದ ವಿದ್ಯಾರ್ಥಿ ಜೊತೆಗೆ ಅಮ್ಮ-ಮಗ ಇಬ್ಬರೂ ಒಟ್ಟಿಗೇ ತೀರ್ಪುಗಾರರಾಗಿ ಬಂದಿರುವುದು ಇದೇ ಮೊದಲು’ ಎಂದೆ. ನನಗೂ ಹೆಮ್ಮೆಯ ಸಂಗತಿ. ಎಲ್ಲಾ ಮಕ್ಕಳಿಗೂ ಸಂತೋಷ ಮತ್ತು ಆಶ್ಚರ್ಯವಾಯಿತು. ಮೊದಲು ಎಲ್ಲಾ ಮಾದರಿಗಳನ್ನು ವೀಕ್ಷಿಸಿದರು. ನಂತರ ಒಂದೊಂದೇ ತಂಡದ ವಿದ್ಯಾರ್ಥಿಗಳು ತಾವು ಮಾಡಿದ್ದ ಮಾದರಿಯ ಬಗ್ಗೆ ವಿವರಿಸಿದರು. ಅದಕ್ಕೊಂದಿಷ್ಟು ಪ್ರಶ್ನೆಗಳನ್ನು ಕೇಳುತ್ತ ಇಬ್ಬರೂ ಯಾವ ಮಕ್ಕಳಿಗೂ ಹೆದರಿಸದೇ ಸಮಾಧಾನವಾಗಿ ಮಕ್ಕಳ ಮಾತನ್ನು ಆಲಿಸಿದರು. ಎಲ್ಲಾ ಮುಗಿಸಿ ಇಬ್ಬರಿಗೆ ಒಂದೆಡೆ ಕೂರಿಸಿ ‘ಯಾರೂ ನಿಮ್ಮ ಬಳಿಗೆ ಬರುವುದಿಲ್ಲ, ಅವರಿಗೆ ಬಹುಮಾನ ಕೊಡಿ, ಇವರಿಗೆ ಕೊಡಿ ಎಂದು ಪ್ರಭಾವವನ್ನೂ ಬೀರುವುದಿಲ್ಲ. ಮಕ್ಕಳು ಮಾತ್ರವಲ್ಲ ಶಿಕ್ಷಕರೂ ಇತ್ತ ಸುಳಿಯುವುದಿಲ್ಲ. ನಿಮ್ಮ ತೀರ್ಪನ್ನು ಕೊಡಬಹುದು’ ಎಂದು ಹೇಳಿ ಬಂದೆ. ಒಂದಿಷ್ಟು ಸಮಯದ ನಂತರ ಬಹುಮಾನ ಪಡೆದ ತಂಡದ ಸದಸ್ಯರ ಹೆಸರನ್ನು ಮತ್ತೊಂದು ಹಾಳೆಯಲ್ಲಿ ಬರೆದರು. ಅದಕ್ಕೆ ಇಬ್ಬರೂ ಸಹಿ ಹಾಕಿರಿ ಎಂದು ಮಡಚಿಕೊಟ್ಟ ‘ಫಲಿತಾಂಶ’ವನ್ನು ಹಾಗೆಯೇ ಮುಖ್ಯೋಪಾಧ್ಯಾಯರಿಗೆ ತಲುಪಿಸಲಾಯಿತು. ಎಲ್ಲಾ ತೀರ್ಪುಗಾರರೊಟ್ಟಿಗೆ ಫೋಟೋ ತೆಗೆಸಿಕೊಂಡು ಅವರಿಗೆ ನೆನಪಿನಕಾಣಿಕೆಯನ್ನು ವಿತರಿಸಿ, ನಂತರ ಒಟ್ಟಿಗೆ ಊಟ ಮಾಡಿ ಎಲ್ಲರನ್ನು ಪ್ರೀತಿಯಿಂದ ಬೀಳ್ಕೊಟ್ಟೆವು. ನವೀಯ ಇಡೀ ಕುಟುಂಬವೇ ಟೆಕ್ವಾಂಡೋದಲ್ಲಿ ತೊಡಗಿಸಿಕೊಂಡಿರುವುದು ಸಂತೋಷದ ಸಂಗತಿ. ಇಂದಿಗೂ ಆತ ಅದನ್ನು ಬಿಡದೇ ತನ್ನ ಓದಿನ ಜೊತೆಜೊತೆಗೆ ಇದನ್ನು ಕೊಂಡೊಯ್ಯುತ್ತಿದ್ದಾನೆ. ಮೊದಲಬಾರಿಗೆ ತೀರ್ಪುಗಾರರಾಗಿ ಬಂದ ಅಮ್ಮ-ಮಗ ಎನಿಸಿಕೊಂಡಿದ್ದಾರೆ. ಈಗಲೂ ಕೂಡ ಅವರು ಸಿಕ್ಕಾಗ ‘ಅಮ್ಮ-ಮಗ ತೀರ್ಪುಗಾರರಾಗಿ ಬಂದು ಶಾಲೆಯಲ್ಲಿ ಒಂದು ಹೊಸ ಇತಿಹಾಸವನ್ನೆ ಬರೆದಿದ್ದೀರಿ’ ಎಂದು ಹೇಳುತ್ತಲೇ ಇರುತ್ತೇನೆ. ‘ವರ್ಮಾಸರ್ ಹೀಗೆ ಬನ್ನಿ ಎಂದಾಗ ಇಲ್ಲ ಅಂತ ಹೇಳೋಕೆ ಆಗಲ್ಲ. ಹಾಗಾಗಿ ಬಂದಿದ್ದೇವೆ ಹೊರತು ಇನ್ನೇನು ಇಲ್ಲ. ಜೊತೆಗೆ ನಮ್ಮಿಬ್ಬರಿಗೂ ಒಂದು ಒಳ್ಳೆಯ ಅವಕಾಶ ಇದನ್ನು ನೀಡಿದ ಶಾಲೆಗೆ, ಶಿಕ್ಷಕರಿಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಕಾಗಲ್ಲ’ ಎಂದು ಅಶ್ವಿನಿ ಮೇಡಂ ನುಡಿಯುವಾಗ ಅವರಲ್ಲಿ ಅದೇನೋ ಸಾರ್ಥಕ ಭಾವ ಕಂಡಿದ್ದಂತೂ ಸುಳ್ಳಲ್ಲ. ಈ ರೀತಿಯ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕರೆ ಅದೊಂದು ಮರೆಯಲಾಗದ ನೆನಪಾಗಿ ಉಳಿಯುವುದರಲ್ಲಿ ಅನುಮಾನವಿಲ್ಲ…
Read more