ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ ಐವತ್ತು ವರ್ಷದ ಸಂಭ್ರಮ ಆಚರಣೆ
(SHIVAMOGA): ಸಾಗರ: ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ ಐವತ್ತು ವರ್ಷವಾಗಿರುವ ಸಂಭ್ರಮದಲ್ಲಿ ಸುವರ್ಣ ಕರ್ನಾಟಕ ಕಾರ್ಯಕ್ರಮ ಆಚರಿಸುತ್ತಿದೆ.ನಮ್ಮ ಉಸಿರಿನ ಭಾಷೆಯನ್ನು ಬೆಳೆಸಬೇಕಾದ್ದು ನಮ್ಮೆಲ್ಲರ ಕರ್ತವ್ಯ ಎಂದು ಸಾಗರದ ಉಪವಿಭಾಗಾಧಿಕಾರಿ ಆರ್. ಯತೀಶ್ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಗಣಪತಿ ದೇವಸ್ಥಾನ ಆವರಣದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯಕ್ಕೆ 50 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ತಾಲೂಕು ಕೇಂದ್ರಕ್ಕೆ ಆಗಮಿಸಿದ್ದ ಸುವರ್ಣ ಸಂಭ್ರಮ ರಥವನ್ನು ಸ್ವಾಗತಿಸಿ ಅವರು ಮಾತನಾಡಿದರು.
ಕನ್ನಡದ ಮೊದಲ ಸಾಮ್ರಾಜ್ಯವು ನಮ್ಮ ಉಪವಿಭಾಗದಲ್ಲಿ ಜನ್ಮ ತೆಳೆದಿರುವುದು ಇತಿಹಾಸ ಪುಟದಲ್ಲಿ ಕಾಣುತ್ತದೆ ಎಂದರು . ಸಾಗರ ತಾಲೂಕಿನ ಅಕ್ಕಪಕ್ಕದಲ್ಲಿಯೇ ಕನ್ನಡದ ಹಲವು ಶಾಸನಗಳೂ ದೊರೆತಿವೆ. ಜತೆಗೆ ಈ ನೆಲವೂ ಕನ್ನಡ ನಾಡು, ನುಡಿ, ಭಾಷೆಯ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿತ್ತು ಎನ್ನುವುದನ್ನು ನೆನಪಿಸಿಕೊಳ್ಳಬಹುದು. ಈ ಬಾರಿಯ ಕನ್ನಡ ರಾಜ್ಯೋತ್ಸವ ಅತ್ಯಂತ ವಿಶೇಷವಾಗಿದ್ದು, ಅದರ ಅಂಗವಾಗಿ ಆಗಮಿಸಿರುವ ಸುವರ್ಣ ಕರ್ನಾಟಕ ರಥವನ್ನು ಅತ್ಯಂತ ಸಂಭ್ರಮದಿoದ ಸ್ವಾಗತಿಸಲಾಗುತ್ತಿದೆ. ಕನ್ನಡಾಂಬೆಗೆ ಶ್ರದ್ಧೆಯಿಂದ ಪೂಜೆ ಸಲ್ಲಿಸಿ ಉತ್ತರ ಕನ್ನಡ ಜಿಲ್ಲೆಗೆ ಬೀಳ್ಕೊಡಲಾಗುತ್ತಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಈ. ಪರಶುರಾಮಪ್ಪ, ಉಪ ತಹಶೀಲ್ದಾರ್ ಚಂದ್ರಶೇಖರ್, ನಗರಸಭೆ ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಮದನ್, ಸಮಾಜ ಕಲ್ಯಾಣ ಇಲಾಖೆಯ ಸುರೇಶ್, ಕಸಾಪ ತಾಲೂಕು ಅಧ್ಯಕ್ಷ ವಿ.ಟಿ.ಸ್ವಾಮಿ, ಪ್ರಮುಖರಾದ ಪರಮೇಶ್ವರ್, ಮಧುಮಾಲತಿ, ಸೈಯದ್ ಜಾಕೀರ್, ಲಕ್ಷ್ಮಣ ಸಾಗರ್, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ