ಸಿ ಐ ಟಿ ಯು ಸಂಘಟನೆ ವತಿಯಿಂದ ವಿಶ್ವ ಕಾರ್ಮಿಕರ ದಿನಾಚರಣೆ
(KOLARA): ಬಂಗಾರಪೇಟೆ: ಪ್ರತಿ ವರ್ಷ ಮೇ 1ರಂದು ದೇಶದಾದ್ಯಂತ ಅಂತಾರಾಷ್ಟ್ರೀಯ ಕಾರ್ಮಿಕ ದಿನವನ್ನು ಆಚರಿಸಲಾಗುತ್ತದೆ. ಕಾರ್ಮಿಕರ ಶ್ರಮವನ್ನು ಗೌರವಿಸುವ ಸಲುವಾಗಿ ಭಾರತದಲ್ಲಿ ಈ ದಿನವನ್ನು ಮೀಸಲಿಡಲಾಗಿದೆ ಎಂದು ಸಿಐಟಿಯು ಸಂಘಟನೆಯ ಪಿ ಶ್ರೀನಿವಾಸ್ ಹೇಳಿದರು.
ಪಟ್ಟಣದ ಪುನೀತ್ ರಾಜಕುಮಾರ್ ವೃತ್ತದ ಬಳಿ ಸಿಐಟಿಯು ಪಕ್ಷದ ವತಿಯಿಂದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡುತ್ತಾ,
ದಿನದ 15 ಗಂಟೆಗಳ ಕಾಲ ಇದ್ದ ಕೆಲಸದ ಸಮಯದ ಮಿತಿಯನ್ನು 8 ಗಂಟೆಗಳ ಅವಧಿಗೆ ತರಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ಕಾರ್ಮಿಕರು ಅಮೆರಿಕದ ಚಿಕಾಗೋ ನಗರದಲ್ಲಿ ಮೇ 1, 1886 ರಂದು ಪ್ರತಿಭಟನೆ ನಡೆಸಲು ಮುಂದಾದರು.
ಹೋರಾಟ ತೀವ್ರ ಸ್ವರೂಪ ಪಡೆದಿದ್ದರಿಂದ ಇದನ್ನು ಹತ್ತಿಕ್ಕಲು ಮೇ 4ರಂದು ಪೋಲಿಸರು ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಿದರು. ಈ ದಮನಕಾರಿ ನೀತಿಯನ್ನು ಖಂಡಿಸಿ ಅಲ್ಲಿನ ಜನರು ಪ್ರತೀ ವರ್ಷ ಮೇ 1ರಂದು ಕಾರ್ಮಿಕ ದಿನವನ್ನಾಗಿ
ಆಚರಿಸುವಂತೆ ಒತ್ತಾಯಿಸಿದರು. ಇದರ ಫಲವಾಗಿ 1916 ರ ಇಸವಿಯಲ್ಲಿ ಅಮೆರಿಕ ಸರ್ಕಾರ ಕೆಲಸದ ಕಾಲಮಿತಿಯನ್ನು ಕಡಿತಗೊಳಿಸಿ 8 ಗಂಟೆಗಳ ಕಾಲ ಕೆಲಸ ಎಂದು ಆದೇಶ ನೀಡಿತು. ಜೊತೆಗೆ ಮೇ ಒಂದರಂದು ಕಾರ್ಮಿಕ ದಿನಾಚರಣೆಯನ್ನಾಗಿ ಆಚರಿಸಲು ಮುಂದಾಯಿತು ಎಂದು ತಿಳಿಸಿದರು.
ಕಾರ್ಮಿಕರ ದಿನಾಚರಣೆಯಂದು ರಾಷ್ಟ್ರೀಯ ರಜಾ ದಿನವನ್ನಾಗಿ ಘೋಷಣೆ ಮಾಡಬೇಕೆಂದು ಮತ್ತು ಕಾರ್ಮಿಕರಿಗೆ ಅಂದಿನ ದಿನ ರಜೆ ನೀಡಬೇಕೆಂದು ಸದನದಲ್ಲಿ ಮಸೂದೆ ಮಂಡಿಸಲಾಯಿತು. ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷ ಮೇ 1 ರಂದು ಕಾರ್ಮಿಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಕಾರ್ಮಿಕರ 8 ಗಂಟೆ ಇರುವ ಕೆಲಸದ ಸಮಯವನ್ನು 12 ಗಂಟೆ ಕಾಲ ಕೆಲಸ ಮಾಡಬೇಕೆಂದು ನಿಯಮವನ್ನು ತರುತ್ತಿದ್ದಾರೆ. ಚುನಾವಣೆ ನಂತರ ಇದರ ಬಗ್ಗೆ ಹೋರಾಟವನ್ನು ಮಾಡಲಾಗುವುದೆಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಬಿ.ಎಲ್.ಕೇಶವ ರಾವ್,ಸಿಆರ್ ಮೂರ್ತಿ ಅಪ್ಪಯ್ಯಣ್ಣ, ಪೆರುಮಾಳಪ್ಪ, ರಮೇಶ್, ಮುನಿಸ್ವಾಮಿ, ಮೋಹನ್, ಜಯರಾಮಪ್ಪ, ವೆಂಕಟೇಶ್ ಇದ್ದರು.
ವರದಿ: ವಿಷ್ಣು ಕೋಲಾರ