ಸಾಗರ ತಾಲೂಕು ಆಡಳಿತದಿಂದ ಕೆಂಪೇಗೌಡರ ಜಯಂತಿ ಆಚರಣೆ.
(SHIVAMOGA): 500 ವರ್ಷದ ಹಿಂದೆಯೇ ಬೆಂಗಳೂರು ನಗರ ಕಟ್ಟಿದ್ದ ಕೆಂಪೇಗೌಡರು, ಇಂದಿನ ಅಗತ್ಯತೆಯನ್ನು ಅಂದೇ ಅರಿತಿದ್ದ ದಕ್ಷ ಆಡಳಿತಗಾರರಾಗಿದ್ದರು ಎಂದು ಉಪವಿಭಾಗಾಧಿಕಾರಿ ಆರ್. ಯತೀಶ್ ತಿಳಿಸಿದ್ದರು.
ತಾಲೂಕು ಕಚೇರಿಯಲ್ಲಿ ಗುರುವಾರ ನಡೆದ ಕೆಂಪೇಗೌಡರ 515ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅವರ ಆಡಳಿತದ ದೂರದೃಷ್ಟಿಯ ಛಾಪು ಕೃತಿಯಲ್ಲಿ ಮೂಡಿದ್ದಲ್ಲದೆ, ಜನರ ಅಗತ್ಯತೆಗಳನ್ನು ಅರಿತು ಅಧಿಕಾರ ನಡೆಸಿದ್ದರು. ನೂರಾರು ಕೆರೆ-ಕಟ್ಟೆಗಳ ನಿರ್ಮಾಣ, ಪಟ್ಟಣದಲ್ಲಿಯೂ ಉದ್ಯಾನದ ಅಗತ್ಯತೆ, ನಗರದ ವ್ಯವಸ್ಥಿತ ರಸ್ತೆಗಳು ಅವರನ್ನು ಇಂದಿಗೂ ನಾಡು ಸ್ಮರಿಸುವಂತೆ ಮಾಡಿದೆ. ನಾಡ ಪ್ರಭು ಕೆಂಪೇಗೌಡರು ಅಂದು ಕಟ್ಟಿದ ಬೆಂಗಳೂರನ್ನು ಇಂದು ವಿಶ್ವವೇ ತಿರುಗಿ ನೋಡುತ್ತಿದೆ ಎಂದರು.
ಕೆಂಪೇಗೌಡರ ಕುರಿತು ಕಸಾಪ ತಾಲೂಕು ಅಧ್ಯಕ್ಷ ವಿ.ಟಿ. ಸ್ವಾಮಿ ವಿಶೇಷ ಉಪನ್ಯಾಸ ನೀಡಿದರು. ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಜಿ. ಪರಮೇಶ್ವರಪ್ಪ ಮಾತನಾಡಿದರು. ವೇದಿಕೆಯಲ್ಲಿ ಎಡಿಎಲ್ಆರ್ ಗೋಪಿನಾಥ್ ಹಾಜರಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ