ನ್ಯೂಸ್ಶಿವಮೊಗ್ಗ

ಸಂತಾನಭಾಗ್ಯ ಕರುಣಿಸುವ ಏಕಶಿಲಾ ದ್ವಿಮುಖ ಚಾಮುಂಡೇಶ್ವರಿ

ಸಂತಾನಭಾಗ್ಯ ಕರುಣಿಸುವ ಏಕಶಿಲಾ ದ್ವಿಮುಖ ಚಾಮುಂಡೇಶ್ವರಿ

(SHIVAMOGA): ಸಾಗರ ತಾಲ್ಲೂಕಿನ ಕಾರ್ಗಲ್ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿರುವ ಸಂತಾನಭಾಗ್ಯ ಕರುಣಿಸುವ ಏಕಶಿಲಾ ದ್ವಿಮುಖ ಚಾಮುಂಡೇಶ್ವರಿ ಅಮ್ಮನವರಿಗೆ ನವರಾತ್ರಿ ಸಂದರ್ಭದಲ್ಲಿ ವಿಶೇಷ ಪೂಜಾಕೈಂಕರ್ಯಗಳು ನಡೆಯುತ್ತವೆ. ನವರಾತ್ರಿಯ ನಿತ್ಯವೂ ಮುಂಜಾನೆಯಿoದಲೇ ವಿಶೇಷ ಪೂಜೆ, ಹೋಮಾದಿಗಳು, ಭಕ್ತರಿಗೆ ಮಧ್ಯಾಹ್ನ ಪ್ರಸಾದ ಭೋಜನವಿರುತ್ತದೆ. ವಿಜೃಂಭಣೆಯಿoದ ಒಂಬತ್ತು ದಿನಗಳ ಕಾಲ ಇಡೀ ದೇವಸ್ಥಾನವು ವಿದ್ಯುದ್ದೀಪಗಳಿಂದ ಅಲಂಕೃತವಾಗಿ ಜಗಮಗಿಸುತ್ತದೆ. ಶರನ್ನವರಾತ್ರಿಯ ಕಾಲದಲ್ಲಿ ಸಾವಿರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು, ಪುನೀತರಾಗುತ್ತಾರೆ.
ಸಾಗರ ತಾಲ್ಲೂಕು ಸೇರಿದಂತೆ ಸುತ್ತಲಿನ ಸಿದ್ದಾಪುರ, ಸೊರಬ, ಶಿರಸಿ, ಭಟ್ಕಳ, ಹೊಸನಗರ, ಹೊನ್ನಾವರ, ಕುಮಟ, ಅಂಕೋಲ ಹೀಗೆ ಹತ್ತಾರು ತಾಲ್ಲೂಕಿನಿಂದ ಲಕ್ಷಾಂತರ ಭಕ್ತರು ಚಾಮುಂಡೇಶ್ವರಿ ದೇವಿಗೆ ನಡೆದುಕೊಳ್ಳುತ್ತಾರೆ.

ಮೈಸೂರು ಅರಸು ಮನೆತನಕ್ಕಿದೆ ಅವಿನಾಭಾವ ಸಂಬಂಧ
ಲಿoಗನಮಕ್ಕಿಯಲ್ಲಿ ಅಣೆಕಟ್ಟು ನಿರ್ಮಿಸುವ ಮೊದಲು ಒಂದು ದಿನ ರಾತ್ರಿ ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಕನಸಿನಲ್ಲಿ ಚಾಮುಂಡೇಶ್ವರಿ ಅಮ್ಮನವರು ಪ್ರತ್ಯಕ್ಷವಾಗಿ, ಕಾರ್ಗಲ್  ಜೋಗ ಪಟ್ಟಣದಲ್ಲಿ ಏಕ ಶಿಲೆಯ ದ್ವಿಮುಖ ಚಾಮುಂಡೇಶ್ವರಿ ಮೂರ್ತಿಯನ್ನು ಪ್ರತಿಷ್ಟಾಪಿಸಿ, ಬಳಿಕ ಅಣೇಕಟ್ಟು ನಿರ್ಮಿಸು. ಅದರಿಂದ ಲೋಕಕಲ್ಯಾಣವಾಗುತ್ತದೆ ಎಂದು ಹೇಳಿದ್ದರು ಎನ್ನುವುದು ಪ್ರತೀತಿ. ಅದರಂತೆಯೇ ಮಹಾರಾಜರು ಮೊದಲು ಇಲ್ಲಿ ಅಮ್ಮನವರ ಮೂರ್ತಿಯನ್ನು ಏಕ ಶಿಲೆಯಲ್ಲಿ ಕೆತ್ತಿಸಿ, ಪ್ರತಿಷ್ಟಾಪಿಸಿದರು. ಬಳಿಕ ಯಶಸ್ವಿಯಾಗಿ ಲಿಂಗನಮಕ್ಕಿ ಅಣೇಕಟ್ಟು ಕಟ್ಟಿ, ರಾಜ್ಯದುದ್ದಗಲಕ್ಕೂ ವಿದ್ಯುತ್ ಹರಿಸುವ ಯೋಜನೆ ಸಿದ್ಧಪಡಿಸಲಾಯಿತು ಎನ್ನುವುದು ಇತಿಹಾಸ. ಅಂದಿನಿoದಲೂ ಮೈಸೂರು ಅರಸು ಕುಟುಂಬದವರು ತಾಲ್ಲೂಕಿನ ಜೋಗದಲ್ಲಿರುವ ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನಕ್ಕೆ ನಡೆದುಕೊಳ್ಳುತ್ತಾರೆ.


ಇಲ್ಲಿನ ವಿಶೇಷತೆ:
ಏಕಶಿಲೆಯಲ್ಲಿ ಕೆತ್ತಿರುವ ವಿಶ್ವದ ಮೊದಲ ಹಾಗೂ ಏಕೈಕ ದ್ವಿಮುಖ ಚಾಮುಂಡೇಶ್ವರಿ ಮೂರ್ತಿ ಇದಾಗಿದ್ದು, ಮಕ್ಕಳಿಲ್ಲದವರು ಇಲ್ಲಿಗೆ ಬಂದು ಉಡಿ ತುಂಬಿಸಿದರೆ ತಾಯಿ ಸಂಪ್ರೀತಳಾಗಿ ಸಂತಾನ ಭಾಗ್ಯ ಕರುಣಿಸುತ್ತಾಳೆ ಎನ್ನುವ ಮಾತು ಜನಜನಿತವಾಗಿದೆ. ವರ್ಷವಿಡೀ ಬೆಂಗಳೂರು, ಮೈಸೂರು, ಮೊದಲಾದ ಹತ್ತಾರು ಜಿಲ್ಲೆಗಳು ಸೇರಿದಂತೆ ಪಕ್ಕದ ಗೋವಾ, ಮಹಾರಾಷ್ಟ್ರ ಕೇರಳಗಳಿಂದಲೂ ಲಕ್ಷಾಂತರ ಜನ ಇಲ್ಲಿಗೆ ಆಗಮಿಸಿ ಮಕ್ಕಳನ್ನು ಬೇಡಿಕೊಳ್ಳುತ್ತಾರೆ. ದೇವಿಯು ಅವರೆಲ್ಲರ ಇಷ್ಟಾರ್ಥ ಸಿದ್ಧಿಸಿರುವ ಉದಾಹರಣೆಗಳಿವೆ.
ಮೈಸೂರು ರಾಜರಿಗೆ ಮಕ್ಕಳಾಗದಿರುವ ಶಾಪದ ಹೊರತಾಗಿಯೂ, ಹಲವು ವರ್ಷದ ಹಿಂದೆ ಮೈಸೂರಿನ ಮಹಾರಾಜರಾದ ಯದುವೀರ ಕೃಷ್ಣದತ್ತ ಚಾಮರಾಜ ವಡೆಯರ್ ಅವರು ಕುಟುಂಬ ಸಮೇತರಾಗಿ ಇಲ್ಲಿಗೆ ಆಗಮಿಸಿ, ದೇವಿಗೆ ಪೂಜೆ ಸಲ್ಲಿಸಿ, ಉಡಿ ತುಂಬಿಸಿ ಹೋಗಿದ್ದರ ಪ್ರತಿಫಲವಾಗಿ ಗಂಡು ಮಗು ಜನಿಸಿತು.
ಬನ್ನಿ ನಾವು ಒಮ್ಮೆ ದೇವಿಯ ದರುಶನ ಮಾಡೋಣ.

ವರದಿ : ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code