ಮಕ್ಕಳ ಮನೋಧೋರಣೆ ಅರಿತು ಶಿಕ್ಷಣ ನೀಡಬೇಕು.|ನಿರ್ದೇಶಕರಾದ ಪ್ರಸನ್ನ ಕುಮಾರ್
(ಶಿವಮೊಗ್ಗ):ಸಾಗರದಲ್ಲಿ ಶಿಕ್ಷಣ ಇಲಾಖೆಯ ಅನುಷ್ಠಾನಾಧಿಕಾರಿಗಳು ಹಾಗೂ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಮತ್ತು ವಿವಿಧ ವಿಷಯಗಳ ಭಾಷಾ ವಿಷಯ ಶಿಕ್ಷಕರೊಂದಿಗೆ ಶೈಕ್ಷಣಿಕ ಸಂವಾದ.
ಸಾಗರ-ಸೆ:23/ ಮಕ್ಕಳ ಮನೋಧೋರಣೆ ಅರಿತು ಶಿಕ್ಷಣ ನೀಡುವ ಕೆಲಸ ಆಗಬೇಕಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಛೇರಿಯ ನಿರ್ದೇಶಕರಾದ ಪ್ರಸನ್ನ ಕುಮಾರ್ ಅವರು ಹೇಳಿದರು.
ಅವರು ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಇವರು ಸೇವಾ ಸಾಗರ ಶಾಲೆಯ ಅಜಿತ್ ಸಭಾಂಗಣದಲ್ಲಿ ತಾಲ್ಲೂಕಿನ ಶಿಕ್ಷಣ ಇಲಾಖೆಯ ಅನುಷ್ಠಾನಾಧಿಕಾರಿಗಳು ಹಾಗೂ ತಾಲೂಕಿನ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಮತ್ತು ವಿವಿಧ ಭಾಷಾ ವಿಷಯಗಳ ಶಿಕ್ಷಕರಿಗೆ ಆಯೋಜಿಸಿದ್ದ ಶೈಕ್ಷಣಿಕ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ ಶಿಕ್ಷಕರ ಮನೋಧೋರಣೆ ಬದಲಾಗಬೇಕು. ಶೈಕ್ಷಣಿಕವಾಗಿ ಸುಧಾರಣೆ ಆಗುವುದಾದರೆ ಅದು ತರಗತಿ ಕೋಣೆಯಲ್ಲಿ ಮಾತ್ರ ಸಾಧ್ಯ, ಮಕ್ಕಳ ಮನಸ್ಥಿತಿಯನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಂಡು ಕಲಿಸುವ ಕೆಲಸ ಆಗಬೇಕಾಗಿದೆ.ಶಿಕ್ಷಕರು ನಿರಂತರ ಅಧ್ಯಯನಶೀಲ ರಾಗಬೇಕು, ನೈಜವಾದ ಕಲಿಕೆಗೆ ಹೆಚ್ಚಿನ ಮಹತ್ವ ನೀಡಬೇಕು, ಮಕ್ಕಳಲ್ಲಿ ಸ್ಥೈರ್ಯವನ್ನು ತುಂಬಬೇಕು, ಸ್ಪೂರ್ತಿದಾಯಕ ವಿಚಾರಗಳನ್ನು ಮನಮುಟ್ಟುವಂತೆ ತಿಳಿಸಬೇಕು, ಮನಸ್ಸಿಗೆ ಉಲ್ಲಾಸದ ರೀತಿಯಲ್ಲಿ ಪಠ್ಯವನ್ನು ನಿರೂಪಿಸಬೇಕು, ಕಲಿಕೆಯ ಆಸಕ್ತಿಯನ್ನು ಹೆಚ್ಚಿಸಬೇಕು, ಕುತೂಹಲ ಮೂಡಿಸಬೇಕು, ಸಾಧಕರ ಪರಿಚಯ ಮಾಡಿಸಬೇಕು, ಗ್ರಂಥಾಲಯ ಬಳಕೆ ಆಗಬೇಕಾಗಿದೆ, ಶಾಲೆಯನ್ನು ಆಕರ್ಷಕ ಕೇಂದ್ರವಾಗಿಸುವಲ್ಲಿ ಸಮುದಾಯದ ಸಹಭಾಗಿತ್ವ ಪಡೆದುಕೊಳ್ಳಬೇಕಾಗಿದೆ ಶೈಕ್ಷಣಿಕವಾಗಿ ಹೆಚ್ಚಿನ ರೀತಿಯಲ್ಲಿ ಮಾರ್ಗದರ್ಶನ ನೀಡುವ ಕೆಲಸ ಆಗಬೇಕಾಗಿದೆ. ಸಾಗರ ವಿಭಿನ್ನವಾದ ಪ್ರದೇಶವಾಗಿದ್ದು ಸಕ್ರಿಯವಾಗಿ ತೊಡಗಿಸುವಂತಹ ಕಾರ್ಯ ಆಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಿಇಓ ಇ.ಪರಶುರಾಮಪ್ಪ ಮಾತನಾಡಿ ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಪಠ್ಯವನ್ನು ನಿರೂಪಿಸಬೇಕು, ಶಿಕ್ಷಕರು ತನ್ನ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಬೇಕು. ವೇದಿಕೆಯಲ್ಲಿ ಡಯೇಟ್ ನ ಉಪನ್ಯಾಸಕರಾದ ಸದಾನಂದಗೌಡ, ಸಮನ್ವಯಾಧಿಕಾರಿಗಳಾದ ಡಾ.ಅನ್ನಪೂರ್ಣ, ಟಿಪಿಇಓ ಗುರುರಾಜ್, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಮಹಾಬಲೇಶ್, ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷರಾದ ಪ್ರೇಮಕುಮಾರಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಲಕ್ಷ್ಮಣ್ ನಾಯ್ಕ್, ಸೇವಾಸಾಗರ ಸಂಸ್ಥೆಯ ಅಧ್ಯಕ್ಷರಾದ ಯು.ಹೆಚ್.ರಾಮಪ್ಪ ಮೊದಲಾದವರು ಉಪಸ್ಥಿತರಿದ್ದರು
ಶಿಕ್ಷಣ ಸಂಯೋಜಕರಾದ ವಿ.ಟಿ.ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.
ವರದಿ:- ರಾಘವೇಂದ್ರ ತಾಳಗುಪ್ಪ