News & Updatesಮನರಂಜನೆ

ನಾಳೆ ಅಭ್ಯಾಸ 6ಕ್ಕೆ ಅಂದೆ. ಬೆಳಗ್ಗೆ ಅಥವಾ ಸಂಜೆ ಅಂತ ಇನ್ನೂ ಹೇಳಿಲ್ಲ ಅಲ್ವಾ?

ನಾಳೆ ಅಭ್ಯಾಸ 6ಕ್ಕೆ ಅಂದೆ. ಬೆಳಗ್ಗೆ ಅಥವಾ ಸಂಜೆ ಅಂತ ಇನ್ನೂ ಹೇಳಿಲ್ಲ ಅಲ್ವಾ?


ಶುಕ್ರವಾರ ಸಂಜೆ ಮುಖ್ಯೋಪಾಧ್ಯಯರಿಂದ ಒಂದು ಕಾಲ್ ಬಂತು. ಬುಧವಾರ ‘ಮಕ್ಕಳ ದಸರಾ’ ದಲ್ಲಿ ಶಾಲಾ ಮಕ್ಕಳಿಂದ ನೃತ್ಯ ಕಾರ್ಯಕ್ರಮ ನೀಡಬೇಕಿದೆ. ಶನಿವಾರ ಶಾಲೆ ರಜೆ ಇದೆ. ಹಾಗಾಗಿ ಒಂದಿಷ್ಟು ಮಕ್ಕಳು ನೃತ್ಯದಲ್ಲಿ ಆಸಕ್ತಿ ಇದ್ದ ಮಕ್ಕಳು ಸಿಕ್ಕಲ್ಲಿ ಸೋಮವಾರ, ಮಂಗಳವಾರ ಶಾಲೆಯಲ್ಲಿ ಅಭ್ಯಾಸ ಇರತ್ತೆ. ತಮಗೆ ನೃತ್ಯಕ್ಕೆ ಅನುಕೂಲವಾದ ಡ್ರಸ್ ಧರಿಸಿಬರಬಹುದು, ಬಂದು ಹೋಗುವ ಮಕ್ಕಳಿಗೆ ‘ಬಸ್’ ವ್ಯವಸ್ಥೆ ಕೂಡ ಮಾಡಲಾಗುವುದು, ಎಂದು ತಿಳಿಸಿದರು.

ಆ ಕ್ಷಣದಿಂದ ಒಂದು ಕಡೆಯಿಂದ ಫೋನ್ ಮಾಡ್ತಾ ಹೋದರೆ ಅದಾಗಲೇ ಕೆಲವು ಮಕ್ಕಳು ‘ದಸರ ರಜೆ’ ಅಂತ ಹೇಳಿ ಊರುಗಳಿಗೆ ಹೋಗಿದ್ದರು. ಕೆಲವರು ಫ್ಯಾಮಿಲಿ ಜೊತೆಗೆ ಪ್ರವಾಸ ಅಂತ. ಹೀಗೆ ಉತ್ತರಗಳು ಬರ್ತಾ ಇದ್ದವು. ಇನ್ನೂ ಕೆಲವರು ಊರಲ್ಲೇ ಇದ್ದರು ಬರಲ್ಲ ಅಂತಾನೂ ಹೇಳಿದರು.
ಪ್ರಾಥಮಿಕ ಶಾಲೆಯ ಸುಮಾರು ೮ ವಿದ್ಯಾರ್ಥಿಗಳು ನೃತ್ಯಶಿಕ್ಷಕ ಕಿರಣ್‌ಸರ್ ಹತ್ತಿರ ತಾವು ಬರುವುದಾಗಿ ತಿಳಿಸಿದ್ದರು.



ಪ್ರೌಢಶಾಲೆಯ ಮಕ್ಕಳಿಗೆ ಕೇಳುವ ಜವಾಬ್ದಾರಿ ನನಗೆ ಸಿಕ್ಕಿತು. ೮ನೇ ತರಗತಿಯ ಮಾನ್ಯ ತಾನು ಬರಲು ಒಪ್ಪಿದಳು. ಹಾಗೇ ತನ್ನ ತರಗತಿಯ ಇತರ ಮಕ್ಕಳಿಗೆ ತಿಳಿಸುತ್ತೇನೆ ಎಂಬ ಜವಾಬ್ದಾರಿ ತೆಗೆದುಕೊಂಡಳು. ಅನ್ವಿಕಶೆಟ್ಟಿ ಬರಲು ಒಪ್ಪಿದಳು. ಜೊತೆಗೆ ಅವಳ ತಂಗಿಯನ್ನು ಕರೆದುಕೊಂಡು ಬರಲು ತಿಳಿಸಿದೆ. ೯ನೇ ತರಗತಿಯಲ್ಲಿ ನಮನಪೂಜಾರ್ ಗೆ ಕೇಳಿದಾಗ ನಮ್ಮ ತರಗತಿಯ ಎಲ್ಲಾರಿಗೂ ಫೋನ್ ಮಾಡ್ತಿನಿ. ನೋಡೋಣ ಎಷ್ಟು ಜನ ಬರ್ತಾರೆ ಎಂದಳು. ನಿತ್ಯಶ್ರಿ ತಾನು ಬರಲು ಒಪ್ಪಿದಳು. ಜೊತೆಗೆ ತಂಗಿಯನ್ನು ಕರೆತರುವೆ ಎಂದಳು. ಪೂರ್ವಿಗೆ ಕೇಳಿದಾಗ ತನ್ನ ತರಗತಿಯ ಕೆಲವರಿಗೆ ಕೇಳಿ ನೋಡುತ್ತೇನೆ ಎಂದವಳೇ ತಮ್ಮ ಬಾಲ್‌ಬ್ಯಾಡ್ಮಿಂಟನ್ ತಂಡದ ಎಲ್ಲಾ ಸದಸ್ಯರನ್ನು ಒಪ್ಪಿಸಿದಳು. ಹರ್ಶಿತ ಐನಾಪೂರ್ ತನ್ನ ತಂಗಿಯೊAದಿಗೆ ಬರುವುದಾಗಿ ತಿಳಿಸಿದಳು.

ಭಾನುವಾರ ಸಂಜೆಗೆ  ನೃತ್ಯಕ್ಕೆ ಬರಬಹುದಾದ ವಿದ್ಯಾರ್ಥಿಗಳ ಸಂಖ್ಯೆ ೨೫ಕ್ಕೂ ಹೆಚ್ಚಾಗಿತ್ತು. ಮಾನ್ಯ ಹುಷಾರಿಲ್ಲದ ಕಾರಣ ಬರಲಾಗುವುದಿಲ್ಲ ಎಂದು ತಿಳಿಸಿದಳು. ಸೋಮವಾರ ಬೆಳಗ್ಗೆ ೧೦.೦೦ಕ್ಕೆ ಶಾಲೆಗೆ ಬಂದಾಗ ಒಂದಿಷ್ಟು ಮಕ್ಕಳು ಬಂದು ಕಾಯುತ್ತಿದ್ದರು. ಪೂರ್ವಿ ಮತ್ತು ತಂಡದವರು ಶಾಲಾ ಸಮವಸ್ತ್ರ ದಲ್ಲೇ ಬಂದಿದ್ದರು. ‘ಡ್ಯಾನ್ಸ್ ಗೆ ಅನುಕೂಲ ಆಗುವ ಡ್ರಸ್ ಹಾಕಿಕೊಂಡು ಬರೋದಲ್ವಾ?’ ಎಂದರೆ ‘ನಮಗೆ ಇದೇ ಅನುಕೂಲವಾಗಿದೆ’ ಎಂದರು.



ಅಷ್ಟರಲ್ಲಿ ಕಿರಣ್‌ಸರ್ ಬಂದರು. ಎಲ್ಲರೂ ಶಾಲೆಯಲ್ಲಿನ ಲತಾ ಸಭಾಂಗಣದಲ್ಲಿ ಅಭ್ಯಾಸಕ್ಕೆ ಮುಂದಾದರು. ರಘುದೀಕ್ಷಿತ್ ಹಾಡಿರುವ ‘ಲೋಕದ ಕಾಳಜಿ ಮಾಡುತ್ತೀನಂತಿ…’ ಎನ್ನುವ ಶಿಶುನಾಳ ಶರೀಫರ ಗೀತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಒಂದೇ ದಿನದಲ್ಲಿ ಸಂಪೂರ್ಣ ನೃತ್ಯದ ತಯಾರಿ ಮುಗಿಸಿದರು. ಮಧ್ಯೆ ಒಮ್ಮೆ ನೋಡಲು ಹೋದಾಗ ಸುಸ್ತಾಗಿ ಮಕ್ಕಳು ಕೂತಿದ್ದರು. ಇವತ್ತಿಗೆ ಅಭ್ಯಾಸ ಇಷ್ಟು ಸಾಕು ಎಂದು ನಿಲ್ಲಿಸಿದರು. ಅಷ್ಟರಲ್ಲಿ ಅವರಿಗಾಗಿ ಮುಖೋಪಾಧ್ಯಾಯರು ಕಿತ್ತಲೆ ಹಣ್ಣನ್ನು ತರಿಸಿದ್ದರು. ಎಲ್ಲರಿಗೂ ಹಣ್ಣನ್ನು ವಿತರಿಸಲಾಯಿತು. ಕೆಲವರಿಗೆ ಪೋಷಕರು ಬಂದು ಕರೆದುಕೊಂಡು ಹೋದರು. ಬಸ್‌ ಡ್ರೈವರ್ ಇನ್ನೂ ಬಂದಿರದ ಕಾರಣ ನಿಖಿತ ‘ಸರ್ ಥ್ರೋಬಾಲ್ ಆಡ್ತಾ ಇರ್ತಿವಿ’ ಎಂದಳು. ಸರಿ ಆಡಿಕೊಳ್ಳಿ ಎಂದೆ. ಕೆಲಸವಿಲ್ಲದೇ ನಿಂತಿದ್ದ ನನ್ನನ್ನೂ ಆಟಕ್ಕೆ ಕರೆದರು ಒಂದಿಷ್ಟು ಸಮಯ ಎಲ್ಲರೂ ಆಡಿದೆವು. ಅಷ್ಟರಲ್ಲಿ ಬಸ್‌ ಡ್ರೈವರ್ ಬಂದರು ಎಲ್ಲರೂ ಹೊರಟರು.



ಮರುದಿನ ಬರ್ತಾ ಮಕ್ಕಳಿಗೆ ಏನಾದರೂ ಈಗಲೇ ತೆಗೆದುಕೊಂಡು ಬರಲು ಮುಖ್ಯೋಪಾಧ್ಯಾಯರು ಸೂಚಿಸಿದರು. ಎಲ್ಲಾರಿಗೂ ‘ಗುಡ್ ಡೇ’ ಬಿಸ್ಕತ್ತು ತೆಗೆದುಕೊಂಡು ಬಂದೆ. ಅಷ್ಟರಲ್ಲಿ ನೃತ್ಯದ ಅಭ್ಯಾಸ ಹೆಚ್ಚಾಗಿ ಮಾಡಿಸಿದ್ದ ಕಾರಣ ಮಕ್ಕಳು ಸುಸ್ತಾಗಿದ್ದರು. ಬಿಡುವು ನೀಡಿದ್ದರಿಂದ ಎಲ್ಲಾರಿಗೂ ಬಿಸ್ಕೇಟ್ ನೀಡಿ ಎಂದು ನಮ್ರತಾಳಿಗೆ ನೀಡಿದೆ ಅವಳು ಆದ್ಯ ‘ನಾನುನಾನು ಎಲ್ಲಾರಿಗೂ ಕೊಡುತ್ತೇನೆ’ ಎಂದು ಕಿತ್ತಾಡ ತೊಡಗಿದರು. ಅಷ್ಟರಲ್ಲಿ ಮಕ್ಕಳಿಗೆ ನೃತ್ಯಕ್ಕೆ ಬೇಕಾಗಿದ್ದ ಬಟ್ಟೆಯೂ ಸಿದ್ಧವಾಗಿದ್ದ ಕಾರಣ ಕಿರಣ್‌ಸರ್ ಅದನ್ನು ತರಲು ಹೋದರು ಅಭ್ಯಾಸ ಮಾಡಿಸುವ ಜವಾಬ್ದಾರಿ ನನಗೆ ನೀಡಿದರು. ೫ನಿಮಿಷ ವಿಶ್ರಾಂತಿ ಪಡೆಯಲಿ ಎಂದು ಬಿಟ್ಟರೆ ಗಲಾಟೆಯೇ ಶುರು ಮಾಡಿದ್ದರು. ಅಷ್ಟರಲ್ಲಿ ಮುಖ್ಯೋಪಾಧ್ಯಾಯರು ಕಾಲ್ ಮಾಡಿ, ‘ಮಕ್ಕಳು ತುಂಬಾ ಗಲಾಟೆ ಮಾಡ್ತಾ ಇದಾರೆ. ಧ್ವನಿ ಇಲ್ಲೀ ತನಕ ಕೇಳ್ತಾ ಇದೆ’ ಎಂದರು. ಎಲ್ಲರಿಗೂ ಸುಮ್ಮನಾಗಲು ತಿಳಿಸಿ. ಹಾಡನ್ನು ಹಾಕಿ ನೃತ್ಯವನ್ನು ಮಾಡಿಸಿದೆ. ಮತ್ತೊಮ್ಮೆ ವಿಶ್ರಾಂತಿ, ಮತ್ತೊಮ್ಮೆ ಅಭ್ಯಾಸ, ಹೀಗೆ ಅಭ್ಯಾಸ ಸಾಗಿತ್ತು. ಮತ್ತೊಮ್ಮೆ ವಿಶ್ರಾಂತಿ ನೀಡಿದಾಗ ಮಕ್ಕಳು ಅಭ್ಯಾಸದಲ್ಲಿ ಬಿಡುವಿನ ವೇಳೆಗೆ ತಂದಿದ್ದ ಹಣ್ಣನ್ನು ನೀಡಿದರು. ಎಲ್ಲರಿಗೂ ನೃತ್ಯಕ್ಕೆ ತಂದಿದ್ದ ವಸ್ತ್ರವನ್ನು ನೀಡಲಾಯಿತು. ಪುಟಾಣಿ ಮಕ್ಕಳಾದ ಸನಾಗೌಡ, ಸಾನ್ವಿಕ ಇಬ್ಬರೂ ‘ಸರ್ ಈ ರಿಂಗ್‌ನ ನಿಮ್ಮ ತರ ಸೊಂಟಕ್ಕೆ ಹಾಕಿಕೊಂಡು ತಿರುಗಿಸಿ’ ಎಂದರು. ‘ಈಗ ನಾನು ಹಾಗೇ ಮಾಡಿದರೆ ನೀವೆಲ್ಲ ನಗ್ತಿರ ಅಂತ ಗೊತ್ತು. ಆಮೇಲೆ ಎಲ್ಲಾರಿಗೂ ಹೇಳ್ತಿರ, ಬೇಡ ಅಂದರೆ ‘ನಾವು ಯಾರಿಗೂ ಹೇಳುವುದಿಲ್ಲ ಪ್ಲೀಸ ಸರ್’ ಎಂದರು. ಅಷ್ಟರಲ್ಲಿ ಮತ್ತೊಮ್ಮೆ ಮುಖ್ಯೋಪಾಧ್ಯಾಯರಿಂದ ‘ಗಲಾಟೆ ಕಡಿಮೆ ಮಾಡಿ’ ಅಂತ ಕಾಲ್ ಬಂತು. ನಾಳೇ ಅದನ್ನು ಮಾಡಿ ತೋರಿಸುತ್ತೇನೆ ಬನ್ನಿ ಎಂದೆ. ಒಮ್ಮೆ ನೃತ್ಯ ಮಾಡಿದೆವು. ಅಲ್ಲಿಗೇ ಅಭ್ಯಾಸವು ಮುಗಿದಿತ್ತು.
ಎಲ್ಲರೂ ಕೆಳಗೆ ಬಂದು ಒಂದು ತರಗತಿಯಲ್ಲಿ ಕುಳಿತೆವು.

ಮುಖ್ಯೋಪಾಧ್ಯಾಯರ ಬಳಿ ಮಾತನಾಡಿ ಮರುದಿನದ ಅಭ್ಯಾಸದ ಬಗ್ಗೆ ಕೇಳಿಕೊಂಡು ಬಂದೆವು. ಮಕ್ಕಳು ಅದಾಗಲೇ ಕಾಯುತ್ತಿದ್ದರು. ‘ಸರ್ ನಾಳೆ ಅಭ್ಯಾಸಕ್ಕೆ ಎಷ್ಟೊತ್ತಿಗೆ ಬರಬೇಕು?’ ಎಂದು ಒಕ್ಕೋರಲಿನಿಂದ ಕೇಳಿದರು. ‘ನಾಳೆ ೬.೦೦ ಕ್ಕೆ’ ಅಂದದ್ದೇ ತಡ ಎಲ್ಲರೂ ‘ಸಾರ್… ಅಷ್ಟು ಬೇಗನಾ?’ ಅಂದರು ನಮ್ಮ ಸೂರ್ಯವಂಶಿ ಶ್ರೇಯಾಳನ್ನೇ ಎಲ್ಲರೂ ನೋಡತೊಡಗಿದರು. ಏಕೆಂದರೆ ಅವಳು ಬೆಳಗ್ಗೆ ಏಳುವುದೇ ೮.೩೦ ರ ನಂತರ. ಅದಕ್ಕೆ ನಾನು ‘ನಾಳೆ ಅಭ್ಯಾಸ ೬ಕ್ಕೆ ಅಂದೆ. ಬೆಳಗ್ಗೆ ಅಥವಾ ಸಂಜೆ ಅಂತ ಇನ್ನೂ ಹೇಳಿಲ್ಲ ಅಲ್ವಾ?’ ಎಂದೆ ಎಲ್ಲರೂ ಹೌದಲ್ವಾ? ಎಂದು ಕೊಂಡರು. ನಾಳೆ ಶಾಲೆಯಲ್ಲಿ ಅಭ್ಯಾಸಕ್ಕೆ ಬೇಡ ಸಂಜೆಗೆ ೬.೩೦ ರ ಹಾಗೇ ಕಾರ್ಯಕ್ರಮ ನಡೆಯುವ ‘ಫ್ರೀಡಂಪಾರ್ಕ್’ಗೆ ತಯಾರಾಗಿ ಬನ್ನಿ ಎಂದೆ. ಸ್ವಲ್ಪಬೇಗ ಬಂದರೆ ಆ ದೊಡ್ಡ ವೇದಿಕೆಯಲ್ಲಿ ಅಭ್ಯಾಸ ಮಾಡಿಸುತ್ತೇನೆಂದು ಕಿರಣ್ ಸರ್ ಹೇಳಿದರು. ಎಲ್ಲಾ ಮಕ್ಕಳು ಖುಷಿಯಾಗಿದ್ದರು. ಅಷ್ಟರಲ್ಲಿ ಒಂದಿಷ್ಟು ಪೋಷಕರು ಮಕ್ಕಳನ್ನು ಕರೆದುಕೊಂಡು ಹೋದರು. ಇನ್ನೂ ಕೆಲವರು ಸುಮ್ಮನೆ ಕುಳಿತರು. ಆಟ ಆಡಲು ಇವತ್ತು ‘ಬಾಲ್’ ಇರುವ ಕೊಠಡಿ ಬೀಗ ಹಾಕಿದ್ದ ಕಾರಣ ಸುಮ್ಮನೇ ಕುಳಿತಿದ್ದೇವೆ ಎಂದಳು ವಿದ್ಯಾ. ಹಾಗಾಗಿ ಸುಮ್ಮನೆ ಕುಳಿತು ಮಾತನಾಡತೊಡಗಿದೆವು. ಸ್ವಲ್ಪ ಸಮಯದ ನಂತರ ಎಲ್ಲರೂ ಹೊರಟರು.



ಮರುದಿನ ಸಂಜೆ ಎಲ್ಲಾ ಮಕ್ಕಳು ನಿಗಧಿತ ಸಮಯಕ್ಕೆ ಸರಿಯಾಗಿ ಬಂದಿದ್ದರು. ವೇದಿಕೆಯ ಹಿಂಭಾಗದಲ್ಲಿ ಕುಳಿತಿದ್ದರು. ‘ಶೆಖೆ’ ಎನ್ನುತ್ತಿದ್ದ ಸಮಯಕ್ಕೆ ಅಲ್ಲಿಯೇ ಸಮೀಪದಲ್ಲಿದ್ದ ದೊಡ್ಡ ಫ್ಯಾನ್ ಹಾಕಿದ್ದೇ ತಡ ಎಲ್ಲರೂ ಖುಷಿಯಿಂದ ಅದರ ಮುಂದೆ ನಿಂತರು. ಅಷ್ಟರಲ್ಲಿ ಮತ್ತೇ ಮಕ್ಕಳು ಸೊಂಟಕ್ಕೆ ದೊಡ್ಡ ರಿಂಗ್ ಹಾಕಿಕೊಂಡು ತಿರುಗಿಸುತ್ತಲೇ ಇದ್ದರು. ಕೆಲವರಂತ ಎರಡಕ್ಕಿಂತಲೂ ಹೆಚ್ಚೆಚ್ಚು ರಿಂಗ್ ಹಾಕಿಕೊಂಡು ‘ಚಾಲೆಂಜ್’ ಮಾಡಿಕೊಂಡು ಆಡುತ್ತಿದ್ದರು. ಅಷ್ಟರಲ್ಲಿ ಕೆಲವು ಮಕ್ಕಳು ‘ಸರ್ ನೀವು ರಿಂಗ್ ಹಾಕಿಕೊಂಡು ತಿರುಗಿಸಿ’ ಎಂದು ಹೇಳತೊಡಗಿದರು. ‘ನಾನು ಈಗ ಅದನ್ನು ಮಾಡಿದರೆ ನೀವು ಕಾರ್ಯಕ್ರಮ ಮಾಡದೇ ನನ್ನೇ ನೆನಸಿಕೊಂಡು ನಗ್ತಾ ಇರ್ತಿರ, ಹಾಗಾಗಿ ಈಗ ಬೇಡ ನೀವು ಕಾರ್ಯಕ್ರಮ ಮುಗಿಸಿದ ನಂತರ ಪಕ್ಕಾ ಮಾಡ್ತಿನಿ’ ಎಂದಾಗ ಎಲ್ಲರೂ ಒಪ್ಪಿದರು.



ಕಾರ್ಯಕ್ರಮ ಶುರುವಾಗಿದ್ದೆ ಬಹಳ ತಡವಾಗಿತ್ತು. ಸುಮ್ಮನೆ ೪.೦೦ ಗಂಟೆಗಳ ಕಾಲ ಸುಮ್ಮನೆ ಕಾಯುತ್ತ ಕುಳಿತೆವು. ನಮ್ಮ ಮಕ್ಕಳ ಕಾರ್ಯಕ್ರಮ ಬಂದಾಗ ರಾತ್ರಿ ೧೦.೨೦ ಆಗಿತ್ತು. ಅಂತೂ ಚೆಂದದ ಕಾರ್ಯಕ್ರಮ ನಮ್ಮ ಮಕ್ಕಳು ನೀಡಿದರು. ಅತಿಥಿಗಳಿಂದ ನೆನಪಿನ ಕಾಣಿಕೆ ಸ್ವೀಕರಿಸಿದೆವು. ಎಲ್ಲರೂ ವೇದಿಕೆಯ ಹಿಂಭಾಗಕ್ಕೆ ಬಂದಾಗ ಒಂದಿಷ್ಟು ಪೋಷಕರು ಬಂದಿದ್ದರು. ಎಲ್ಲರೂ ಅಲ್ಲಿ ನಿಂತು ಗ್ರೂಪ್ ಪೋಟೋ ತೆಗೆಸಿಕೊಂಡೆವು. ಮಕ್ಕಳಿಂದ ಒಕ್ಕೋರಲಿಂದ ‘ಸರ್ ರಿಂಗ್ ಹಾಕಿಕೊಂಡು ನೀವು…’ ಎಂದರು ‘ಯಾರೂ ನಗೋ ಹಾಗಿಲ್ಲ, ಯಾರಿಗೂ ಹೇಳೋ ಹಾಗಿಲ್ಲ’ ಎಂದು ಸೊಂಟಕ್ಕೆ ರಿಂಗ್ ಹಾಕಿಕೊಂಡು ತಿರುಗಿಸಲು ಮುಂದಾದೆ ಮಕ್ಕಳಿಗೆ ಇರೋ ತರ ಅಭ್ಯಾಸ ಇಲ್ಲದೇ ಇರೋದರಿಂದ ಎರಡು ಸಲ ಮಾಡಿದರೂ ಬೇಗನೆ ಕೆಳಗೆ ಬಿದ್ದಿತು. ಸಾನ್ವಿಕ ‘ಪ್ರಯತ್ನ ಚೆನಾಗಿ ಮಾಡಿದಿರ ಸರ್’ ಎಂದಳು. ಅಷ್ಟರಲ್ಲಿ ಎಲ್ಲಾರಿಗೂ ಊಟದ ವ್ಯವಸ್ಥೆ ಇದೆ ಎಂದರು. ಕೆಲವು ಪೋಷಕರು ಮಕ್ಕಳನ್ನು ಕರೆದುಕೊಂಡು ಹೋದರು. ಕೆಲವರು ಊಟಕ್ಕೆ ಬಂದರು. ನಂತರ ಎಲ್ಲರನ್ನೂ ಕಳಿಸಿಕೊಟ್ಟು ಅಲ್ಲಿಂದಲೇ ಹೊರಟೆವು.

ಕೇವಲ ೨ದಿನಗಳಲ್ಲಿ ಅಭ್ಯಾಸ ಮಾಡಿದ್ದರೂ ಚೆಂದದ ನೃತ್ಯ ಪ್ರದರ್ಶನವನ್ನು ಮಕ್ಕಳು ನೀಡಿದ್ದರು. ಸಿಕ್ಕ ಸಣ್ಣ ಸಮಯದಲ್ಲಿ ಸರಿಯಾಗಿ ಅಭ್ಯಾಸ ಮಾಡಿದರು. ಮಕ್ಕಳು ತೊಡಗಿಸಿಕೊಂಡ ರೀತಿ ನಿಜಕ್ಕೂ ಬೆರಗನ್ನು ಮೂಡಿಸಿತ್ತು. ಆದರೆ ಮಕ್ಕಳನ್ನು ತುಂಬಾ ಹೊತ್ತು ಕಾಯಿಸಿದ್ದು ಮಾತ್ರ ಬೇಸರ ತಂದಿತ್ತು. ಆದರೆ ಅದೆಲ್ಲವನ್ನೂ ಮರೆಸುವಂತೆ ಮಕ್ಕಳು ನೀಡಿದ ಪ್ರದರ್ಶನ ಮಾತ್ರ ಮರೆಯಲು ಅಸಾಧ್ಯ…


ಚೇತನ್ ಸಿ ರಾಯನಹಳ್ಳಿ

Leave a Reply

Your email address will not be published. Required fields are marked *

Scan the code